ಮನೆಯಲ್ಲಿದ್ದ ಚಿನ್ನಾಭರಣ ಸಮೇತ ಪತ್ನಿ ಎಸ್ಕೇಪ್: ಮಕ್ಕಳಿಬ್ಬರನ್ನು ಸಾಯಿಸಿ ತಾನೂ ನೇಣಿಗೆ ಶರಣಾದ ಪತಿ!

ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಆಲ್ಕೆರೆಯಲ್ಲಿ ಪತ್ನಿಯ ಅಕ್ರಮ ಸಂಬಂಧ ಹಾಗೂ ಪಲಾಯನದಿಂದ ಮನನೊಂದ ಅರ್ಚಕ , ತನ್ನ ಇಬ್ಬರು ಪುಟ್ಟ ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆಯಲ್ಲಿದ್ದ ಚಿನ್ನಾಭರಣದೊಂದಿಗೆ ಪತ್ನಿ ಪರಾರಿಯಾದ ಬೆನ್ನಲ್ಲೇ ವ್ಯಕ್ತಿ ಈ ನಿರ್ಧಾರ ತೆಗೆದುಕೊಂಡಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

ಮನೆಯಲ್ಲಿದ್ದ ಚಿನ್ನಾಭರಣ ಸಮೇತ ಪತ್ನಿ ಎಸ್ಕೇಪ್: ಮಕ್ಕಳಿಬ್ಬರನ್ನು ಸಾಯಿಸಿ ತಾನೂ ನೇಣಿಗೆ ಶರಣಾದ ಪತಿ!
ಮಕ್ಕಳಿಬ್ಬರನ್ನು ಸಾಯಿಸಿ ತಾನೂ ನೇಣಿಗೆ ಶರಣಾದ ಪತಿ!
Image Credit source: google Gemini
Edited By:

Updated on: May 02, 2026 | 11:04 AM

ತುಮಕೂರು, ಮೇ 02: ಚಿನ್ನಾಭರಣ ಸಹಿತ ಪರಾರಿಯಾದ ಹೆಂಡತಿಯ (Wife) ನಡತೆಯಿಂದ ಬೇಸತ್ತ ವ್ಯಕ್ತಿಯೊಬ್ಬ ತನ್ನಿಬ್ಬರು ಪುಟ್ಟ ಮಕ್ಕಳನ್ನೂ ಕೊಲೆ ಮಾಡಿ, ತಾನೂ ನೇಣಿಗೆ ಶರಣಾಗಿರುವ ಅಮಾನವೀಯ ಘಟನೆ ತುಮಕೂರು (Tumkuru) ಜಿಲ್ಲೆಯ ಕುಣಿಗಲ್ ತಾಲೂಕಿನ ಆಲ್ಕೆರೆ ಗ್ರಾಮದಲ್ಲಿ ನಡೆದಿದೆ. ಶುಕ್ರವಾರ ರಾತ್ರಿ ಈ ಭೀಕರ ಕೃತ್ಯ ನಡೆದಿದ್ದು, ಇಂದು ಬೆಳಗ್ಗೆ ಅಕ್ಕಪಕ್ಕದ ಮನೆಯವರು ಗಮನಿಸಿದಾಗ ವಿಷಯ ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಲ್ಕೆರೆ ಗ್ರಾಮದ ಮಲ್ಲೇಶ್ವರಸ್ವಾಮಿ ದೇಗುಲದ ಅರ್ಚಕ ಹಾಗೂ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದ ಶಿವಣ್ಣ (40) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.ಸಾವಿಗೂ ಮುನ್ನ ಆತ ತನ್ನ ಮಕ್ಕಳಾದ ಜೀವನ್ (10) ಮತ್ತು ಪ್ರಾಣೇಶ್ (5) ಎಂಬುವವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಸಾವಿಗೆ ಕಾರಣವಾದ ಅಕ್ರಮ ಸಂಬಂಧ

ಶಿವಣ್ಣನ ಪತ್ನಿ ಪರಪುರುಷನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಇದೇ ವಿಚಾರವಾಗಿ ದಂಪತಿಗಳ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಕಳೆದ ಒಂದು ವಾರದ ಹಿಂದೆ ಆಕೆ ತನ್ನ ಗಂಡ ಮತ್ತು ಇಬ್ಬರು ಮಕ್ಕಳನ್ನು ಬಿಟ್ಟು ಪ್ರಿಯಕರನ ಜೊತೆ ಓಡಿಹೋಗಿದ್ದಳು. ಈ ಸಂಬಂಧ ಶಿವಣ್ಣ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದ. ಪೊಲೀಸರ ಮಧ್ಯಸ್ಥಿಕೆಯ ನಂತರ ಪತ್ನಿ ಮನೆಗೆ ಮರಳಿ ಬಂದಿದ್ದಳು. ಆದರೆ, ಮರುದಿನವೇ ಶಿವಣ್ಣ ಕೆಲಸಕ್ಕೆ ಹೋದ ಸಮಯ ನೋಡಿಕೊಂಡು, ಮನೆಯಲ್ಲಿದ್ದ ಹಣ ಮತ್ತು ಚಿನ್ನಾಭರಣದೊಂದಿಗೆ ಆಕೆ ಮತ್ತೆ ಪಲಾಯನ ಮಾಡಿದ್ದಾಳೆ. ಪತ್ನಿಯ ಈ ನಡತೆಯಿಂದ ತೀವ್ರವಾಗಿ ಮನನೊಂದ ಶಿವಣ್ಣ, ಜೀವನದಲ್ಲಿ ಜಿಗುಪ್ಸೆಗೊಂಡು ಮಕ್ಕಳೊಂದಿಗೆ ಸಾವಿನ ಹಾದಿ ಹಿಡಿದಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ ತುಮಕೂರಿನಲ್ಲಿ ಹಕ್ಕಿ ಜ್ವರದ ಭೀತಿ: ನವಿಲುಗಳ ಸಾವಿನ ಬೆನ್ನಲ್ಲೇ ಈಗ 30 ಕೋಳಿಗಳ ಸಾವು! ಜಿಲ್ಲೆಯಲ್ಲಿ ಹೈ ಅಲರ್ಟ್​

ಘಟನಾ ಸ್ಥಳಕ್ಕೆ ಕುಣಿಗಲ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಕ್ಕಳನ್ನು ಸಾಯಿಸಿ ತಂದೆಯೂ ಸಾವನ್ನಪ್ಪಿರುವ ಘಟನೆ ಗ್ರಾಮದಲ್ಲಿ ಸೂತಕದ ಛಾಯೆ ಮೂಡಿಸಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us