AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯ ರಾಜಕಾರಣದಲ್ಲಿ ಸುದ್ದು ಮಾಡುತ್ತಿರುವ ಸ್ಯಾಂಟ್ರೋ ರವಿಗಾಗಿ ಮೈಸೂರು ಪೊಲೀಸರ ಹುಡುಕಾಟ

ಕರ್ನಾಟಕ ರಾಜಕೀಯದಲ್ಲಿ ಸ್ಯಾಂಟ್ರೋ ರವಿ ಹೆಸರು ಭಾರೀ ಸುದ್ದು ಮಾಡುತ್ತಿದೆ. ಸ್ಯಾಂಟ್ರೋ ರವಿ ವಿಚಾರವನ್ನು ಅಸ್ತ್ರವನ್ನಾಗಿ ಮಾಡಿಕೊಂಡ ವಿಪಕ್ಷಗಳು ಆಡಳಿತರೂಢ ಬಿಜೆಪಿ ಪಕ್ಷದ ವಿರುದ್ಧ ಮುಗಿಬೀಳುತ್ತಿವೆ.

ರಾಜ್ಯ ರಾಜಕಾರಣದಲ್ಲಿ ಸುದ್ದು ಮಾಡುತ್ತಿರುವ ಸ್ಯಾಂಟ್ರೋ ರವಿಗಾಗಿ ಮೈಸೂರು ಪೊಲೀಸರ ಹುಡುಕಾಟ
ಸ್ಯಾಂಟ್ರೋ ರವಿ ಬಂಧನಕ್ಕೆ ಮೈಸೂರು ಪೊಲೀಸರು ಹುಡುಕಾಟ
TV9 Web
| Updated By: Rakesh Nayak Manchi|

Updated on:Jan 07, 2023 | 7:55 AM

Share

ಮೈಸೂರು: ರಾಜ್ಯ ರಾಜಕಾರಣ (Karnataka Politics)ದಲ್ಲಿ ಭಾರೀ ಸದ್ದು ಮಾಡುತ್ತಿರುವ ಸ್ಯಾಂಟ್ರೋ ರವಿ (Santro Ravi)ಗಾಗಿ ಇದೀಗ ಮೈಸೂರು ಪೊಲೀಸರು (Mysore Police) ಹುಡುಕಾಟ ನಡೆಸುತ್ತಿದ್ದಾರೆ. ಕೆ.ಎಸ್.ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ವಿರುದ್ಧ ವರದಕ್ಷಿಣೆ ಕಿರುಕುಳ, ವಂಚನೆ, ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಪ್ರಕರಣ ದಾಖಲಾಗಿ 5 ದಿನಗಳು ಕಳೆದರೂ ಸ್ಯಾಂಟ್ರೋ ರವಿ ಮಾತ್ರ ಪೊಲೀಸರು ಕಣ್ಣಿಗೆ ಬೀಳುತ್ತಿಲ್ಲ. ಸದ್ಯ ತಲೆಮರೆಸಿಕೊಂಡಿರುವ ಸ್ಯಾಂಟ್ರೋ ರವಿ ಬಂಧನಕ್ಕೆ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.

ವಂಚನೆ, ವರದಕ್ಷಿಣೆ, ಕಿರುಕುಳ, ಅತ್ಯಾಚಾರ ಆರೋಪದಡಿ ಸ್ಯಾಂಟ್ರೋ ರವಿ ವಿರುದ್ಧ ಜನವರಿ 2ರಂದು ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನ್ನ ವಿರುದ್ಧ ದೂರುಗಳು ದಾಖಲಾಗುತ್ತಿದ್ದಂತೆ ಆರೋಪಿ ಸ್ಯಾಂಟ್ರೋ ರವಿ‌ ಎಸ್ಕೇಪ್ ಆಗಿದ್ದಾನೆ. ಈತನ ಪತ್ತೆಗಾಗಿ ಮೈಸೂರು ಡಿಸಿಪಿ‌ ಮುತ್ತುರಾಜ್ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ.

ಇದನ್ನೂ ಓದಿ: ಸ್ಯಾಂಟ್ರೊ ರವಿ ಯಾರು ಅಂತ ನಂಗೊತ್ತಿಲ್ಲ, ಕುಮಾರಸ್ವಾಮಿಯವರೇ ವಿವರ ನೀಡಬೇಕು: ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿಗಳು

ಎನ್ಆರ್ ಎಸಿಪಿ ಶಿವಶಂಕರ್ ನೇತೃತ್ವದಲ್ಲಿ ರಚಿಸಲಾದ ವಿಶೇಷ ತಂಡದಲ್ಲಿ ಮೂವರು ಇನ್ಸಪೆಕ್ಟರ್, ಐದಕ್ಕೂ‌ ಹೆಚ್ಚು ಸಬ್ ಇನ್ಸಪೆಕ್ಟರ್‌ಗಳು ಮತ್ತು ಸಿಬ್ಬಂದಿ ಇದ್ದಾರೆ. ಸದ್ಯ ಪೊಲೀಸರು ಬೆಂಗಳೂರು ಹಾಗೂ ಮೈಸೂರಿನಲ್ಲಿ ಸ್ಯಾಂಟ್ರೋ ರವಿಗಾಗಿ ಹುಡುಕಾಟ ನಡೆಸುತ್ತಿದ್ದು, ಒಡನಾಡಿ ಸಂಸ್ಥೆಯಿಂದಲೂ‌ ಮಾಹಿತಿ ಕಲೆ‌ ಹಾಕುತ್ತಿದ್ದಾರೆ. ಈ ನಡುವೆ ಸ್ಯಾಂಟ್ರೋ ರವಿ ತನ್ನ ವಕೀಲರ ಮೂಲಕ ಮೈಸೂರು ಸೆಷನ್ ಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ‌ ಸಲ್ಲಿಸಿದ್ದಾನೆ.

ವರ್ಗಾವಣೆ ವಿಚಾರದಲ್ಲಿ ಡಿವೈಎಸ್​ಪಿ ಜೊತೆಗಿನ ಮಾತುಕತೆಯ ಆಡಿಯೋ ವೈರಲ್ ಆದ ನಂತರ ರಾಜ್ಯದಲ್ಲಿ ಸ್ಯಾಂಟ್ರೋ ರವಿ ಹೆಸರು ಮುನ್ನಲೆಗೆ ಬಂದಿತ್ತು. ಇದಾದ ನಂತರ ಹಲವು ಪ್ರಭಾವಿ ರಾಜಕೀಯ ನಾಯಕರ ಜೊತೆ ಚಾಟಿಂಗ್ ನಡೆಸಿರುವ ಹಾಗೂ ತೆಗೆಸಿಕೊಂಡಿದ್ದ ಫೋಟೋಗಳು ವೈರಲ್ ಆದವು. ಸಿಎಂ ಬಸವರಾಜ ಬೊಮ್ಮಾಯಿ, ಗೃಹಸಚಿವ ಆರಗ ಜ್ಞಾನೇಂದ್ರ, ಸಚಿವ ಎಸ್.ಟಿ.ಸೋಮಶೇಖರ್, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಜೊತೆ ಮಾತ್ರವಲ್ಲದೆ ಉನ್ನತ ಹುದ್ದೆಗಳಲ್ಲಿ ಇರುವ ಅಧಿಕಾರಿಗಳೊಂದಿಗೆ ಮಾಡಿದ್ದಾನೆ ಎನ್ನಲಾದ ವಾಟ್ಸ್​​ಆ್ಯಪ್ ಚಾಟ್​​ಗಳು ಹರಿದಾಡುತ್ತಿವೆ.

ಇದನ್ನೇ ಅಸ್ತ್ರವನ್ನಾಗಿಸಿಕೊಂಡಿರುವ ವಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್, ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸುತ್ತಿದೆ. ಇನ್ನು ವಿಪಕ್ಷಗಳ ಪ್ರಶ್ನೆಗೆ ಮುಖ್ಯಮಂತ್ರಿ ಸೇರಿದಂತೆ ಬಿಜೆಪಿ ನಾಯಕರುಗಳು ಸ್ಯಾಂಟ್ರೋ ರವಿ ಯಾರು ಅಂತಾನೇ ಗೊತ್ತಿಲ್ಲ ಎನ್ನುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:55 am, Sat, 7 January 23