ಶಿವಮೊಗ್ಗ: ವಿಚಾರಣಾಧೀನ ಕೈದಿಯ ಹೊಟ್ಟೆಯೊಳಗಿತ್ತು ಮೊಬೈಲ್ ಫೋನ್!

ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ವಿಚಿತ್ರ ಪ್ರಕರಣವೊಂದು ವರದಿಯಾಗಿದೆ. ವಿಚಾರಣಾಧೀನ ಕೈದಿಯೊಬ್ಬ ಹೊಟ್ಟೆನೋವಿನಿಂದ ಬಳಲುತ್ತಿದ್ದು, ಕಲ್ಲು ನುಂಗಿದ್ದೇನೆಂದು ವೈದ್ಯರ ಬಳಿ ಹೇಳಿಕೊಂಡಿದ್ದ. ಆದರೆ, ಪರಿಸ್ಥಿತಿ ಬಿಗಡಾಯಿಸಿದಾಗ ವೈದ್ಯರಿಗೆ ತಿಳಿದು ಬಂದ ವಿಚಾರವೇ ಬೇರೆ. ಆತನ ಹೊಟ್ಟೆಲ್ಲಿದ್ದುದು ಕಲ್ಲಲ್ಲ, ಬದಲಿಗೆ ಮೊಬೈಲ್ ಫೋನ್! ನಂತರ ಶಸ್ತ್ರಚಿಕಿತ್ಸೆ ಮೂಲಕ ಅದನ್ನು ಹೊರ ತೆಗೆಯಲಾಗಿದೆ.

ಶಿವಮೊಗ್ಗ: ವಿಚಾರಣಾಧೀನ ಕೈದಿಯ ಹೊಟ್ಟೆಯೊಳಗಿತ್ತು ಮೊಬೈಲ್ ಫೋನ್!
ಶಿವಮೊಗ್ಗ ಕೇಂದ್ರ ಕಾರಾಗೃಹ

Updated on: May 03, 2024 | 7:19 AM

ಬೆಂಗಳೂರು, ಮೇ 3: ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ (Shivamogga Central Jail) ವಿಚಾರಣಾಧೀನ ಕೈದಿಯಾಗಿರುವ ವ್ಯಕ್ತಿಯೊಬ್ಬರ ಹೊಟ್ಟೆಯಲ್ಲಿ ಮೊಬೈಲ್ ಫೋನ್ (Mobile Phone) ಇರುವುದು ಪತ್ತೆಯಾಗಿದ್ದು, ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ (Surgery) ಮೂಲಕ ಅದನ್ನು ಹೊರ ತೆಗೆದಿದ್ದಾರೆ. ಏಪ್ರಿಲ್ 25 ರಂದು ಶಸ್ತ್ರಚಿಕಿತ್ಸೆ ನಡೆಸಿದಾಗ ಈ ವಿಚಾರ ಗೊತ್ತಾಗಿದೆ ಎಂದು ವರದಿಯಾಗಿದೆ. ಮಾರ್ಚ್ 28 ರಂದು ವಿಚಾರಣಾಧೀನ ಕೈದಿ 26 ವರ್ಷದ ಪರಶುರಾಮ್ ಹೊಟ್ಟೆ ನೋವಿದೆ ಎಂದು ದೂರು ನೀಡಿದ್ದರು. ಹೀಗಾಗಿ ಜೈಲು ಆವರಣದಲ್ಲಿರುವ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಗಿತ್ತು. ನಂತರ ನೋವು ತಡೆಯಲಾಗುತ್ತಿಲ್ಲ ಎಂದು ಹೇಳಿದ ಕಾರಣ, ಅದೇ ರಾತ್ರಿ ಅವರನ್ನು ಮೆಕ್‌ಗಾನ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಕೆಲ ಸಮಯದ ಹಿಂದೆ ಕಲ್ಲು ನುಂಗಿದ್ದೆ ಎಂದು ಪರಶುರಾಮ್ ಅಲ್ಲಿನ ವೈದ್ಯರಿಗೆ ತಿಳಿಸಿದ್ದರು. ಅದರಂತೆ, ವೈದ್ಯರು ಬಾಹ್ಯ ವಸ್ತು ಹೊಟ್ಟೆ ಸೇರಿರುವುದರಿಂದ ಹೊಟ್ಟೆ ನೋವಿರಬಹುದು ಎಂದು ಔಷಧ ನೀಡಿದ್ದರು.

ಆದರೆ, ಏಪ್ರಿಲ್ 1 ರಂದು ಪರಶುರಾಮ್ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿತು. ಹೀಗಾಗಿ ಪರಶುರಾಮ್‌ಗೆ ಕೆಲವು ವಿಶೇಷ ಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ಜೈಲು ಅಧಿಕಾರಿಗಳಿಗೆ ಸೂಚಿಸಿದರು. ಏಪ್ರಿಲ್ 6 ರಂದು, ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ಏಪ್ರಿಲ್ 25 ರಂದು ಶಸ್ತ್ರಚಿಕಿತ್ಸೆ ಮೂಲಕ ಪರಶುರಾಮ್ ಹೊಟ್ಟೆಯಿಂದ ಮೊಬೈಲ್ ಫೋನ್ ಹೊರ ತೆಗೆಯಲಾಯಿತು ಎಂದು ‘ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್’ ವರದಿ ಮಾಡಿದೆ.

ಇದನ್ನೂ ಓದಿ: SSI Mantra: ಬೀದರ್​ ಮಗುವಿಗೆ ಮೇಡ್ ಇನ್ ಇಂಡಿಯಾ ರೋಬೋಟ್​ನಿಂದ ಶಸ್ತ್ರಚಿಕಿತ್ಸೆ: ದೇಶದ ವೈದ್ಯಕೀಯ ಇತಿಹಾಸದಲ್ಲೇ ಮೊದಲು

ಜೈಲಿನಲ್ಲಿದ್ದಾಗ ಮೊಬೈಲ್ ಫೋನ್ ಹೊಂದಿದ್ದಕ್ಕಾಗಿ ಪರಶುರಾಮ್ ವಿರುದ್ಧ ‘ಕರ್ನಾಟಕ ಕಾರಾಗೃಹಗಳ (ತಿದ್ದುಪಡಿ) ಕಾಯ್ದೆ – 2022’ ರ ಸೆಕ್ಷನ್ 42 ರ ಅಡಿಯಲ್ಲಿ ಶಿವಮೊಗ್ಗದ ತುಂಗಾನಗರ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us