ದೈವಕೋಲದ ವಿಚಾರದಲ್ಲಿ ಕೋರ್ಟ್ ಮೆಟ್ಟಿಲೇರಿದ್ದ ವ್ಯಕ್ತಿ ಕುಸಿದು ಬಿದ್ದು ಸಾವು, ಕಾಂತಾರ ಸಿನಿಮಾದಂತಿದೆ ಈ ರಿಯಲ್ ಸ್ಟೋರಿ

| Updated By: Rakesh Nayak Manchi

Updated on: Jan 07, 2023 | 9:33 AM

ಕಾಂತಾರ ಸಿನಿಮಾ ಕತೆ ಹೋಲುತ್ತಿದೆ ಉಡುಪಿಯ ಪಡುಹಿತ್ಲು ಬಳಿಯ ಈ ಘಟ‌ನೆ‌. ಅಧಿಕಾರದ ಹಪಹಪಿಯಿಂದ ಪ್ರತ್ಯೇಕ ಟ್ರಸ್ಟ್ ರಚಿಸಿದ ಪ್ರಕಾಶ್ ಶೆಟ್ಟಿ ಬಳಿಕ ಕೋರ್ಟ್ ಮೆಟ್ಟಿಲೇರುತ್ತಾರೆ. ಇದೀಗ ಇವರು ಕುಸಿದುಬಿದ್ದು ಮೃತಪಟ್ಟಿದ್ದಾರೆ.

ದೈವಕೋಲದ ವಿಚಾರದಲ್ಲಿ ಕೋರ್ಟ್ ಮೆಟ್ಟಿಲೇರಿದ್ದ ವ್ಯಕ್ತಿ ಕುಸಿದು ಬಿದ್ದು ಸಾವು, ಕಾಂತಾರ ಸಿನಿಮಾದಂತಿದೆ ಈ ರಿಯಲ್ ಸ್ಟೋರಿ
ಮೃತ ಜಯಪೂಜಾರಿ ಮತ್ತು ಪಡುಹಿತ್ಲು ಜಾರಂದಾಯ ಬಂಟ ದೈವಸ್ಥಾನ
Follow us on

ಉಡುಪಿ: “ಕೋರ್ಟ್​ಗೆ ಹೋಗ್ತಿ, ಆದರೆ ನಿನ್ನ ತೀರ್ಮಾನ ಮೆಟ್ಲಲ್ಲಿ ನಾನು ಮಾಡುತ್ತೇನೆ” ಎಂದು ಪಂಜುರ್ಲಿ ದೈವ ನುಡಿಯುತ್ತದೆ, ಆದರೂ ಇದನ್ನು ಲೆಕ್ಕಿಸದೆ ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ ರಕ್ತಕಾರಿ ಸಾವನ್ನಪ್ಪುತ್ತಾನೆ. ಇದು ಕನ್ನಡದ ಸೂಪರ್ ಹಿಟ್ ಮೂವಿ ಕಾಂತಾರ (Kantara Movie) ಸಿನಿಮಾದ ರೀಲ್ ಸ್ಟೋರಿ. ಆದರೆ ಉಡುಪಿ (Udupi)ಯಲ್ಲಿ ಇದೇ ರೀತಿಯ ನೈಜ ಘಟನೆಯೊಂದು ನಡೆದಿದೆ. ಉಡುಪಿ ಜಿಲ್ಲೆಯ ಪಡುಬಿದ್ರೆ ತಾಲೂಕಿನ ಪಡುಹಿತ್ಲು ಗ್ರಾಮದಲ್ಲಿ ದೈವಕೋಲದ ವಿಚಾರದಲ್ಲಿ ಕೋರ್ಟ್ ಮೆಟ್ಟಿಲೇರಿದ್ದ ವ್ಯಕ್ತಿ ದೈವದ ತಂಬಿಲ ಸೇವೆ ಸಂದರ್ಭದಲ್ಲಿ ಸ್ಥಾನದ ಎದುರೇ ಕುಸಿದುಬಿದ್ದು ಸಾವನ್ನಪ್ಪಿದ್ದು, ಊರ ಜನ ಮೂಕವಿಸ್ಮಿತರಾಗಿದ್ದಾರೆ.

ಪಡುಹಿತ್ಲು ಗ್ರಾಮದಲ್ಲಿ ಜಾರಂದಾಯ ಬಂಟ ದೈವಸ್ಥಾನದಲ್ಲಿ ವರ್ಷಕ್ಕೊಮ್ಮೆ ವಿಜೃಂಭಣೆಯ ನೇಮೋತ್ಸವ ನಡೆಯುತ್ತದೆ. ಈ ನೇಮದಲ್ಲಿ ಸಮಸ್ತ ಊರವರು ಭಾಗಿಯಾಗುತ್ತಾರೆ. ಈ ದೈವಸ್ಥಾನ ನೋಡಿಕೊಳ್ಳಲು ಪಡುಹಿತ್ಲು ಜಾರಂದಾಯ ಬಂಟ ಸೇವಾ ಸಮಿತಿ ಇದೆ. ಈ ಸಮಿತಿಯಲ್ಲಿ ಪ್ರಕಾಶ್ ಶೆಟ್ಟಿ ಅಧ್ಯಕ್ಷರಾಗಿದ್ದರು. ಸಮಿತಿ ಬದಲಾದಾಗ ಪ್ರಕಾಶ್ ಶೆಟ್ಟಿ ಸಹಜವಾಗಿ ಅಧಿಕಾರ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: ರಾಜ್ಯ ರಾಜಕಾರಣದಲ್ಲಿ ಸುದ್ದು ಮಾಡುತ್ತಿರುವ ಸ್ಯಾಂಟ್ರೋ ರವಿಗಾಗಿ ಮೈಸೂರು ಪೊಲೀಸರ ಹುಡುಕಾಟ

ಅಧಿಕಾರದ ಹಪಹಪಿಯಿಂದ ಪ್ರತ್ಯೇಕ ಟ್ರಸ್ಟ್ ರಚಿಸಿದ ಪ್ರಕಾಶ್ ಶೆಟ್ಟಿ, ಇಲ್ಲಿಯ ಬಂಡಾರ ಮನೆಯ ಗುರಿಕಾರರಾದ ಜಯ ಪೂಜಾರಿಯನ್ನು ಅಧ್ಯಕ್ಷರನ್ನಾಗಿ ನೇಮಿಸುತ್ತಾರೆ. ಹೀಗೆ 9 ಜನರ ಟ್ರಸ್ಟ್ ರಚಿಸಿದ ಪ್ರಕಾಶ್ ಶೆಟ್ಟಿ, ಇದರಲ್ಲಿ ಜಯ ಪೂಜಾರಿಯನ್ನು ಅಧ್ಯಕ್ಷರನ್ನಾಗಿ ನೇಮಿಸ್ತಾರೆ. ದೈವಸ್ಥಾನ ತಮಗೆ ಸೇರಿದ್ದು ಎಂದು ಹಕ್ಕು ಸ್ಥಾಪಿಸಲು ಯತ್ನಿಸುತ್ತಾರೆ.

ವರ್ಷಂಪ್ರತಿಯಂತೆ ಈ ವರ್ಷ ನೇಮೋತ್ಸವ ನಡೆಸಲು ಜಾರಂದಾಯ ದೈವಸ್ಥಾನ ಸಮಿತಿ ತೀರ್ಮಾನಿಸಿ, ಜನವರಿ 7 ರಂದು ಕೋಲ ನಡೆಸಲು ತೀರ್ಮಾನಿಸುತ್ತದೆ. ಇದರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುವ ಜಯಪೂಜಾರಿ ಮತ್ತು ಪ್ರಕಾಶ್ ಶೆಟ್ಟಿ‌ ಕೋಲಕ್ಕೆ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾಗುತ್ತಾರೆ. ಆಶ್ಚರ್ಯದ ಸಂಗತಿ ಎಂದರೆ ಡಿಸೆಂಬರ್ 23ಕ್ಕೆ ತಡೆಯಾಜ್ಞೆ ತಂದ ಜಯಪೂಜಾರಿ, ಡಿಸೆಂಬರ್ 24 ರಂದು ಹಠಾತ್ ಕುಸಿದು ಬಿದ್ದು ಸಾವನ್ನಪ್ಪುತ್ತಾರೆ.

ಸಮೀಪದಲ್ಲಿ ನಡೆಯುತ್ತಿದ್ದ ಕೊಡಮಣಿತ್ತಾಯ ದೈವದ ತಂಬಿಲ ಸೇವೆ ಸಂದರ್ಭ ಎಲ್ಲರೆದುರೇ ಸಾವನ್ನಪ್ಪಿದ್ದು ಊರ ಜನ ಮೂಕವಿಸ್ಮಿತರಾಗಿ ನೋಡುತ್ತಾರೆ. ಈ ಪ್ರಕರಣವನ್ನು ಕೈಗೆತ್ತಿಕೊಂಡ ವಕೀಲ ಬಿ.ನಾಗರಾಜ್, ಕೋರ್ಟ್​ನಲ್ಲಿ ವಾದ ಮಂಡಿಸಿ ತಡೆಯಾಜ್ಞೆಯನ್ನು ತೆರವು ಮಾಡುವಲ್ಲಿ ಯಶಸ್ವಿಯಾಗುತ್ತಾರೆ.

ದೈವ ನರ್ತಕರಿಗೆ ಬೆದರಿಕೆ ಹಾಕಿದ ಪ್ರಕಾಶ್ ಶೆಟ್ಟಿ ಮತ್ತು ತಂಡ

ಟ್ರಸ್ಟಿ ಪ್ರಕಾಶ್ ಶೆಟ್ಟಿ ಕೀಟಲೆ ಕೋರ್ಟ್​ಗೆ ಮಾತ್ರ ಸೀಮಿತವಾಗಿರಲಿಲ್ಲ. ಬೇರೆ ಬೇರೆ ರೀತಿಯಲ್ಲಿ ಕಿರುಕುಳ ನೀಡುತ್ತಾರೆ. ಕೊನೆಗೆ ಜಾರಂದಾಯ ದೈವಸ್ಥಾನದ ದೈವ ನರ್ತಕ ಭಾಸ್ಕರ ಬಂಗೇರ ಅವರನ್ನು‌ ಬೆದರಿಸಿ ತಾವು ಹೇಳುವ ರೀತಿ ದೈವದ ನುಡಿ ಕೊಡಬೇಕು ಎಂದು ಬೆದರಿಸಿತ್ತಾರೆ ಅಂತಾ ದೈವ ನರ್ತಕರು ಆರೋಪ ಮಾಡಿದ್ದಾರೆ.

ಜಾರಂದಾಯ ಅಪ್ಪಣೆಯಂತೆ ದೈವ ನರ್ತಕನಾಗಿ ಕೆಲಸ ಮಾಡುತ್ತಿದ್ದಾಗ ಪ್ರಕಾಶ್ ಶೆಟ್ಟಿ, ಕೇಶವ ಪೂಜಾರಿ ಮತ್ತು ಮೋಹನ್ ಅಮಿನ್ ಅವರು ಹಣದ ಆಮಿಷ ಹಾಕಿ ನಾವು ಹೇಳಿದ ಹಾಗೆ ನುಡಿ ಕೊಡಬೇಕು ಎಂದು ಹೇಳಿ ಬೆದರಿಸಿದ್ದಾರೆ. ನೀನು ಹೇಗೆ ಕೋಲ ಕಟ್ಟುತ್ತೀ ಎಂದು ನನಗೆ ಬೆದರಿಕೆ ಹಾಕಿದ್ದಾರೆ ಎಂದು ದೈವನರ್ತಕ ಭಾಸ್ಕರ ಬಂಗೇರ ಹೇಳಿದ್ದಾರೆ.

ಇದನ್ನೂ ಓದಿ: MM Hills: ಬೃಹದಾದ ಮಹದೇಶ್ವರ ಸ್ವಾಮಿ ಪ್ರತಿಮೆ ಉದ್ಘಾಟನೆಗೆ ಸಜ್ಜು -ಆದರೆ ಬೀದಿಗೆ ಬೀಳುತ್ತಿವೆ ರೈತ ಕುಟುಂಬಗಳು

ಜನವರಿ 7ಕ್ಕೆ ನಡೆಯಬೇಕಿದ್ದ ನೇಮೋತ್ಸವವನ್ನು ದೈವಸ್ಥಾನ‌ ಸಮಿತಿ‌ ಜಯ ಪೂಜಾರಿ ದೈವದೀನರಾದ ಕಾರಣಕ್ಕೆ ಮುಂದೂಡಿದೆ. ಆದರೆ ಹಠ ಬಿಡದ ಪ್ರಕಾಶ್ ಶೆಟ್ಟಿ ಮತ್ತು ತಂಡ ಜಯ ಪೂಜಾರಿಯವರ ಉತ್ತರಕ್ರಿಯೆಯ ದಿನವಾದ ಜ.7 ರಂದೇ ಕಾಲಾವಧಿ ನೇಮೋತ್ಸವ ಮಾಡಲು ಹೊರಟಿದೆ. ಕೋರ್ಟ್​​ನಲ್ಲಿ ತಡೆಯಾಜ್ಞೆ ತೆರವಾಗಿದ್ದರೂ ಊರವರ ವಿರುದ್ಧ ಹೊರಟಿರುವ ಪ್ರಕಾಶ್ ಶೆಟ್ಟಿ ಮತ್ತು ತಂಡದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದೀಗ ಊರ ಸಮಸ್ತರು ಸಭೆ ಸೇರಿ 500 ವರ್ಷಗಳ ಇತಿಹಾಸ ಇರುವ ಜಾರಂದಾಯ ಬಂಟ ಸೇವಾ ಸಮಿತಿ ಮಾಡುವ ನಿರ್ಣಯಕ್ಕೆ ಬದ್ಧ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

ಪಡುಬಿದ್ರೆ ಪೊಲೀಸ್ ಠಾಣೆ ಮೆಟ್ಟಿಲೇರಿದ ದೈವಕೋಲ ವಿವಾದ

ಪಡುಹಿತ್ಲು ಗ್ರಾಮದಲ್ಲಿ ದೈವಕೋಲ ನಡೆಸುವ ವಿವಾದ ವಿಚಾರದಲ್ಲಿ ಕೋರ್ಟ್ ಮೆಟ್ಟಿಲೇರಿದ್ದ ಜಯ ಪೂಜಾರಿ ಸಾವು ಹಿನ್ನಲೆ  ವಿವಾದವು ಇದೀಗ ಪಡುಬಿದ್ರೆ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಪೊಲೀಸರ ಸಮ್ಮುಖದಲ್ಲಿ ನಿನ್ನೆ ತಡರಾತ್ರಿವರೆಗೂ ಸಂದಾನ ಸಭೆ ನಡೆದಿದೆ. ಆದರೆ ಸಂದಾನ ವಿಫಲವಾಗಿದೆ. ಇಂದು ಕೋಲ ನಡೆಸಲು ಟ್ರಸ್ಟ್ ತೀರ್ಮಾನ ಮಾಡಿದರೆ, ಸಮಿತಿಯು ಕೋಲ ನಡೆಸದಂತೆ ಪಟ್ಟು ಹಿಡಿದಿದೆ.

ದೈವಸ್ಥಾನದ ಸುತ್ತಾಮುತ್ತಾ ಪೊಲೀಸ್ ಬಂದೋಬಸ್ತ್

ಟ್ರಸ್ಟ್ ಮತ್ತು ಸಮಿತಿ ನಡುವಿನ ಜಟಾಪಟಿ ಹಿನ್ನಲೆ ಜಾರಂದಾಯ ದೈವಸ್ಥಾನದ ಸುತ್ತಾಮುತ್ತಾ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಜಯಾ ಪೂಜಾರಿ ಸಾವಿನ ಸೂತಕ ಹಿನ್ನಲೆ ಕೋಲ ನಡೆಸದಿರಲು ತೀರ್ಮಾನಿಸಲಾಗಿದೆ. ಆದರೆ ಮಾಜಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಕೋಲ ನಡೆಸಲು ಮುಂದಾಗಿದ್ದಾರೆ. ನಿನ್ನೆ ರಾತ್ರಿ ನಡೆದ ಸಂಧಾನಸಭೆಯೂ ವಿಫಲಗೊಂಡ ಪರಿಣಾಮ ಸ್ಥಳದಲ್ಲಿ ಬಿಗಿವಿನ ವಾತಾವರಣ ನಿರ್ಮಾಣಗೊಂಡಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿದೆ.

ವರದಿ: ದಿನೇಶ್ ಮತ್ತು ಪೃಥ್ವಿರಾಜ್ ಬೊಮ್ಮನಕೆರೆ, ಟಿವಿ9 ಉಡುಪಿ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:02 am, Sat, 7 January 23