
ಉಡುಪಿ: ಈ ಬಾರಿ ಹಾವೇರಿಯಲ್ಲಿ ಅರ್ಥಪೂರ್ಣವಾಗಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಸಿಎಂ ಬೊಮ್ಮಾಯಿ 20 ಕೋಟಿ ಅನುದಾನ ಘೋಷಿಸಿದ್ದಾರೆ ಎಂದು ಉಡುಪಿಯಲ್ಲಿ ಕನ್ನಡ & ಸಂಸ್ಕೃತಿ ಖಾತೆ ಸಚಿವ ಸುನಿಲ್ ಕುಮಾರ್ ಹೇಳಿದರು. ಉಡುಪಿಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಸಚಿವ ಸುನಿಲ್ ಕುಮಾರ್, ಹಾವೇರಿಯಲ್ಲಿ ಅದ್ಧೂರಿಯಾಗಿ ಅರ್ಥಪೂರ್ಣವಾಗಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಸರ್ಕಾರದ ಅನುದಾನಕ್ಕೆ ಯಾವುದೇ ಕೊರತೆಗಳು ಆಗುವುದಿಲ್ಲ. ಪರಿಷತ್ತು ಸರ್ಕಾರದ ನಡುವೆ ವೈರುಧ್ಯ ಅಭಿಪ್ರಾಯ ಇಲ್ಲ. ದೀಪಾವಳಿ ಮುಗಿದ ಕೂಡಲೇ ಸಮ್ಮೇಳನದ ಪೂರ್ವ ತಯಾರಿ ಸಭೆ ನಡೆಯುತ್ತದೆ. ಸಿಎಂ ಬೊಮ್ಮಾಯಿ 20 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದಾರೆ. ಯಾವುದೇ ಕಾರಣಕ್ಕೂ ಅನುದಾನದ ಕೊರತೆಯನ್ನು ಮಾಡುವುದಿಲ್ಲ ಎಂದರು.
ಎಲ್ಲಾ ಜಿಲ್ಲೆಗಳ 35 ಕಲಾ ಪ್ರಕಾರ ಸಾಧಕರಿಗೆ ಪ್ರಶಸ್ತಿ ವಿತರಣೆ
ರಾಜ್ಯೋತ್ಸವ ಪ್ರಶಸ್ತಿಗೆ ಒಟ್ಟು 28 ಸಾವಿರ ಅರ್ಜಿಗಳು ಬಂದಿವೆ. ಈ ಬಾರಿ 35 ಕ್ಷೇತ್ರಗಳ 65 ಸಾಧಕರ ಆಯ್ಕೆ ನಡೆಯಲಿದೆ. ತೆರೆಮರೆಯ ಸಾಧಕರನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ಸಾಧಕರ ಸಲಹಾ ಸಮಿತಿಯು ಗುರುತಿಸಿ ಆಯ್ಕೆ ಮಾಡಲಿದೆ. ಯಾವುದೇ ಒತ್ತಡಕ್ಕೆ ಮಣಿದು ರಾಜ್ಯೋತ್ಸವ ಪ್ರಶಸ್ತಿ ಕೊಡಲ್ಲ. ಅರ್ಹರು ಹಾಗೂ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ನೀಡುತ್ತೇವೆ. ಎಲ್ಲಾ ಜಿಲ್ಲೆಗಳ 35 ಕಲಾ ಪ್ರಕಾರ ಸಾಧಕರಿಗೆ ಪ್ರಶಸ್ತಿ ವಿತರಣೆ ಮಾಡಲಾಗುತ್ತೆ ಎಂದು ಸಚಿವ ಸುನಿಲ್ ಕುಮಾರ್ ಮಾಹಿತಿ ನೀಡಿದರು.
ವರ್ಷದಲ್ಲಿ ಒಮ್ಮೆ ವಿದ್ಯುತ್ ದರ ಹೆಚ್ಚಳಕ್ಕೆ ಸಿಎಂಗೆ ಮನವಿ
ರಾಜ್ಯದಲ್ಲಿ ದೀಪಾವಳಿ ಹಬ್ಬಕ್ಕೂ ಲೋಡ್ ಶೆಡ್ಡಿಂಗ್ ಆಗಲ್ಲ. ಬೇಸಿಗೆಯಲ್ಲಿ ಗ್ರಾಹಕರಿಗೆ ಯಾವುದೇ ಸಮಸ್ಯೆಗಳು ಆಗಲ್ಲ. ಉತ್ಪಾದನೆ ಹೆಚ್ಚಿಸಿ ವಿದ್ಯುತ್ ಸರಬರಾಜು ಮಾಡುತ್ತೇವೆ. ರಾಜ್ಯದ 14,800 ಮೆ.ವ್ಯಾ ವಿದ್ಯುತ್ ನಿರ್ವಹಣೆ ಮಾಡಿದ್ದೇವೆ. ವರ್ಷದಲ್ಲಿ ಒಮ್ಮೆ ವಿದ್ಯುತ್ ದರ ಏರಿಕೆ ಮಾಡಲು ಸಿಎಂ ಗೆ ಮನವಿ ನೀಡಲಾಗಿದೆ. ಮೂರು ತಿಂಗಳಿಗೊಮ್ಮೆ ವಿದ್ಯುತ್ ದರ ಏರಿಸಬಾರದು ಎಂದು ಕೆಆರ್ಸಿಗೆ ವಿನಂತಿಸಲಾಗಿದೆ ಎಂದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 3:16 pm, Sat, 22 October 22