ಮೋದಿ ಮೆಚ್ಚುಗೆಗೆ ಪಾತ್ರವಾದ ತುಮಕೂರಿನ ಜೇನುತುಪ್ಪ ಉತ್ಪಾದನಾ ಸಂಸ್ಥೆ ಜೀವಿದಂ 10ಕೆ ಬೆಳೆದು ಬಂದ ಬಗೆ ಹೇಗೆ ಗೊತ್ತಾ?

ತುಮಕೂರಿನ ‘ಜೀವಿದಂ 10ಕೆ’ ಜೇನು ಉತ್ಪಾದನೆ ಮತ್ತು ಸಂಸ್ಥೆಯ ಮಹಿಳಾ ಸಬಲೀಕರಣದ ಜೇನು ಕೃಷಿ ಕಾರ್ಯಕ್ಕೆ ಪ್ರಧಾನಿ ಮೋದಿ ಮನ್ ಕಿ ಬಾತ್‌ನಲ್ಲಿ ಭಾನುವಾರ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆರ್ಥಿಕವಾಗಿ ಹಿಂದುಳಿದ 2000 ಮಹಿಳೆಯರಿಗೆ ಜೇನು ಉತ್ಪಾದನೆಯಿಂದ ಆದಾಯ ಸೃಷ್ಟಿಸುತ್ತಿರುವ ಈ ಸಂಸ್ಥೆ ಬೆಳೆದು ಬಂದಿದ್ದು ಹೇಗೆ? ಮೋದಿ ಗಮನ ಸೆಳೆಯಲು ಕಾರಣವಾಗಿದ್ದು ಹೇಗೆ? ಇಲ್ಲಿದೆ ಮಾಹಿತಿ.

ಮೋದಿ ಮೆಚ್ಚುಗೆಗೆ ಪಾತ್ರವಾದ ತುಮಕೂರಿನ ಜೇನುತುಪ್ಪ ಉತ್ಪಾದನಾ ಸಂಸ್ಥೆ ಜೀವಿದಂ 10ಕೆ ಬೆಳೆದು ಬಂದ ಬಗೆ ಹೇಗೆ ಗೊತ್ತಾ?
ತುಮಕೂರಿನ ಜೇನುತುಪ್ಪ ಉತ್ಪಾದನಾ ಸಂಸ್ಥೆ ಜೀವಿದಂ 10ಕೆ ಬೆಳೆದು ಬಂದ ಬಗೆ ಹೇಗೆ ಗೊತ್ತಾ?
Updated By: Ganapathi Sharma

Updated on: Dec 02, 2025 | 10:43 AM

ತುಮಕೂರು, ಡಿಸೆಂಬರ್ 2: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮನ್ ಕಿ ಬಾತ್ ಕಾರ್ಯಕ್ರಮದ 128ನೇ ಸಂಚಿಕೆಯಲ್ಲಿ ತಮ್ಮ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದಕ್ಕೆ ತುಮಕೂರಿನ ಶಿವಗಂಗಾ ಕಳಂಜಿಯ “ಜೀವಿದಂ 10ಕೆ’’ (Jeevidam 10K) ನಿರ್ವಾಹಕಿ ಪವಿತ್ರ ಸಂತಸ ವ್ಯಕ್ತಪಡಿಸಿದ್ದಾರೆ. ‘ನಾವು ಮೂಲೆಯಲ್ಲಿದ್ದೆವು, ಆದರೆ ಪ್ರಧಾನಿ ಮೋದಿಯವರ ಮಾತಿನಿಂದ ರಾಷ್ಟ್ರಮಟ್ಟದಲ್ಲಿ ಗುರುತು ಸಿಕ್ಕಿದೆ. ಇಷ್ಟು ದೊಡ್ಡ ಪ್ರಶಂಸೆ ನಮ್ಮ ಬಗ್ಗೆ ಪ್ರಧಾನಿಯವರಿಂದ ಬರುತ್ತದೆ ಎಂದು ಕನಸೂ ಕಂಡಿರಲಿಲ್ಲ. ಮಹಿಳಾ ಸಬಲೀಕರಣದ ಅವರ ಕನಸಿಗೆ ನಾವು ಕೈಜೋಡಿಸಿದ್ದೇವೆ. ಈ ಮೆಚ್ಚುಗೆ ನಮಗೆ ಮತ್ತಷ್ಟು ಉತ್ತೇಜನ’ ಎಂದು ಅವರು ಹೇಳಿದ್ದಾರೆ.

ಜೀವಿದಂ 10ಕೆ ಬೆಳೆದು ಬಂದ ಬಗೆ ಹೇಗೆ?

ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಜೇನುಕೃಷಿ ಮೂಲಕ ಉದ್ಯೋಗ ಮತ್ತು ಆದಾಯದ ಮಾರ್ಗ ಸೃಷ್ಟಿಸಿದ ಜೀವಿದಂ 10ಕೆ ಬಗ್ಗೆ ಮನ್ ಕೀ ಬಾತ್​​​ನಲ್ಲಿ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 2022ರಲ್ಲಿ ಧಾನ್ ಫೌಂಡೇಷನ್ ಸಹಕಾರದೊಂದಿಗೆ NGO ನಿರ್ಮಿಸಿದ ರೈತ ಉತ್ಪಾದನಾ ಸಂಸ್ಥೆಯೇ ಜೀವಿದಂ 10ಕೆ. ಇದರಡಿ ಜೇನು ಉತ್ಪಾದನಾ ಚಟುವಟಿಕೆ ಆರಂಭಗೊಂಡಿದ್ದು, 2 ಸಾವಿರ ಮಹಿಳಾ ಷೇರುದಾರರಿದ್ದಾರೆ. ಈ ಪೈಕಿ 300 ಮಂದಿ ಹಿಂದುಳಿದ ವರ್ಗ–ಪರಿಶಿಷ್ಟ ಪಂಗಡದ ಮಹಿಳೆಯರೇ ಆಗಿದ್ದಾರೆ. ಅವರ ಮನೆಗಳಿಗೆ ಜೇನು ಉತ್ಪಾದನಾ ಪೆಟ್ಟಿಗೆಗಳನ್ನು ವಿತರಿಸಲಾಗಿತ್ತು.

ವರ್ಷಕ್ಕೆ 2 ಸಾವಿರ ಕೆಜಿ ಜೇನು ಉತ್ಪಾದನೆ

ಹಿರೇಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ತಾಂತ್ರಿಕ ಮಾರ್ಗದರ್ಶನದಲ್ಲಿ ತರಬೇತಿ, ಪೆಟ್ಟಿಗೆಗಳ ಮೇಲೆ ನಿಗಾ, ಮತ್ತು ಉತ್ಪಾದನೆ ವಿಧಾನಗಳ ಕುರಿತು ಮಾಹಿತಿ ನೀಡಲಾಗಿದೆ. ಪ್ರತಿ ಮೂರುರಿಂದ ಆರು ತಿಂಗಳಿಗೆ ಜೇನು ಉತ್ಪಾದನೆ ಸಾಧ್ಯವಾಗುತ್ತಿದ್ದು, ಕಳೆದ ಎರಡು ವರ್ಷಗಳಲ್ಲಿ ವರ್ಷಕ್ಕೆ ಸರಾಸರಿ 2 ಸಾವಿರ ಕೆಜಿ ಜೇನು ಉತ್ಪಾದನೆ ಮಾಡಲಾಗಿದೆ. ಭವಿಷ್ಯದಲ್ಲಿ ಎಲ್ಲ ಮಹಿಳಾ ಷೇರುದಾರರಿಗೂ ಯೋಜನೆ ವಿಸ್ತರಿಸಿ 10 ರಿಂದ 12 ಸಾವಿರ ಕೆಜಿ ಜೇನು ಉತ್ಪಾದನೆ ಮಾಡುವ ಗುರಿ ಸಂಸ್ಥೆಯದ್ದಾಗಿದೆ.

ಇದನ್ನೂ ಓದಿ: ದಕ್ಷಿಣ ಕನ್ನಡ ಹಾಗೂ ತುಮಕೂರಿನ ಜೇನುತುಪ್ಪದ ಸ್ವಾದವನ್ನು ಹಾಡಿಹೊಗಳಿದ ಪ್ರಧಾನಿ ಮೋದಿ

ಸರ್ಕಾರದಿಂದ ಜೇನು ಉತ್ಪಾದನಾ ಪೆಟ್ಟಿಗೆ ಮತ್ತು ತರಬೇತಿ ಸವಲತ್ತು ದೊರೆತರೆ ಇನ್ನಷ್ಟು ಹಿಂದುಳಿದ ಮಹಿಳೆಯರನ್ನು ಯೋಜನೆಯಡಿ ಒಳಗೊಳ್ಳುವಂತೆ ಮಾಡಲು ಸಾಧ್ಯ ಎಂದು ನಿರ್ವಾಹಕಿ ಪವಿತ್ರ ಹೇಳಿದ್ದಾರೆ. NGO ಆಗಿರುವ ಕಾರಣ ವ್ಯವಹಾರದ ಲಾಭದಾಸೆ ಇಲ್ಲದ ನಾವು, ಸರ್ಕಾರ ಕೈಜೋಡಿಸಿದರೆ 2 ಸಾವಿರ ಷೇರುದಾರರಿಗೂ ಜೇನು ಪೆಟ್ಟಿಗೆ ವಿತರಿಸುವ ಕನಸು ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:41 am, Tue, 2 December 25