ದೇವೇಗೌಡರ ಸಭೆಗೆ ನುಗ್ಗಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರ ಗಲಾಟೆ: ಚುನಾವಣಾ ಆಯೋಗಕ್ಕೆ ಜೆಡಿಎಸ್- ಬಿಜೆಪಿ ದೂರು

| Updated By: ಗಣಪತಿ ಶರ್ಮ

Updated on: Apr 16, 2024 | 2:20 PM

ತುಮಕೂರಿನ ಕುಂಚಿಟಿಗರ ಭವನದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಸಮಾವೇಶ ನಡೆಯುತ್ತಿರುವಾಗ ಸಭೆಗೆ ನುಗ್ಗಿ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ ಎದುರು ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ಘೋಷಣೆ ಕೂಗಿದ ವಿಚಾರವಾಗಿ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಮಾಜಿ ಪ್ರಧಾನಿಗೆ ಭದ್ರತಾ ವೈಫಲ್ಯವಾಗಿದೆ ಎಂದು ಚುನಾವಣಾ ಅಧಿಕಾರಿಗೆ ನೀಡಿದ ದೂರಿನಲ್ಲಿ ಜೆಡಿಎಸ್ ಉಲ್ಲೇಖಿಸಿದೆ.

ದೇವೇಗೌಡರ ಸಭೆಗೆ ನುಗ್ಗಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರ ಗಲಾಟೆ: ಚುನಾವಣಾ ಆಯೋಗಕ್ಕೆ ಜೆಡಿಎಸ್- ಬಿಜೆಪಿ ದೂರು
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್​ಡಿ ದೇವೇಗೌಡ
Follow us on

ತುಮಕೂರು, ಏಪ್ರಿಲ್ 16: ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ (HD Deve Gowda) ಚುನಾವಣಾ ಪ್ರಚಾರ ಸಭೆಗೆ ನುಗ್ಗಿ ಕಾಂಗ್ರೆಸ್​ನ (Congress) ಮಹಿಳಾ ಕಾರ್ಯಕರ್ತೆಯರು ಗದ್ದಲ ಸೃಷ್ಟಿಸಿದ ವಿಚಾರವಾಗಿ ಬಿಜೆಪಿ ಹಾಗೂ ಜೆಡಿಎಸ್ (JDS) ಮಂಗಳವಾರ ಚುನಾವಣಾ ಆಯೋಗಕ್ಕೆ ದೂರು ನೀಡಿವೆ. ಮಾಜಿ ಪ್ರಧಾನಿಗೆ ಭದ್ರತಾ ಲೋಪವಾಗಿದೆ ಎಂದು ಉಭಯ ಪಕ್ಷಗಳು ತುಮಕೂರು (Tumkur) ಲೋಕಸಭಾ ಕ್ಷೇತ್ರದ ರಿಟರ್ನಿಂಗ್ ಆಫೀಸರ್​​ಗೆ ನೀಡಿದ ದೂರಿನಲ್ಲಿ ತಿಳಿಸಿವೆ.

ಮಾಜಿ ಪ್ರಧಾನಿ ದೇವೇಗೌಡರಿಗೆ ಭದ್ರತಾ ವೈಫಲ್ಯವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಹಕಾರ ಸಚಿವ ಕೆಎನ್ ರಾಜಣ್ಣ ಪ್ರಚೋದನೆಯಿಂದ ಗಲಾಟೆ ಮಾಡಲಾಗಿದೆ. ಪ್ರಚಾರ ಸಭೆಗೆ ನುಗ್ಗಿ ಗಲಾಟೆ ಮಾಡಿದ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಸ್ಥಳದಲ್ಲಿ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಪೊಲೀಸರನ್ನು ಅಮಾನತು ಮಾಡಬೇಕೆಂದು ಒತ್ತಾಯಿಸಲಾಗಿದೆ. ಜೆಡಿಎಸ್ ಪಕ್ಷದ ಕಾನೂನು ವಿಭಾಗದ ಅಧ್ಯಕ್ಷ ಎಪಿ ರಂಗನಾಥ್ ಉಭಯ ಪಕ್ಷಗಳ ಪರವಾಗಿ ದೂರು ನೀಡಿದ್ದಾರೆ.

ತುಮಕೂರಿನಲ್ಲಿ ಸೋಮವಾರ ರಾತ್ರಿ ನಡೆದಿದ್ದೇನು?

ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿ ವಿ ಸೋಮಣ್ಣ ಪರ ಚುನಾವಣಾ ಪ್ರಚಾರಕ್ಕೆ ದೇವೇಗೌಡರು ತುಮಕೂರಿಗೆ ಆಗಮಿಸಿದ್ದರು. ತುಮಕೂರಿನ ಕುಂಚಿಟಿಗರ ಭವನದಲ್ಲಿ ಮೈತ್ರಿ ಪಕ್ಷದ ಸಮಾವೇಶ ನಡೆಯುತ್ತಿತ್ತು. ಈ ವೇಳೆ ಬಿಜೆಪಿ ಕಾರ್ಯಕರ್ತರ ಸೋಗಿನಲ್ಲಿ ದೇವೇಗೌಡರ ಜತೆ ಫೋಟೋ ತೆಗೆಸಿಕೊಳ್ಳುವ ನೆಪದಲ್ಲಿ ಇಬ್ಬರು ಕೈ ಕಾರ್ಯಕರ್ತೆಯರು ಅಲ್ಲಿಗೆ ಬಂದಿದ್ದಾರೆ. ಗ್ಯಾರಂಟಿಯಿಂದ ಮಹಿಳೆಯರು ದಾರಿ ತಪ್ಪಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆ ಖಂಡಿಸಿ ಏಕಾಏಕಿ ಘೋಷಣೆ ಕೂಗಲು ಶುರು ಮಾಡಿದ್ದಾರೆ. ದೇವೇಗೌಡರ ವಿರುದ್ಧ ಧಿಕ್ಕಾರ ಕೂಗಿದರು. ಇದರಿಂದ ಕೆಲಕಾಲ ಹೈಡ್ರಾಮಾ ನಡೆಯಿತು. ತಕ್ಷಣವೇ ಸ್ಥಳಕ್ಕಾಗಮಿಸಿದ ಮಹಿಳಾ ಪೊಲೀಸರು ಕೈ ಕಾರ್ಯಕರ್ತೆಯರನ್ನು ಹೊರದೂಡಲು ಯತ್ನಿಸಿದರು. ಈ ವೇಳೆ ನುಗ್ಗಿ ಬಂದ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಅವರಿಬ್ಬರು ಜುಟ್ಟು ಹಿಡಿದು ಹೊರಗೆ ಎಳೆದೊಯ್ದರು.

ಇದನ್ನೂ ಓದಿ: ಡಿಕೆಶಿ ಮಹಿಳೆಯ ಅಪಹರಿಸಿ ಬೆದರಿಸಿ ಜಮೀನು ಬರೆಸಿಕೊಂಡಿದ್ದಕ್ಕೆ ದಾಖಲೆ ಇದೆ: ಮತ್ತೆ ಗುಡುಗಿದ ಹೆಚ್​ಡಿ ಕುಮಾರಸ್ವಾಮಿ

ಘಟನೆ ಕುರಿತು ನಂತರ ಪ್ರತಿಕ್ರಿಯಿಸಿದ್ದ ಸೋಮಣ್ಣ, ಕಾಂಗ್ರೆಸ್‌ನವರು ಸೋಲಿನ ಹತಾಶೆ ಮನೋಭಾವನೆಯಿಂದ ಹೀಗೆ ಮಾಡಿದ್ದಾರೆ. ಯಾರೋ ಹೆಣ್ಣು ಮಕ್ಕಳನ್ನು ಕಳುಹಿಸಿ ಹೀಗೆ ಮಾಡಿದ್ದಾರೆ ಎಂದು ಕಿಡಿಕಾರಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:18 pm, Tue, 16 April 24