ತುಮಕೂರು: 2 ತಿಂಗಳು ಹಿಂದಷ್ಟೇ ಮದ್ವೆಯಾಗಿದ್ದ ಯುವಕ ಸಾವು: ಸಾವಿನ ಸುತ್ತ ಅನುಮಾನದ ಹುತ್ತ
ನವವಿವಾಹಿತನ ಶವ ಕೊಲೆಯಾದ ಸ್ಥಿತಿಯಲ್ಲಿ ಪತ್ತೆ ಆದ ಘಟನೆ ತುಮಕೂರು ಜಿಲ್ಲೆಯ ತಿಪಟೂರು ನಗರದ ಜೈಪುರ ರಸ್ತೆಯ ಚಿಕ್ಕಕೊಟ್ಟಗಿಹಳ್ಳಿ ಬಳಿಯ ತೋಟದಲ್ಲಿ ನಡೆದಿದೆ. ಮೃತ ವ್ಯಕ್ತಿ ಎರಡು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ. ಘಟನೆ ಸಂಬಂಧ ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತುಮಕೂರು, ಮಾರ್ಚ್ 05: ಕೆಲಸಕ್ಕೆಂದು ಮನೆಯಿಂದ ಹೋಗಿದ್ದ ವ್ಯಕ್ತಿ ಕೊಲೆಯಾದ (murder) ಸ್ಥಿತಿಯಲ್ಲಿ ಪತ್ತೆ ಆಗಿರುವಂತಹ ಘಟನೆ ಜಿಲ್ಲೆಯ ತಿಪಟೂರು ನಗರದ ಜೈಪುರ ರಸ್ತೆಯ ಚಿಕ್ಕಕೊಟ್ಟಗಿಹಳ್ಳಿ ಬಳಿಯ ತೋಟ ಒಂದರಲ್ಲಿ ನಡೆದಿದೆ. ಮನ್ಸೂರ್ (32) ಕೊಲೆಯಾದ ವ್ಯಕ್ತಿ. ಕಳೆದ ಎರಡು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಮನ್ಸೂರ್ ಸಾವಿನ ಹಿಂದೆ ಅನುಮಾನಗಳು ಹುಟ್ಟಿಕೊಂಡಿದ್ದು, ಸದ್ಯ ತಿಪಟೂರು ಗ್ರಾಮಾಂತರ ಪೊಲೀಸರು ತನಿಖೆ ನಡೆಸಿದ್ದಾರೆ.
ನಡೆದಿದ್ದೇನು?
ತಿಪಟೂರು ನಗರದ ಆರ್ ಸಿಸಿ ಟ್ಯಾಂಕ್ ರಸ್ತೆಯ 3ನೇ ಕ್ರಾಸ್ನ ನಿವಾಸಿ ಮನ್ಸೂರ್, ಗುಜುರಿ ಕೆಲಸ ಮಾಡುತ್ತಿದ್ದರು. ಕಳೆದ ಎರಡು ತಿಂಗಳ ಹಿಂದಷ್ಟೇ ವಿವಾಹವಾಗಿದ್ದು, ಹೊಸ ಜೀವನ ಆರಂಭಿಸಿದ್ದರು. ನಿನ್ನೆ ಬೆಳಿಗ್ಗೆ ತನ್ನದೇ ಆಟೋದಲ್ಲಿ ಮನೆಯಿಂದ ಹೋದವರು ಬಳಿಕ ನಾಪತ್ತೆ ಆಗಿದ್ದಾರೆ. ಕುಟುಂಬಸ್ಥರು ಹಲವು ಬಾರಿ ಕರೆ ಮಾಡಿದರೂ ಸಂಪರ್ಕಕ್ಕೆ ಸಿಕ್ಕಿಲ್ಲ. ಹೀಗಾಗಿ ತಿಪಟೂರು ನಗರ ಠಾಣೆಗೆ ದೂರು ನೀಡಿದ್ದಾರೆ. ಇನ್ನು ಆಟೋ ಹುಡುಕಾಡಿದಾಗ ಚಿಕ್ಕಕೊಟ್ಟಗಿಹಳ್ಳಿ ಬಳಿ ಪತ್ತೆ ಆಗಿದೆ. ಬಳಿಕ ಸುತ್ತಮುತ್ತ ಹುಡುಕಾಟ ಮಾಡಿದ ವೇಳೆ ಅಡಿಕೆ ತೋಟ ಒಂದರಲ್ಲಿ ಮನ್ಸೂರ್ ಶವ ಪತ್ತೆ ಆಗಿದೆ.
ಮರಕ್ಕೆ ಟಾಟಾ ಏಸ್ ವಾಹನ ಡಿಕ್ಕಿ: ಇಬ್ಬರು ಸಾವು
ಗದಗ ತಾಲೂಕಿನ ಹರ್ತಿ ಗ್ರಾಮದಲ್ಲಿ ತಡರಾತ್ರಿ ರಸ್ತೆ ಬದಿಯ ಮರಕ್ಕೆ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದು ವಾಹನದಲ್ಲಿದ್ದ ಇಬ್ಬರು ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಹಿರೇಕೊಪ್ಪ ಗ್ರಾಮದ ನಿಂಗಪ್ಪ ಯಳವತ್ತಿ(36) ಮತ್ತು ಮುತ್ತಪ್ಪ ಸತ್ತಿಗೇರಿ(35) ಮೃತರು.
ಇದನ್ನೂ ಓದಿ: ಕೆಲಸ ಕೊಡಿಸಿದ ಸ್ನೇಹಿತನಿಗೇ ಚಟ್ಟ ಕಟ್ಟಿದ ಫ್ರೆಂಡ್: ಎಣ್ಣೆ ನಶೆಯಲ್ಲಿ ಶುರುವಾದ ಜಗಳ ಕೊಲೆಯಲ್ಲಿ ಎಂಡ್
ವಾಹನದಲ್ಲಿ ಗೊಜನೂರು ಗ್ರಾಮದಿಂದ ಆರ್ಕೆಸ್ಟ್ರಾ ನೋಡಿಕೊಂಡು ವಾಪಸ್ ಬರುವಾಗ ದುರ್ಘಟನೆ ಸಂಭವಿಸಿದೆ. ನಿದ್ದೆ ಮಂಪರಿ ಮರಕ್ಕೆ ಡಿಕ್ಕಿ ಹೊಡೆದು ವಾಹನ ಪಲ್ಟಿ ಹೊಡೆದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.