
ಕಾರವಾರ, ಮೇ 21: ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ (Dubare Elephant Camp Tragedy) ಮೊನ್ನೆ ಅಂದರೆ ಮೇ 18ರಂದು ನಡೆದಿದ್ದ ಘೋರ ದುರಂತದಲ್ಲಿ ಮಹಿಳೆ ಬಲಿ ಬೆನ್ನಲ್ಲೇ ಇತ್ತ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಪನ್ಸೋಲಿ ಆನೆ ಬಿಡಾರದಲ್ಲಿ (Phansoli Elephant Camp) ಮುನ್ನೆಚ್ಚರಿಕಾ ಕ್ರಮವಾಗಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಮುಂದಿನ ಆದೇಶದವರೆಗೆ ಸಾರ್ವಜನಿಕರಿಗೆ ಆನೆ ವೀಕ್ಷಣೆಗೆ ನಿರ್ಬಂಧ ಹೇರಿ ಅರಣ್ಯ ಇಲಾಖೆ ಗುರುವಾರ ಆದೇಶ ಹೊರಡಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಪನ್ಸೋಲಿ ಆನೆ ಬಿಡಾರ ಪ್ರವಾಸಿಗರ ಮೆಚ್ಚಿನ ತಾಣವಾಗಿದೆ. ಇಲ್ಲಿ ಒಟ್ಟು ಐದು ಆನೆಗಳಿವೆ. ನಿತ್ಯ ಬೆಳಗ್ಗೆ ಮತ್ತು ಸಾಯಂಕಾಲ ಆನೆ ವೀಕ್ಷಣೆಗೆ ಅವಕಾಶವಿತ್ತು. ಆನೆ ಚಿಕಿತ್ಸಾ ಕೇಂದ್ರ ಮತ್ತು ತರಬೇತಿ ಕೇಂದ್ರವಾಗಿ ಅರಣ್ಯ ಇಲಾಖೆ ಮಾರ್ಪಡಿಸಿದೆ. ದುಬಾರೆ ಆನೆ ಬಿಡಾರದಲ್ಲಿ ದುರ್ಘಟನೆ ಬೆನ್ನಲ್ಲೇ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.
ಕೊಡಗು ಜಿಲ್ಲೆಯ ದುಬಾರೆ ಸಾಕಾನೆ ಶಿಬಿರದಲ್ಲಿ ನೂರಾರು ಪ್ರವಾಸಿಗರ ಎದುರಲ್ಲೇ ಮೇ 18ರಂದು ಘೋರ ದುರಂತ ನಡೆದು ಹೋಗಿತ್ತು. ಮದವೇರಿ ಬಂದಿದ್ದ ಕಂಜನ್ ಆನೆ ನೇರವಾಗಿ ಮಾರ್ತಾಂಡ ಆನೆ ಮೇಲೆ ದಾಳಿ ಮಾಡಿತ್ತು. ತಕ್ಷಣ ಮಾರ್ತಾಂಡ ಪ್ರವಾಸಿಗರ ಮೇಲೆಯೇ ಉರುಳಿ ಬಿದ್ದಿತ್ತು. ಆನೆ ಅಡಿ ಸಿಲುಕಿ ಚೆನ್ನೈ ಮೂಲದ ತುಳಸಿ ಅಲ್ಲೇ ಪ್ರಾಣ ಬಿಟ್ಟರೆ, ಪತಿ ಜೋಯೆಲ್ ಹಾಗೂ ಪುತ್ರಿ ಬಚಾವ್ ಆಗಿದ್ದರು.
ಇದನ್ನೂ ಓದಿ: ದುಬಾರೆ ದುರಂತದ ಬೆನ್ನಲ್ಲೇ ಅಲರ್ಟ್: ಅರಣ್ಯ ಇಲಾಖೆ ಕೈಗೊಂಡ ಕ್ರಮಗಳೇನು?
ಈ ಘೋರ ಕಾಳಗದಲ್ಲಿ ಮಾರ್ತಾಂಡ ಆನೆಗೂ ಗಂಭೀರ ಗಾಯಗಳಾಗಿದ್ದರು. ದಾಳಿ ಬಳಿಕ ನೀರಿನಿಂದ ಮೇಲೆ ಬಂದಿದ್ದ ಮಾರ್ತಾಂಡ 100 ಮೀಟರ್ವರೆಗೂ ನಡೆದುಕೊಂಡು ಹೋಗಿ, ನದಿ ತೀರದಲ್ಲೇ ನಿಂತಿತ್ತು. ಬಳಿಕ ಕುಸಿದು ಬಿದ್ದು ಉಸಿರು ನಿಲ್ಲಿಸಿತ್ತು. ಕಂಜನ್ ತನ್ನ ಚೂಪಾದ ಉದ್ದನೆಯ ಕೋರೆಯಿಂದ ಮಾರ್ತಾಂಡನ ಬೆನ್ನು, ಹೊಟ್ಟೆ, ಕಿವಿಯ ಕೆಳಭಾಗ ಎದೆ ಹೀಗೆ ಬಹಳಷ್ಟು ಕಡೆಗಳಲ್ಲಿ ತಿವಿದಿತ್ತು. ಇದರಿಂದ ದೇಹದ ಆಳಕ್ಕೆ ಗಂಭೀರ ಗಾಯಗಳಾಗಿದ್ದವು. ಚಿಕಿತ್ಸೆಗೆ ಸ್ಪಂದಿಸಿದ ಮಾರ್ತಾಂಡ ಉಸಿರು ನಿಲ್ಲಿಸಿದ್ದಾನೆ.
ವನ್ಯಜೀವಿ ದಾಳಿ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತು ಅರಣ್ಯ ಇಲಾಖೆ ತೆರೆದ ಜೀಪ್ ಸಫಾರಿಗೆ ಸಂಪೂರ್ಣ ನಿಷೇಧ ಹೇರಿದೆ. ಇನ್ಮುಂದೆ ಪ್ರವಾಸಿಗರಿಗೆ ಕೇವಲ ಬಸ್ ಸಫಾರಿಗೆ ಮಾತ್ರ ಅವಕಾಶ ನೀಡಲಾಗುವುದು. ಇತ್ತೀಚೆಗೆ ನಡೆದ ಎರಡು ಚಿರತೆ ದಾಳಿ ಪ್ರಕರಣಗಳು ಮತ್ತು ಕಳೆದ ನವೆಂಬರ್ ತಿಂಗಳಿನಲ್ಲಿ ಬಂಡೀಪುರ-ನಾಗರಹೊಳೆ ಭಾಗದಲ್ಲಿ ನಡೆದ ಮೂರು ಭೀಕರ ಹುಲಿ ದಾಳಿಗಳ ಬೆನ್ನಲ್ಲೇ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿದೆ.
ಇದ್ನೂ ಓದಿ: ಪ್ರವಾಸಿಗರಿಗೆ ಗುಡ್ನ್ಯೂಸ್: ಉತ್ತರ ಕನ್ನಡ ಜಿಲ್ಲೆಯಲ್ಲಿ ಜಲಸಾಹಸ ಕ್ರೀಡೆಗಳ ನಿಷೇಧ ತೆರವು
ನಾಗಮಲೆ ಬಳಿ 10 ವರ್ಷದ ಬಾಲಕನನ್ನು ಚಿರತೆ ಬಲಿ ಪಡೆದ ಘಟನೆ ಈ ನಿರ್ಧಾರಕ್ಕೆ ಪ್ರಮುಖ ಕಾರಣವಾಗಿದೆ. ಅರಣ್ಯ ಇಲಾಖೆ ಹೊಸ ಮಾರ್ಗಸೂಚಿ ಪ್ರಕಾರ, ಸದ್ಯ ಚಾಲ್ತಿಯಲ್ಲಿರುವ ಓಪನ್ ಜೀಪ್ಗಳಲ್ಲಿ ಪ್ರವಾಸ ಕೈಗೊಳ್ಳುವುದಿದ್ದರೆ ಕಡ್ಡಾಯವಾಗಿ ಒಡೆಯದ ಗ್ಲಾಸ್ ಅಥವಾ ಕಬ್ಬಿಣದ ಮೆಶ್ ಅಳವಡಿಸಲು ಸೂಚಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.