
ಕಾರವಾರ, ಜೂನ್ 29: ಮೂರಿನ್ ಕಟ್ಟೆ ಧ್ವಂಸ ವಿವಾದ (Moorin Katte Controversy) ಇತ್ತೀಚೆಗೆ ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆ ಬಳಿಕ ಉತ್ತರ ಕನ್ನಡದ (Uttara kannada) ಭಟ್ಕಳದಲ್ಲಿ ಇಂದಿಗೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಹೀಗಿರುವಾಗ ಮುಂಬರುವ ಹಬ್ಬಗಳ ಸಂದರ್ಭದಲ್ಲಿ ಭಟ್ಕಳದಲ್ಲಿ ಕೋಮು ಗಲಭೆ ನಡೆಯುವ ಸಾಧ್ಯತೆ ಕುರಿತಾಗಿ ಗುಪ್ತಚರ ಇಲಾಖೆ (ಇಂಟೆಲಿಜೆನ್ಸ್) ಸುಳಿವು ನೀಡಿದೆ. ಗುಪ್ತಚರ ಇಲಾಖೆ ಸುಳಿವು ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾಡಳಿತ ಹಾಗೂ ಭಟ್ಕಳ ಶಹರ ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ಗುಪ್ತಚರ ಇಲಾಖೆ ವರದಿ ಮತ್ತು ಪೊಲೀಸರು ನೀಡಿದ ಮಾಹಿತಿ ಆಧಾರದ ಮೇಲೆ ಭಟ್ಕಳ ತಹಶೀಲ್ದಾರ್ ಪ್ರವೀಣ್ ಕರಾಂಡೆ ಶಹರದ ಒಟ್ಟು 60 ರೌಡಿ ಶೀಟರ್ಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಇದರಲ್ಲಿ 40 ಮುಸ್ಲಿಂ ಹಾಗೂ 20 ಹಿಂದೂ ಸಮುದಾಯಕ್ಕೆ ಸೇರಿದ ರೌಡಿ ಶೀಟರ್ಗಳು ಸೇರಿದ್ದಾರೆ.
ಇದನ್ನೂ ಓದಿ: ಮೂರಿನ್ ಕಟ್ಟೆ ವಿವಾದ: ಬಕ್ರಿದ್ ಹಬ್ಬದ ದಿನ ಮದ್ಯ ಮಾರಾಟ ನಿಷೇಧ; ಸಂಘರ್ಷಕ್ಕೆ ಕಾರಣವಾದ ವಿಡಿಯೋ ವೈರಲ್
ಗಣೇಶ ಹಬ್ಬ, ಈದ್ ಮಿಲಾದ್ ಸೇರಿದಂತೆ ಯಾವುದೇ ಹಬ್ಬಗಳ ಸಂದರ್ಭದಲ್ಲಿ ಯಾವುದೇ ರೀತಿಯ ಕೋಮು ಗಲಭೆ ಅಥವಾ ಅಶಾಂತಿ ಸೃಷ್ಟಿಸುವ ಕೃತ್ಯಗಳಲ್ಲಿ ಭಾಗಿಯಾಗುವುದಿಲ್ಲ ಮತ್ತು ಸಮಾಜದಲ್ಲಿ ದುರ್ವರ್ತನೆ ತೋರುವುದಿಲ್ಲ ಎಂದು ತಲಾ 50 ಸಾವಿರ ರೂಪಾಯಿಗಳ ಮುಚ್ಚಳಿಕೆ ಬಾಂಡ್ ಬರೆದುಕೊಡುವಂತೆ ನೋಟಿಸ್ನಲ್ಲಿ ಸೂಚನೆ ನೀಡಿದ್ದಾರೆ.
ಇನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಸೆಕ್ಷನ್ 129(ಇ) ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದೆ. ಆದರೆ, ತಹಶೀಲ್ದಾರ್ ನೀಡಿರುವ ಈ ನೋಟಿಸ್ಗೆ ಕೆಲವರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ, ಶಾಂತಿ ಸುವ್ಯವಸ್ಥೆ ಕಾಪಾಡಲು ನಿಮ್ಮಿಂದ ಏಕೆ ಬಾಂಡ್ ಬರೆಸಿಕೊಳ್ಳಬಾರದು? ಎಂಬ ಕುರಿತು ವಿಚಾರಣೆ ನಡೆಸಲು ತಹಶೀಲ್ದಾರ್ ನಿರ್ಧರಿಸಿದ್ದಾರೆ. ಆಕ್ಷೇಪಣೆ ಸಲ್ಲಿಸಿರುವ ಹಾಗೂ ನೋಟಿಸ್ ನೀಡಿದವರಿಗೆ ಇಂದು ಕೋರ್ಟ್ಗೆ ಖುದ್ದಾಗಿ ಹಾಜರಾಗುವಂತೆ ತಹಶೀಲ್ದಾರ್ ಖಡಕ್ ಸೂಚನೆ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.