‘ಯಡಿಯೂರಪ್ಪರನ್ನ ನಂಬಬೇಡಿ.. ಬಿಟ್ರೇ.. ಬೆಳಗಾವಿಯ ಸುವರ್ಣಸೌಧನೂ ಮಾರಿಬಿಡ್ತಾರೆ’
ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ದ್ರೋಹಿ, ಕನ್ನಡ ವಿರೋಧಿ. ಸಿಎಂ ಯಡಿಯೂರಪ್ಪ ಸುಳ್ಳುಗಾರ, ಮೋಸ ಮಾಡುತ್ತಾರೆ.ಯಾವ ಸಮುದಾಯದವರೂ ಯಡಿಯೂರಪ್ಪ ನಂಬಬೇಡಿ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕಿಡಿ ಕಾರಿದ್ದಾರೆ.

ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ದ್ರೋಹಿ, ಕನ್ನಡ ವಿರೋಧಿ. ಸಿಎಂ ಯಡಿಯೂರಪ್ಪ ಸುಳ್ಳುಗಾರ, ಮೋಸ ಮಾಡುತ್ತಾರೆ. ಯಾವ ಸಮುದಾಯದವರೂ ಯಡಿಯೂರಪ್ಪ ನಂಬಬೇಡಿ. ಬಿಎಸ್ವೈ ಮುಂದುವರಿದರೇ ಬೆಳಗಾವಿಯ ಸುವರ್ಣಸೌಧವನ್ನೂ ಮಾರಿಬಿಡುತ್ತಾರೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕಿಡಿ ಕಾರಿದ್ದಾರೆ.
ಕಾರವಾರ, ಬೆಳಗಾವಿಯನ್ನ ಮಹಾರಾಷ್ಟ್ರಕ್ಕೆ ಮಾರಿಬಿಡ್ತಾರೆ. ಹಾಗಾಗಿ, ಯಡಿಯೂರಪ್ಪ ಯಾವುದೇ ಕಾರಣಕ್ಕೂ ಇರಬಾರದು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು. ಮರಾಠ ಅಭಿವೃದ್ಧಿ ನಿಗಮ ರಚನೆ ವಿರೋಧಿಸಿ ಕೆ.ಆರ್.ಪುರಂನಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್ ಇದೇ ವೇಳೆ ಸಿಎಂ ಬಿಎಸ್ವೈ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು.
ಡಿಸೆಂಬರ್ 5ರಂದು ಊಟ ಸಿಗುವುದಿಲ್ಲ, ನೀರು ಸಿಗಲ್ಲ. ಹೀಗಾಗಿ ಸಾರ್ವಜನಿಕರು ಯಾರೂ ಹೊರಗೆ ಬರಬೇಡಿ. ಯಡಿಯೂರಪ್ಪ, ನಿಮಗೆ ತಾಕತ್ತಿದ್ದರೆ, ಧಮ್ ಇದ್ರೆ ನಮ್ಮ ಬಂದ್ ನಿಲ್ಲಿಸಿ ಎಂದು ವಾಟಾಳ್ ನಾಗರಾಜ್ ಸವಾಲ್ ಹಾಕಿದರು. ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆದ ಹೆದ್ದಾರಿ ತಡೆಯಲ್ಲಿ ಕೆ.ಆರ್.ಪುರಂನ ಬಿಬಿಎಂಪಿ ಕಚೇರಿ ಎದುರು ಪ್ರತಿಭಟನೆ ನಡೆಯಿತು. ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ವಾಟಾಳ್ ನಾಗರಾಜ್ರನ್ನು ಪೊಲೀಸರು ವಶಕ್ಕೆ ಪಡೆದರು.




