ಮಾವನ ಮಗನ ಜೊತೆ ನಿಶ್ಚಿತಾರ್ಥ, ಚಾಲಕನ ಜೊತೆ ಓಡಿಹೋಗಿ ಮದುವೆಯಾದ ಯುವತಿ: ಆಮೇಲಾಯ್ತು ಸಿನಿಮೀಯ ಟ್ವಿಸ್ಟ್!

ಆಕೆ ಶ್ರೀಮಂತರ ಮನೆ ಮಗಳು. ದೊಡ್ಡ ಕುಟುಂಬದಲ್ಲಿ ಬೆಳೆದ ಆಕೆಗೆ ಮನೆಯೇ ಪ್ರಪಂಚ. ಖುಷಿ ಖುಷಿಯಾಗಿ ಮನೆ ತುಂಬಾ ಓಡಾಡಿಕೊಂಡಿದ್ದ ಆಕೆಗೆ ಮಾವನ ಮಗನ ಜೊತೆ ಮದುವೆ ನಿಶ್ಚಯವಾಗಿತ್ತು. ಲಕ್ಷ ಲಕ್ಷ ಖರ್ಚು ಮಾಡಿ ತಯಾರಿ ನಡೆಸಿದ್ದ ಕುಟುಂಬ ಇಡೀ ಊರಿಗೆ ಕಾರ್ಡ್ ಹಂಚಿತ್ತು. ಮದುವೆಗೆ ಇನ್ನೊಂದೇ ತಿಂಗಳು ಬಾಕಿ ಇದ್ದಾಗ ಆ ಕುಟುಂಬಕ್ಕೆ ಬಿಗ್ ಶಾಕ್ ಕಾದಿತ್ತು. ಮನೆಯ ವಾಹನದ ಚಾಲಕನ ಜೊತೆ ಆ ಯುವತಿ ಓಡಿಹೋಗಿ ಮದುವೆಯಾಗಿದ್ದಳು. ಆಮೇಲೇನಾಯ್ತು? ಓದಿ.

ಮಾವನ ಮಗನ ಜೊತೆ ನಿಶ್ಚಿತಾರ್ಥ, ಚಾಲಕನ ಜೊತೆ ಓಡಿಹೋಗಿ ಮದುವೆಯಾದ ಯುವತಿ: ಆಮೇಲಾಯ್ತು ಸಿನಿಮೀಯ ಟ್ವಿಸ್ಟ್!
ಸಾಂದರ್ಭಿಕ ಚಿತ್ರ
Image Credit source: TV9 Network
Edited By:

Updated on: Feb 02, 2026 | 1:02 PM

ತುಮಕೂರು, ಫೆಬ್ರವರಿ 2: ಅದೊಂದು ರೀತಿಯ ಚೆಲುವಿನ ಚಿತ್ತಾರ ಸಿನಿಮಾ ರೀತಿಯ ನೈಜ ಘಟನೆ. ಆಕೆ ಶ್ರೀಮಂತರ ಮಗಳು. ಆರ್ಥಿಕವಾಗಿ ಚೆನ್ನಾಗಿದ್ದ ಕುಟುಂಬದಲ್ಲಿ ಎಲ್ಲವೂ ಚೆನ್ನಾಗಿತ್ತು. ಮಗಳು ಚೆನ್ನಾಗಿ ಓದದಿದ್ದರೂ ಸಹ ಮಾವನ ಮಗನ ಜೊತೆ ಮದುವೆ ಮಾಡುವ ಯೋಚನೆಯಲ್ಲಿ ಮನೆಯವರಿದ್ದರು. ಅದರಂತೆ ಸಂಬಂಧಿಕರಿಗೆಲ್ಲಾ ಕಾರ್ಡ್ ಹಂಚಿ ಚೌಲ್ಟ್ರಿ, ಊಟ, ಡೆಕೊರೇಷನ್ ಎಂದು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಹೀಗೆ ಮದುವೆ ತಯಾರಿಯಲ್ಲಿದ್ದ ಕುಟುಂಬಕ್ಕೆ ಯುವತಿ ಶಾಕ್ ನೀಡಿದ್ದು, ಮನೆಯ ವಾಹನ ಚಾಲಕನ ಜೊತೆ ಓಡಿ ಹೋಗಿ ಮದುವೆಯಾಗಿದ್ದಾಳೆ! ಅಷ್ಟೇ ಅಲ್ಲದೇ, ಕುಟುಂಬದವರ ವಿರುದ್ಧವೇ ಬೆದರಿಕೆ ಆರೋಪ ಮಾಡಿದ್ದಾಳೆ.

ತುಮಕೂರು ನಗರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ತುಮಕೂರು ನಗರ ನಿವಾಸಿ ಹಾಗೂ ಉದ್ಯಮಿಯೊಬ್ಬರ ಮಗಳಿಗೆ ತನ್ನದೇ ಮನೆಗೆ ಪಾರ್ಟ್ ಟೈಂ ಚಾಲಕನಾಗಿ ಬರುತಿದ್ದ ರವೀಶ ಎಂಬಾತನ ಜೊತೆ ಪ್ರೇಮಾಂಕುರವಾಗಿದೆ. ಈ ವಿಚಾರ ಆಕೆಯ ಅಣ್ಣನಿಗೆ ತಿಳಿದು ಎಚ್ಚರಿಕೆ ಸಹ ನೀಡಿದ್ದರು. ಇದಾದ ಬಳಿಕ ಈ ಹಿಂದೆ ಕೊಟ್ಟ ಮಾತಿನಂತೆ ಮಾವನ ಮಗನ ಜೊತೆ ಆಕೆಯ ಮದುವೆಗೆ ಕುಟುಂಬ ನಿಶ್ಚಯಿಸಿ ನಿಶ್ಚಿತಾರ್ಥ ಸಹ ಮುಗಿಸಿದೆ. ಇದಾದ ಬಳಿಕ, ಮದುವೆಗೆ ಇನ್ನೊಂದು ತಿಂಗಳು ಬಾಕಿ ಇರುವಾಗಲೇ, ಜನವರಿ 19ರಂದು ಯವತಿ ಮನೆಯ ರವೀಶ ಜೊತೆ ಓಡಿಹೊಗಿದ್ದಾಳೆ. ಚಿಕ್ಕನಾಯಕನಹಳ್ಳಿಯಲ್ಲಿ ಮದುವೆಯಾಗಿದ್ದಾಳೆ. ಇತ್ತ ಮಗಳು ಕಾಣದ ಹಿನ್ನಲೆ ಕಾಣೆಯಾದ ಬಗ್ಗೆ ನಗರ ಠಾಣೆಗೆ ದೂರು ನೀಡಿದ ಕುಟುಂಬಕ್ಕೆ ಶಾಕ್ ಆಗಿದೆ. ಅತ್ತ ಯುವತಿಯೇ, ‘ಕುಟುಂಬದವರಿಂದ ಬೆದರಿಕೆ ಇದೆ, ನನಗೆ ಭದ್ರತೆ ಬೇಕು’ ಎಂದು ಪೊಲೀಸರ ಮುಂದೆ ಕಣ್ಣೀರು ಹಾಕಿದ್ದಾಳೆ.

ಆಮೇಲೇನಾಯ್ತು?

ಯುವತಿಯ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಆಕೆಯ ಸಹೋದರ, ಅವಳ ಇಚ್ಛೆಗೆ ವಿರುದ್ಧವಾಗಿ ನಾವು ಮದುವೆ ನಿಶ್ಚಯಿಸಿರಲಿಲ್ಲ. ಮನೆ ಮಗಳು ಕಾಣೆಯಾಗಿದ್ದಾಳೆಂದು ನಾವು ಠಾಣೆಗೆ ಬಂದಿದ್ದೇವೆ ಹೊರತು ಅವರಲ್ಲ. ಆಕೆಯ ಒಪ್ಪಿಗೆಯಂತೆ ಚಿನ್ನಾಭರಣ ಖರೀದಿ, ಸೀರೆ, ಮದುವೆ ಕಾರ್ಡ್​​​ಗಳನ್ನು ಮಾಡಿದ್ದೆವು. ಆಕೆಯ ತಾಯಿ ಆರೋಗ್ಯದ ಸಮಸ್ಯೆ ನಡುವೆ ಮದುವೆ ಮಾಡಲು ಓಡಾಡುತಿದ್ದರು. ಮದುವೆ ಇಷ್ಟ ಇಲ್ಲ ಎಂದು ನಮಗೆ ಹೇಳಬಹುದಿತ್ತು. ಅದರ ಬದಲು ಈ ರೀತಿ ಮಾಡಿರುವುದು ನಮಗೆ ಆಘಾತ ಉಂಟುಮಾಡಿದೆ ಎಂದಿದ್ದಾರೆ.

ಪೊಲೀಸರ ಮಧ್ಯಸ್ಥಿಕೆಯಲ್ಲೇ ರಾಜಿ ಸಂಧಾನ!

ಯುವತಿ ಕಾಣೆಯಾದ ಬಗ್ಗೆ ತುಮಕೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾದ ನಂತರ ಪ್ರೇಮಿಗಳು ಮದುವೆಯಾಗಿರುವ ವಿಚಾರ ತಿಳಿದುಬಂತು. ಯುವತಿ ಕುಟುಂಬಸ್ಥರಿಂದ ಬೆದರಿಕೆ ಆರೋಪ ಸಹ ಮಾಡಿದ್ದರಿಂದ ಪೊಲೀಸರ ಮಧ್ಯಸ್ಥಿಕೆಯಲ್ಲೇ ರಾಜಿ ಸಂಧಾನ ನಡೆದು, ಎರಡೂ ಕಡೆಯ ಕುಟುಂಬದ ಒಪ್ಪಿಗೆ ಹಾಗೂ ಖುಲಾಸೆ ಪತ್ರಕ್ಕೆ ಸಹಿ ಹಾಕಿ ಪ್ರಕರಣಕ್ಕೆ ತೆರೆ ಎಳೆಯಲಾಯಿತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:55 pm, Mon, 2 February 26