ಮಂಗಳೂರಿನ ಬಹುಕೋಟಿ ಒಡೆಯನ ಆಶ್ರಯದಲ್ಲಿದ್ದ ರಾಜೀವ್ ಗೌಡ ಸಿಕ್ಕಿಬಿದ್ದಿದ್ದು ಹೇಗೆ?

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ ಪೌರಾಯುಕ್ತೆ ಅಮೃತಾಗೌಡಗೆ ನಿಂದಿಸಿ, ಬೆದರಿಕೆ ಹಾಕಿದ್ದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಕೊನೆಗೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. 14 ದಿನಗಳಿಂದ ತಲೆಮರೆಸಿಕೊಂಡಿದ್ದ ರಾಜೀವ್ ಗೌಡನನ್ನು ಕೇರಳ ಗಡಿಯಲ್ಲಿ ಬಂಧಿಸುವಲ್ಲಿ ಶಿಡ್ಲಘಟ್ಟ ಪೊಲೀಸರು ಯಶಸ್ವಿಯಾಗಿದ್ದಾರೆ. ಇನ್ನು ಆರೋಪಿ ಇಷ್ಟು ದಿನ ಮಂಗಳೂರಿನ ಬಹುಕೋಟೆ ಒಡೆಯನ ಆಶ್ರಯದಲ್ಲಿದ್ದ ಎನ್ನುವ ಸ್ಫೋಟ ಅಂಶ ಬೆಳಕಿಗೆ ಬಂದಿದೆ. ಹಾಗಾದ್ರೆ, ರಾಜೀವ್ ಗೌಡ ಸಿಕ್ಕಿಬಿದ್ದಿದ್ಹೇಗೆ ಎನ್ನುವ ಇಂಚಿಂಚೂ ಮಾಹಿತಿ ಇಲ್ಲಿದೆ.

ಮಂಗಳೂರಿನ ಬಹುಕೋಟಿ ಒಡೆಯನ ಆಶ್ರಯದಲ್ಲಿದ್ದ ರಾಜೀವ್ ಗೌಡ ಸಿಕ್ಕಿಬಿದ್ದಿದ್ದು ಹೇಗೆ?
Rajeev Gowda

Updated on: Jan 26, 2026 | 8:40 PM

ಬೆಂಗಳೂರು, (ಜನವರಿ 26): ಬ್ಯಾನರ್ ತೆರವು ಮಾಡಿದ ವಿಚಾರಕ್ಕೆ ಶಿಡ್ಲಘಟ್ಟದ ಪೌರಾಯುಕ್ತೆ ಅಮೃತಾಗೌಡಗೆ ನಿಂದಿಸಿ, ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಆರೋಪಿ ರಾಜೀವ್ ಗೌಡನ (Rajeev Gowda) ಬಂಧನವಾಗಿದೆ. ಕಳೆದ 14 ದಿನಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದ ರಾಜೀವ್​​ ಗೌಡ ಇಂದು (ಜನವರಿ 26) ಕೇರಳ ಗಡಿಯಲ್ಲಿ ಸಿಕ್ಕಿಬಿದ್ದಿದ್ದಾನೆ. ಪ್ರಮುಖವಾಗಿ ರಾಜೀವ್ ಗೌಡನಿಗೆ ಇಷ್ಟು ದಿನ ಮಂಗಳೂರಿನ (Mangaluru) ಬಹುಕೋಟಿ ಒಡೆಯ ಆಶ್ರಯ ನೀಡಿದ್ದ ಎನ್ನುವ ಸ್ಫೋಟಕ ಮಾಹಿತಿ ಬಯಲಾಗಿದೆ. ಹೌದು…ಆಶ್ರಯ ನೀಡಿದ್ದ ಉದ್ಯಮಿಯ ಕಾರಿನ ಮೂಲಕವೇ ಇಂದು (ಜನವರಿ 26) ಮಂಗಳೂರಿನಿಂದ ಕೇರಳಕ್ಕೆ (Kerala) ಪರಾರಿಯಾಗುತ್ತಿರುವ ವೇಳೆ ರಾಜೀವ್ ಗೌಡನನ್ನು ಪೊಲೀಸರು ಹಿಡಿದು ಕೋಳ ತೊಡಿಸಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜೀವ್ ಗೌಡ ಸಿಕ್ಕಿಬಿದ್ದಿದ್ಹೇಗೆ?

ಜನವರಿ12ರಂದು ಶಿಡ್ಲಘಟ್ಟದ ಪೌರಾಯುಕ್ತೆ ಅಮೃತಾ ಗೌಡಗೆ ಕಲ್ಟ್​ ಸಿನಿಮಾ ಬ್ಯಾನರ್​ ತೆರವು ಮಾಡಿದ್ದಕ್ಕೆ ರಾಜೀವ್​ ಗೌಡ ಧಮ್ಕಿ ಹಾಕಿದ್ದ. ಜನವರಿ 14ರಂದು ಈ ಬಗ್ಗೆ ರಾಜೀವ್ ಗೌಡ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಳಿಕ 13 ದಿನಗಳಿಂದ ಚಿಕ್ಕಬಳ್ಳಾಪುರ ಬಿಟ್ಟು ಪರಾರಿಯಾಗಿದ್ದ. ಇದರ ಬೆನ್ನಲ್ಲೇ ಜನವರಿ 24ರಂದು ರಾಜೀವ್​ನನ್ನು ಕೆಪಿಸಿಸಿ ಶಿಸ್ತುಸಮಿತಿ ಅಮಾನತು ಮಾಡಿತ್ತು. ಜೊತೆಗೆ FIR ರದ್ದುಕೋರಿ ರಾಜೀವ್ ಸಲ್ಲಿಸಿದ್ದ ಅರ್ಜಿಯನ್ನೂ ಹೈಕೋರ್ಟ್​ ವಜಾಗೊಳಿಸಿತ್ತು. ಹೀಗಾಗಿ ಬಂಧನದ ಭೀತಿಯಲ್ಲಿದ್ದ ರಾಜೀವ್ ಗೌಡನಿಗೆ ಮಂಗಳೂರಿನಲ್ಲಿ ಉದ್ಯಮಿಯೊಬ್ಬರ ಬಳಿ 3 ದಿನದಿಂದ ಆಶ್ರಯ ಪಡೆದಿದ್ದ. ಇನ್ನು ಪೊಲೀಸರ ಕಣ್ತಪ್ಪಿಸಲು ಮಂಗಳೂರು ರೈಲ್ವೆ ಸ್ಟೇಷನ್​​​ನಲ್ಲಿ ಕಾರು ನಿಲ್ಲಿಸಿ ಕಳ್ಳಾಟ ಆಡಿದ್ದ. ಆದ್ರೆ ಉದ್ಯಮಿ ಕಾರಿನಲ್ಲೇ ತಲಪಾಡಿ ಮಾರ್ಗವಾಗಿ ಕಾಸರಗೋಡಿನತ್ತ ಹೋಗುತ್ತಿದ್ದ ರಾಜೀವ್ ಗೌಡನನ್ನು ಹಿಡಿದು ಕೈಗೆ ಕೋಳ ತೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಶಿಡ್ಲಘಟ್ಟ ಪೌರಾಯುಕ್ತೆಗೆ ಬೆದರಿಕೆ ಕೇಸ್; ಆರೋಪಿ ರಾಜೀವ್ ಗೌಡ ಕೊನೆಗೂ ಅರೆಸ್ಟ್!

ಪೊಲೀಸರ ಕಣ್ತಿಪ್ಪಿಸಲು ಯತ್ನಿಸಿದ ಆರೋಪಿ

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದ ಪೌರಾಯುಕ್ತೆ ಅಮೃತಾಗೌಡಗೆ ಧಮ್ಕಿ ಹಾಕಿ ಕಳೆದ 14 ದಿನಗಳಿಂದ ಪೊಲೀಸರ ಕಣ್ತಪ್ಪಿಸಿ ತಲೆಮರೆಸಿಕೊಂಡಿದ್ದ ರಾಜೀವ್​ ಗೌಡನಿಗೆ ಮಂಗಳೂರಿನ ಶ್ರೀಮಂತ ಉದ್ಯಮಿಯೊಬ್ಬರು ಆಶ್ರಯ ಕೊಟ್ಟಿದ್ದರು. ಆದ್ರೆ, ಇಂದು (ಜನವರಿ 26) ರಾಜೀವ್ ಗೌಡ, ಮಂಗಳೂರಿನ ಉದ್ಯಮಿಯ ಆಶ್ರಯದಲ್ಲಿದ್ದಾನೆ ಎನ್ನುವ ಮಾಹಿತಿ ಪೊಲೀಸರಿಗೆ ತಿಳಿಯುತ್ತಿದ್ದಂತೆಯೇ ಬಂಧನಕ್ಕೆ ಬಲೆ ಬೀಸಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆಯೇ ಪೊಲೀಸರ ದಿಕ್ಕು ತಪ್ಪಿಸಲು ಆರೋಪಿ ರಾಜೀವ್ ಗೌಡ, ತನ್ನ ಕಾರು ಮಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಿದ್ದ. ಬಳಿಕ ಆಶ್ರಯ ಕೊಟ್ಟಿದ್ದ ಉದ್ಯಮಿಯ ಕಾರಿನಲ್ಲಿ ತಲಪಾಡಿ ಮಾರ್ಗವಾಗಿ ಕಾಸರಗೋಡು ಕಡೆ ಹೋಗಿದ್ದ.

ಉದ್ಯಮಿ ಕಾರಿನಲ್ಲಿ ಪರಾರಿಗೆ ಯತ್ನ

ಮಂಗಳೂರು ರೈಲ್ವೇ ನಿಲ್ದಾಣದಲ್ಲಿ ತನ್ನ ಕಾರು ಬಿಟ್ಟು ಉದ್ಯಮಿಯ ಕಾರಿನಲ್ಲಿ ತೆರಳಿದ್ದಾನೆ ಎಂದು ತಿಳಿದ ಪೊಲೀಸರು, ಉದ್ಯಮಿಯ ಕಾರು ಯಾವ ಕಡೆ ಹೋಗಿದೆ ಎನ್ನುವುದನ್ನು ಕಾರ್ಯಚರಣೆ ನಡೆಸಿದ್ದು, ಆಗ ತಲಪಾಡಿ ಮಾರ್ಗವಾಗಿ ಕಾಸರಗೋಡು ಕಡೆ ತೆರಳಿರುವ ಮಾಹಿತಿ ಸಿಕ್ಕಿದೆ. ಬಳಿಕ ಇದೇ ಮಾರ್ಗದಲ್ಲಿ ಉದ್ಯಮಿಯ ಕಾರು ಜಾಡು ಹಿಡಿದು ಹೊರಟ ಶಿಡ್ಲಘಟ್ಟ ಪೊಲೀಸ್ ವೃತ್ತ ನಿರೀಕ್ಷಕ ಆನಂದಕುಮಾರ್ ತಂಡಕ್ಕೆ ಕೇರಳ ಗಡಿ ಭಾಗದಲ್ಲಿ ಆರೋಪಿ ರಾಜೀವ್ ಗೌಡ ಸಿಕ್ಕಿಬಿದ್ದಿದ್ದಾನೆ.

ಸದ್ಯ ಪೊಲೀಸ್ ವೃತ್ತ ನಿರೀಕ್ಷಕ ಆನಂದಕುಮಾರ್ ತಂಡ, ಕೇರಳದ ಗಡಿಭಾಗದಿಂದ ರಾಜೀವ್‌ಗೌಡನನ್ನು ಶಿಡ್ಲಘಟ್ಟ ನಗರ ಠಾಣೆಗೆ ಕರೆತರುತ್ತಿದ್ದು, ಬಳಿಕ ಚಿಂತಾಮಣಿ ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ.

ರಾಜೀವ್ ಗೌಡ ವಿರುದ್ಧ ಜನೆವರಿ 14 ರಂದು ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ಎರಡು ದೂರುಗಳು ದಾಖಲಾಗಿದ್ದವು. ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತ ಗೌಡರಿಂದ ಒಂದು ದೂರು. ಶಾಸಕ ರವಿಕುಮಾರ್ ಪರವಾಗಿ ಒಂದು ದೂರು ದಾಖಲಾಗಿತ್ತು. ಬೆದರಿಕೆ ಪತ್ರ ಹಿನ್ನೆಲೆ ಮೊನ್ನೆ ಮತ್ತೊಂದು ದೂರು ದಾಖಲಾಗಿತ್ತು. ಹೀಗಾಗಿ ರಾಜೀವ್ ಗೌಡ ಬಂಧನಕ್ಕೆ ರಾಜ್ಯದ್ಯಂತ ಒತ್ತಯ ಕೇಳಿ ಬಂದಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:10 pm, Mon, 26 January 26