ಕಾಳಿ ಹುಲಿ ಸಂರಕ್ಷಿತಾರಣ್ಯದಲ್ಲಿ ವನ್ಯಜೀವಿ ಬೇಟೆ: ಗೋವಾ ಸರ್ಕಾರಿ ನೌಕರನ ಬಂಧನ, ನಾಲ್ವರು ಪರಾರಿ

ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ಕಾಳಿ ಹುಲಿ ಸಂರಕ್ಷಿತಾರಣ್ಯದಲ್ಲಿ ಅಕ್ರಮವಾಗಿ ವನ್ಯಜೀವಿ ಬೇಟೆಯಾಡುತ್ತಿದ್ದ ಗೋವಾ ಸರ್ಕಾರದ ಸಾರಿಗೆ ಸಂಸ್ಥೆಯ ಉದ್ಯೋಗಿಯೊಬ್ಬನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಈ ಜಾಲದಲ್ಲಿದ್ದ ಗೋವಾದ ಮೂವರು ಹಾಗೂ ಸ್ಥಳೀಯ ಬಂದೂಕು ಮಾಲೀಕ ಸೇರಿದಂತೆ ನಾಲ್ವರು ಆರೋಪಿಗಳು ಸದ್ಯ ತಲೆಮರೆಸಿಕೊಂಡಿದ್ದು, ಅರಣ್ಯ ಸಿಬ್ಬಂದಿ ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.

ಕಾಳಿ ಹುಲಿ ಸಂರಕ್ಷಿತಾರಣ್ಯದಲ್ಲಿ ವನ್ಯಜೀವಿ ಬೇಟೆ: ಗೋವಾ ಸರ್ಕಾರಿ ನೌಕರನ ಬಂಧನ, ನಾಲ್ವರು ಪರಾರಿ
ಬಂಧಿತ ಆರೋಪಿ ದಿಗಂಬರ್ ಗಾವ್ಡೆ
Image Credit source: The New Indian Express

Updated on: Jun 16, 2026 | 11:52 AM

ಬೆಂಗಳೂರು, ಜೂನ್ 16: ಕರ್ನಾಟಕ-ಗೋವಾ ಗಡಿಭಾಗದ ಕಾಳಿ ಹುಲಿ ಸಂರಕ್ಷಿತಾರಣ್ಯದ (Kali Tiger Reserve) ವ್ಯಾಪ್ತಿಯಲ್ಲಿ ಅಕ್ರಮವಾಗಿ ವನ್ಯಜೀವಿಗಳನ್ನು ಬೇಟೆಯಾಡುತ್ತಿದ್ದ ಜಾಲವನ್ನು ಭೇದಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಗೋವಾ ಸರ್ಕಾರದ ಸಾರಿಗೆ ಸಂಸ್ಥೆಯ ನೌಕರನೊಬ್ಬನನ್ನು ಬಂಧಿಸಿದ್ದಾರೆ. ಜೊಯಿಡಾ ತಾಲೂಕಿನ ಡಿಗ್ಗಿ ಸಮೀಪದ ಬೊಂಡೇಲಿ ಗ್ರಾಮದಲ್ಲಿ ಭಾನುವಾರ ಈ ಕಾರ್ಯಾಚರಣೆ ನಡೆದಿದೆ. ಬೇಟೆಗೆ ಸಹಕರಿಸಿದ ಸ್ಥಳೀಯ ಶೂಟರ್ ಹಾಗೂ ಗೋವಾದ ಮತ್ತಿಬ್ಬರು ಭದ್ರತಾ ಏಜೆನ್ಸಿ ಸಿಬ್ಬಂದಿ ಸೇರಿದಂತೆ ನಾಲ್ವರು ಆರೋಪಿಗಳು ಸದ್ಯ ತಲೆಮರೆಸಿಕೊಂಡಿದ್ದಾರೆ.

ಮುಖ್ಯಾಂಶಗಳು

  • ಕಾಳಿ ಅರಣ್ಯದಲ್ಲಿ ವನ್ಯಜೀವಿ ಬೇಟೆಯಾಡುತ್ತಿದ್ದ ಜಾಲ ಭೇದಿಸಿದ ಅರಣ್ಯ ಇಲಾಖೆ.
  • ಗೋವಾ ಸಾರಿಗೆ ಸಂಸ್ಥೆಯ ಮೆಕ್ಯಾನಿಕ್ ಬಂಧನ.
  • ಮರಬೆಕ್ಕು ಹಾಗೂ ಇತರ ಮಾಂಸ ವಶ.

ಬಂಧಿತ ಆರೋಪಿಯನ್ನು ಗೋವಾ ಸರ್ಕಾರಿ ಸ್ವಾಮ್ಯದ ಕದಂಬ ಸಾರಿಗೆ ಸಂಸ್ಥೆಯಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿರುವ ಜಯೇಂದ್ರ ದಿಗಂಬರ್ ಗಾವ್ಡೆ (45) ಎಂದು ಗುರುತಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಸಿಬ್ಬಂದಿ ಈತನ ಹೆಡೆಮುರಿ ಕಟ್ಟಿದ್ದಾರೆ. ಇದೇ ವೇಳೆ ಕುಂಬಾರವಾಡ ವಲಯದ ಅರಣ್ಯ ಸಿಬ್ಬಂದಿ, ಬೇಟೆಗೆ ಬಳಸಲಾದ ಬಂದೂಕಿನ ಮಾಲೀಕ ಎನ್ನಲಾದ ಸುಭಾಷ್ ಮಿರಾಶಿ ಎಂಬಾತನ ಮನೆ ಮೇಲೆ ದಾಳಿ ನಡೆಸಿದ್ದು, ಆತನೂ ಸೇರಿದಂತೆ ಉಳಿದ ಮೂವರು ಆರೋಪಿಗಳು ತಪ್ಪಿಸಿಕೊಂಡಿದ್ದಾರೆ.

ನಿಷೇಧಿತ ವನ್ಯಜೀವಿಗಳ ಮಾಂಸ, ಬಂದೂಕು ವಶ

ದಾಳಿಯ ವೇಳೆ ಅಧಿಕಾರಿಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಶೆಡ್ಯೂಲ್-II ರ ಅಡಿಯಲ್ಲಿ ಸಂರಕ್ಷಿತ ಪ್ರಭೇದವಾಗಿರುವ ಮರಬೆಕ್ಕಿನ (Palm Civet) ಕಳೇಬರವನ್ನು ವಶಪಡಿಸಿಕೊಂಡಿದ್ದಾರೆ. ಇದನ್ನು ಬಂದೂಕಿನಿಂದ ಶೂಟ್ ಮಾಡಿ ಕೊಲ್ಲಲಾಗಿತ್ತು. ಇದರೊಂದಿಗೆ ಉಡ ಹಾಗೂ ಕಸ್ತೂರಿ ಜಿಂಕೆ ಎಂದು ಶಂಕಿಸಲಾದ ಮತ್ತೊಂದು ಪ್ರಾಣಿಯ ಮಾಂಸವನ್ನು ವಶಕ್ಕೆ ಪಡೆಯಲಾಗಿದ್ದು, ನಿಖರ ಮಾಹಿತಿ ಪತ್ತೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಬೇಟೆಗೆ ಬಳಸಿದ್ದ ಬಂದೂಕನ್ನು ಸಹ ಜಪ್ತಿ ಮಾಡಲಾಗಿದೆ ಎಂದು ‘ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್’ ವರದಿ ಮಾಡಿದೆ.

ಗೋವಾ ಗಡಿಗೆ ತೀರಾ ಹತ್ತಿರದಲ್ಲಿರುವ ಕೇವಲ 60 ಮನೆಗಳಿರುವ ಬೊಂಡೇಲಿ ಗ್ರಾಮವು ಅಕ್ರಮ ಬೇಟೆಗಾರರ ತಾಣವಾಗುತ್ತಿದೆ ಎಂದು ವನ್ಯಜೀವಿ ಕಾರ್ಯಕರ್ತರು ಕಳವಳ ವ್ಯಕ್ತಪಡಿಸಿರುವುದಾಗಿಯೂ ವರದಿ ಉಲ್ಲೇಖಿಸಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಪೈಕಿ ಮತ್ತೊಬ್ಬ ಗೋವಾ ಸರ್ಕಾರಿ ನೌಕರನೂ ಸೇರಿದ್ದಾನೆ ಎನ್ನಲಾಗಿದೆ. ಗೋವಾದ ಪ್ರಭಾವಿ ವ್ಯಕ್ತಿಗಳಿಂದ ಈ ಪ್ರಕರಣವನ್ನು ಹಳ್ಳ ಹಿಡಿಸಲು ಅರಣ್ಯ ಇಲಾಖೆಯ ಮೇಲೆ ಒತ್ತಡ ಹೇರಲಾಗುತ್ತಿದೆ ಎಂಬ ಆರೋಪಗಳೂ ಕೇಳಿಬಂದಿದ್ದು, ಗಡಿ ದಾಟಿ ಬಂದು ಸ್ಥಳೀಯರ ಸಹಾಯದಿಂದ ಜಿಂಕೆ, ಉಡಗಳನ್ನು ಬೇಟೆಯಾಡುವ ಅಂತರರಾಜ್ಯ ಜಾಲದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us