ಉಡುಪಿ ಕಾಲೇಜಿನಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣದ ತನಿಖೆ ಸಿಐಡಿ ಹೆಗಲಿಗೆ

| Updated By: Rakesh Nayak Manchi

Updated on: Aug 07, 2023 | 7:58 PM

ಉಡುಪಿ ನೇತ್ರಜ್ಯೋತಿ ಕಾಲೇಜಿನ ಶೌಚಾಲಯದಲ್ಲಿ ಗೌಪ್ಯ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಭಾರೀ ಆಕ್ರೋಶ ವ್ಯಕ್ತವಾಗಿದ್ದಲ್ಲದೆ, ಆರೋಪಿ ವಿದ್ಯಾರ್ಥಿನಿಯರ ಪರ ಕಾಂಗ್ರೆಸ್ ಸರ್ಕಾರ ನಿಂತಿದೆ ಎಂಬ ಆರೋಪ ಕೇಳಿಬಂದಿತ್ತು. ಇದರ ಬೆನ್ನಲ್ಲೇ, ಪ್ರಕರಣ ತನಿಖೆಯನ್ನು ಸರ್ಕಾರ ಸಿಐಡಿಗೆ ಒಪ್ಪಿಸಿದೆ.

ಉಡುಪಿ ಕಾಲೇಜಿನಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣದ ತನಿಖೆ ಸಿಐಡಿ ಹೆಗಲಿಗೆ
ಉಡುಪಿ ಕಾಲೇಜು ವಿಡಿಯೋ ಚಿತ್ರೀಕರಣ ಪ್ರಕರಣದ ತನಿಖೆ ಸಿಐಡಿಗೆ ಒಪ್ಪಿಸಿದ ಕರ್ನಾಟಕ ಸರ್ಕಾರ
Follow us on

ಉಡುಪಿ, ಆಗಸ್ಟ್ 7: ನೇತ್ರಜ್ಯೋತಿ ಪ್ಯಾರಾಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಚಿತ್ರೀಕರಣ ಮಾಡಿದ ಪ್ರಕರಣದ ತನಿಖೆಯನ್ನು ಸಿಐಡಿಗೆ (CID) ಒಪ್ಪಿಸಿ ಕರ್ನಾಟಕ ಸರ್ಕಾರವು (Karnataka Govt) ಮಹತ್ವದ ಆದೇಶ ಹೊರಡಿಸಿದೆ. ಜುಲೈ 18 ರಂದು ನಡೆದಿದ್ದ ಘಟನೆ ಇದಾಗಿದ್ದು, ಜುಲೈ 26 ರಂದು ಪೊಲೀಸರು ಸುಮೋಟೋ ಕೇಸ್ ದಾಖಲಿಸಿದ್ದರು.

ಪ್ರಕರಣವನ್ನು ಸಿಐಡಿಗೆ ಒಪ್ಪಿಸಿದ ಬಗ್ಗೆ ಮುಖ್ಯಮಂತ್ರಿ ಅವರ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಟ್ವೀಟ್ ಮಾಡಲಾಗಿದೆ. “ಉಡುಪಿಯ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ವೀಡಿಯೋ ಚಿತ್ರೀಕರಣ ನಡೆಸಲಾಗಿದೆ ಎಂಬ ಆರೋಪವಿದ್ದು, ಇದು ಸೂಕ್ಷ್ಮ ಪ್ರಕರಣವಾಗಿರುವುದರಿಂದ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿ.ಐ.ಡಿ ಗೆ ವಹಿಸಿ ಆದೇಶಿಸಲಾಗಿದೆ” ಎಂದು ಟ್ವೀಟ್ ಮಾಡಲಾಗಿದೆ.

ಕಾಲೇಜಿನಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಶೌಚಾಲಯದಲ್ಲಿ ಮೊಬೈಲ್ ಇಟ್ಟು ಹಿಂದೂ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಪ್ರಕರಣ ಜುಲೈ 18 ರಂದು ಬೆಳಕಿಗೆ ಬಂದಿತ್ತು. ವಿದ್ಯಾರ್ಥಿನಿಯರು ಪ್ರತಿಭಟಿಸಲು ಆರಂಭಿಸಿದಾಗ ಆಡಳಿತ ಮಂಡಳಿ ಸೂಕ್ತ ಕ್ರಮ ಕೈಗೊಳ್ಳದ ಕಾರಣ ವಿದ್ಯಾರ್ಥಿನಿಯ ಪ್ರತಿಭಟನೆಗೆ ಎಬಿವಿಪಿ ಶಕ್ತಿ ತುಂಬಿತ್ತು. ನಂತರ ಬಿಜೆಪಿ ಕೂಡ ಎಂಟ್ರಿ ಕೊಟ್ಟಿತ್ತು.

ಪ್ರಕರಣದ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದರೂ ಪೊಲೀಸರು ಯಾವುದೇ ಪ್ರಕರಣ ದಾಖಲಿಸಿರಲಿಲ್ಲ. ಬದಲಾಗಿ ಸರ್ಕಾರದ ವಿರುದ್ಧ ಟ್ವೀಟ್ ಮಾಡಿದವರ ವಿರುದ್ಧ ಕ್ರಮ ಕೈಗೊಂಡಿತ್ತು. ಇದು ಪ್ರತಿಭಟನಾ ನಿರತರನ್ನು ಇನ್ನಷ್ಟು ಕೆರಳಿಸಿತ್ತು. ಆರೋಪಿಗಳಾದ ಮುಸ್ಲಿಂ ವಿದ್ಯಾರ್ಥಿನಿಯರ ಪರ ಸರ್ಕಾರ ನಿಂತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದವು. ಬಳಿಕ ಎಚ್ಚೆತ್ತ ಮಲ್ಪೆ ಪೊಲೀಸರು, ಜುಲೈ 26ರಂದು ಸುಮೋಟೋ ಕೇಸ್ ದಾಖಲಿಸಿದ್ದರು.

ಇದನ್ನೂ ಓದಿ: ಉಡುಪಿ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣ: ಹಿಂದೂ ಸಂಘಟನೆ, ಬಿಜೆಪಿ ಮುಖಂಡರ ವಿರುದ್ಧ ಕೇಸ್ ಬುಕ್

ಪ್ರಕರಣ ದಾಖಲಿಸಿದ ಪೊಲೀಸರ ತನಿಖೆ ವಿರುದ್ಧವೇ ಅಪಸ್ವರಗಳು ಕೇಳಿಬಂದಿದ್ದವು. ತನಿಖಾಧಿಕಾರಿಗಳ ಬದಲಾವಣೆಗೆ ಒತ್ತಡ ಬಂದ ಹಿನ್ನೆಲೆ ಹೊಸ ತನಿಖಾಧಿಕಾರಿಯನ್ನು ನೇಮಿಸಲಾಗಿತ್ತು. ಈ ನಡುವೆ ಆರೋಪಿ ವಿದ್ಯಾರ್ಥಿನಿಯೊಬ್ಬಳ ತಂದೆ ನಿಷೇಧಿತ ಪಿಎಫ್​ಐ ಸಂಘಟನೆಯ ಕಾರ್ಯಕರ್ತ ಎಂದು ಬಜರಂಗದಳ ಆರೋಪಿಸಿತ್ತು. ಆರು ತಿಂಗಳಿನಿಂದ ಈ ರೀತಿ ಚಿತ್ರೀಕರಣ ಮಾಡುತ್ತಿದ್ದು, ದೂರು ನೀಡಿದ್ದರೂ ಆಡಳಿತ ಮಂಡಳಿ ಕ್ಯಾರೇ ಎನ್ನುತ್ತಿರಲಿಲ್ಲ. ವಿಡಿಯೋ ಮಾಡಿ ಮೊಬೈಲ್​ಗಳನ್ನು ಹೊರಗಿನ ಮುಸ್ಲಿಂ ಯುವಕರಿಗೆ ನೀಡುತ್ತಿದ್ದರು ಎಂಬ ಗಂಭೀರ ಆರೋಪವನ್ನು ವಿದ್ಯಾರ್ಥಿಗಳು ಮಾಡಿದ್ದರು.

ಈ ಎಲ್ಲದರ ನಡುವೆ ಪ್ರಕರಣದ ತನಿಖೆಯನ್ನು ಎಸ್​​ಐಟಿಗೆ ವಹಿಸಬೇಕು ಎಂದು ಒತ್ತಾಯಿಸಿ ರಾಜ್ಯಪಾಲರಿಗೆ ಬಿಜೆಪಿ ಮನವಿ ಮಾಡಿತ್ತು. ಸದ್ಯ ರಾಜ್ಯ ಸರ್ಕಾರವು ಪ್ರಕರಣದ ತನಿಖೆಯನ್ನು ಸಿಐಡಿ ಹೆಗಲಿಗೆ ಒಪ್ಪಿಸಿ ಆದೇಶಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:54 pm, Mon, 7 August 23