TV9 Kannada News Highlights ಬರೋಬ್ಬರಿ 40,009 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್

Karnataka News Today Live Updates: ವಿಜಯನಗರ ಜಿಲ್ಲೆಯ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ ಇತಿಹಾಸದಲ್ಲೇ ಇಂದು ಅತ್ಯಂತ ಮಹತ್ವದ ದಿನ. ಇನ್ನು ಇಂದು ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್ ಸೇರಿದಂತೆ ಹಲವು ನಗರಗಳಲ್ಲಿ ಭೂಕಂಪ ಸಂಭವಿಸಿದ್ದು ಬಹುಮಹಡಿ ಕಟ್ಟಡಗಳು ಕುಸಿದು ಬಿದ್ದಿದ್ದು, ತೀವ್ರ ಹಾನಿಯಾಗಿದೆ. ಹೀಗೆ ಕ್ಷಣಕ್ಷಣದ ಪ್ರಮುಖ ಸುದ್ದಿಗಳು ಹಾಗೂ ಲೈವ್ ಅಪ್ಡೇಟ್‌ಗಳನ್ನು ಇಲ್ಲಿ ನೀಡಲಾಗುವುದು.

TV9 Kannada News Highlights ಬರೋಬ್ಬರಿ 40,009 ಹುದ್ದೆಗಳ ನೇಮಕಾತಿಗೆ  ಗ್ರೀನ್ ಸಿಗ್ನಲ್
Vidhana Soudha
Edited By:

Updated on: Jun 26, 2026 | 7:53 AM

ಮುಖ್ಯಾಂಶಗಳು

  • ತುಂಗಭದ್ರಾ ಜಲಾಶಯದ ಇತಿಹಾಸದಲ್ಲೇ ಇಂದು ಅತ್ಯಂತ ಮಹತ್ವದ ದಿನ
  • ವೆನೆಜುವೆಲಾದಲ್ಲಿ ಬ್ಯಾಕ್-ಟು-ಬ್ಯಾಕ್ ಎರಡು ಭೀಕರ ಹಾಗೂ ಪ್ರಬಲ ಭೂಕಂಪ
  • ಅಸಿಮ್ ಮುನೀರ್ ಮತ್ತು ಅವರ ನಿಯೋಗದ ಸದಸ್ಯರ ಹತ್ಯೆಗೆ ಸಂಚು

ಬೆಂಗಳೂರು, ಜೂ.25: ವಿಜಯನಗರ ಜಿಲ್ಲೆಯ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ ಇತಿಹಾಸದಲ್ಲೇ ಇಂದು ಅತ್ಯಂತ ಮಹತ್ವದ ದಿನ. ಕಳೆದ ವರ್ಷ ಜಲಾಶಯದ 19ನೇ ಕ್ರಸ್ಟ್ ಗೇಟ್ ಕೊಚ್ಚಿಹೋಗಿ ಆತಂಕ ಸೃಷ್ಟಿಸಿದ್ದ ಹಿನ್ನೆಲೆಯಲ್ಲಿ, ಈಗ ಡ್ಯಾಂನ ಎಲ್ಲಾ 33 ಕ್ರಸ್ಟ್ ಗೇಟ್‌ಗಳನ್ನು ಯಶಸ್ವಿಯಾಗಿ ಬದಲಾಯಿಸಲಾಗಿದ್ದು, ಅವುಗಳ ಲೋಕಾರ್ಪಣಾ ಕಾರ್ಯಕ್ರಮಕ್ಕೆ ಭರದ ಸಿದ್ಧತೆಗಳು ನಡೆದಿವೆ. ಇದರ ನಡುವೆ ದಕ್ಷಿಣ ಅಮೆರಿಕದ ದೇಶವಾದ ವೆನೆಜುವೆಲಾದಲ್ಲಿ ಬ್ಯಾಕ್-ಟು-ಬ್ಯಾಕ್ ಎರಡು ಭೀಕರ ಹಾಗೂ ಪ್ರಬಲ ಭೂಕಂಪಗಳು ಸಂಭವಿಸಿದ್ದು, ಇಡೀ ದೇಶವೇ ನಡುಗಿದೆ. ಯುಎಸ್ ಜಿಯೋಲಾಜಿಕಲ್ ಸರ್ವೆ (USGS) ಪ್ರಕಾರ, ಮೊದಲು 7.2 ತೀವ್ರತೆ ಹಾಗೂ ಅದರ ಬೆನ್ನಲ್ಲೇ ಕೇವಲ 40 ಸೆಕೆಂಡುಗಳ ಅಂತರದಲ್ಲಿ 7.5 ತೀವ್ರತೆಯ ಮತ್ತೊಂದು ಪ್ರಬಲ ಭೂಕಂಪ ಸಂಭವಿಸಿದೆ. ಇನ್ನು ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಮತ್ತು ಅವರ ನಿಯೋಗದ ಸದಸ್ಯರನ್ನು ಹತ್ಯೆ ಮಾಡಲು ಇಸ್ರೇಲ್‌ನ ರಹಸ್ಯ ಗುಪ್ತಚರ ಸಂಸ್ಥೆ ‘ಮೊಸಾದ್’ (Mossad) ಭೀಕರ ಸಂಚು ರೂಪಿಸಿತ್ತು ಎಂಬ ಆಘಾತಕಾರಿ ರಹಸ್ಯವನ್ನು ಬ್ರೆಜಿಲ್‌ನ ಖ್ಯಾತ ಪತ್ರಕರ್ತರೊಬ್ಬರು ಬಯಲಿಗೆಳೆದಿದ್ದಾರೆ. ಹೀಗೆ ಪ್ರಮುಖ ಸುದ್ದಿಗಳ ಲೈವ್​​​ ಅಪ್ಡೇಟ್​​​ಗಳನ್ನು ಇಲ್ಲಿ ನೀಡಲಾಗುತ್ತದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

LIVE NEWS & UPDATES

The liveblog has ended.
  • 25 Jun 2026 10:17 PM (IST)

    40,009 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್

    ನಿರುದ್ಯೋಗಿಗಳಿಗೆ ರಾಜ್ಯ ಸರ್ಕಾರ ಗುಡ್​ ನ್ಯೂಸ್ ನೀಡಿದೆ. 72,186 ಹುದ್ದೆಗಳ ಭರ್ತಿ ಈಗಾಗಲೇ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಈ ಪೈಕಿ ಮೊದಲ ಹಂತವಾಗಿ ಕರ್ನಾಟಕದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಬರೋಬ್ಬರಿ 40,009 ಖಾಲಿ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಸಮ್ಮತಿಸಿದೆ. ಕಲ್ಯಾಣ ಕರ್ನಾಟಕ ವೃಂದದ 32,177 ಹುದ್ದೆಗಳ ಪೈಕಿ 80% ಭರ್ತಿಗೆ ಅಸ್ತು ಎಂದಿದೆ. ಇನ್ನು ಉನ್ನತ ಮಟ್ಟದ ಅಧಿಕಾರಿಗಳಿಗೆ ನೇಮಕಾತಿ ಮೇಲುಸ್ತುವಾರಿ ಜವಾಬ್ದಾರಿ ನೀಡಲಾಗಿದ್ದು, ನೇಮಕಾತಿ ಪ್ರಕ್ರಿಯೆ ತ್ವರಿತಗೊಳಿಸಲು ಸರ್ಕಾರವೂ ಸಹ ಒಪ್ಪಿಗೆ ನೀಡಿದೆ.

    17 ಇಲಾಖೆಗಳ ನೇಮಕಾತಿ ಜವಾಬ್ದಾರಿ ಎಸಿಎಸ್, ಅಭಿವೃದ್ಧಿ ಆಯುಕ್ತರಿಗೆ ಉಳಿದ 34 ಇಲಾಖೆಗಳ ನೇಮಕಾತಿ ಹೊಣೆ ಸರ್ಕಾರದ ಎಸಿಎಸ್​ಗೆ ಮುಂದಿನ 2 ತಿಂಗಳಲ್ಲಿ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲು ಸೂಚನೆ ನೀಡಿದ್ದು, ಮುಂದಿನ 4 ತಿಂಗಳಲ್ಲಿ ಪರೀಕ್ಷೆ ನಡೆಸಿ 6 ತಿಂಗಳಲ್ಲಿ ಪ್ರಕ್ರಿಯೆ ಮುಗಿಸಲು ಆದೇಶಿಸಲಾಗಿದೆ.

  • 25 Jun 2026 07:24 PM (IST)

    ಇಸ್ಪೀಟ್ ದಂಧೆಗೆ ಸಾಥ್, ನಾಲ್ವರು ಪೊಲೀಸರು ಸಸ್ಪೆಂಡ್

    ಚಿಕ್ಕಮಗಳೂರು ಇಸ್ಪೀಟ್ ದಂಧೆಗೆ ಸಾಥ್ ನೀಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ನಾಲ್ವರು ಪೊಲೀಸರು ಅಮಾನತುಗೊಂಡಿದ್ದಾರೆ. ಇಸ್ಪೀಟ್ ದಂಧೆ ಬಗ್ಗೆ ಮಾಹಿತಿ ಇದ್ರು ರೈಡ್ ಮಾಡದೆ ನಿರ್ಲಕ್ಷ್ಯ ಮಾಡಿದ ಆರೋಪ ಸಂಬಂಧ ಇಬ್ಬರು ಹೆಡ್ ಕಾನ್ಸ್ ಟೇಬಲ್, ಇಬ್ಬರು ಕಾನ್ಸ್ಟೇಬಲ್ ಸಸ್ಪೆಂಡ್ ಮಾಡಿ ಚಿಕ್ಕಮಗಳೂರು ಎಸ್ಪಿ ಜಿತೇಂದ್ರ ಕುಮಾರ್ ದಯ್ಮಾ ಆದೇಶ ಹೊರಡಿಸಿದ್ದಾರೆ. ಬೀರೂರು ಪೊಲೀಸ್ ಠಾಣೆಯ ಪಿ.ಸಿ ಶಿವಾನಂದ್ ,ಸಿಂಗಟಗೆರೆ ಠಾಣೆಯ ಕಾನ್ಸ್ಟೇಬಲ್ ಗಳಾದ ಕಲ್ಲೇಶ್ ನಾಯ್ಕ್. ದನ್ಪಾಲ್ ನಾಯ್ಕ್, ಪಿಸಿ ಪ್ರವೀಣ್ ಅಮಾನತುಗೊಂಡವರು.

  • 25 Jun 2026 06:23 PM (IST)

    ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನ ಭೇಟಿಯಾದ ವಿ.ಸೋಮಣ್ಣ

    ವಿ.ಸೋಮಣ್ಣ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿ ಮಾಡಿದ್ದಾರೆ. ವಿಧಾನಪರಿಷತ್​ನಲ್ಲಿ ಅಡ್ಡಮತದಾನ ಸಂಬಂಧ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಅಶೋಕ್ ಭೇಟಿ ಬಳಿಕ ಇದೀಗ ನಿತಿನ್ ನಬಿನ್ ಅವರನ್ನು ವಿ.ಸೋಮಣ್ಣ ಭೇಟಿ ಮಾಡಿರುವುದು ಬಿಜೆಪಿ ಸಂಚಲನಕ್ಕೆ ಕಾರಣವಾಗಿದೆ. ಅಲ್ಲದೇ ರಾಜ್ಯಾಧ್ಯಕ್ಷರ ಬದಲಾವಣೆ ಸುದ್ದಿ ಕೇಳಿಬರುತ್ತಿರುವ ನಡುವೆ ಸೋಮಣ್ಣನವರ ಈ ಭೇಟಿ ಕುತೂಹಲಕ್ಕೆ ಕಾರಣವಾಗಿದೆ.

  • 25 Jun 2026 04:02 PM (IST)

    ಶಂಕಿತ ಉಗ್ರ ಸುಹೇಲ್ 10 ದಿನ ಪೊಲೀಸ್ ಕಸ್ಟಡಿಗೆ

    ದಾವಣಗೆರೆ ಜಿಲ್ಲೆ ಹರಿಹರದಲ್ಲಿ ಸಿಕ್ಕ ಶಂಕಿತ ಉಗ್ರ ಸುಹೇಲ್ ನನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ. ಪಾಕ್ ಉಗ್ರ ಸಂಘಟನೆಗಳ ಜೊತೆ ನಿರಂತರ ಸಂಪರ್ಕದಲ್ಲಿರುವ ಮಾಹಿತಿ ಮೇರೆಗೆ ದಾವಣಗೆರೆ ಗ್ರಾಮಾಂತರ ಪೊಲೀಸರು, ಯುಪಿ ಮೂಲದ ಸುಹೇಲ್ ನನ್ನು ಬಂಧಿಸಿ ಇಂದು (ಜೂನ್ 25) ಕೋರ್ಟ್​ ಹಾಜರು ಪಡಿಸಿದ್ದು, ಹೆಚ್ಚಿನ ವಿಚಾರಣೆ ಸಂಬಂಧ ಕಸ್ಟಡಿಗೆ ನೀರುವಂತೆ ಪೊಲೀಸರು ಮಾಡಿದ ಮನವಿಯನ್ನು ಪುರಸ್ಕರಿಸಿದ ಹರಿಹರ JMFC ಕೋರ್ಟ್, ಸುಹೇಲ್ ನನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.

  • 25 Jun 2026 03:45 PM (IST)

    ಬರ ಎದುರಿಸಲು ಸಜ್ಜಾಗಿರಲು ಅಧಿಕಾರಿಗಳಿಗೆ ಡಿಸಿಎಂ ಸೂಚನೆ

    ಪ್ರಕೃತಿ ವಿಕೋಪ ನಿರ್ವಹಣೆ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಡಿಸಿಎಂ ಪರಮೇಶ್ವರ್ ಮಹತ್ವದ ಸಭೆ ನಡೆಸಿದ್ದು, ರಾಜ್ಯದಲ್ಲಿ ಸಂಭವನೀಯ ಪ್ರಕೃತಿ ವಿಕೋಪಗಳು ಹಾಗೂ ಸೂಪರ್ ಎಲ್ ನೀನೋ ಪರಿಣಾಮದಿಂದ ಇದರಿಂದ ಉಂಟಾಗಬಹುದಾದ ಬರ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ಎದುರಿಸಲು ಕ್ರಮ ವಹಿಸಬೇಕು.ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

  • 25 Jun 2026 03:32 PM (IST)

    ಮೋಡ ಬಿತ್ತನೆ ಕುರಿತು ಗೊಂದಲ

    ವಿಜಯಪುರ ಜಿಲ್ಲೆಯಲ್ಲಿ ಮಳೆಯ ಕೊರತೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಮಾತನಾಡಿದ್ದು, ವಿಜಯಪುರ ಜಿಲ್ಲೆಯಲ್ಲಿ 18 ಪ್ರತಿಶತ ಮಾತ್ರ ಬಿತ್ತನೆಯಾಗಿದ್ದು, ಮಳೆ ಕೊರತೆ ಬಿತ್ತನೆ ಬೀಜ ಗೊಬ್ಬರ ಕುರಿತು ಸಭೆ ಮಾಡಲಾಗಿದೆ. ಬೀಜ ರಸಗೊಬ್ಬರ ಸಮರ್ಪಕವಾಗಿದೆ. ಜುಲೈ 2 ನೇ ವಾರದಲ್ಲಿ ಮಳೆಯಾಗೋ ಆಶಾಭಾವನೆ ಇದ್ದು, ಮೋಡ ಬಿತ್ತನೆ ಕುರಿತು ಗೊಂದಲವಿದೆ. ಈ ನಿಟ್ಟಿನಲ್ಲಿ ಚರ್ಚೆ ಮಾಡಿ ತೀರ್ಮಾನಿಸುತ್ತೇವೆ ಎಂದಿದ್ದಾರೆ.

  • 25 Jun 2026 03:30 PM (IST)

    ಟನಲ್ ರೋಡ್ ಲಾಭ ಬೆಂಗಳೂರು ನಗರಕ್ಕೋ ? ಅದಾನಿಗೋ?

    ಬೆಂಗಳೂರಿನಲ್ಲಿ ಟನಲ್ ರೋಡ್ ವಿಚಾರವಾಗಿ ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್ ಟ್ವೀಟ್ ಮಾಡಿದ್ದು, ಅದಾನಿ ಎಂಟರ್‌ಪ್ರೈಸಸ್‌ನ ಬೆಂಗಳೂರಿನ ಟನಲ್ ರೋಡ್ ಯೋಜನೆಗೆ ಸಲ್ಲಿಸಿದ ಬಿಡ್ ಮೂಲ ಮಾನದಂಡಕ್ಕಿಂತ 96% ಜಾಸ್ತಿ ಇದೆ. ಈ ಯೋಜನೆಗಾಗಿ ನಾಗರಿಕರು 50 ವರ್ಷಗಳವರೆಗೆ ಟೋಲ್ ಪಾವತಿಸಬೇಕಾಗಬಹುದು. ಯೋಜನೆಗೆ 7,079 ಕೋಟಿ ರೂ. ಸಾರ್ವಜನಿಕ ಅನುದಾನ ನೀಡಲಾಗಿದೆ. ಬೆಂಗಳೂರು ನಗರದ 5 ಪ್ರಮುಖ ಭೂಮಿಯ ಮೇಲಿನ ವಾಣಿಜ್ಯ ಹಕ್ಕುಗಳನ್ನೂ ನೀಡಲಾಗಿದೆ. ಹಾಗಾದರೆ ಈ ಯೋಜನೆಯಿಂದ ನಿಜವಾಗಿಯೂ ಲಾಭ ಯಾರಿಗೆ? ಬೆಂಗಳೂರು ನಗರಕ್ಕೋ ಅಥವಾ ಅದಾನಿಗೋ? ಎಂದು ಪ್ರಶ್ನಿಸಿದ್ದಾರೆ.

  • 25 Jun 2026 09:52 AM (IST)

    ರಾಜ್ಯದ ಸಚಿವರಿಗೆ ಜಿಲ್ಲಾ ಉಸ್ತುವಾರಿ ಹಂಚಿಕೆ

    ಮುಖ್ಯಮಂತ್ರಿಗಳು ರಾಜ್ಯದ ಸಚಿವರಿಗೆ ಮಳೆಗಾಲದ ತುರ್ತು ಪರಿಸ್ಥಿತಿ ಮತ್ತು ಪ್ರವಾಹ ನಿರ್ವಹಣೆಗಾಗಿ ತಾತ್ಕಾಲಿಕ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಹಂಚಿಕೆ ಮಾಡಿದ್ದಾರೆ. ಡಿಸಿಎಂ ಡಾ. ಜಿ. ಪರಮೇಶ್ವರ, ಎಂ.ಬಿ. ಪಾಟೀಲ್ ಸೇರಿದಂತೆ ಪ್ರಮುಖ ಸಚಿವರಿಗೆ ಸೂಕ್ಷ್ಮ ಜಿಲ್ಲೆಗಳ ಹೊಣೆಗಾರಿಕೆ ನೀಡಲಾಗಿದೆ.

  • 25 Jun 2026 09:51 AM (IST)

    ತುಂಗಭದ್ರಾ ಜಲಾಶಯದ ಹೊಸ ಕ್ರಸ್ಟ್ ಗೇಟ್‌ಗಳ ಲೋಕಾರ್ಪಣೆಗೆ ಕ್ಷಣಗಣನೆ

    ವಿಜಯನಗರ ಜಿಲ್ಲೆಯ ಕಣ್ಣೀರು ಮತ್ತು ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ ಇತಿಹಾಸದಲ್ಲೇ ಇಂದು ಅತ್ಯಂತ ಮಹತ್ವದ ದಿನ. ಕಳೆದ ವರ್ಷ ಜಲಾಶಯದ 19ನೇ ಕ್ರಸ್ಟ್ ಗೇಟ್ ಕೊಚ್ಚಿಹೋಗಿ ಆತಂಕ ಸೃಷ್ಟಿಸಿದ್ದ ಹಿನ್ನೆಲೆಯಲ್ಲಿ, ಈಗ ಡ್ಯಾಂನ ಎಲ್ಲಾ 33 ಕ್ರಸ್ಟ್ ಗೇಟ್‌ಗಳನ್ನು ಯಶಸ್ವಿಯಾಗಿ ಬದಲಾಯಿಸಲಾಗಿದ್ದು, ಅವುಗಳ ಲೋಕಾರ್ಪಣಾ ಕಾರ್ಯಕ್ರಮಕ್ಕೆ ಭರದ ಸಿದ್ಧತೆಗಳು ನಡೆದಿವೆ.

Published On - 9:51 am, Thu, 25 June 26

Follow Us