ಬಿ ಎಸ್ ಯಡಿಯೂರಪ್ಪ ಭೇಟಿಯಾದ ಸಂಸದೆ ಸುಮಲತಾ; ಮೈಶುಗರ್ ಕಾರ್ಖಾನೆ, ಅಕ್ರಮ ಗಣಿಗಾರಿಕೆ ವಿಚಾರ ಚರ್ಚೆ

| Updated By: ganapathi bhat

Updated on: Jul 05, 2021 | 6:38 PM

ಇಂದು ಬೆಳಗ್ಗೆ ಯಡಿಯೂರಪ್ಪರನ್ನು ಕುಮಾರಸ್ವಾಮಿ ಭೇಟಿಯಾಗಿದ್ದರು. ಮೈಶುಗರ್​​ ಸಂಬಂಧ ಮಾತುಕತೆಗೆ ಕುಮಾರಸ್ವಾಮಿ ಯಡಿಯೂರಪ್ಪರನ್ನು ಭೇಟಿಯಾಗಿದ್ದರು. ಆ ಬಳಿಕ ಕುಮಾರಸ್ವಾಮಿ ಹಾಗೂ ಸುಮಲತಾ ಮಧ್ಯೆ ವಾಗ್ವಾದ ತಾರಕಕ್ಕೇರಿತ್ತು.

ಬಿ ಎಸ್ ಯಡಿಯೂರಪ್ಪ ಭೇಟಿಯಾದ ಸಂಸದೆ ಸುಮಲತಾ; ಮೈಶುಗರ್ ಕಾರ್ಖಾನೆ, ಅಕ್ರಮ ಗಣಿಗಾರಿಕೆ ವಿಚಾರ ಚರ್ಚೆ
ಸುಮಲತಾ ಅಂಬರೀಷ್
Follow us on

ಬೆಂಗಳೂರು: ಮೈಶುಗರ್​ ಕಾರ್ಖಾನೆಯನ್ನು ಸರ್ಕಾರ ನಡೆಸಲು ಸಿದ್ಧರಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಮುಖ್ಯಮಂತ್ರಿ ಗೃಹಕಚೇರಿ ಕೃಷ್ಣಾದಲ್ಲಿ ಭೇಟಿ ವೇಳೆ ಬಿ.ಎಸ್. ಯಡಿಯೂರಪ್ಪ ಈ ಮಾತು ಹೇಳಿದ್ದಾರೆ ಎಂದು ಸಿಎಂ ಭೇಟಿಯ ಬಳಿಕ ಮಂಡ್ಯ ಲೋಕಸಭಾ ಕ್ಷೇತ್ರದ ಸದಸ್ಯೆ ಸುಮಲತಾ ತಿಳಿಸಿದ್ದಾರೆ. ಮುಖ್ಯಮಂತ್ರಿ ಆಗಿ ಜಿಲ್ಲೆಗೆ ಬಂದಾಗ ಕೊಟ್ಟಿದ್ದ ಮಾತನ್ನು ನೆನಪಿಸಿದೆ ಎಂಬ ಬಗ್ಗೆಯೂ ಅವರು ತಿಳಿಸಿದ್ದಾರೆ.

ಕೆಆರ್​ಎಸ್​ ಸುತ್ತಮುತ್ತ ಅಕ್ರಮ ಗಣಿಗಾರಿಕೆ ಬಗ್ಗೆ ಮಾಹಿತಿ ನೀಡಿದ್ದೇನೆ. ಅಕ್ರಮ ಗಣಿಗಾರಿಕೆ ನಡೆಸುವವರ ವಿರುದ್ಧ ಕ್ರಮಕ್ಕೆ ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ. ಇದೇ ವೇಳೆ, ಕುಮಾರಸ್ವಾಮಿ ಅವರಿಂದ ಸಮರ್ಥಿಸಿಕೊಳ್ಳುವ ಮಾತುಗಳು ಬೇಡ ಎಂದು ತಮ್ಮ ಮತ್ತು ಕುಮಾರಸ್ವಾಮಿ ನಡುವೆ ಆದ ವಾಗ್ವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಹೆಚ್.ಡಿ. ಕುಮಾರಸ್ವಾಮಿ ಮೊದಲು ಕ್ಷಮೆಯಾಚಿಸಬೇಕು. ಆಡಿಯೋ, ವಿಡಿಯೋಗಳಿದ್ದರೆ ಇಂದೇ ಬಿಡುಗಡೆ ಮಾಡಲಿ. ನಾನು ಸವಾಲು ಹಾಕುತ್ತೇನೆ ಇಂದೇ ಬಿಡುಗಡೆ ಮಾಡಲಿ. ಚುನಾವಣೆ ಇನ್ನೂ ದೂರವಿದೆ, ಈಗಲೇ ಬಿಡುಗಡೆ ಮಾಡಿ ಎಂದು ಸುಮಲತಾ ತಿರುಗೇಟು ನೀಡಿದ್ದಾರೆ.

ರೈತರಿಗೆ ನ್ಯಾಯ ಕೊಡಿಸೋದು ನಮ್ಮ ಜವಾಬ್ದಾರಿ
ಮೈಶುಗರ್ ಕಾರ್ಖಾನೆ ಬಗ್ಗೆ ಇವತ್ತಿಂದ ಅಲ್ಲ, ಎರಡು ವರ್ಷದಿಂದ 20 ಬಾರಿ ಮಾತನಾಡಿದ್ದೇನೆ. ಯಾವುದೋ ಒಂದು ಉತ್ತರ ಕೊಡಬೇಕು, ಇಲ್ಲದಿದ್ರೆ ರೈತರು ಆಕ್ರೋಶ ವ್ಯಕ್ತಪಡಿಸುತ್ತಾರೆ. ಅವರು ಎಷ್ಟೋ ಬಾರಿ ದುಡ್ಡು ಕಳೆದುಕೊಂಡಿದ್ದಾರೆ. ಅದನ್ನು ಮತ್ತೆ ಕಳೆದುಕೊಳ್ಳಲು ಆಗಲ್ಲ. ಹಿಂದಿನ ಆರೇಳು ವರ್ಷದಲ್ಲಿ ಏನೂ ಮಾಡಿಲ್ಲ. ದ್ವೇಷ ಮಾಡಿಕೊಂಡು ಕೂರಲು ಆಗಲ್ಲ. ರೈತರಿಗೆ ನ್ಯಾಯ ಕೊಡಿಸೋದು ನಮ್ಮ ಜವಾಬ್ದಾರಿ ಎಂದು ಸುಮಲತಾ ಪ್ರತಿಕ್ರಿಯಿಸಿದ್ದಾರೆ.

ಮಂಡ್ಯ ತಾಲೂಕಿನ ರೈತರು ಟ್ರಾನ್ಸ್‌ಪೋರ್ಟ್‌ ಮಾಡಿಕೊಂಡು ಬೇರೆ ಕಡೆ ಹೋಗಬೇಕಿದೆ. ಮಂಡ್ಯದಲ್ಲಿ ಶುಗರ್ ಫ್ಯಾಕ್ಟರಿ ಓಪನ್ ಆಗೋವರೆಗೂ ಸರ್ಕಾರವೇ ಟ್ರಾನ್ಸ್‌ಪೋರ್ಟ್‌ ವೆಚ್ಚ ಭರಿಸಬೇಕು ಎಂದು ಸಿಎಂಗೆ ಮನವಿ ಮಾಡಿದ್ದೇನೆ. ಅಕ್ರಮ ಗಣಿಗಾರಿಕೆ ಬಗ್ಗೆ ‌ಸಿಎಂಗೆ ಹೇಳಿದ್ದೇನೆ. ನಿಷೇಧ ಮಾಡಿದ್ರೂ ಕೂಡ ಗಣಿಗಾರಿಕೆ ನಡೆಯುತ್ತಿದೆ. ಆ ಅಪರಾಧಿಗಳಿಗೆ ಶಿಕ್ಷೆ ಆಗಬೇಕು ಎಂದು ಸುಮಲತಾ ಮಾತನಾಡಿದ್ದಾರೆ.

ಕುಮಾರಸ್ವಾಮಿ ಒಂದು ಕ್ಷೇತ್ರದ ಎಂಎಲ್​ಎ, ನಾನು ಎಂಟು ವಿಧಾನಸಭಾ ಕ್ಷೇತ್ರಕ್ಕೆ ಎಂಪಿ
ಈಗ ಕುಮಾರಸ್ವಾಮಿ ಆಡೋ ಮಾತು ಆಡಿ ಈಗ ಸಮರ್ಥನೆ ಮಾಡಿಕೊಳ್ಳೋದಲ್ಲ. ಅವರಿಗೆ ಆ ಮಾತು ಶೋಭೆ ತರೋದಿಲ್ಲ ಎಂದು ಕುಮಾರಸ್ವಾಮಿ ದಾಖಲೆ ಬಿಡುಗಡೆ ಹೇಳಿಕೆ ವಿಚಾರವಾಗಿ ಸುಮಲತಾ ತಿರುಗೇಟು ನೀಡಿದ್ದಾರೆ. ದಯವಿಟ್ಟು ಆಡಿಯೋ ವೀಡಿಯೋ ಇವತ್ತೇ ಬಿಡುಗಡೆ ಮಾಡಲಿ. ಅವರು ಮಾತನಾಡೋ ಅಧಿಕಾರ ಕಳೆದುಕೊಂಡಿದ್ದಾರೆ. ಅವರ ತಂದೆಯವರನ್ನು ನಾನು, ಅಂಬರೀಷ್ ತಂದೆ ಸ್ಥಾನದಲ್ಲೇ ನೋಡಿದ್ದೇವೆ. ಕೆಳ ಮಟ್ಟದ ಪದ ಯಾವತ್ತೂ ಮಾತನಾಡಿಲ್ಲ ಎಂದು ಹೇಳಿದ್ದಾರೆ.

ಅವರು ಮಾಜಿ ಸಿಎಂ ಇರಬಹುದು. ಈಗ ಅವರು ಒಂದು ಕ್ಷೇತ್ರದ ಎಂಎಲ್‌ಎ ಆದ್ರೆ ನಾನು ಎಂಟು ವಿಧಾನಸಭಾ ಕ್ಷೇತ್ರಕ್ಕೆ ಎಂಪಿ. ಅವರು ಗೌರವ ಕೊಟ್ಟು, ಗೌರವ ಪಡೆಯಲಿ. ಅಕ್ರಮ ಮೈನಿಂಗ್​ನಿಂದ ಡ್ಯಾಂ ಬಿರುಕು ಬಿಟ್ಟಿರಬಹುದು. ಇಲ್ಲ ಅಂದ್ರೆ ನಾವು ನಿಜಕ್ಕೂ ಸಂತೋಷ ಪಡೋಣ. ಬಿರುಕು ಇಲ್ಲ ಅಂದ್ರೆ ಅವರು ಸುಮ್ಮನೆ ಇರಬೇಕಿತ್ತು. ಯಾರೋ ಧ್ವನಿ ಎತ್ತಿದರೆ ಅವರಿಗೆ ಯಾಕೆ ಭಯ. ನಾನು ಮತ್ತೊಮ್ಮೆ ಎಲ್ಲಾ ವಿಚಾರ ಸಿಎಂ ಬಳಿ ಪ್ರಸ್ತಾಪ ಮಾಡಿದ್ದೇನೆ ಎಂದು ಸುಮಲತಾ ತಿಳಿಸಿದ್ದಾರೆ.

ಡ್ಯಾಂ ಬಿರುಕು ಇಲ್ಲ ಅಂತ ಕೆಲವರು ಅಷ್ಟೊಂದು ಸಮರ್ಥಿಸಿಕೊಳ್ಳೋದು ಯಾಕೆ?
ಕೆಆರೆಸ್ ಡ್ಯಾಂ ಬಿರುಕು ಬಗ್ಗೆ ಮಾಧ್ಯಮಗಳಲ್ಲೇ ವರದಿಗಳು ಬಂದಿದ್ದವು. ಡ್ಯಾಂ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದಲೇ ಬಿರುಕು ಅಂತ ಮಾಧ್ಯಮ ವರದಿಗಳು ಬಂದಿವೆ. ಈ ಹಿನ್ನೆಲೆಯಲ್ಲಿ ನಾನು ಡ್ಯಾಂ ಬಿರುಕು ಹೇಳಿಕೆ ಕೊಟ್ಟಿದ್ದೇನೆ. ಈ ಬಗ್ಗೆ ಸರ್ಕಾರ ತನಿಖೆ ನಡೆಸಲಿ. ಡ್ಯಾಂ ಬಿರುಕು ಇಲ್ಲ ಅಂತ ಕೆಲವರು ಅಷ್ಟೊಂದು ಸಮರ್ಥಿಸಿಕೊಳ್ತಿರೋದು ಯಾಕೆ? ಇದರಲ್ಲಿ ಏನೋ ಇದೆ ಅನ್ನೋ ಅನುಮಾನ ಎಲ್ಲರಿಗೂ ಬರುತ್ತದೆ. ಸಿಎಂಗೆ ಈ ಮೊದಲು ಪತ್ರ ಕೊಟ್ಟು ಗಣಿಗಾರಿಕೆ ನಿಲ್ಲಿಸಲು ಒತ್ತಾಯಿಸಿದ್ದೇನೆ. ಇವತ್ತು ಅಕ್ರಮ ಗಣಿಗಾರಿಕೆ ನಡೆಯೋಕೆ ಬಿಡಬೇಡಿ‌ ಅಂತ ಮನವಿ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಗೃಹಕಚೇರಿ ಕೃಷ್ಣಾಗೆ ಮಂಡ್ಯ ಸಂಸದೆ ಸುಮಲತಾ ಭೇಟಿ ನೀಡಿದ್ದಾರೆ. ಇಂದು (ಜುಲೈ 5) ಬೆಳಗ್ಗೆ ನಡೆದ ಸುಮಲತಾ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ವಾಗ್ವಾದದ ಬೆನ್ನಲ್ಲೇ ಈ ಭೇಟಿ ಬಹಳ ಕುತೂಹಲ ಕೆರಳಿಸಿತ್ತು. ಮೈಶುಗರ್​ ಕಾರ್ಖಾನೆ ವಿಚಾರವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜೊತೆ ಚರ್ಚೆ ಸಾಧ್ಯತೆ ಅಂದಾಜಿಸಲಾಗಿತ್ತು.

ಇಂದು ಬೆಳಗ್ಗೆ ಯಡಿಯೂರಪ್ಪರನ್ನು ಕುಮಾರಸ್ವಾಮಿ ಭೇಟಿಯಾಗಿದ್ದರು. ಮೈಶುಗರ್​​ ಸಂಬಂಧ ಮಾತುಕತೆಗೆ ಕುಮಾರಸ್ವಾಮಿ ಯಡಿಯೂರಪ್ಪರನ್ನು ಭೇಟಿಯಾಗಿದ್ದರು. ಆ ಬಳಿಕ ಕುಮಾರಸ್ವಾಮಿ ಹಾಗೂ ಸುಮಲತಾ ಮಧ್ಯೆ ವಾಗ್ವಾದ ತಾರಕಕ್ಕೇರಿತ್ತು. ಹಲವು ರಾಜಕಾರಣಿಗಳು ಈ ಬಗ್ಗೆ ಪ್ರತಿಕ್ರಿಯೆಯನ್ನೂ ನೀಡಿದ್ದರು. ಇದೀಗ ಸಿಎಂ ಯಡಿಯೂರಪ್ಪ ಭೇಟಿಗೆ ಸಂಸದೆ ಸುಮಲತಾ ಬಂದಿದ್ದರು.

ಇದನ್ನೂ ಓದಿ: ಆಡಿಯೋ, ವೀಡಿಯೋ ಬಾಂಬ್ ಏನಾದ್ರು ಮಾಡಿ; ಜನ ನ್ಯೂಕ್ಲಿಯರ್ ಬಾಂಬ್ ಇಟ್ಕೊಂಡು ನಿಮ್ಮನ್ನ ಮುಗಿಸಲು ಕಾಯ್ತಿದ್ದಾರೆ: ಸುಮಲತಾ ಅಂಬರೀಶ್

ಸುಮಲತಾ ಅಂಬರೀಶ್ ನನ್ನ ಸ್ನೇಹಿತನ ಅಗಲುವಿಕೆಯನ್ನು ದುರ್ಬಳಕೆ ಮಾಡಿಕೊಂಡು ಗೆದ್ದಿದ್ದಾರೆ: ಮಾಜಿ ಸಿಎಂ ಎಚ್​ ಡಿ ಕುಮಾರಸ್ವಾಮಿ

Published On - 5:27 pm, Mon, 5 July 21