ಇರಾನ್-ಇಸ್ರೇಲ್ ಯುದ್ಧದ ಎಫೆಕ್ಟ್: ಎಲ್‌ಪಿಜಿ ಬೆನ್ನಲ್ಲೇ ಈಗ ಡಾಂಬರು ಅಭಾವ, ಸ್ಥಗಿತಗೊಂಡ ರಸ್ತೆ ಕಾಮಗಾರಿಗಳು!

ಗಲ್ಫ್ ಯುದ್ಧದ ಹಿನ್ನೆಲೆಯಲ್ಲಿ ಕಾರವಾರ ಬಂದರಿಗೆ ಕಚ್ಚಾ ಡಾಂಬರು ಬಿಟುಮಿನ್ ಪೂರೈಕೆ ಸ್ಥಗಿತಗೊಂಡಿದೆ. ಟನ್ ಡಾಂಬರಿಗೆ 20 ಸಾವಿರ ರೂ. ದರ ಏರಿಕೆಯಾಗಿದ್ದರೂ ಸಿಗದಂತಾಗಿದ್ದು, ರಾಜ್ಯದಾದ್ಯಂತ ರಸ್ತೆ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಎಲ್‌ಪಿಜಿ ಅಭಾವದ ಬೆನ್ನಲ್ಲೇ ಈಗ ಬಿಟುಮಿನ್ ಕೊರತೆ ಗುತ್ತಿಗೆದಾರರನ್ನು ಹೈರಾಣಾಗಿಸಿದೆ.

ಇರಾನ್-ಇಸ್ರೇಲ್ ಯುದ್ಧದ ಎಫೆಕ್ಟ್: ಎಲ್‌ಪಿಜಿ ಬೆನ್ನಲ್ಲೇ ಈಗ ಡಾಂಬರು ಅಭಾವ, ಸ್ಥಗಿತಗೊಂಡ ರಸ್ತೆ ಕಾಮಗಾರಿಗಳು!
ಸಾಂದರ್ಭಿಕ ಚಿತ್ರ
Image Credit source: Bharat Petroleum
Edited By:

Updated on: Apr 04, 2026 | 6:54 AM

ಕಾರವಾರ, ಏಪ್ರಿಲ್ 4: ಗಲ್ಫ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಸತತ ಯುದ್ಧದ ಭೀತಿಯು ಇದೀಗ ಭಾರತದ (India) ಆರ್ಥಿಕತೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಯ ಮೇಲೆ ಬಾರೀ ಹೊಡೆತ ನೀಡುತ್ತಿದೆ. ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದಿಂದಾಗಿ ಹಾರ್ಮುಜ್ ಜಲಸಂಧಿ ಬಂದ್ ಆಗಿರುವ ಹಿನ್ನೆಲೆಯಲ್ಲಿ, ದೇಶದಲ್ಲಿ ಎಲ್‌ಪಿಜಿ ಗ್ಯಾಸ್ ಮಾತ್ರವಲ್ಲದೆ ಕಚ್ಚಾ ಡಾಂಬರು ಬಿಟುಮಿನ್ (Bitumen) ಪೂರೈಕೆಯಲ್ಲೂ ತೀವ್ರ ವ್ಯತ್ಯಯ ಉಂಟಾಗಿದೆ. ಇದರೊಂದಿಗೆ, ಎಲ್​​ಪಿಜಿ ಹಾಗೂ ಆಟೋ ಗ್ಯಾಸ್ ಕೊರತೆ ಜತೆಗೆ ಮತ್ತೊಂದು ಸಂಕಷ್ಟ ಎದುರಾದಂತಾಗಿದೆ.

ಬಿಕೋ ಎನ್ನುತ್ತಿದೆ ಕಾರವಾರ ಬಂದರು

ಇರಾಕ್ ಮತ್ತು ಯುಎಇ (UAE) ರಾಷ್ಟ್ರಗಳಿಂದ ಕಾರವಾರ ವಾಣಿಜ್ಯ ಬಂದರಿಗೆ ಬರುತ್ತಿದ್ದ ಕಚ್ಚಾ ಡಾಂಬರು ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ. ಯುದ್ಧ ಆರಂಭವಾದ ಬಳಿಕ ಮಾರ್ಚ್ 13ರಂದು ಕೇವಲ ಒಂದು ಹಡಗು ಮಾತ್ರ ಬಂದಿದ್ದು, ಅಂದಿನಿಂದ ಇಂದಿನವರೆಗೆ ಯಾವುದೇ ಸರಕು ಬಂದಿಲ್ಲ. ಇದರಿಂದಾಗಿ ಕಾರವಾರ ಬಂದರು ಚಟುವಟಿಕೆಗಳಿಲ್ಲದೆ ಬಿಕೋ ಎನ್ನುತ್ತಿದೆ.

ಗಗನಕ್ಕೇರಿದ ಡಾಂಬರು ದರ: ಈಗಷ್ಟಿದೆ ಬಿಟುಮಿನ್ ದರ?

ಪೂರೈಕೆ ಕುಂಠಿತವಾಗಿರುವ ಹಿನ್ನೆಲೆಯಲ್ಲಿ ಬಿಟುಮಿನ್ ದರ ಗಗನಕ್ಕೇರಿದೆ. ಈ ಹಿಂದೆ ಪ್ರತಿ ಟನ್‌ಗೆ 40 ರಿಂದ 45 ಸಾವಿರ ರೂಪಾಯಿ ಇದ್ದ ದರವು ಈಗ 60 ರಿಂದ 65 ಸಾವಿರ ರೂಪಾಯಿಗೆ ಏರಿಕೆಯಾಗಿದೆ. ಗುತ್ತಿಗೆದಾರರು 20 ಸಾವಿರ ರೂಪಾಯಿ ಹೆಚ್ಚುವರಿ ಹಣ ನೀಡಲು ಸಿದ್ಧರಿದ್ದರೂ ಡಾಂಬರು ಸಿಗುತ್ತಿಲ್ಲ. ಇದು ರಸ್ತೆ ಕಾಮಗಾರಿಗಳ ಮೇಲೆ ನೇರ ಪರಿಣಾಮ ಬೀರಿದೆ.

ಸ್ತಬ್ಧಗೊಂಡ ರಸ್ತೆ ಕಾಮಗಾರಿ

ಸಾಮಾನ್ಯವಾಗಿ ಡಿಸೆಂಬರ್‌ನಿಂದ ಏಪ್ರಿಲ್ ತಿಂಗಳವರೆಗೆ ಮಳೆಯ ಅಬ್ಬರ ಕಡಿಮೆ ಇರುವುದರಿಂದ ದೊಡ್ಡ ಮಟ್ಟದ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ. ಆದರೆ ಈಗ ಡಾಂಬರು ಅಭಾವದಿಂದಾಗಿ ಗುತ್ತಿಗೆ ಕಂಪನಿಗಳು ಕೆಲಸ ಮಾಡಲಾಗದೆ ಕೈಚೆಲ್ಲಿ ಕುಳಿತಿವೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಆಟೋ ಗ್ಯಾಸ್ ಹಾಹಾಕಾರ: ಕಿಲೋಮೀಟರ್‌ಗಟ್ಟಲೆ ರಿಕ್ಷಾ ಸಾಲು! ಸಚಿವ ಮುನಿಯಪ್ಪ ಮನೆಗೆ ಮುತ್ತಿಗೆ ಎಚ್ಚರಿಕೆ

ಅತ್ತ ಎಲ್‌ಪಿಜಿ ಸಿಗದೆ ಹೋಟೆಲ್ ಉದ್ಯಮಿಗಳು ಸೌದೆ ಒಲೆ ಮತ್ತು ಇಂಡಕ್ಷನ್ ಮೊರೆ ಹೋಗುತ್ತಿದ್ದರೆ, ಗ್ಯಾಸ್ ಸಿಗದೆ ಆಟೋ ಚಾಲಕರೂ ಕಂಗಾಲಾಗಿದ್ದಾರೆ. ಇದೀಗ ಕಚ್ಚಾ ಡಾಂಬರು ಬಾರದೆ ರಸ್ತೆ ಕಾಮಗಾರಿಗಳು ಸ್ಥಗಿತಗೊಳ್ಳುತ್ತಿವೆ. ಅತ್ತ ಅಭಿವೃದ್ಧಿ ಕೆಲಸಗಳು ಕುಂಠಿತವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us