ಕುಡಿದ ಮತ್ತಲ್ಲಿ ಕ್ಷುಲ್ಲಕ ವಿಚಾರಕ್ಕೆ ಸಹೋದರರ ಫೈಟ್​​: ಕಲ್ಲಿಂದ ಜಜ್ಜಿ ತಮ್ಮನನ್ನೇ ಕೊಂದ ಅಣ್ಣ!

ತುಮಕೂರಿನಲ್ಲಿ ಕುಡಿದ ಮತ್ತಿನಲ್ಲಿ ಕ್ಷುಲ್ಲಕ ವಿಚಾರಕ್ಕೆ ಸಹೋದರರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಮಧುಗಿರಿಯ ನಿಟ್ಟರಹಳ್ಳಿಯಲ್ಲಿ ತಮ್ಮನನ್ನು ಆತನ ಅಣ್ಣನೇ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ. ಹಣದ ವಿಚಾರಕ್ಕೆ ಶುರುವಾದ ಜಗಳ ವಿಕೋಪಕ್ಕೆ ತಿರುಗಿ ಈ ದುರಂತ ಸಂಭವಿಸಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ಕುಡಿದ ಮತ್ತಲ್ಲಿ ಕ್ಷುಲ್ಲಕ ವಿಚಾರಕ್ಕೆ ಸಹೋದರರ ಫೈಟ್​​: ಕಲ್ಲಿಂದ ಜಜ್ಜಿ ತಮ್ಮನನ್ನೇ ಕೊಂದ ಅಣ್ಣ!
ಮೃತ ವ್ಯಕ್ತಿ ಮತ್ತು ಆರೋಪಿ
Edited By:

Updated on: Apr 28, 2026 | 5:48 PM

ತುಮಕೂರು, ಏಪ್ರಿಲ್​​ 28: ಕ್ಷುಲ್ಲಕ ವಿಚಾರಕ್ಕೆ ಒಡಹುಟ್ಟಿದವರ ನಡುವೆ ಆರಂಭವಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತುಮಕೂರಿನಲ್ಲಿ (Tumakuru) ನಡೆದಿದೆ. ಮಧುಗಿರಿ ತಾಲೂಕಿನ ನಿಟ್ಟರಹಳ್ಳಿ ನಿವಾಸಿ ಗಂಗರಾಜು ಮೃತನಾಗಿದ್ದು, ಕಲ್ಲಿನಿಂದ ಜಜ್ಜಿ ಸಹೋದರನ ಹತ್ಯೆಗೈದ ಆರೋಪಿ ನರಸಿಂಹಮೂರ್ತಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕುಡಿದ ಮತ್ತಿನಲ್ಲಿ ಕೋಪದ ಕೈಗೆ ಬುದ್ಧಿಕೊಟ್ಟ ಅಣ್ಣ ಜೈಲು ಸೇರಿದ್ದರೆ, ಮದ್ಯಕ್ಕೆ ದಾಸನಾಗಿದ್ದ ತಮ್ಮ ಇಹಲೋಕವನ್ನೇ ತೊರೆದಿದ್ದಾನೆ. ಭೀಕರ ಘಟನೆಗೆ ಸ್ಥಳೀಯರು ಬೆಚ್ಚಿಬಿದ್ದಿದ್ದು, ಮೃತ ಗಂಗರಾಜು ಅವಿವಾಹಿತ ಎಂಬುದು ಕೂಡ ಗೊತ್ತಾಗಿದೆ.

ಇನ್ನು ಗಂಗರಾಜು ಸಹೋದರರರಿಗೆ ಅಪ್ಪ-ಅಮ್ಮ ಇರಲಿಲ್ಲ. ಹೀಗಾಗಿ ಅಜ್ಜಿಯ ಆಶ್ರಯದಲ್ಲಿಯೇ ಇವರು ಬೆಳೆದಿದ್ದರು. ಓದು ತಲೆಗೆ ಹತ್ತದಿದ್ದರೂ ಕುಡಿತದ ಚಟ ಮಾತ್ರ ಮೈಗಂಟಿತ್ತು. ಮದುವೆ ಬಳಿಕ ಗಂಗರಾಜು ಅಣ್ಣಂದಿರು ಬೇರೆ ಮನೆ ಮಾಡಿಕೊಂಡು ವಾಸವಿದ್ದರೆ, ಈತ ಮಾತ್ರ ಅಜ್ಜಿಯ ಸೇವೆ ಮಾಡಿಕೊಂಡು ಆಕೆಯ ಜೊತೆಗೇ ಇದ್ದ. ಈ ನಡುವೆ ನಿನ್ನೆ ಸಂಜೆ ವೇಳೆಗೆ ಮನೆಯಲ್ಲಿದ್ದ ಗಂಗರಾಜು ಬಾರ್​​ಗೆ ತೆರಳಿ ಕುಡಿದು ಬಂದಿದ್ದಾನೆ. ಇದೇ ವೇಳೆ ಸಹೋದರ ನರಸಿಂಹಮೂರ್ತಿ ಸಹ ಕುಡಿದ ಮತ್ತಿನಲ್ಲಿ ಪ್ರತ್ಯಕ್ಷನಾಗಿದ್ದಾನೆ. ಈ ವೇಳೆ ಅಣ್ಣ-ತಮ್ಮನ ನಡುವೆ ಹಣದ ವಿಚಾರ ಸಂಬಂಧ ಗಲಾಟೆ ಶುರುವಾಗಿದೆ. ಆ ಜಗಳ ವಿಕೋಪಕ್ಕೆ ತೆರಳಿ ಇಬ್ಬರೂ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ನಡುವೆ ಕುಸಿದು ಬಿದ್ದ ಗಂಗರಾಜುವಿನ ಮೇಲೆ ಅಲ್ಲೇ ಇದ್ದ ಕಲ್ಲಿನಿಂದ ನರಸಿಂಹಮೂರ್ತಿ ದಾಳಿ ಮಾಡಿದ್ದಾನೆ. ತಲೆಗೆ ಕಲ್ಲಿನಿಂದ ಹಲ್ಲೆ ಮಾಡಿ ಸಹೋದರನ ಕೊಲೆಗೈದಿದ್ದಾನೆ.

ಇದನ್ನೂ ಓದಿ: ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯ ಭೀಕರ ಕೊಲೆ; ಸಂಬಂಧಿಕರಿಂದಲೇ ನಡೀತು ಭೀಭತ್ಸ ಕೃತ್ಯ

ಪ್ರಕರಣ ಸಂಬಂಧ ಕೊಡಿಗೇನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಗಂಗರಾಜುವಿನ ಮತ್ತೋರ್ವ ಸಹೋದರ ನೀಡಿರುವ ದೂರಿನ ಅನ್ವಯ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಕುಡಿದ ಮತ್ತಿನಲ್ಲಿ ನಡೆದ ಜಗಳದಲ್ಲಿ ತಮ್ಮನ ಕೊಂದ ಅಣ್ಣನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತಿದ್ದಾರೆ. ಮೇಲ್ನೋಟಕ್ಕೆ ಕ್ಷುಲ್ಲಕ ವಿಚಾರಕ್ಕೆ ಕೊಲೆ ನಡೆದಿರುವಂತೆ ಕಂಡುಬಂದಿದೆ. ಆದರೆ ಇದರ ಹೊರತಾಗಿ ಸಹೋದರರ ನಡುವೆ ಬೇರೆನಾದರೂ ವಿಚಾರ ಸಂಬಂಧ ಜಗಳ ಸೃಷ್ಟಿಯಾಗಿ ಕೊಲೆ ನಡೆದಿದೆಯಾ ಎಂಬ ಅನುಮಾನ ಸಹ ಮೂಡಿದ್ದು, ಪೊಲೀಸರ ತನಿಖೆಯಿಂದಷ್ಟೇ ಮತ್ತಷ್ಟು ಸಂಗತಿಗಳು ಹೊರಬರಬೇಕಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us