ಕರ್ನಾಟಕದಲ್ಲಿ ಮತ್ತೊಂದು ಬ್ಯಾಂಕ್ ದರೋಡೆ: ಮನಗೂಳಿ ಕೆನರಾ ಬ್ಯಾಂಕ್ ದೋಚಿದ ಖದೀಮರು
ಬೀದರ್ನಲ್ಲಿ ಎಟಿಎಂಗೆ ಹಣ ತುಂಬಿಸಲು ಬಂದ ಸಿಬ್ಬಂದಿಯನ್ನು ಹಾಡ ಹಗಲೇ ದರೋಡೆಕೋರರು ಶೂಟ್ ಮಾಡಿ ಹಣ ಸಮೇತ ಪರಾರಿಯಾಗಿದ್ದರು. ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿಯೂ ಬ್ಯಾಂಕ್ ದರೋಡೆ ನಡೆದಿತ್ತು. ಈ ಬೆನ್ನಲ್ಲೇ ಇದೀಗ ವಿಜಯಪುರ ಜಿಲ್ಲೆಯು ಬಸವನಬಾಗೇವಾಡಿ ತಾಲೂಕಿನ ಮನಗೂಳಿಯಲ್ಲಿನ ಕೆನರಾ ಬ್ಯಾಂಕ್ ದರೋಡೆ ಮಾಡಲಾಗಿದೆ.

ವಿಜಯಪುರ, ಮೇ 25: ಬಸವನಬಾಗೇವಾಡಿ (Basavan Bagewadi) ತಾಲೂಕಿನ ಮನಗಳಿ ಪಟ್ಟಣದಲ್ಲಿನ ಕೆನರಾ ಬ್ಯಾಂಕ್ (Canara Bank) ದರೋಡೆ ಮಾಡಲಾಗಿದೆ. ಬ್ಯಾಂಕ್ ಬಾಗಿಲಿನ ಕೀ ಮುರಿದು ಹಾಗೂ ಕಿಟಕಿ ಸರಳು ಮುರಿದು ಒಳ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಶನಿವಾರ (ಮೇ.24) ತಡರಾತ್ರಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶನಿವಾರ ಮತ್ತು ಭಾನುವಾರ ಎರಡು ದಿನ ರಜೆ ಇದ್ದ ಹಿನ್ನೆಲೆಯಲ್ಲಿ ಸಿಬ್ಬಂದಿ ಬ್ಯಾಂಕ್ಗೆ ಬಂದಿಲ್ಲ.
ಇನ್ನು, ಬ್ಯಾಂಕ್ ಕಳ್ಳತನವಾದ ಸುದ್ದಿ ತಿಳಿದು, ಸಿಬ್ಬಂದಿ, ಮನಗೂಳಿ ಠಾಣೆ ಪೊಲೀಸರು ಮತ್ತು ಶ್ವಾನದಳ ಸ್ಥಳಕ್ಕೆ ಆಗಮಿಸಿದೆ. ಶ್ವಾನದಳ ಹಾಗೂ ಪೋಲಿಸರು ಸ್ಥಳದಲ್ಲಿ ಪರಿಶೀಲನೆ ನಡೆಸಿದರು. ಸ್ಥಳಕ್ಕೆ ಎಸ್ಪಿ ಲಕ್ಷ್ಮಣ ನಿಂಬರಗಿ ಎಎಸ್ಪಿ ರಾಮನಗೌಡ ಹಟ್ಟಿ ಹಾಗೂ ಇತರೆ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಕಲೆಹಾಕುತ್ತಿದ್ದಾರೆ.
ಇದನ್ನೂ ಓದಿ: ಬಸವನಬಾಗೇವಾಡಿ ಮನಗೂಳಿ ಬಳಿ ಭೀಕರ ಅಪಘಾತ: 6 ಮಂದಿ ಸಾವು
ಸರಣಿ ಮನೆಗಳ್ಳತನ
ಬಾಗಲಕೋಟೆ: ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್ ಬಳಿ ಇದ್ದ ನಾಲ್ಕು ಮನೆಗಳಲ್ಲಿ ಕಳ್ಳತನವಾಗಿದೆ. ಶಿಕ್ಷಕ ಜಕಾತಿ ಮನೆ ಸೇರಿದಂತೆ ನಾಲ್ವರ ಮನೆಗಳಲ್ಲಿ ಕಳ್ಳತನವಾಗಿದೆ. ಎರಡು ಮನೆಗಳಲ್ಲಿದ್ದ ಹಣ, ಒಡವೆ ದೋಚಿ ಕಳ್ಳರು ಪರಾರಿಯಾಗಿದ್ದಾರೆ. ಕಳ್ಳರು ಕೈಯಲ್ಲಿ ರಾಡ್ ಹಿಡಿದುಕೊಂಡು ಮುಸುಕುಧಾರಿಯಾಗಿ ಬಂದಿದ್ದರು ಎಂದು ಮಾಹಿತಿ ಲಭ್ಯವಾಗಿದೆ. ಟಾರ್ಚ್ ಹಿಡಿದು ಕಳ್ಳರು ರಾಜಾರೋಷವಾಗಿ ಓಡಾಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:53 pm, Sun, 25 May 25



