
ಉಡುಪಿ, ಜುಲೈ 14: ಚುನಾವಣೆ ಬಂದಾಗ ಮಾತ್ರ ಜನಪ್ರತಿನಿಧಿಗಳು ಗ್ರಾಮಕ್ಕೆ ಬರುತ್ತಾರೆ. ಭರವಸೆಗಳ ಸುರಿಮಳೆ ಸುರಿಸುತ್ತಾರೆ. ಆದರೆ ಚುನಾವಣೆ ಮುಗಿದ ಬಳಿಕ ಗ್ರಾಮದ ಸಮಸ್ಯೆಗಳನ್ನು ಮರೆತು ಬಿಡುತ್ತಾರೆ ಎಂಬ ಆಕ್ರೋಶ ಉಡುಪಿ (Udupi) ಜಿಲ್ಲೆಯ ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಪ್ಪಾಡಿ ಅರೆಗುಂಡಿ ನಿವಾಸಿಗಳದ್ದು. ಕಳೆದ 15ರಿಂದ 20 ವರ್ಷಗಳಿಂದ ಮುರಿದು ಶಿಥಿಲಗೊಂಡಿರುವ ಕಾಲುಸಂಕವನ್ನೇ ನೂರಾರು ಗ್ರಾಮಸ್ಥರು ಜೀವದ ಹಂಗು ತೊರೆದು ಸಂಪರ್ಕ ಮಾರ್ಗವಾಗಿ ಬಳಸುತ್ತಿದ್ದು, ಶಾಶ್ವತ ಸೇತುವೆ ನಿರ್ಮಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಗ್ರಾಮದಲ್ಲಿ ಕಾಲ ಬದಲಾದರೂ, ಸರ್ಕಾರಗಳು ಬದಲಾದರೂ, ಜನಪ್ರತಿನಿಧಿಗಳು ಬದಲಾದರೂ ಜನರ ಸಂಕಷ್ಟ ಮಾತ್ರ ಬದಲಾಗಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಮಳೆಗಾಲದಲ್ಲಿ ಕಾಲುಸಂಕದ ಮೇಲೆ ನೀರಿನ ಹರಿವು ಹೆಚ್ಚಾಗುವುದರಿಂದ ಪ್ರತಿದಿನ ಸಂಚಾರವೇ ಅಪಾಯಕಾರಿಯಾಗುತ್ತದೆ.
ಶಾಲೆಗೆ ಹೋಗುವ ಪುಟ್ಟ ಮಕ್ಕಳು ಪುಸ್ತಕದ ಚೀಲ ಹೊತ್ತು ಇದೇ ಕಾಲುಸಂಕ ದಾಟಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಒಂದು ಕಡೆ ವೇಗವಾಗಿ ಹರಿಯುವ ನೀರು, ಮತ್ತೊಂದು ಕಡೆ ಮುರಿದು ಹಾಳಾಗಿರುವ ಸಂಕ. ಕಾಲು ಜಾರಿದರೆ ಜೀವಕ್ಕೆ ಅಪಾಯ ಎಂಬ ಆತಂಕದಲ್ಲೇ ಮಕ್ಕಳು ಶಾಲೆಯತ್ತ ಹೆಜ್ಜೆ ಹಾಕುತ್ತಿದ್ದಾರೆ.
ವಯೋವೃದ್ಧರು, ಗರ್ಭಿಣಿಯರು ಹಾಗೂ ಅನಾರೋಗ್ಯ ಪೀಡಿತರು ಆಸ್ಪತ್ರೆಗೆ ತೆರಳಬೇಕಾದರೂ ಇದೇ ದಾರಿಯನ್ನು ಅವಲಂಬಿಸಬೇಕಾಗಿದೆ. ತುರ್ತು ಸಂದರ್ಭಗಳಲ್ಲಿ ಆಂಬುಲೆನ್ಸ್ ಕೂಡ ಈ ಭಾಗಕ್ಕೆ ತಲುಪಲು ಸಾಧ್ಯವಾಗುವುದಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ಕೆಲವು ವರ್ಷಗಳ ಹಿಂದೆ ಇದೇ ಕಾಲುಸಂಕ ದಾಟುವ ವೇಳೆ ಇಬ್ಬರು ಮಹಿಳೆಯರು ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದರು. ಗ್ರಾಮಸ್ಥರು ಸಮಯೋಚಿತವಾಗಿ ನಡೆಸಿದ ರಕ್ಷಣಾ ಕಾರ್ಯಾಚರಣೆಯಿಂದ ಅವರ ಜೀವ ಉಳಿದಿತ್ತು. ಆ ಘಟನೆ ಬಳಿಕವಾದರೂ ಅಧಿಕಾರಿಗಳು ಶಾಶ್ವತ ಪರಿಹಾರ ಕಲ್ಪಿಸುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ವರ್ಷಗಳು ಕಳೆದರೂ ಪರಿಸ್ಥಿತಿ ಬದಲಾಗಿಲ್ಲ.
ಈ ದಾರಿಯನ್ನು ಬಿಟ್ಟು ಪರ್ಯಾಯ ಮಾರ್ಗ ಬಳಸಬೇಕಾದರೆ ಸುಮಾರು ಐದು ಕಿಲೋಮೀಟರ್ ಸುತ್ತುವರಿದು ಹೋಗಬೇಕಾಗುತ್ತದೆ. ಇದರಿಂದ ವಿದ್ಯಾರ್ಥಿಗಳು, ರೈತರು, ಕೂಲಿ ಕಾರ್ಮಿಕರು ಹಾಗೂ ಸಾರ್ವಜನಿಕರು ಪ್ರತಿದಿನ ಹೆಚ್ಚುವರಿ ಸಮಯ, ಹಣ ಮತ್ತು ಶ್ರಮ ವ್ಯಯಿಸಬೇಕಾಗಿದೆ.
ಪ್ರತಿ ಚುನಾವಣೆಯಲ್ಲೂ ಶಾಶ್ವತ ಕಾಲುಸಂಕ ನಿರ್ಮಾಣದ ಭರವಸೆ ನೀಡಲಾಗುತ್ತದೆ. ಆದರೆ ಚುನಾವಣೆ ಮುಗಿದ ಬಳಿಕ ಆ ಭರವಸೆಗಳು ಕಡತಗಳಲ್ಲೇ ಉಳಿಯುತ್ತವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಹಲವು ಬಾರಿ ಅಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುವುದು ಅವರ ಅಳಲು.
ಇದನ್ನೂ ಓದಿ: ಉಡುಪಿ ಶ್ರೀಕೃಷ್ಣದಲ್ಲಿ ಆದಿ ಶಂಕರಾಚಾರ್ಯರ ನಿಂದನೆ ವಿವಾದ: ಕ್ಷಮೆ ಯಾಚಿಸಿದ ಹರಿಕಥೆ ಕಲಾವಿದೆ, ಶಿರೂರು ಮಠದಿಂದಲೂ ಸ್ಪಷ್ಟನೆ
‘ನಮ್ಮ ಹಿಂದಿನ ತಲೆಮಾರೂ ಇದೇ ಸಂಕಷ್ಟ ಅನುಭವಿಸಿತು. ಈಗ ನಮ್ಮ ಮಕ್ಕಳೂ ಅದೇ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ನಮಗೆ ದೊಡ್ಡ ಅಭಿವೃದ್ಧಿ ಬೇಡ. ಜೀವ ಉಳಿಸುವ ಒಂದು ಶಾಶ್ವತ ಕಾಲುಸಂಕ ನಿರ್ಮಿಸಿ ಕೊಡಿ’ಎಂದು ಗ್ರಾಮಸ್ಥರು ಭಾವುಕರಾಗಿ ಮನವಿ ಮಾಡಿದ್ದಾರೆ. ಗ್ರಾಮಸ್ಥರ ಬೇಡಿಕೆಗೆ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆ ಯಾವಾಗ ಸ್ಪಂದಿಸುತ್ತದೆ? ಮತ್ತೊಂದು ಅನಾಹುತ ಸಂಭವಿಸುವ ಮುನ್ನ ಶಾಶ್ವತ ಸೇತುವೆ ನಿರ್ಮಾಣವಾಗುತ್ತದೆಯೇ ಎಂಬ ಪ್ರಶ್ನೆ ಇದೀಗ ಸ್ಥಳೀಯರನ್ನು ಕಾಡುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ