ಶಿವರಾಮ್ ಹೆಬ್ಬಾರ್​ ಸಮಸ್ಯೆ ಏನೆಂದು ಗೊತ್ತಾಗುತ್ತಿಲ್ಲ, ಬಾಯಿ ಬಿಟ್ಟು ಹೇಳಬೇಕಲ್ವಾ: ರೂಪಾಲಿ ನಾಯ್ಕ್

ಬಿಜೆಪಿ ನಾಯಕರ ಮೇಲೆ ಮುನಿಸಿಕೊಂಡಿರುವ ಶಾಸಕ ಶಿವರಾಮ್ ಹೆಬ್ಬಾರ್ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಲ್ಲದೆ, ಮತ್ತೆ ಕಾಂಗ್ರೆಸ್ ಸೇರ್ಪಡೆಗೆ ತುದಿಗಾಲಿನಲ್ಲಿ ನಿಂತಿದ್ದಾರೆ. ಆದರೆ, ಕೈ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಮಾತನಾಡಿದ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ್, ಶಿವರಾಮ್ ಹೆಬ್ಬಾರ್ ಅವರಿಗೆ ಆಗಿರುವ ಸಮಸ್ಯೆ ಏನು ಅಂತಾ ಬಾಯಿಬಿಟ್ಟು ಹೇಳಬೇಕಲ್ವಾ ಎಂದು ಪ್ರಶ್ನಿಸಿದರು.

ಶಿವರಾಮ್ ಹೆಬ್ಬಾರ್​ ಸಮಸ್ಯೆ ಏನೆಂದು ಗೊತ್ತಾಗುತ್ತಿಲ್ಲ, ಬಾಯಿ ಬಿಟ್ಟು ಹೇಳಬೇಕಲ್ವಾ: ರೂಪಾಲಿ ನಾಯ್ಕ್
ಸಮಸ್ಯೆ ಏನು ಅಂತ ಶಿವರಾಮ್ ಹೆಬ್ಬಾರ್​ ಬಾಯಿ ಬಿಟ್ಟು ಹೇಳಬೇಕಲ್ವಾ ಎಂದ ರೂಪಾಲಿ ನಾಯ್ಕ್
Edited By: Rakesh Nayak Manchi

Updated on: Mar 31, 2024 | 5:11 PM

ಕಾರವಾರ, ಮಾ.31: ಶಿವರಾಮ್ ಹೆಬ್ಬಾರ್ (Shivaram Hebbar) ಅವರಿಗೆ ಆಗಿರುವ ಸಮಸ್ಯೆ ಏನು ಅಂತಾ ಬಾಯಿಬಿಟ್ಟು ಹೇಳಬೇಕಲ್ವಾ ಎಂದು ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ್ (Roopali Naik) ಹೇಳಿದ್ದಾರೆ. ಬಿಜೆಪಿ ನಾಯಕರ ಮೇಲೆ ಮುನಿಸಿಕೊಂಡಿರುವ ಶಾಸಕ ಶಿವರಾಮ್ ಹೆಬ್ಬಾರ್ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಲ್ಲದೆ, ಮತ್ತೆ ಕಾಂಗ್ರೆಸ್ ಸೇರ್ಪಡೆಗೆ ತುದಿಗಾಲಿನಲ್ಲಿ ನಿಂತಿದ್ದಾರೆ.

ಈ ಬಗ್ಗೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಮಾತನಾಡಿದ ರೂಪಾಲಿ ನಾಯ್ಕ್, ನಾನು ಉಪಾಧ್ಯಕ್ಷೆಯಾದ ಬಳಿಕ ಹೆಬ್ಬಾರ್ ಭೇಟಿ ಆಗಿ ಮಾತನಾಡಿದ್ದೆ. ಹೆಬ್ಬಾರ್ ಯಾವ ತೀರ್ಮಾನ ತೆಗೆದುಕೊಳ್ಳದೆ ಬಿಜೆಪಿಯಲ್ಲೇ ಇದ್ದಾರೆ. ಅವರಿಗೆ ಯಾವ ಮಟ್ಟದಲ್ಲಿ ಏನು ಸಮಸ್ಯೆ ಆಗಿದೆ ಎಂದು ನಮಗೆ ಯಾರಿಗೂ ಅರ್ಥವಾಗುತ್ತಿಲ್ಲ. ಏನೇ ಸಮಸ್ಯೆ ಇದ್ದರೂ ಅದನ್ನು ಹೇಳಬೇಕು. ಹೇಳದಿದ್ದರೆ ನಾವೇನು ಮಾಡಲು ಸಾಧ್ಯ ಎಂದು ಕೇಳಿದ್ದಾರೆ.

ಇದನ್ನೂ ಓದಿ: ಸಮಾಧಾನವಾಗಿಲ್ಲ ಅಂದರೆ ಉತ್ತರ ಕನ್ನಡ ಅಭ್ಯರ್ಥಿ ಬದಲಿಸ್ತಾರಾ?: ಬಿಜೆಪಿ ನಾಯಕರಿಗೆ ಶಿವರಾಮ್ ಹೆಬ್ಬಾರ್ ಪ್ರಶ್ನೆ

ಶಿವರಾಮ್ ಹೆಬ್ಬಾರ್ ಅವರಿಗೆ ಏನೇ ಸಮಸ್ಯೆ ಇದ್ದರೂ ಪಕ್ಷದ ನಾಯಕರೊಂದಿಗೆ ಮಾತನಾಡಿ ಬಗೆಹರಿಸಿಕೊಂಡು ಪಕ್ಷದ ಪರ ಕೆಲಸ ಮಾಡಲಿ. ಕಾರವಾರ-ಅಂಕೋಲದಲ್ಲಿ ಆದಷ್ಟು ಸಮಸ್ಯೆ ಎಲ್ಲೂ ಆಗಿಲ್ಲ. ಇಂದು ಮಾತನಾಡುತ್ತಿರುವವರೇ ನನ್ನ ಸೋಲಿಸಲು ಕೆಲಸ ಮಾಡಿದ್ದರು. ಚುನಾವಣೆಯಲ್ಲಿ ಸೋತಿದ್ದೇನೆ, ಆದರೆ ಅದನ್ನೇ ತಲೆಯಲ್ಲಿ ಇಟ್ಟುಕೊಂಡಿಲ್ಲ. ನಮ್ಮ ಪಕ್ಷದ ನಾಯಕರ ಆದೇಶಕ್ಕೆ ಬೆಲೆ ಕೊಟ್ಟು ಕೆಲಸ ಮಾಡುತ್ತಿದ್ದೇನೆ ಎಂದರು.

ಉತ್ತರ ಕನ್ನಡ ಕ್ಷೇತ್ರದ ಹಾಲಿ ಸಂಸದ ಅನಂತಕುಮಾರ್ ಹೆಗಡೆ ಜೊತೆ ಇದುವರೆಗೂ ನಾನು ಮಾತನಾಡಿಲ್ಲ. ಹೆಗಡೆ ಅವರು ನಮ್ಮ ಅಭ್ಯರ್ಥಿ ಪರ ಕೆಲಸ ಮಾಡುವ ವಿಶ್ವಾಸವಿದೆ ಎಂದು ಹೇಳಿದರು. ಈ ಹಿಂದೆ ಪಕ್ಷದ ಸಭೆಯಲ್ಲಿ ಮಾತನಾಡಿದ್ದ ರೂಪಾಲಿ, ನನ್ನ ಸೋಲಿಗೆ ಹೆಗಡೆ ಅವರೇ ಕಾರಣ. ಅವರು ನನ್ನ ಪರ ಪ್ರಚಾರ ಮಾಡುತ್ತಿದ್ದರೆ ನಾನು ಗೆಲ್ಲುತ್ತಿದ್ದ ಎಂದು ಹೆಗಡೆ ಮುಂದೆಯೇ ಹೇಳಿಕೆ ನೀಡಿದ್ದರು. ಸದ್ಯ, ಟಿಕೆಟ್ ಕೈತಪ್ಪಿದ ನಂತರ ಅನಂತಕುಮಾರ್ ಹೆಗಡೆ ಅವರು ಯಾರ ಸಂಪರ್ಕಕ್ಕೂ ಸಿಗದೆ ಮನೆಯಲ್ಲೇ ಕುಳಿತುಕೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Vinayak Badiger
Follow Us