ಉಡುಪಿ ಹಿಜಾಬ್ ವಿವಾದದ ಹಿಂದೆ ವಿದೇಶಿ ಕುಮ್ಮಕ್ಕು: ಉಡುಪಿ ಶಾಸಕ ರಘುಪತಿ ಭಟ್ ಆರೋಪ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 09, 2022 | 3:54 PM

MLA Raghupati Bhat: ಈ ಪ್ರಕರಣ ಮೊದಲು ಪಾಕಿಸ್ತಾನಕ್ಕೆ ತಲುಪಿದೆ. ಇದನ್ನು ದೊಡ್ಡ ವಿವಾದವಾಗಿ ಬೆಳೆಸಬೇಕು ಎಂದು ರಾಷ್ಟ್ರಮಟ್ಟದಲ್ಲಿ ಷಡ್ಯಂತ್ರ ನಡೆಸಲಾಯಿತು ಎಂದು ಶಾಸಕ ರಘುಪತಿ ಭಟ್ ಆರೋಪಿಸಿದರು.

ಉಡುಪಿ ಹಿಜಾಬ್ ವಿವಾದದ ಹಿಂದೆ ವಿದೇಶಿ ಕುಮ್ಮಕ್ಕು: ಉಡುಪಿ ಶಾಸಕ ರಘುಪತಿ ಭಟ್ ಆರೋಪ
ಉಡುಪಿ ಶಾಸಕ ರಘುಪತಿ ಭಟ್
Follow us on

ಉಡುಪಿ: ನಗರದಲ್ಲಿ ಹಿಜಾಬ್​ ವಿವಾದ ದೊಡ್ಡಮಟ್ಟದಲ್ಲಿ ಬೆಳೆಯಲು ವಿದೇಶಿ ಕುಮ್ಮಕ್ಕು ಕಾರಣ ಎಂದು ಶಾಸಕ ರಘುಪತಿ ಭಟ್ (MLA Raghupati Bhat) ಗಂಭೀರ ಅರೋಪ ಮಾಡಿದ್ದಾರೆ. ಮಾಧ್ಯಮಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಈ ಪ್ರಕರಣ ಮೊದಲು ಪಾಕಿಸ್ತಾನಕ್ಕೆ ತಲುಪಿದೆ. ಇದನ್ನು ದೊಡ್ಡ ವಿವಾದವಾಗಿ ಬೆಳೆಸಬೇಕು ಎಂದು ರಾಷ್ಟ್ರಮಟ್ಟದಲ್ಲಿ ಷಡ್ಯಂತ್ರ ನಡೆಸಲಾಯಿತು. ಈ ಬಗ್ಗೆ ಸರ್ಕಾರ ಗುಪ್ತವಾಗಿ ತನಿಖೆ ಆರಂಭ ಮಾಡಿದೆ‌ ಎಂದು ತಿಳಿಸಿದರು. ಈ ವಿವಾದದ ಹಿನ್ನೆಲೆಯಲ್ಲಿ ಎಸ್​ಡಿಪಿಐ, ಸಿಎಫ್ಐ, ಪಿಎಫ್ಐ ಇರುವುದು ದೃಢಪಟ್ಟಿದೆ. ಇವರು ಮಣಿಪಾಲದ ಗುಪ್ತಸ್ಥಳದಲ್ಲಿ 12 ಹುಡುಗಿಯರಿಗೆ ತರಬೇತಿ ಕೊಟ್ಟಿದ್ದಾರೆ. ಗುಪ್ತಸ್ಥಳದಲ್ಲಿ ಅವರನ್ನು ಇರಿಸಿ ಪ್ರಚೋದನೆ ಮಾಡಿದ್ದಾರೆ ಎಂದು ಅವರು ಹೇಳಿದರು.

ಮುಸ್ಲಿಂ ಹೆಣ್ಣುಮಕ್ಕಳನ್ನು ಒಂದೇ ಸ್ಥಳದಲ್ಲಿ ಇರಿಸಿ ವ್ಯವಸ್ಥಿತವಾಗಿ ತರಬೇತಿ ಕೊಟ್ಟಿದ್ದಾರೆ. ಸತತ ಪ್ರವಚನಗಳ ಮೂಲಕ ಅವರಿಗೆ ಹಿಂದೂ ಹೆಣ್ಣುಮಕ್ಕಳನ್ನು ನೋಡಿದಾಗ ಆಕ್ರೋಶ ಬರುವ ಮನಃಸ್ಥಿತಿ ರೂಪಿಸಿದ್ದಾರೆ. ಇಂಥದ್ದೊಂದು ತರಬೇತಿಯಲ್ಲಿ ಪಾಲ್ಗೊಂಡಿದ್ದ ಹುಡುಗಿಯೇ ಮಾಹಿತಿ ನೀಡಿದ್ದಾಳೆ ಎಂದರು. ಈ ತರಬೇತಿಯ ನಂತರವೇ ಉಡುಪಿಯಲ್ಲಿ ಹಿಜಾಬ್ ಹೋರಾಟ ಆರಂಭವಾಯಿತು ಈ ಬಗ್ಗೆ ಪೊಲೀಸರು ತನಿಖೆ ನಡೆಸಲಿದ್ದಾರೆ. ಹಿಜಾಬ್ ಬೇಕೆಂದು ಹೋರಾಡುತ್ತಿರುವವರು ಯಾರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಅಂಶದಿಂದ ಹಿಡಿದು ಹಣಕಾಸು ವ್ಯವಹಾರ, ಮೊಬೈಲ್ ಸಂಪರ್ಕಗಳ ಮಾಹಿತಿಯನ್ನು ತನಿಖೆ ವೇಳೆ ಪರಿಶೀಲಿಸಲಾಗುವುದು ಎಂದರು.

ಆರಂಭದಲ್ಲಿ ಹಿಜಾಬ್ ಕುರಿತು ಬೇಡಿಕೆ ಕೇಳಿಬಂದಾಗ ನಾವು ಒಪ್ಪಿರಲಿಲ್ಲ. ವಿವಾದ ಇಂದು ಈ ಹಂತಕ್ಕೆ ತಲುಪಿದೆ. ದೇಶ-ವಿದೇಶಗಳ ಮಾಧ್ಯಮಗಳು ಉಡುಪಿ ಹೆಸರು ಹೇಳುತ್ತಿವೆ. ವಾಸ್ತವ ಎಂದರೆ ಕಾಲೇಜಿನಲ್ಲಿ ಎಲ್ಲ ವಿದ್ಯಾರ್ಥಿಗಳನ್ನು ಒಂದೇ ಎಂದು ಪರಿಗಣಿಸಲಾಗುತ್ತದೆ. ಯಾರನ್ನೂ ಅವರ ಧರ್ಮದ ಹಿನ್ನೆಲೆಯಿಂದ ಅಳೆಯುವುದಿಲ್ಲ. ಇಂದು ನಾವು ವಿವಾದ ಆರಂಭಿಸಿದ್ದು ಯಾರು ಎಂಬುದನ್ನು ಮೊದಲು ಪರಿಶೀಲಿಸಬೇಕಿದೆ ಎಂದರು.

ಉಡುಪಿಯಲ್ಲಿ ಹಿಜಾಬ್​ಗಾಗಿ ಮೊದಲು 12 ವಿದ್ಯಾರ್ಥಿಗಳು ಮನವಿ ಮಾಡಿದ್ದರು. ಕಾಲೇಜು ಸಿಬ್ಬಂದಿ ಇವರ ಜೊತೆಗೆ ಮಾತುಕತೆ ನಡೆಸಿತ್ತು. ಅನಂತರ 6 ಮಂದಿ ಹಿಜಾಬ್ ಹೋರಾಟದಿಂದ ಹಿಂದೆ ಸರಿದಿದ್ದರು. ಆದರೆ ಈ ನಡುವೆ ಉಡುಪಿಯಲ್ಲಿ ನಡೆಯುತ್ತಿರುವ ಹಿಜಾಬ್ ಹೋರಾಟವನ್ನು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ ಅಷ್ಟು ಬೇಗ ಈ ವಿಚಾರ ಅಲ್ಲಿಗೆ ಹೋಗಿದ್ದು ಹೇಗೆ ಎಂದು ಅವರು ಪ್ರಶ್ನಿಸಿದರು.

ನನಗೆ ನ್ಯಾಯಾಲಯದ ಮೇಲೆ ನಂಬಿಕೆಯಿದೆ. ಹೈಕೋರ್ಟ್ ನೀಡುವ ತೀರ್ಪಿನ ಪ್ರಕಾರವೇ ಸರ್ಕಾರ ಮುಂದಿನ ಹೆಜ್ಜೆ ಇರಿಸಲಿದೆ. ಮೇಲ್ಮನವಿ ಸಲ್ಲಿಸುವ ಅವಕಾಶಗಳೂ ಮುಕ್ತವಾಗಿವೆ ಎಂದು ವಿವರಿಸಿದರು.

ಇದನ್ನೂ ಓದಿ: ಉಡುಪಿಯಲ್ಲಿ ಹಿಜಾಬ್ ವಿವಾದ ನಿಯಂತ್ರಣಕ್ಕೆ ಶತಪ್ರಯತ್ನ ಮಾಡಿದ್ದೆ: ಶಾಸಕ ರಘುಪತಿ ಭಟ್

ಇದನ್ನೂ ಓದಿ: ಮಕ್ಕಳು ಕಾಲೇಜಿಗೆ ಹೋಗಲು ಏನು ಧರಿಸಬೇಕು ಏನು ಧರಿಸಬಾರದು ಅಂತ ಹೇಳಲು ರಘುಪತಿ ಭಟ್ ಯಾರು? ಸಿದ್ದರಾಮಯ್ಯ

Published On - 3:53 pm, Wed, 9 February 22