ಭ್ರೂಣ ಲಿಂಗ ಹತ್ಯೆ ತಡೆಗಟ್ಟಲು ಇಲಾಖೆ ಗಮನ ಹರಿಸುತ್ತೆ: ಸಚಿವ ದಿನೇಶ್ ಗುಂಡೂರಾವ್
ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಒಪ್ಪಿಸಿದೆ. ಈ ವಿಚಾರವಾಗಿ ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಪೊಲೀಸ್ ಇಲಾಖೆ ಈ ಜಾಲವನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುತ್ತಿದೆ. ಈ ಪ್ರಕರಣವನ್ನು ವಿಸ್ತೃತವಾಗಿ ತನಿಖೆ ಆಗಬೇಕು ಎಂದು ಹೇಳಿದ್ದಾರೆ.
![ಭ್ರೂಣ ಲಿಂಗ ಹತ್ಯೆ ತಡೆಗಟ್ಟಲು ಇಲಾಖೆ ಗಮನ ಹರಿಸುತ್ತೆ: ಸಚಿವ ದಿನೇಶ್ ಗುಂಡೂರಾವ್](https://images.tv9kannada.com/wp-content/uploads/2023/12/dineshonbruna.jpg?w=1280)
ತುಮಕೂರು, ಡಿಸೆಂಬರ್ 01: ಹೆಣ್ಣು ಭ್ರೂಣ ಹತ್ಯೆ (Female Foeticide) ಬಗ್ಗೆ ಗೃಹ ಸಚಿವರ ಜೊತೆಯೂ ಚರ್ಚಿಸಿದ್ದೇನೆ. ಪೊಲೀಸ್ ಇಲಾಖೆ ಈ ಜಾಲವನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುತ್ತಿದೆ. ಈ ಪ್ರಕರಣವನ್ನು ವಿಸ್ತೃತವಾಗಿ ತನಿಖೆ ಆಗಬೇಕು ಎಂದು ಹೇಳಿದ್ದೆವು. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ್ ಚರ್ಚಿಸಿ ಸಿಐಡಿಗೆ ವಹಿಸಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಜಿಲ್ಲೆಯ ಕೊರಟಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪೊಲೀಸ್, ಆರೋಗ್ಯ ಇಲಾಖೆ ಜೊತೆಯಾಗಿ ತನಿಖೆ ಮಾಡಬೇಕಿದೆ ಎಂದಿದ್ದಾರೆ.
ಲಿಂಗಾನುಪಾತ ನೋಡಿದಾಗ ಹೆಣ್ಣುಮಕ್ಕಳ ಸಂಖ್ಯೆಯೂ ಕಡಿಮೆ ಇದೆ. ಸಮಾಜದಲ್ಲಿ ಹೆಣ್ಣುಮಗು ಅಂದಾಕ್ಷಣ ಬೇಡ ಅನ್ನೋ ಪರಿಸ್ಥಿತಿ ಇದೆ. ಭ್ರೂಣ ಲಿಂಗ ಹತ್ಯೆ ತಡೆಗಟ್ಟಲು ಇಲಾಖೆ ಹೆಚ್ಚು ಗಮನ ಹರಿಸುತ್ತದೆ. ಪ್ರಕರಣ ಸಂಬಂಧ ಇಬ್ಬರು ಅಧಿಕಾರಿಗಳನ್ನ ಅಮಾನತು ಮಾಡಲಾಗಿದೆ ಎಂದು ಹೇಳಿದ್ದಾರೆ.
ಪರಮೇಶ್ವರ್ರನ್ನು ಹಾಡಿಹೊಗಳಿದ ಸಚಿವ ದಿನೇಶ್ ಗುಂಡೂರಾವ್
ಪರಮೇಶ್ವರ್ ನಮ್ಮ ನಾಯಕರು, ಅವರ ಜತೆ ನಾವು ಬೆಳೆದಿದ್ದೇವೆ. ಡಾ.ಪರಮೇಶ್ವರ್ ಅಧ್ಯಕ್ಷರಾಗಿದ್ದಾಗ ಸಾಕಷ್ಟು ಸಹಾಯ ಮಾಡಿದ್ದರು. ಅವರ ಸಹಾಯದಿಂದ ಎರಡು ಬಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ.
ಇದನ್ನೂ ಓದಿ: ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ: ಸಿಐಡಿ ತನಿಖೆಗೆ ಒಪ್ಪಿಸಿದ ರಾಜ್ಯ ಸರ್ಕಾರ
ಪಕ್ಷದ ಕಾರ್ಯಾಧ್ಯಕ್ಷ ಜೊತೆಗೆ ಅಧ್ಯಕ್ಷನಾಗಿಯೂ ಕೆಲಸ ಮಾಡಿದ್ದೇನೆ. ಕೊರಟಗೆರೆಯಲ್ಲಿ ಹೆರಿಗೆ ದಾಖಲು ನೋಡಿದ್ರೆ ಆಸ್ಪತ್ರೆ ಬೇಕು ಅನಿಸ್ತಿದೆ. ಟ್ರಾಮಾ ಸೆಂಟರ್ ಹಾಗೂ ಪಿಹೆಚ್ಸಿ ಬಗ್ಗೆ ಗಮನಹರಿಸಲಾಗುವುದು ಎಂದು ತಿಳಿಸಿದ್ದಾರೆ.
ಪಂಚ ರಾಜ್ಯಗಳ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಗೆಲ್ಲುತ್ತೇವೆ: ಗೃಹ ಸಚಿವ ಪರಮೇಶ್ವರ್
ತುಮಕೂರು ಜಿಲ್ಲೆ ಕೊರಟಗೆರೆಯಲ್ಲಿ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ಪಂಚ ರಾಜ್ಯಗಳ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಗೆಲ್ಲುತ್ತೇವೆ. ಜನರು ನಮ್ಮನ್ನು ಗೆಲ್ಲಿಸುತ್ತಾರೆ ಅನ್ನೋ ವಿಶ್ವಾಸ ಇದೆ. ಪಂಚರಾಜ್ಯ ಫಲಿತಾಂಶ ಲೋಕಸಭಾ ಚುನಾವಣೆಗೆ ದಿಕ್ಸೂಚಿ ವಿಚಾರವಾಗಿ ಮಾತನಾಡಿದ ಅವರು, ಫಲಿತಾಂಶ ಬಳಿಕ ನಮ್ಮ ರಾಷ್ಟ್ರೀಯ ನಾಯಕರು ಚರ್ಚೆ ಮಾಡುತ್ತಾರೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.