ಉಡುಪಿಯಲ್ಲಿ ಹಿಜಾಬ್ ವಿವಾದ ನಿಯಂತ್ರಣಕ್ಕೆ ಶತಪ್ರಯತ್ನ ಮಾಡಿದ್ದೆ: ಶಾಸಕ ರಘುಪತಿ ಭಟ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 08, 2022 | 10:59 PM

ಉಡುಪಿ ಕಾಲೇಜಿನಲ್ಲಿ ನಡೆದ ಹಿಜಾಬ್-ಕೇಸರಿಶಾಲು ಸಂಘರ್ಷದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈವರೆಗೆ ಹಿಜಾಬ್ ಧರಿಸದೆ ಇದ್ದವರು ಸಹ ಇಂದು ಹಿಜಾಬ್ ನಮ್ಮ ಹಕ್ಕು ಎಂದು ಕೇಳಿದ್ದರಿಂದ ಸಮಸ್ಯೆಯಾಗಿದೆ ಎಂದು ವಿಶ್ಲೇಷಿಸಿದರು.

ಉಡುಪಿಯಲ್ಲಿ ಹಿಜಾಬ್ ವಿವಾದ ನಿಯಂತ್ರಣಕ್ಕೆ ಶತಪ್ರಯತ್ನ ಮಾಡಿದ್ದೆ: ಶಾಸಕ ರಘುಪತಿ ಭಟ್
ಉಡುಪಿ ಶಾಸಕ ರಘುಪತಿ ಭಟ್
Follow us on

ಉಡುಪಿ: ನಗರದಲ್ಲಿ ಹಿಜಾಬ್ ವಿವಾದ ನಿಯಂತ್ರಿಸಲು ಶತ ಪ್ರಯತ್ನ ಮಾಡಿದ್ದೇನೆ. ಕಾಂಗ್ರೆಸ್ ಪಕ್ಷದ ಕೆಲ ಮುಸ್ಲಿಂ ಮುಖಂಡರು ಸಹ ಮಕ್ಕಳು ಹಾಗೂ ಪೋಷಕರು ಮನವೊಲಿಸಲು ನಮ್ಮೊಂದಿಗೆ ಕೈಜೋಡಿಸಿದ್ದರು. ಆದರೆ ಈ ವಿದ್ಯಾರ್ಥಿಗಳು ಹೊರಗಿನ ಮತಿಯ ಸಂಘಟನೆಗಳ ನಿಯಂತ್ರಣದಲ್ಲಿದ್ದರು. ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿ ಅವರು ಇರಲಿಲ್ಲ. ಈ ವಿದ್ಯಾರ್ಥಿಗಳ ಹಟದಿಂದ ಇಡೀ ರಾಜ್ಯಕ್ಕೆ ಹಿಜಾಬ್ ವಿವಾದ ವಿಸ್ತರಣೆಯಾಗಿದೆ ಎಂದು ಶಾಸಕ ರಘುಪತಿ ಭಟ್ ಹೇಳಿದರು. ಎಂಜಿಎಂ ಕಾಲೇಜಿನಲ್ಲಿ ನಡೆದ ಹಿಜಾಬ್-ಕೇಸರಿಶಾಲು ಸಂಘರ್ಷದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈವರೆಗೆ ಹಿಜಾಬ್ ಧರಿಸದೆ ಇದ್ದವರು ಸಹ ಇಂದು ಹಿಜಾಬ್ ನಮ್ಮ ಹಕ್ಕು ಎಂದು ಕೇಳಿದ್ದರಿಂದ ಸಮಸ್ಯೆಯಾಗಿದೆ ಎಂದು ವಿಶ್ಲೇಷಿಸಿದರು.

ಉಡುಪಿಯಿಂದ ಈ ವಿವಾದ ಆರಂಭವಾಗಿದೆ ನಿಜ. ವಿವಾದಕ್ಕೆ ಉಡುಪಿಯಿಂದಲೇ ಕಾನೂನು ಕೂಡ ಬರಲಿದೆ. ಈ ಬಗ್ಗೆ ಸರ್ಕಾರ ಸ್ಪಷ್ಟವಾಗಿ ಆದೇಶ ಮಾಡಿದೆ. ಎಸ್​ಡಿಪಿಐ ಜೊತೆಗೆ ಬಿಜೆಪಿ ಕೈಜೋಡಿಸಿದೆ ಎಂಬ ಆರೋಪವನ್ನು ಅವರು ನಿರಾಕರಿಸಿದರು. ನ್ಯಾಯಾಲಯದ ತೀರ್ಪಿನ ಬಗ್ಗೆ ನಮಗೆ ಗೌರವವಿದೆ. ನ್ಯಾಯಾಲಯವು ಸಂವಿಧಾನದ ಚೌಕಟ್ಟಿನೊಳಗೆ ತೀರ್ಪು ನೀಡಲಿದೆ. ಉಡುಪಿ ಪ್ರಕರಣದ ಬಗ್ಗೆ ನಮ್ಮಲ್ಲಿ ಸಂಪೂರ್ಣ ದಾಖಲೆಗಳಿವೆ. ನ್ಯಾಯಾಲಯಕ್ಕೆ ಹೋದ ವಿದ್ಯಾರ್ಥಿನಿಯರು ಈ ಹಿಂದೆ ಹಿಜಾಬ್ ಧರಿಸುತ್ತಿರಲಿಲ್ಲ. ಈ ಬಗ್ಗೆ ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಿದ್ದೇವೆ. ದೂರು ಕೊಟ್ಟ ವಿದ್ಯಾರ್ಥಿನಿಯೇ ಹಿಜಾಬ್ ಧರಿಸುತ್ತಿರಲಿಲ್ಲ. ವಿದ್ಯಾರ್ಥಿ ಸಂಘದ ಪ್ರತಿಜ್ಞಾವಿಧಿ ಸ್ವೀಕರಿಸಿದ ಫೋಟೊ ನಮ್ಮ ಬಳಿ ಇದೆ. ತೀರ್ಪು ಸರ್ಕಾರದ ಪರವಾಗಿ ಬರುವ ವಿಶ್ವಾಸವಿದೆ ಎಂದರು.

ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಮಾತನಾಡಿ, ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಸಮವಸ್ತ್ರ ಸಂಹಿತೆ ಜಾರಿಯಲ್ಲಿದೆ. ಸಮಾನತೆ, ವಸ್ತ್ರ ಸಂಹಿತೆಯನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಕಾಲೇಜುಗಳಲ್ಲಿ ಒಬ್ಬೊಬ್ಬರಿಗೆ ಒಂದೊಂದು ನಿಯಮ ಇರುವುದಿಲ್ಲ. ಸರ್ಕಾರದ ಆದೇಶ ಪಾಲಿಸಿದರೆ ಯಾವುದೇ ಗೊಂದಲ ಇರುವುದಿಲ್ಲ. ಸಮವಸ್ತ್ರ ಸಂಘರ್ಷದ ಹಿಂದೆ ರಾಜಕೀಯ ಲಾಭದ ಅಗತ್ಯವಿಲ್ಲ ಎಂದು ಹೇಳಿದರು.

ಉಡುಪಿ ಸರ್ಕಾರಿ ಪಿಯು ಕಾಲೇಜಿನ 2009-10ನೇ ಸಾಲಿನ ವಾರ್ಷಿಕ ಸಂಚಿಕೆಯಲ್ಲಿರುವ ಫೋಟೊಗಳನ್ನು ಗಮನಿಸಿದಾಗ ಎಲ್ಲರೂ ಸಮಾನ ರೀತಿಯಲ್ಲಿ ವಸ್ತ್ರಸಂಹಿತೆ ನಿಯಮ ಪಾಲಿಸಿದ್ದು ಗಮನಕ್ಕೆ ಬರುತ್ತದೆ. ಶಾಲಾ ಅಸೆಂಬ್ಲಿ ಫೋಟೋಗಳು ಟಿವಿ9ಗೆ ಲಭ್ಯವಾಗಿವೆ. ಈ ಹಿಂದೆ ಹಿಜಾಬ್‌ಗೆ ಅವಕಾಶ ನೀಡಿರಲಿಲ್ಲ ಎಂದು ಕೆಲವರು, ಅವಕಾಶ ಇತ್ತು ಎಂದು ಕೆಲವರು ಹೇಳುತ್ತಿದ್ದಾರೆ.

ಕುಶಾಲನಗರ ಹಾಸ್ಟೆಲ್​ನಲ್ಲಿ ಮಾರಾಮಾರಿ
ಕೊಡಗು ಜಿಲ್ಲೆ ಕುಶಾಲನಗರ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಹಾಸ್ಟೆಲ್​ನಲ್ಲಿ ಮಾರಾಮಾರಿ ನಡೆದಿದೆ. ಕೇಸರಿ ಶಾಲು ಧರಿಸಿದ್ದ ವಿದ್ಯಾರ್ಥಿ ಮೇಲೆ ಕೆಲವರು ಹಲ್ಲೆ ನಡೆಸಿದ್ದ ಆರೋಪ ಕೇಳಿಬಂದಿತ್ತು. ಇದನ್ನು ಗಮನಿಸಿ ಹಾಸ್ಟೆಲ್​ಗೆ ನುಗ್ಗಿ ಸ್ಥಳೀಯರು ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಹಾಸ್ಟೆಲ್​ನಲ್ಲಿ ಹಲ್ಲೆ ನಡೆಸಿದ್ದಾರೆ. ಸ್ಥಳಕ್ಕೆ ಕುಶಾಲನಗರ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲಿಸಿದರು.

ಹಾವೇರಿ: ಯುವಕನ ಮೇಲೆ ಹಲ್ಲೆ
ಒಂದು ಕೋಮಿನ ಯುವಕರ ಗುಂಪು ಮತ್ತೊಂದು ಕೋಮಿನ ಯುವಕನ ಮೇಲೆ ಹಲ್ಲೆ ನಡೆಸಿದ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ಪಟ್ಟಣದ ಬಸ್​ನಿಲ್ದಾಣದ ಬಳಿ ಮಂಗಳವಾರ ನಡೆದಿದೆ. ಬಸ್ ನಿಲ್ದಾಣದಿಂದ ಯುವಕನನ್ನ ಹಿಡಿದುಕೊಂಡು ಹೊಡೆಯುತ್ತಾ ಪೊಲೀಸ್ ಠಾಣೆ ಬಳಿಗೆ ಗುಂಪು ಬರುತ್ತಿತ್ತು. ಯುವಕನನ್ನು ಬಿಡಿಸಿಕೊಳ್ಳಲು ಹೋದ ಪೊಲೀಸ್ ಸಿಬ್ಬಂದಿಯನ್ನು ತಳ್ಳಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದರು. ಈ ಸಂಬಂಧ ಪೊಲೀಸ್ ಕಾನ್​ಸ್ಟೆಬಲ್ ಪರಮೇಶ್ವರಪ್ಪ ದೂರು ದಾಖಲಿಸಿದ್ದಾರೆ. ಕಾಲೇಜು ಮುಗಿಸಿ ಊರಿಗೆ ತೆರಳಲು ಬಸ್ ನಿಲ್ದಾಣಕ್ಕೆ ಬಂದಿದ್ದ ಯುವಕನ ಮೇಲೆ ಗುಂಪು ಹಲ್ಲೆ ನಡೆಸಿತ್ತು.

ಇದನ್ನೂ ಓದಿ: ಹಿಜಾಬ್ ವಿವಾದ: ಗದಗ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಮತ್ತು ವಿದ್ಯಾರ್ಥಿನಿಯರ ನಡುವೆ ವಾಗ್ವಾದ
ಇದನ್ನೂ ಓದಿ: ಹಿಜಾಬ್ ವಿವಾದಕ್ಕೆ ರಾಜಕಾರಣವೇ ಮುಖ್ಯ ಕಾರಣ ಎಂದ ಕಾಂಗ್ರೆಸ್​ನ ಸಲೀಂ ಅಹ್ಮದ್, ಬಿಜೆಪಿ ಮಾಧುಸ್ವಾಮಿ