ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: ನಾನು ಯಾವುದೇ ಸಾಕ್ಷ್ಯ ನಾಶ ಮಾಡಿಲ್ಲ; ಬಸನಗೌಡ ದದ್ದಲ್

| Updated By: ವಿವೇಕ ಬಿರಾದಾರ

Updated on: Jun 08, 2024 | 2:00 PM

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹು ಕೋಟಿ ರೂ. ಹಗರಣ ಪ್ರಕರಣವನ್ನು ಎಸ್​ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಪ್ರಕರಣದ ತನಿಖೆಯಲ್ಲಿ ಸ್ಫೋಟಕ ವಿಚಾರವೊಂದು ಬಯಲಾಗಿದ್ದು, ನಿಗಮದ ಅಧ್ಯಕ್ಷರು ಹಗರಣದ ಸಾಕ್ಷ್ಯಗಳನ್ನು ನಾಶ ಮಾಡಿದ್ದಾರೆ ಆರೋಪ ಕೇಳಿಬಂದಿದೆ. ಇದಕ್ಕೆ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್​ ಪ್ರತಿಕ್ರಿಯಿಸಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: ನಾನು ಯಾವುದೇ ಸಾಕ್ಷ್ಯ ನಾಶ ಮಾಡಿಲ್ಲ; ಬಸನಗೌಡ ದದ್ದಲ್
ಶಾಸಕ ಬಸನಗೌಡ ದದ್ದಲ್​
Follow us on

ಬೆಂಗಳೂರು, ಜೂನ್​ 08: ವಾಲ್ಮೀಕಿ ಅಭಿವೃದ್ಧಿ ನಿಗಮದ (Valmiki Scheduled Tribes Development Corporation) ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಯಾವುದೇ ಸಾಕ್ಷ್ಯ ನಾಶ ಮಾಡಿಲ್ಲ ಎಂದು ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ (Basangouda Daddal) ಹೇಳಿದರು. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದು ಕಂಪ್ಯೂಟರ್ ಯುಗ, ಎಲ್ಲವೂ ಕೂಡ ಅದರಲ್ಲೇ ಇರುತ್ತದೆ. ಹೀಗಿರುವಾಗ ನಾನು ಹೇಗೆ ಸಾಕ್ಷಿ ನಾಶಪಡಿಸುವುದಕ್ಕೆ ಆಗುತ್ತೆ. ಪ್ರತಿಪಕ್ಷದವರು ನನ್ನ ರಾಜೀನಾಮೆ ಕೇಳುತ್ತಿದ್ದಾರೆ, ಅದು ಅವರ ಧರ್ಮ. ತನಿಖೆಗೆ ನಾನು ಸಹಕಾರ ಕೊಡುತ್ತೇನೆ, ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಎಂದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮದಲ್ಲಿ ನನ್ನ ಪಾತ್ರವಿಲ್ಲ. ಮುಖ್ಯಮಂತ್ರಿಗಳು ರಾಜೀನಾಮೆ ಕೇಳಿದರೆ ನಾನು ಕೊಡಲು ಸಿದ್ಧನಿದ್ದೇನೆ. ರಿವ್ಯೂವ್​ ಸಭೆ ಮಾಡುವ ಅಧಿಕಾರ ಅಧಿಕಾರಿಗಳಿಗೆ ಇರುತ್ತದೆ. ನೀತಿ ಸಂಹಿತೆ ಇದ್ದಿದ್ದರಿಂದ ನಾನು ಯಾವುದೇ ಸಭೆ ಮಾಡಿಲ್ಲ. ಅಂತಾರಾಜ್ಯಗಳಿಗೆ ಹಣ ವರ್ಗಾವಣೆ ಆಗಿರುವ ಬಗ್ಗೆ ಮಾಹಿತಿ ಇದೆ. ಆ ಹಣವನ್ನು ವಾಪಸ್ ತರುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಇದು ಪರಿಶಿಷ್ಟ ಪಂಗಡಗಳಿಗೆ ಸೇರಿದ ಹಣ. ನೂರಕ್ಕೆ ನೂರರಷ್ಟು ಹಣವನ್ನು ತಂದೇ ತರುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: ವಾಲ್ಮೀಕಿ ನಿಗಮದ ಹಗರಣಕ್ಕೆ ತಿರುವು: ಮತ್ತೊಬ್ಬ ಸಚಿವರ ಹೆಸರು ತಳುಕು

ಸುದ್ದಿಗೋಷ್ಠಿ ಬಳಿಕ ಬಸನಗೌಡ ದದ್ದಲ್ ವಿಕಾಸಸೌಧದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿಯಾದರು. ಕೆಲವು ಹೊತ್ತು ಮಾತುಕತೆ ನಡೆಸಿ ಹೊರ ನಡೆದರು.

ತನಿಖೆ ನಡೆಯುತ್ತಿರುವಾಗ ಅನೇಕ ವಿಚಾರ ಬರುತ್ತದೆ: ಪರಮೇಶ್ವರ್​

ಸಚಿವ ಶರಣಪ್ರಕಾಶ್ ಪಾಟೀಲ್ ಹೆಸರು ತಳುಕು ಹಾಕಿಕೊಂಡಿರುವ ವಿಚಾರವಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್​ ಮಾತನಾಡಿ, ತನಿಖೆ ನಡೆಯುತ್ತಿರುವಾಗ ಅನೇಕ ವಿಚಾರ ಬರುತ್ತದೆ. ಯಾರು ಅಪರಾಧಿ ಸ್ಥಾನದಲ್ಲಿ ಇರುತ್ತಾರೆ ಅವರು ಹೇಳಿಕೆ ನೀಡುತ್ತಾರೆ. ಈ ಬಗ್ಗೆ SIT ತನಿಖೆ ಮಾಡುತ್ತೆ ಎಂದು ಹೇಳಿದರು.

ಶರಣಪ್ರಕಾಶ್ ಪಾಟೀಲ್‌ ರಾಜೀನಾಮೆಗೆ ಬಿಜೆಪಿ ಒತ್ತಾಯ ವಿಚಾರವಾಗಿ ಮಾತನಾಡಿದ ಅವರು, ಯಾರು ಏನೇ ಹೇಳಿದರೂ ಅದನ್ನ ಪರಿಶೀಲನೆ ಮಾಡಬೇಕಾಗುತ್ತದೆ. ಅಗತ್ಯವಿದ್ದರೆ ಎಸ್​ಐಟಿ ಅಧಿಕಾರಿಗಳು ಸಹ ವಿಚಾರಣೆ ಮಾಡುತ್ತಾರೆ ಎಂದರು.

ಶರಣಪ್ರಕಾಶ್ ಪಾಟೀಲ್ ಒಬ್ಬ ಅಪ್ಪಟ ಪ್ರಾಮಾಣಿಕ ವ್ಯಕ್ತಿ: ಎಂಬಿ ಪಾಟೀಲ್​

ಸಚಿವ ಶರಣಪ್ರಕಾಶ್ ಪಾಟೀಲ್ ಒಬ್ಬ ಅಪ್ಪಟ ಪ್ರಾಮಾಣಿಕ ವ್ಯಕ್ತಿ. ಈ ಮಾತನ್ನು ಬಹಳ ಗರ್ವದಿಂದ ಹೇಳುತ್ತೇನೆ. ಸಾಕ್ಷ್ಯ ನಾಶ ಮಾಡುವಂತ ಕೆಲಸಕ್ಕೆ ಶರಣಪ್ರಕಾಶ್​ ಹೋಗುವುದಿಲ್ಲ. ದಯವಿಟ್ಟು ಶರಣಪ್ರಕಾಶ್ ಪಾಟೀಲ್ ಹೆಸರನ್ನು ತಳುಕು ಹಾಕಬೇಡಿ. ವಾಲ್ಮೀಕಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಒಬ್ಬ ಫ್ರಾಡ್ ಎಂದು ಎಂ.ಬಿ.ಪಾಟೀಲ್ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ