ಚೈತ್ರಾ ಕುಂದಾಪುರ ವಂಚನೆಗೆ ಸಿಲುಕಿದ ಗೋವಿಂದ ಬಾಬು ಪೂಜಾರಿ ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ

ಪುಡಿಗಾಸು ಇಲ್ಲದೆ ಮುಂಬೈ ಮಹಾನಗರ ಹೋಗಿದ್ದ ಗೋವಿಂದ ಬಾಬು ಪೂಜಾರಿ ಸತತ ಪರಿಶ್ರಮದಿಂದ ನೂರಾರು ಕೋಟಿಯ ವ್ಯವಹಾರ ನಡೆಸುವ ಉದ್ಯಮಿಯಾಗಿ ಬೆಳೆದು ನಿಂತಿದ್ದಾರೆ. ಸದ್ಯ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಪಡೆಯಲು ಹೋಗಿ ಚೈತ್ರಾ ಕುಂದಾಪುರ ಅವರಿಗೆ ಹಣ ಕೊಟ್ಟು ಇತ್ತ ಟಿಕೆಟ್ ಸಿಗದೆ ಅತ್ತ ಕೊಟ್ಟ ಹಣವೂ ವಾಪಸ್ ಸಿಗದೆ ವಂಚನೆಗೆ ಸಿಲುಕಿದ್ದಾರೆ. ಈ ಬಗ್ಗೆ ಗೋವಿಂದ ಅವರು ದೂರು ನೀಡಿದ್ದು, ಚೈತ್ರ ಕುಂದಾಪುರ ಮತ್ತಿತರರು ಬಂಧಿತರಾಗಿದ್ದಾರೆ.

ಚೈತ್ರಾ ಕುಂದಾಪುರ ವಂಚನೆಗೆ ಸಿಲುಕಿದ ಗೋವಿಂದ ಬಾಬು ಪೂಜಾರಿ ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ
ಗೋವಿಂದ ಬಾಬು ಪೂಜಾರಿ
Follow us
| Updated By: Rakesh Nayak Manchi

Updated on: Sep 14, 2023 | 1:29 PM

ಉಡುಪಿ, ಸೆ.14: ಪುಡಿಗಾಸು ಇಲ್ಲದೆ ಮುಂಬೈ ಮಹಾನಗರ ಹೋಗಿದ್ದ ಗೋವಿಂದ ಬಾಬು ಪೂಜಾರಿ (Govinda Babu Poojary) ಸತತ ಪರಿಶ್ರಮದಿಂದ ನೂರಾರು ಕೋಟಿಯ ವ್ಯವಹಾರ ನಡೆಸುವ ಉದ್ಯಮಿಯಾಗಿ ಬೆಳೆದು ನಿಂತಿದ್ದಾರೆ. ಸದ್ಯ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಪಡೆಯಲು ಹೋಗಿ ಚೈತ್ರಾ ಕುಂದಾಪುರ ಅವರಿಗೆ ಹಣ ಕೊಟ್ಟು ಇತ್ತ ಟಿಕೆಟ್ ಸಿಗದೆ ಅತ್ತ ಕೊಟ್ಟ ಹಣವೂ ವಾಪಸ್ ಸಿಗದೆ ವಂಚನೆಗೆ ಸಿಲುಕಿದ್ದಾರೆ. ಈ ಬಗ್ಗೆ ಗೋವಿಂದ ಅವರು ದೂರು ನೀಡಿದ್ದು, ಚೈತ್ರಾ ಕುಂದಾಪುರ (Chaitra Kundapur) ಮತ್ತಿತರರು ಬಂಧಿತರಾಗಿದ್ದಾರೆ. ಹಾಗಿದ್ದರೆ, ಗೋವಿಂದ ಬಾಬು ಪೂಜಾರಿ ಯಾರು? ಅವರ ಹಿನ್ನೆಲೆ ಏನು? ಇಲ್ಲಿದೆ ಮಾಹಿತಿ.

ಕುಂದಾಪುರದ ಬಿಜೂರಿನ ಕೃಷಿ ಕುಟುಂಬವೊಂದರಲ್ಲಿ 1977 ರಲ್ಲಿ ಜನಿಸಿದ ಗೋವಿಂದ ಬಾಬು ಪೂಜಾರಿ, ಬಾಲ್ಯದಿಂದಲೇ ಏಳು ಬೀಳುಗಳನ್ನು ಕಂಡವರು. ತನ್ನ 13ನೇ ವಯಸ್ಸಿನಲ್ಲಿಯೇ ಮುಂಬೈಯಲ್ಲಿ ಕೆಲಸಕ್ಕೆ ಸೇರಿದ ಅವರು, ಹೋಟೆಲ್ ಒಂದರಲ್ಲಿ ಚಹಾ ಮಾಡುವ ಮೂಲಕ ವೃತ್ತಿ ಬದುಕು ಆರಂಭಸಿದರು.

ನಂತರದ ವರ್ಷಗಳಲ್ಲಿ ಬಿಎಸ್‌ಟಿ ಕ್ಯಾಂಟೀನ್‌ನಲ್ಲಿ ಅಡುಗೆ ಸಹಾಯಕನಾಗಿ ಸೇರಿಕೊಂಡರು. ನಂತರ ಇರ್ಲಾದ ಸನ್ನಿ ಬಾರ್​ನಲ್ಲಿ ಬಾಣಸಿಗನಾಗಿ ಮುಂದೆ ಸ್ವ ಉದ್ಯೋಗದ ಕನಸಿನೊಂದಿಗೆ ಜನರಲ್ ಸ್ಟೋರ್ ಒಂದನ್ನು ತೆರೆದರು. ಆದರೆ ಇದು ಕೈ ಹಿಡಿಯಲಿಲ್ಲ. ಇದರಿಂದ ಸಾಕಷ್ಟು ನಷ್ಟ ಅನುಭವಿಸಿದರು.

ಇದನ್ನೂ ಓದಿ: ಚೈತ್ರಾ ಕುಂದಾಪುರ ವಂಚನೆ ಕೆಲಸ ಕೇವಲ ಮಂಗಳೂರು-ಉಡುಪಿಗೆ ಸೀಮಿತವಾಗಿರದೆ ರಾಜ್ಯಾದ್ಯಂತ ವ್ಯಾಪಿಸಿದಂತಿದೆ!

ಮತ್ತೆ ಮುಂಬೈನ ಪಂಚತಾರಾ ಹೋಟೆಲ್‌ನಲ್ಲಿ ಕ್ಲೀನಿಂಗ್ ವಿಭಾಗದಲ್ಲಿ ಕೆಲಸಕ್ಕೆ ಸೇರಿಕೊಂಡ ಗೋವಿಂದ ಅವರು 2007 ರಲ್ಲಿ ಏಳು ಮಂದಿ ನೌಕರರೊಂದಿಗೆ ಷೆಫ್ ಟಾಕ್ ಕೇಟರಿಂಗ್ ಸರ್ವಿಸಸ್ ಸಂಸ್ಥೆಯನ್ನು ಕಟ್ಟಿದರು. ಮುಂದೆ ಇದು ಷೆಫ್ ಟಾಕ್ ಫುಡ್ ಆ್ಯಂಡ್ ಹಾಸ್ಪಿಟಾಲಿಟಿ ಸರ್ವಿಸಸ್ ಆಗಿ ಬದಲಾಯಿತು.

ಪ್ರಸ್ತುತ ಪೂಜಾರಿ ಅವರು ತಮ್ಮ ಸಂಸ್ಥೆಯ ಮೂಲಕ 5,000 ಜನರಿಗೆ ಉದ್ಯೋಗ ನೀಡಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಜಾರ್ಖಂಡ್, ಗುಜರಾತ್‌ನಲ್ಲಿ ಸಂಸ್ಥೆ, ಅತ್ಯಾಧುನಿಕ ಕಿಚನ್‌ಗಳನ್ನು ಹೊಂದಿದ್ದು, ವಿವಿಧ ಕಾರ್ಪೊರೇಟ್ ಕಂಪನಿಗಳಿಗೆ ಕೇಟರಿಂಗ್ ಸೇವೆ ಒದಗಿಸುತ್ತಿದ್ದಾರೆ.

ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮವು ಮತ್ಸ್ಯಬಂಧನ ಕಂಪನಿಯ ಸಹಯೋಗದಲ್ಲಿ ರಾಣಿ ಮೀನು ಮತ್ತು ಬೂತಾಯಿ ಮೀನುಗಳಿಂದ ಚಿಪ್​ಗಳನ್ನು ತಯಾರಿಸುವ ಕಂಪನಿಯನ್ನು ಆರಂಭಿಸಿದರು. ಇದರೊಂದಿಗೆ ಪ್ರಗ್ನ್ಯಾ ಸಾಗರ್ ಹೋಟೆಲ್ ಮತ್ತು ರೆಸಾರ್ಟ್, ಶೆಫ್ ಟಾಕ್ ನ್ಯೂಟ್ರಿಫುಡ್ ಸಂಸ್ಥಗೆಳನ್ನು ಸ್ಥಾಪಿಸಿ ಇದರಿಂದ ವರ್ಷಕ್ಕೆ ನೂರಾರು ಕೋಟಿ ವಹಿವಾಟು ನಡೆಸುವ ಉದ್ಯಮಿಯಾಗಿ ಬೆಳೆದು ನಿಂತಿದ್ದಾರೆ. ಸದ್ಯ ಶ್ರೀವರಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ಮೂಲಕ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ರಾಜಕೀಯ ರಂಗಕ್ಕೂ ಲಗ್ಗೆ ಇಡಲು ಮುಂದಾದ ಗೋವಿಂದ ಅವರಿಗೆ ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಚೈತ್ರಾ ಕುಂದಾಪುರ ಅವರು ಹಂತಹಂತವಾಗಿ ಒಟ್ಟು ಐದೂವರೆ ಕೋಟಿ ರೂಪಾಯಿ ಹಣ ಪಡೆದು ವಂಚಿಸಿದ್ದಾರೆ.

ವಂಚನೆ ಬಗ್ಗೆ ಅನುಮಾನ ಉಂಟಾದ ಹಿನ್ನೆಲೆ ಹಣವನ್ನು ವಾಪಸ್ ಕೇಳಿದಾಗ ತಾನು ಮೋಸ ಹೋಗಿರುವುದು ತಿಳಿದುಬಂದಿದೆ. ತಿಂಗಳಿಂದ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಆಗುತ್ತಿದ್ದರೂ, ಗೋವಿಂದ ಬಾಬು ಪೂಜಾರಿ ದೂರು ನೀಡಿರಲಿಲ್ಲ. ಈ ನಡುವೆ ಕೋಟಿ ಕೋಟಿ ನುಂಗಿದ್ದು ಹೇಗೆ ಎಂಬ ಸವಿವರವಾದ ಕಥೆಯನ್ನೊಳಗೊಂಡ ಅನಾಮಿಕ ಪತ್ರವೊಂದು ವಾಟ್ಸಾಪ್, ಫೇಸ್ ಬುಕ್​ನಲ್ಲಿ ಹರಿದಾಡುತ್ತಿತ್ತು. ಎಲ್ಲಾ ದಾಖಲೆಗಳನ್ನು ಸಂಗ್ರಹ ಮಾಡುತ್ತಿದ್ದ ಗೋವಿಂದ ಬಾಬು ಪೂಜಾರಿ ಬೆಂಗಳೂರಿನಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕರಣ ದಾಖಲಾಗುತ್ತಿದ್ದಂತೆ ಚೈತ್ರ ಅವರ ಇಡೀ ಗ್ಯಾಂಗ್ ರಾಜ್ಯದ ಅಲ್ಲಲ್ಲಿ ತಲೆಮರಿಸಿಕೊಂಡಿತ್ತು. ಅದಾಗ್ಯೂ, ಸಿಸಿಬಿ ಪೊಲೀಸರು ಚೈತ್ರಾರ ಆಪ್ತನೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಉಡುಪಿಯ ಡಯಾನ ಸಮೀಪ ಅಪಾರ್ಟ್ಮೆಂಟ್ ಒಂದರಲ್ಲಿ ಅವಿತು ಕುಳಿತಿರುವ ತಿಳಿದುಬಂದಿದೆ. ಉಡುಪಿ ಕೃಷ್ಣಮಠಕ್ಕೆ ಕರೆಸಿದ ಪೊಲೀಸರು ಚೈತ್ರಾಳನ್ನು ಬಂಧಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ