Sign In

By signing in or creating an account, you agree with Associated Broadcasting Company's Terms & Conditions and Privacy Policy.

Tulsi Gowda Death: ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ಇನ್ನಿಲ್ಲ

Tulsi Gowda Passes Away: ವೃಕ್ಷಮಾತೆ ಎಂದೇ ಪ್ರಸಿದ್ಧರಾಗಿರುವ ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ನಿಧನರಾಗಿದ್ದಾರೆ. ಕಳೆದ 14 ವರ್ಷಕ್ಕೂ ಹೆಚ್ಚು ಕಾಲ ಗಿಡ ನೆಟ್ಟು ಬೆಳೆಸುವ ಕಾಯಕದಲ್ಲಿ ತೊಡಗಿದ್ದರು. ಹೀಗಾಗಿ ಇವರ ಪರಿಸರ ಮೇಲಿನ ಪ್ರೀತಿಯನ್ನು ಮೆಚ್ಚಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಆದ್ರೆ, ಈಗ ಅವರು ನಮ್ಮನ್ನು ಅಗಲಿದ್ದಾರೆ.

Tulsi Gowda Death: ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ಇನ್ನಿಲ್ಲ
ತುಳಸಿ ಗೌಡ
Follow us
ರಮೇಶ್ ಬಿ. ಜವಳಗೇರಾ
|

Updated on:Dec 16, 2024 | 8:09 PM

ಕಾರವಾರ, (ಡಿಸೆಂಬರ್ 16): ಚಪ್ಪಲಿ ಇಲ್ಲದೇ ಬರಿಗಾಲು, ಬುಡಕಟ್ಟು ವೇಷ ಭೂಷಣದಲ್ಲಿ ರಾಷ್ಟ್ರಪತಿ, ಪ್ರಧಾನ ಮಂತ್ರಿ ಸೇರಿದಂತೆ ಗಣ್ಯಾತಿ ಗಣ್ಯರ ಎದುರು ನಡೆದುಕೊಂಡು ಹೋಗಿ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದ ವೃಕ್ಷ ಮಾತೆ ತುಳಸಿ ಗೌಡ ನಿಧನರಾಗಿದ್ದಾರೆ.  ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಾಲಕ್ಕಿ ಸಮುದಾಯದ ತುಳಸಿಗೌಡ (86) ಇಂದು (ಡಿಸೆಂಬರ್ 16) ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಅಂಕೋಲ ತಾಲ್ಲೂಕಿನ ಹೊನ್ನಳ್ಳಿ ಗ್ರಾಮದ ತುಳಸಿ ಗೌಡ ಅವರು ವೃಕ್ಷ ಮಾತೆ ಎಂದೇ ಜನಜನಿತ. ಹಾಲಕ್ಕಿ ಸಮುದಾಯದ ಈ ಮಹಿಳೆ, ಲಕ್ಷಾಂತರ ಮರಗಳನ್ನು ಸಾಕಿ ಬೆಳೆಸಿದ ಮಹಾ ತಾಯಿ. ಪರಿಸರವಾದಿ ತುಳಸಿ ಗೌಡ ಅವರು ಈವರೆಗೂ ಒಂದು ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು, ಬೃಹತ್ ಕಾಡನ್ನೇ ಬೆಳೆಸಿದ್ದಾರೆ. ಕಳೆದ 60 ವರ್ಷಗಳಿಂದ ಅವರು ಪರಿಸರ ಸಂರಕ್ಷಣೆಯ ಕಾರ್ಯ ಹಾಗೂ ಪರಿಸರ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಹೀಗಾಗಿ ಇವರ ಪರಿಸರ ಪ್ರೇಮವನ್ನು ಮೆಚ್ಚಿ 2021ರಲ್ಲಿ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.

1944ರಲ್ಲಿ ಹೊನ್ನಳ್ಳಿ ಗ್ರಾಮದಲ್ಲಿ ನಾರಾಯಣ ಹಾಗೂ ನೀಲಿ ದಂಪತಿಗೆ ಜನಸಿದ ಕೂಸಿಗೆ ತುಳಸಿ ಎಂಬ ಸಸ್ಯದ ಹೆಸರಿಟ್ಟರು. ಬಳಿಕ ಬಾಲಕಿಯಾಗಿದ್ದ ಕಾಲದಿಂದ ಹಿಡಿದು ಇಂದಿನವರೆಗೂ ತುಳಸಿ ಗೌಡ ಅವರು ಮರ ಹಾಗೂ ಕಾಡಿನಲ್ಲೇ ಬೆಳೆದು ಬಂದವರು. 12ನೇ ವಯಸ್ಸಿನಲ್ಲಿ ತುಳಸಿ ಗೌಡ ಅವರಿಗೆ ಮರಗಳ ಜೊತೆಗಿನ ಬಾಂಧವ್ಯ ಆರಂಭವಾಯ್ತು. ಬಳಿಕ ಮರಗಳ ಜೊತೆಯಲ್ಲೇ ನಿತ್ಯ ಒಡನಾಟ.. ಹೀಗಾಗಿ. ಇವರನ್ನು ‘ಅರಣ್ಯದ ಎನ್‌ಸೈಕ್ಲೋಪೀಡಿಯಾ’ ಎನ್ನುತ್ತಾರೆ. ಗಿಡ, ಮರ, ಬಳ್ಳಿ, ಅವುಗಳ ಜಾತಿ, ಯಾವ ಮರ ಹೇಗೆ ಬೆಳೆಯುತ್ತೆ, ಯಾವ ಗಿಡಕ್ಕೆ ಎಷ್ಟು ನೀರು ಹಾಕಬೇಕು, ಯಾವಾಗ ನೀರುಣಿಸಬೇಕು ಹೀಗೆ ತುಳಸಿ ಗೌಡ ಅವರಿಗೆ ತಿಳಿಯದ ಸಂಗತಿಗಳೇ ಇಲ್ಲ.

ಯಾವ ಜಾತಿಯ ಗಿಡವನ್ನು ಯಾವಾಗ ನೆಡಬೇಕು? ಎಷ್ಟು ಪ್ರಮಾಣದಲ್ಲಿ ನೀರುಣಿಸಬೇಕು..? ಯಾವ ರೀತಿಯ ಗೊಬ್ಬರವನ್ನು ಯಾವ ಗಿಡಕ್ಕೆ ಹಾಕಬೇಕು? ಯಾವ ಮರ ಯಾವ ಕಾಲದಲ್ಲಿ ಹಣ್ಣು ಹಾಗೂ ಹೂ ಬಿಡುತ್ತದೆ ಎಂಬುದೆಲ್ಲದರ ಮಾಹಿತಿಯೂ ತುಳಸಿ ಗೌಡ ಅವರಿಗೆ ಇದೆ. 300ಕ್ಕೂ ಹೆಚ್ಚು ಪ್ರಭೇದದ ಮರಗಳ ಮಾಹಿತಿ ಬಲ್ಲವರಾಗಿದ್ದರು.

2021ರಲ್ಲಿ ತುಳಸಿ ಗೌಡ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಬಳಿಕ ಕಳೆದ ವರ್ಷ ಅಂದರೆ 2023ರಲ್ಲಿ ತುಳಸಿ ಗೌಡ ಅವರಿಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:30 pm, Mon, 16 December 24