ತುಮಕೂರು: ಅಂಬೇಡ್ಕರ್ ನಿಗಮದಲ್ಲಿ ಅಕ್ರಮದ ವಾಸನೆ, ಕಮಿಷನ್ ಆಸೆಗೆ ಟೆಂಡರ್ ಸಿಗದ ಕಂಪನಿಗೆ ಬೋರ್ವೆಲ್ ಕೊರೆಯಲು ಅನುಮತಿ
ತುಮಕೂರು ಜಿಲ್ಲೆಯಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ 2018-19ರಲ್ಲಿ 106 ರೈತರಿಗೆ ಬೋರ್ವೆಲ್ ಕೊರೆಯಲು ಅನುಮತಿ ನೀಡಲಾಗಿತ್ತು. ಆದರೆ, ಅಧಿಕಾರಿಗಳ ವೈಯಕ್ತಿಕ ಆದೇಶದ ಮೇರೆಗೆ ಒಂದು ಕಂಪನಿಗೆ ಕಾರ್ಯಾದೇಶ ನೀಡಲಾಗಿತ್ತು. 34 ಬೋರ್ವೆಲ್ ಕೊರೆದರೂ, ಮೋಟಾರ್ ಪಂಪ್ಗಳು ಮತ್ತು ವಿದ್ಯುತ್ ಸಂಪರ್ಕ ಒದಗಿಸದ ಕಾರಣ, ರೈತರು ಸಂಕಷ್ಟಕ್ಕೀಡಾಗಿದ್ದಾರೆ.

ತುಮಕೂರು, ಜುಲೈ 18: ಮಹರ್ಷಿ ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ ಪ್ರಕರಣ (MUDA Scam) ಇಡೀ ದೇಶಾದ್ಯಂತ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಅದರ ಬೆನ್ನಲ್ಲೇ ಇದೀಗ ಅಂಬೇಡ್ಕರ್ ಅಭಿವೃದ್ದಿ ನಿಗಮದ ಸರದಿ ಬಂದಿದೆ. ನಗರದಲ್ಲಿರುವ ಅಂಬೇಡ್ಕರ್ ಅಭಿವೃದ್ದಿ ನಿಗಮದ (Ambedkar Development Corporation) ಕರ್ಮಕಾಂಡ ಬಯಲಾಗಿದೆ. ಗಂಗಾ ಕಲ್ಯಾಣ ಯೋಜನೆಯಲ್ಲಿ ಅಕ್ರಮದ ವಾಸನೆ ಬರುತ್ತಿದೆ. ಮಾಜಿ ಜಿಲ್ಲಾ ವ್ಯವಸ್ಥಾಪಕಿ ಯಡವಟ್ಟಿನಿಂದ 34 ಫಲಾನುಭವಿಗಳು ಸಂಕಷ್ಟ ಅನುಭವಿಸುವಂತಾಗಿದೆ.
34 ಫಲಾನುಭವಿಗಳು ಹೈರಾಣು
ಜಿಲ್ಲೆಗೆ ಟೆಂಡರ್ ಸಿಗದ ಕಂಪನಿಗೆ ಬೋರ್ವೆಲ್ ಕೊರೆಯಲು ಮಾಜಿ ಜಿಲ್ಲಾ ವ್ಯವಸ್ಥಾಪಕಿ ಸರೋಜಾದೇವಿ ವೈಯಕ್ತಿಕವಾಗಿ ಆದೇಶ ಹೊರಡಿಸಿದ್ದಾರೆ. ಬೋರ್ವೆಲ್ ಕೊರೆದು 4 ವರ್ಷ ಕಳೆದರೂ ಇವರೆಗೆ ಮೋಟರ್ ಪಂಪ್ ಸೆಟ್ ಹಾಗೂ ವಿದ್ಯುತ್ ಸಂಪರ್ಕ ಸಿಕ್ಕಿಲ್ಲ. ಹೀಗಾಗಿ ಕಳೆದ 4 ವರ್ಷದಿಂದ ಅಂಬೇಡ್ಕರ್ ನಿಗಮದ ಕಚೇರಿಗೆ ಅಲೆದು ಅಲೆದು 34 ಫಲಾನುಭವಿಗಳು ಹೈರಾಣಾಗಿದ್ದಾರೆ.
ಇದನ್ನೂ ಓದಿ: ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ಪತ್ನಿಗೆ ನೋಟಿಸ್ ಜಾರಿಗೆ ಹೈಕೋರ್ಟ್ ಆದೇಶ
ಗುಬ್ಬಿ ತಾಲೂಕಿನ 32 ಹಾಗೂ ತುರುವೇಕೆರೆ ತಾಲೂಕಿನ ಇಬ್ಬರು ಸೇರಿದಂತೆ ಒಟ್ಟು 34 ಫಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ಬೋರ್ವೆಲ್ ಕೊರೆಯಲಾಗಿತ್ತು. ಆದರೆ ವಿದ್ಯುತ್ ಸಂಪರ್ಕ ಸಿಕ್ಕಿಲ್ಲ. ಹಾಗಾಗಿ ಅಡಿಕೆ, ತೆಂಗಿನ ಗಿಡ ಇನ್ನಿತರ ಬೆಳೆ ಬೆಳೆದಿದ್ದ ರೈತರು ಕಂಗಾಲಾಗಿದ್ದಾರೆ.
2018-19 ನೇ ಸಾಲಿನಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದ 106 ರೈತರು ಫಲಾನುಭವಿಗಳ ಪಟ್ಟಿಗೆ ಆಯ್ಕೆ ಆಗಿದ್ದರು. ಕಮಿಷನ್ ಆಸೆಗೆ ಬಿದ್ದು ಸರ್ಕಾರದ ಆದೇಶವಿಲ್ಲದೇ ಅಂದಿನ ತುಮಕೂರು ಜಿಲ್ಲಾ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಸರೋಜಾದೇವಿ, ಹಗರಿಬೊಮ್ಮನಹಳ್ಳಿಯ ವಿನಾಯಕ ಬೋರ್ವೆಲ್ ಏಜೆನ್ಸಿಗೆ ಕಾರ್ಯಾದೇಶ ನೀಡಿದ್ದಾರೆ.
ಅಧಿಕಾರಿಗಳ ಕಳ್ಳಾಟ
ಸರೋಜಾದೇವಿ ಆದೇಶದಂತೆ 2021 ರಲ್ಲಿ 34 ಫಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆ ಅಡಿ ಬೋರ್ವೆಲ್ ಕೊರೆಯಲಾಗಿದ್ದು, ನೀರು ಕೂಡ ಬಂದಿತ್ತು. ಅಂದಿನಿಂದ ಇಂದಿನವರೆಗೆ ಮೋಟಾರ್ ಪಂಪ್ ಸೆಟ್ ಹಾಗೂ ವಿದ್ಯುತ್ ಸಂಪರ್ಕ ಕೊಡದೇ ಅಧಿಕಾರಿಗಳು ಕಳ್ಳಾಟವಾಡುತ್ತಿದ್ದಾರೆ.
ಸರೋಜಾದೇವಿ ಮಾಡಿದ ಯಡವಟ್ಟಿಗೆ ಸರ್ಕಾರದಿಂದ ಹಣ ಬಿಡುಗಡೆ ಆಗದೇ ಸದ್ಯ ಫಲಾನುಭವಿಗಳು ಪರದಾಡುತ್ತಿದ್ದಾರೆ. ಇಂದು, ನಾಳೆ, ಮುಂದಿನ ವಾರ, ಮುಂದಿನ ತಿಂಗಳು ಬರುತ್ತೆ ಎಂದು ಸತತ 4 ವರ್ಷಗಳಿಂದ ಅಂಬೇಡ್ಕರ್ ನಿಗಮದ ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ತುಮಕೂರು ಜಿಲ್ಲಾ ವ್ಯವಸ್ಥಾಪಕ ಮಹೇಂದ್ರ ಹೇಳಿದ್ದಿಷ್ಟು
ಈ ಬಗ್ಗೆ ನಿಗಮದ ತುಮಕೂರು ಜಿಲ್ಲಾ ವ್ಯವಸ್ಥಾಪಕ ಮಹೇಂದ್ರ ಹೇಳಿಕೆ ನೀಡಿದ್ದು, 2018-19 ರಲ್ಲಿ ಬೋರ್ವೆಲ್ ಕೊರೆಯಲು ಮೂರು ಪ್ಯಾಕೇಜ್ ಮಾಡಲಾಗಿತ್ತು. ಹಗರಿಬೊಮ್ಮನಹಳ್ಳಿಯ ವಿನಾಯಕ ಬೋರ್ವೆಲ್ಸ್ಗೆ ಟೆಂಡರ್ ನೀಡಲಾಗಿದೆ. ಅವರಿಗೆ ಈ ಹಿಂದೆ ಇದ್ದ ಜಿಲ್ಲಾ ವ್ಯವಸ್ಥಾಪಕರು ವೈಯಕ್ತಿಕ ವರ್ಕ್ ಆರ್ಡರ್ ಕೊಟ್ಟಿದ್ದಾರೆ. ಅದರ ಆಧಾರದ ಮೇಲೆ ಅವರು ಡ್ರಿಲ್ ಮಾಡಿದ್ದಾರೆ. ವಿನಾಯಕ ಬೋರ್ವೆಲ್ಸ್ ಟೆಂಡರ್ಸ್ ದಾರರಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮುಡಾ ಹಗರಣ: ಕೋರ್ಟ್ ಮೆಟ್ಟಿಲೇರಿದ ಇಡಿ, ಸಿದ್ದರಾಮಯ್ಯಗೆ ಢವ ಢವ
ಇದಕ್ಕೆ ಸಂಬಂಧಪಟ್ಟಂತೆ ನಾವು ಪೂರ್ಣ ಪ್ರಮಾಣದಲ್ಲಿ ಕೇಂದ್ರ ಕಚೇರಿಗೆ ವರದಿ ನೀಡಿದ್ದೇವೆ. ಜಿಪಿಎಸ್ ಫೋಟೋ ಜೊತೆಗೆ ಎಲ್ಲಾ ಫಲಾನುಭವಿಗಳ ಜಮೀನು, ಸ್ಥಳ ಪರಿಶೀಲನೆ ಜೊತೆಗೆ ವರದಿ ನೀಡಿದ್ದೇವೆ. ಕೇಂದ್ರ ಕಚೇರಿಯಿಂದ ಅಧಿಕಾರಿಗಳು ತುಮಕೂರಿಗೆ ಭೇಟಿ ನೀಡಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಕಡತಗಳು, ದಾಖಲೆಗಳೆಲ್ಲವನ್ನೂ ತೆಗೆದುಕೊಂಡು ಹೊಗಿದ್ದಾರೆ. ಅಲ್ಲಿ ಪರಿಶೀಲಿಸಿ ಮುಂದಿನ ನಿರ್ಧಾರ ನಮಗೆ ತಿಳಿಸಲಿದ್ದಾರೆ. ಅದರಂತೆ ನಾವು ಮುಂದಿನ ಕ್ರಮ ವಹಿಸುತ್ತೇವೆ ಎಂದು ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.







