ಉಡುಪಿ: ನಾಲ್ವರಿಗೂ ಒಂದೇ ರೀತಿಯಲ್ಲಿ ಚೂರಿ ಇರಿದು ಹತ್ಯೆ, ಹಂತಕನ ಬಂಧನಕ್ಕೆ 5 ತಂಡ ರಚನೆ

ರಾಜ್ಯವನ್ನೇ ಬೆಚ್ಚಿ ಬೀಳಿಸುವಂತೆ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ತಾಯಿ, ಮೂವರು ಮಕ್ಕಳನ್ನ ಕೊಂದ ಹಂತಕನಿಗಾಗಿ ಪೊಲೀಸರು ಶೋಧಕಾರ್ಯ ಆರಂಭಿಸಿದ್ದು, ಇದಕ್ಕಾಗಿ ಐದು ತಂಡಗಳನ್ನು ರಚನೆ ಮಾಡಲಾಗಿದೆ.

ಉಡುಪಿ: ನಾಲ್ವರಿಗೂ ಒಂದೇ ರೀತಿಯಲ್ಲಿ ಚೂರಿ ಇರಿದು ಹತ್ಯೆ, ಹಂತಕನ ಬಂಧನಕ್ಕೆ 5 ತಂಡ ರಚನೆ
Edited By:

Updated on: Nov 13, 2023 | 11:03 AM

ಉಡುಪಿ, (ನವೆಂಬರ್ 13): ನಾಡಿನ ಜನತೆ ದೀಪಾವಳಿ ಸಂಭ್ರಮದಲ್ಲಿ ಮುಳುಗಿದ್ದರೆ, ನಿನ್ನೆ (ನವೆಂಬರ್ 12) ಉಡುಪಿ(Udupi) ತಾಲೂಕಿನ ನೇಜಾರು ಸಮೀಪದ ತೃಪ್ತಿನಗರದಲ್ಲಿ ರಕ್ತದೋಕುಳಿಯೇ ಹರಿದಿದೆ. ಹಂತಕನೊಬ್ಬ ಮನೆಯೊಂದಕ್ಕೆ ನುಗ್ಗಿ, ಓರ್ವ ಮಹಿಳೆ ಆಕೆಯ 11ವರ್ಷದ ಬಾಲಕ, ಇಬ್ಬರು ಹೆಣ್ಣುಮಕ್ಕಳನ್ನು ಬರ್ಬರವಾಗಿ ಕೊಲೆ(Murder) ಮಾಡಿ ಪರಾರಿಯಾಗಿದ್ದಾನೆ. ಕೊಲೆಯಾದ ಮಹಿಳೆ ಹಸೀನಾಳ ಅತ್ತೆ ಮೇಲೂ ಹಲ್ಲೆ ನಡೆಸಿ ಎಸ್ಕೇಪ್ ಆಗಿದ್ದಾನೆ. ಈ ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದು, ಆರೋಪಿ ಪತ್ತೆಯಾಗಿ 5 ತಂಡಗಳನ್ನು ರಚನೆ ಮಾಡಲಾಗಿದೆ.

ಹಂತಕ ನಾಲ್ವರಿಗೂ ಒಂದೇ ರೀತಿಯಲ್ಲಿ ಚೂರಿ ಇರಿದು ಹತ್ಯೆ ಮಾಡಿರೋದು ಪತ್ತೆಯಾಗಿದೆ. ಎದೆ ಮತ್ತು ಹೊಟ್ಟೆ ಭಾಗಕ್ಕೆ ಇರಿದು ಕೊಲೆ ಮಾಡಿದ್ದಾನೆ. ಯಾವ ಕಾರಣಕ್ಕೆ ಈ ಕೊಲೆ ನಡೆದಿದೆ. ಪರಿಚಯಸ್ಥನೇ ಕೊಲೆ ಮಾಡಿದ್ದಾನಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಎಲ್ಲಾ ಆಯಾಮಗಳಲ್ಲೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪ್ರಕರಣದ ತನಿಖೆಗೆ ಡಿವೈಎಸ್‌ಪಿ ನೇತೃತ್ವದಲ್ಲಿ 5 ತಂಡ ರಚನೆ ಮಾಡಲಾಗಿದೆ.

ಇದನ್ನೂ ಓದಿ: ಉಡುಪಿ: ಚಾಕುವಿನಿಂದ ಇರಿದು ಒಂದೇ ಕುಟುಂಬದ ನಾಲ್ವರ ಹತ್ಯೆ: ದುಷ್ಕರ್ಮಿ ಪರಾರಿ

ಕೊಲೆಯಾದ ಹಸೀನಾ ಪತಿ ದುಬೈನಲ್ಲಿ ಕೆಲಸ ಮಾಡುತ್ತಿದ್ದರೆ, ಪುತ್ರಿ ಅಫ್ನಾನ್ ಬೆಂಗಳೂರಿನಲ್ಲಿ ಏರ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದರು. ಹಬ್ಬದ ರಜೆ ಕಾರಣಕ್ಕೆ ನಿನ್ನೆಯಷ್ಟೇ ಊರಿಗೆ ಬಂದಿದ್ದಳು. ಹೀಗಾಗಿ ಅಫ್ನಾನ್‌ನನ್ನ ಹುಡುಕಿಕೊಂಡು ಬೆಂಗಳೂರಿನಿಂದ ಹಂತಕ ಬಂದಿದ್ನಾ? ಒಬ್ಬಳ ಮೇಲಿನ ದ್ವೇಷಕ್ಕೆ ಉಳಿದ ಮೂವರನ್ನ ಕೊಂದು ಹಾಕಿದ್ನಾ ಅನ್ನೋ ಅನುಮಾನ ಇದೆ. ತನಿಖೆಯಿಂದಷ್ಟೇ ಎಲ್ಲವೂ ಬಯಲಾಗಬೇಕಿದೆ.

ಆರೋಪಿ ಆಟೋದಲ್ಲಿ ಬಂದಿದ್ದ ವಿಡಿಯೋ ನಿನ್ನೆ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದೀಗ ಆತ ಬೈಕ್‌ನಲ್ಲಿ ಡ್ರಾಪ್ ಪಡೆದುಕೊಂಡು ಬಂದಿದ್ದ ದೃಶ್ಯವೂ ಲಭ್ಯವಾಗಿದೆ. ಸಂತೆಕಟ್ಟೆ ಜಂಕ್ಷನವರೆಗೆ ಆತ ಬೇರೋಬ್ಬರ ಬೈಕ್‌ನಲ್ಲಿ ಡ್ರಾಪ್ ಪಡೆದುಕೊಂಡಿದ್ದ. ನಿನ್ನೆ ಅನುಮಾನಾಸ್ಪದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆದ್ರೆ, ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ ಅವರನ್ನು ಬಿಟ್ಟು ಕಳುಹಿಸಿದ್ದಾರೆ.

ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us