ಕೆಎಸ್ ಈಶ್ವರಪ್ಪ ನಿವಾಸಕ್ಕೆ ನಾಳೆ ಮೋದಿ ಭೇಟಿ? ಸುದ್ದಿಗೋಷ್ಠಿ ವೇಳೆ ಬಂತು ಫೋನ್

| Updated By: Rakesh Nayak Manchi

Updated on: Mar 17, 2024 | 12:17 PM

ಯಡಿಯೂರಪ್ಪ ಕುಟುಂಬದ ವಿರುದ್ಧ ಬಂಡಾಯ ಎದ್ದಿರುವ ಕೆಎಸ್ ಈಶ್ವರಪ್ಪ ಪಕ್ಷೇತರ ಸ್ಪರ್ಧೆ ಬಗ್ಗೆ ಘೋಷಣೆ ಮಾಡಿದ್ದಾರೆ. ಇನ್ನೊಂದೆಡೆ, ನಾಳೆ ಪ್ರಧಾನಿ ನರೇಂದ್ರ ಮೋದಿ ಅವರ ಶಿವಮೊಗ್ಗಕ್ಕೆ ಭೇಟಿ ನೀಡುತ್ತಿದ್ದಾರೆ. ಇದಕ್ಕೂ ಮುನ್ನ ಈಶ್ವರಪ್ಪ ಅವರನ್ನು ಮನವೊಲಿಸಲು ರಾಜ್ಯ ಬಿಜೆಪಿ ನಾಯಕರು ಸಂಧಾನ ನಡೆಸಲು ಹರಸಾಹಸ ಪಡುತ್ತಿದ್ದಾರೆ. ಇಂದು ಸುದ್ದಿಗೋಷ್ಠಿ ವೇಳೆ ಈಶ್ವರಪ್ಪ ಅವರಿಗೆ ದೂರವಾಣಿ ಕರೆ ಬಂದಿದ್ದು, ಮೋದಿ ಅವರು ಈಶ್ವರಪ್ಪ ನಿವಾಸಕ್ಕೆ ಭೇಟಿ ನೀಡುವ ಬಗ್ಗೆ ಮಾತುಕತೆ ನಡೆದಿದೆ.

ಶಿವಮೊಗ್ಗ, ಮಾ.17: ಬಿಎಸ್ ಯಡಿಯೂರಪ್ಪ (BS Yediyurappa) ಕುಟುಂಬದ ವಿರುದ್ಧ ಬಂಡಾಯ ಎದ್ದಿರುವ ಕೆಎಸ್ ಈಶ್ವರಪ್ಪ (KS Eshwarappa) ಪಕ್ಷೇತರ ಸ್ಪರ್ಧೆ ಬಗ್ಗೆ ಘೋಷಣೆ ಮಾಡಿದ್ದಾರೆ. ಇನ್ನೊಂದೆಡೆ, ನಾಳೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಶಿವಮೊಗ್ಗಕ್ಕೆ (Shivamogga) ಭೇಟಿ ನೀಡುತ್ತಿದ್ದಾರೆ. ಇದಕ್ಕೂ ಮುನ್ನ ಈಶ್ವರಪ್ಪ ಅವರನ್ನು ಮನವೊಲಿಸಲು ರಾಜ್ಯ ಬಿಜೆಪಿ ನಾಯಕರು ಸಂಧಾನ ನಡೆಸಲು ಹರಸಾಹಸ ಪಡುತ್ತಿದ್ದಾರೆ. ಇಂದು ಸುದ್ದಿಗೋಷ್ಠಿ ವೇಳೆ ಈಶ್ವರಪ್ಪ ಅವರಿಗೆ ದೂರವಾಣಿ ಕರೆ ಬಂದಿದ್ದು, ಮೋದಿ ಅವರು ಈಶ್ವರಪ್ಪ ನಿವಾಸಕ್ಕೆ ಭೇಟಿ ನೀಡುವ ಬಗ್ಗೆ ಮಾತುಕತೆ ನಡೆದಿದೆ.

ಹೌದು, ಸುದ್ದಿಗೋಷ್ಠಿಗೆ ಕುಳಿತುಕೊಂಡಿದ್ದೇ ತಡ, ಈಶ್ವರಪ್ಪ ಅವರ ಮೊಬೈಲ್ ರಿಂಗ್ ಆಗಿದೆ. ಕರೆ ಸ್ವೀಕರಿಸಿದ ಈಶ್ವರಪ್ಪ ಅವರಿಗೆ ನಾಳೆ ಮೋದಿ ಅವರು ನಿಮ್ಮ ನಿವಾಸಕ್ಕೆ ಭೇಟಿ ನೀಡುತ್ತಾರಾ ಎಂದು ಕೇಳಿದ್ದಾರೆ. ಇದಕ್ಕೆ, ಯಾರು ಹೇಳಿದ್ದು ಎಂದು ಈಶ್ವರಪ್ಪ ಪ್ರಶ್ನಿಸುತ್ತಾರೆ. ಟಿವಿಯಲ್ಲಿ ಬರುತ್ತಿದೆ ಎಂದು ಕರೆ ಮಾಡಿದ ವ್ಯಕ್ತಿ ಹೇಳಿದ್ದಾರೆ. ಇದಕ್ಕೆ ಈಶ್ವರಪ್ಪ, ಇಲ್ಲ ಬರುವುದಿಲ್ಲ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಆ ವ್ಯಕ್ತಿ, ಒಂದು ವೇಳೆ ಮೋದಿ ನಿಮ್ಮ ನಿವಾಸಕ್ಕೆ ಬಂದರೆ ಹಾವೇರಿ ಲೋಕಸಭಾ ಕ್ಷೇತ್ರ ಬಿಟ್ಟುಕೊಡಲು ಹೇಳುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಮೋದಿ ನಮ್ಮ ಮನೆಗೆ ಬರುವುದಿಲ್ಲ, ಗ್ಯಾರಂಟಿ ಎಂದು ಹೇಳಿದ ಈಶ್ವರಪ್ಪ ಫೋನ್ ಕಾಲ್ ಕಟ್ ಮಾಡಿದರು.

ಇದನ್ನೂ ಓದಿ: ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರ ಕೈಬಿಡಿ ಎಂದು ಈಶ್ವರಪ್ಪನ್ನು ವಿನಂತಿಸುವೆ: ಬಿವೈ ವಿಜಯೇಂದ್ರ

ಪುತ್ರ ಕೆಇ ಕಾಂತೇಶ್ ಅವರನ್ನು ರಾಜಕೀಯಕ್ಕೆ ಕರೆತರಲು ಕೆಎಸ್ ಈಶ್ವರಪ್ಪ ಅವರು ಉತ್ಸುಕರಾಗಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಬಿಜೆಪಿ ಟಿಕೆಟ್ ತ್ಯಾಗ ಮಾಡಿದ್ದ ಈಶ್ವರಪ್ಪ ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಕಾಂತೇಶ್​ಗೆ ಟಿಕೆಟ್ ಕೊಡಿಸುವ ಭರವಸೆಯನ್ನು ಯಡಿಯೂರಪ್ಪ ನೀಡಿದ್ದರು ಎನ್ನಲಾಗುತ್ತಿದೆ. ಅದರಂತೆ, ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್​ಗಾಗಿ ಪೈಪೋಟಿ ನಡೆಸಿದ್ದರು.

ಆದರೆ, ಬಿಜೆಪಿ ನಾಯಕರು ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್ ಕೊಡಿಸಲು ಮುಂದಾದಾಗ ಬೊಮ್ಮಾಯಿ ಅವರು ಆರೋಗ್ಯದ ಸಮಸ್ಯೆ ಹೇಳಿಕೊಂಡು ಕಾಂತೇಶ್​ಗೆ ಟಿಕೆಟ್ ನೀಡುವಂತೆ ಪ್ರತಿ ಬಾರಿ ಹೇಳುತ್ತಿದ್ದರು. ಯಾವಾಗ ಕಾಂತೇಶ್​ಗೆ ಟಿಕೆಟ್ ಕೈತಪ್ಪಿ ಬೊಮ್ಮಾಯಿಗೆ ಟಿಕೆಟ್ ಲಭ್ಯವಾಯಿತೋ ಅಂದೇ ಬೊಮ್ಮಾಯಿ ಅವರು ಚುನಾವಣೆಗೆ ತಯಾರಿಗಳನ್ನು ನಡೆಸಲು ಆರಂಭಿಸಿದರು. ಇತ್ತ, ತನ್ನ ಪುತ್ರನಿಗೆ ಹಾವೇರಿ ಟಿಕೆಟ್ ತಪ್ಪಿಸಿದ್ದು ಯಡಿಯೂರಪ್ಪ ಎಂದು ಗಂಭೀರ ಆರೋಪ ಮಾಡುತ್ತಿರುವ ಈಶ್ವರಪ್ಪ, ಕಾರ್ಯಕರ್ತರ ಸಭೆ ನಡೆಸಿ ಯಡಿಯೂರಪ್ಪ ಪುತ್ರ ರಾಘವೇಂದ್ರ ಕಣದಲ್ಲಿರುವ ಶಿವಮೊಗ್ಗದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಘೋಷಣೆ ಮಾಡಿದ್ದಾರೆ.

ಮೋದಿ ಕಾರ್ಯಕ್ರಮಕ್ಕೆ ಹೋಗಲ್ಲ: ಈಶ್ವರಪ್ಪ

ಕಲಬುರಗಿಯಲ್ಲಿ ನಿನ್ನೆ ಲೋಕಸಭೆ ಚುನಾವಣೆಗೆ ಪಾಂಚಜನ್ಯ ಮೊಳಗಿಸಿದ ಪ್ರಧಾನಿ ಮೋದಿ ಅವರು ನಾಳೆ ಶಿವಮೊಗ್ಗ ನಗರಕ್ಕೆ ಭೇಟಿ ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಬಿಜೆಪಿ ನಾಯಕರು ಕೆಎಸ್ ಈಶ್ವರಪ್ಪ ಅವರಿಗೆ ಆಹ್ವಾನ ನೀಡಿದ್ದಾರೆ. ಈಶ್ವರಪ್ಪ ಮೋದಿ ಕಾರ್ಯಕ್ರಮಕ್ಕೆ ಬರುತ್ತಾರೆ ಎಂದು ಯಡಿಯೂರಪ್ಪ ಸಹಿತ ಇನ್ನಿತರ ಬಿಜೆಪಿ ನಾಯಕರು ಭರವಸೆ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ: ಕೆಎಸ್ ಈಶ್ವರಪ್ಪ ಸಂಧಾನ ವಿಫಲ; ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್ ಹೋದ ಬಿಜೆಪಿ ನಾಯಕರು

ಆದರೆ, ಪಕ್ಷವನ್ನು ಯಡಿಯೂರಪ್ಪ ಅವರ ಕಪಿಮುಷ್ಠಿಯಿಂದ ಮುಕ್ತಗೊಳಿಸಲು ಪಕ್ಷೇತರ ಸ್ಪರ್ಧಿಸುತ್ತಿದ್ದೇನೆ ಹೊರತು ಮೋದಿ ವಿರುದ್ಧ ಅಲ್ಲ ಎಂದು ಹೇಳುತ್ತಿರುವ ಈಶ್ವರಪ್ಪ ಅವರು ಮೋದಿ ಕಾರ್ಯಕ್ರಮಕ್ಕೆ ಹೋಗದಿರಲು ನಿರ್ಧರಿಸಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ ಈಶ್ವರಪ್ಪ, ಮೋದಿ ಪರವಾಗಿ ಧ್ವನಿ ಎತ್ತುತ್ತಿದ್ದೇನೆ. ನಾನು ಮೋದಿ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:13 pm, Sun, 17 March 24