ತುಂಗಭದ್ರಾ ಡ್ಯಾಂ: ಇಂದು ಸಂಜೆ ತಾತ್ಕಾಲಿಕ ಗೇಟ್​​​​ ಅಳವಡಿಕೆ, ನೀರು ಪೋಲು ತಡೆಗೆ ಕ್ರಮ

ತುಂಗಭದ್ರಾ ಡ್ಯಾಂ ಗೇಟ್ ತುಂಡಾಗಿ ನೀರು ಪೋಲಾಗುತ್ತಿರುವುದು ರೈತರು, ಅಧಿಕಾರಿಗಳು ಸೇರಿದಂತೆ ಎಲ್ಲರನ್ನೂ ಚಿಂತೆಗೀಡುಮಾಡಿದೆ. ಈ ಮಧ್ಯೆ, ನೀರು ಪೋಲಾಗದಂತೆ ಹೇಗಾದರೂ ಮಾಡಿ ತಡೆಯಲು ಶತಾಯಗತಾಯ ಯತ್ನ ನಡೆಯುತ್ತಿದ್ದು, ತಾತ್ಕಾಲಿಕ ಗೇಟ್ ತಯಾರಿ ಭರದಿಂದ ಸಾಗಿದೆ. ಇಂದು ಸಂಜೆ ವೇಳೆಗೆ ತಾತ್ಕಾಲಿಕ ಗೇಟ್ ಅಳವಡಿಕೆ ಕಾರ್ಯ ನಡೆಯಲಿದೆ.

ತುಂಗಭದ್ರಾ ಡ್ಯಾಂ: ಇಂದು ಸಂಜೆ ತಾತ್ಕಾಲಿಕ ಗೇಟ್​​​​ ಅಳವಡಿಕೆ, ನೀರು ಪೋಲು ತಡೆಗೆ ಕ್ರಮ
ತುಂಗಭದ್ರಾ ಡ್ಯಾಂ
Edited By:

Updated on: Aug 13, 2024 | 8:41 AM

ಕೊಪ್ಪಳ, ಆಗಸ್ಟ್ 23: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್​ಗೇಟ್ ತುಂಡಾಗಿ ನೀರುಪೋಲಾಗುತ್ತಿರುವ ಕಾರಣ ಸದ್ಯ ತಾತ್ಕಾಲಿಕ ಗೇಟ್ ಅಳವಡಿಕೆಗೆ ತುಂಗಭದ್ರಾ ಡ್ಯಾಮ್​​​​ ಮಂಡಳಿ ನಿರ್ಧಾರ ಕೈಗೊಂಡಿದೆ. 19ನೇ ಕ್ರಸ್ಟ್ ಗೇಟ್​ಗೆ ತಾತ್ಕಾಲಿಕ ಗೇಟ್​​​​ ಅಳವಡಿಕೆ ಕಾರ್ಯ ಇಂದು (ಮಂಗಳವಾರ) ಸಂಜೆಯಿಂದ ಆರಂಭವಾಗಲಿದೆ. ಜಲಾಯಶಯದ ನೀರು ಖಾಲಿಯಾಗುವ ಮೊದಲೇ ತಾತ್ಕಾಲಿಕ ಗೇಟ್​ ಅಳವಡಿಕೆಗೆ ಯತ್ನಿಸಲಾಗುತ್ತಿದೆ. ನೀರಿನಲ್ಲೇ ಗೇಟ್​​ ಇಳಿಸಿ ತಾತ್ಕಾಲಿಕ ಗೇಟ್ ಅಳವಡಿಕೆಗೆ ತಜ್ಞರ ತಂಡ ಪ್ರಯತ್ನಿಸಲಿದೆ. ತಾತ್ಕಾಲಿಕ ಹೊಸ ಗೇಟ್ ಹೊಸಪೇಟೆ ಮತ್ತು ಹೊಸಳ್ಳಿಯಲ್ಲಿ ತಯಾರಾಗಿದೆ.
​​​​
ನಾರಾಯಣ ಇಂಜಿನಿಯರ್ಸ್​, ಹಿಂದೂಸ್ತಾನ್ ಇಂಜಿನಿಯರ್ಸ್​, ಜಿಂದಾಲ್​ ತಂತ್ರಜ್ಞರ ತಂಡದಿಂದ ಗೇಟ್ ಅಳವಡಿಕೆ ಕೆಲಸ ನಡೆಯಲಿದೆ. ಗೇಟ್​ ಅಳವಡಿಕೆ ಯಶಸ್ವಿಯಾದರೆ ಅಪಾರ ಪ್ರಮಾಣದ ನೀರು ಉಳಿಯಲಿದೆ. ಹೀಗಾಗಿ ತಾತ್ಕಾಲಿಕ ಹೊಸ ಗೇಟ್​ ಅಳವಡಿಕೆಗೆ ಡ್ಯಾಮ್​ ಮಂಡಳಿ ಮುಂದಾಗಿದೆ.

ಎರಡು ದಿನಗಳಲ್ಲಿ 14 ಟಿಎಂಸಿ ನೀರು ಪೋಲು

ಕೊಪ್ಪಳ ತಾಲೂಕಿನ ಮುಶಿರಾಬಾದ್​​ ಬಳಿಯಿರುವ ತುಂಗಭದ್ರಾ ಡ್ಯಾಮ್​ನ 19ನೇ ಕ್ರಸ್ಟ್ ಗೇಟ್ ತುಂಡಾಗಿ ಎರಡು ದಿನದಲ್ಲಿ 14 ಟಿಎಂಸಿ ನೀರು ಹೊರಕ್ಕೆ ಹರಿದುಹೋಗಿದೆ. ಆಗಸ್ಟ್ 10ರಂದು ಡ್ಯಾಮ್​ನಲ್ಲಿ ಬರೋಬ್ಬರಿ 105 ಟಿಎಂಸಿ ನೀರು ಸಂಗ್ರಹವಿತ್ತು. ಈ ಜಲಾಶಯ 105.788 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಸದ್ಯ ಡ್ಯಾಂನಲ್ಲಿ 91.979 ಟಿಎಂಸಿ ನೀರು ಸಂಗ್ರಹ ಇದೆ.

ಟಿಬಿ ಡ್ಯಾಮ್​​ನಲ್ಲಿ ಸದ್ಯ 36 ಸಾವಿರ ಕ್ಯೂಸೆಕ್ ನೀರು ಒಳ ಹರಿವು ಇದೆ. ಡ್ಯಾಮ್​ನಿಂದ ನದಿಗೆ 1.14 ಲಕ್ಷ ಕ್ಯೂಸೆಕ್ ನೀರಿನ ಹೊರ ಹರಿವು ಇದೆ. ಕೆನಲ್​​ಗಳಿಗೆ 10 ಸಾವಿರ ಕ್ಯೂಸೆಕ್​​ ನೀರು ಬಿಟ್ಟಿರುವ ಮಾಹಿತಿಯನ್ನು ಜಲಾಶಯ ಮಂಡಳಿ ನೀಡಿದೆ.

ಇದನ್ನೂ ಓದಿ: ತುಂಗಭದ್ರಾ ಡ್ಯಾಂನಲ್ಲಿ 50 ಟಿಎಂಸಿ ನೀರು ಉಳಿಸಿಕೊಳ್ಳಲು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಸೂಚನೆ

ಇಂದು ಸಿಎಂ ಸಿದ್ದರಾಮಯ್ಯ ಭೇಟಿ

ಇಂದು ತುಂಗಭದ್ರಾ ಜಲಾಶಯಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ. ನಿಗದಿಯಂತೆ ಸಿಎಂ ಟಿಬಿ ಡ್ಯಾಮ್​ಗೆ ಬಾಗಿನ ಅರ್ಪಿಸಬೇಕಿತ್ತು. ಆದರೆ ಟಿಬಿ ಡ್ಯಾಮ್ ಪರಿಶೀಲನೆಗೆ ಆಗಮಿಸಲಿದ್ದಾರೆ. ಕೊಪ್ಪಳ ತಾಲೂಕಿನ ಗಿಣಗೇರಾ ಏರ್​​ಸ್ಟ್ರಿಪ್​​​​​ಗೆ ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಆಗಮಿಸುವ ಸಿಎಂ, ಮಧ್ಯಾಹ್ನ 12.30ಕ್ಕೆ ಟಿಬಿ ಡ್ಯಾಮ್​ಗೆ ಭೇಟಿ ನೀಡಲಿದ್ದಾರೆ. ಡ್ಯಾಮ್​ ಪರಿಶೀಲನೆ ಬಳಿಕ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:12 am, Tue, 13 August 24

Sanjayya Chikkamath

ಸಂಜಯ್ಯಾ ಚಿಕ್ಕಮಠ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 14 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ನಿಂದ ಆರಂಭವಾಗಿರೋ ವೃತ್ತಿ ಬದುಕು ‌ಸದ್ಯ ಕೊಪ್ಪಳಕ್ಕೆ ಬಂದು ನಿಂತಿದೆ. ಕೃಷಿ ನನ್ನಿಷ್ಟ.ಆದ್ರೆ ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More
Follow Us