ಕಾಂಗ್ರೆಸ್ ಕಚೇರಿಗೆ ಸಾವರ್ಕರ್ ಫೋಟೋ ಅಂಟಿಸಿದ್ದು ನಾನೇ: ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಬಸವರಾಜ ಹೂಗಾರ

ಸಾವರ್ಕರ್ ಬಗ್ಗೆ ಮಾತನಾಡುವುದನ್ನು ಇಲ್ಲಿಗೆ ನಿಲ್ಲಿಸಿದರೆ ಸರಿ, ಇಲ್ಲದಿದ್ರೆ ನಾಳೆ ‘ಕೈ’​​ ನಾಯಕರ ಮನೆಗಳಿಗೆ ಫೋಟೋ ಹೋಗುತ್ತೆ, ಅದರಲ್ಲಿ ಯಾವುದೇ ಅನುಮಾನ ಬೇಡ.

ಕಾಂಗ್ರೆಸ್ ಕಚೇರಿಗೆ ಸಾವರ್ಕರ್ ಫೋಟೋ ಅಂಟಿಸಿದ್ದು ನಾನೇ: ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಬಸವರಾಜ ಹೂಗಾರ
ಸಾವರ್ಕರ್ ಫೋಟೋ, ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಬಸವರಾಜ ಹೂಗಾರ
Edited By:

Updated on: Aug 22, 2022 | 11:21 AM

ವಿಜಯಪುರ: ಜಿಲ್ಲೆಯಲ್ಲಿ ಸಾವರ್ಕರ್ ಫೋಟೋ​​ ವಿವಾದ ತಾರಕಕ್ಕೇರಿದ್ದು, ಕಾಂಗ್ರೆಸ್ ಕಚೇರಿಗೆ ಸಾವರ್ಕರ್ ಫೋಟೋ ಅಂಟಿಸಿದ್ದು ನಾನೇ ಎಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಬಸವರಾಜ ಹೂಗಾರ ನಗರದಲ್ಲಿ ಟಿವಿ9ಗೆ ಹೇಳಿಕೆ ನೀಡಿದರು. ಹುಬ್ಬಳ್ಳಿಯಲ್ಲಿ ಕಾಂಗ್ರೆಸ್​ನವರು ಸಾವರ್ಕರ್ ಫೋಟೋ ಸುಟ್ಟಿದ್ದರು. ಈ ಮೂಲಕ ವಿ.ಡಿ.ಸಾವರ್ಕರ್​​ಗೆ ಅಪಮಾನ ಮಾಡಿದ್ದಾರೆ. ಇಂಥ ವಿವಾದ ಸೃಷ್ಟಿಸುವ ಕೆಲಸ ಪದೇಪದೆ ಮಾಡುತ್ತಿದ್ದಾರೆ. ವಿವಾದ ಅಂತ್ಯಗೊಳಿಸಲು ಸಾವರ್ಕರ್ ಫೋಟೋ ಅಂಟಿಸಿದ್ದೇನೆ. ಸಾವರ್ಕರ್ ಫೋಟೋ ಅಂಟಿಸಿದ್ದು ದೊಡ್ಡ ಅಪರಾಧವಲ್ಲ. ಸಾವರ್ಕರ್ ಬಗ್ಗೆ ಮಾತನಾಡುವುದನ್ನು ಇಲ್ಲಿಗೆ ನಿಲ್ಲಿಸಿದರೆ ಸರಿ, ಇಲ್ಲದಿದ್ರೆ ನಾಳೆ ‘ಕೈ’​​ ನಾಯಕರ ಮನೆಗಳಿಗೆ ಫೋಟೋ ಹೋಗುತ್ತೆ, ಅದರಲ್ಲಿ ಯಾವುದೇ ಅನುಮಾನ ಬೇಡ ಎಂದು ಬಸವರಾಜ ಹೂಗಾರ ಹೇಳಿದರು. ಲಜ್ಜೆಗೇಡಿತನ ಕೆಲಸ ಮಾಡ್ತಿರುವ ಕಾಂಗ್ರೆಸ್​ಗೆ ತಕ್ಕ ಪಾಠ ಕಲಿಸ್ತೇವೆ ಎಂದು ವಾರ್ನಿಂಗ್ ನೀಡಿದ್ದು, ಇಂದು ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕ್ತೇವೆ ಎಂದು ಹೇಳಿದರು.

ಇದನ್ನೂ ಓದಿ: ರಾತ್ರಿ ಮಾಂಸಾಹಾರ ಸೇವಿಸಿದವನು ಬೆಳಗ್ಗೆ ದೇವಸ್ಥಾನಕ್ಕೆ ಹೋಗಬಹುದಾದರೆ ಬೆಳಗ್ಗೆ ತಿಂದವನು ಸಾಯಂಕಾಲ ಹೋಗಬಾರದೆ? ಸಿದ್ದರಾಮಯ್ಯ

ನಾವೇನು ಕೈಗೆ ಬಳೆ ಹಾಕಿಕೊಂಡಿಲ್ಲ: ರಾಜು ಆಲಗೂರು

ಈ ಕುರಿತಾಗಿ ವಿಜಯಪುರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಜು ಆಲಗೂರು ಹೇಳಿಕೆ ನೀಡಿದ್ದು, ಬಿಜೆಪಿ ಕಾರ್ಯಕರ್ತನ‌ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಬಸವರಾಜ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಮಾಡ್ತೇವೆ. ಬಿಜೆಪಿ ಕಚೇರಿಗೆ ಟಿಪ್ಪು ಸುಲ್ತಾನ್ ಫೋಟೋ ಅಂಟಿಸಬೇಕಾಗುತ್ತೆ. ನಾವೇನು ಕೈಗೆ ಬಳೆ ಹಾಕಿಕೊಂಡಿಲ್ಲ. ಸುಮಾರು 120 ವರ್ಷಗಳ ಇತಿಹಾಸ ಇರುವ ಪಕ್ಷ ನಮ್ಮದು. ಕಚೇರಿಗೆ ಸಾವರ್ಕರ್ ಫೋಟೋ ಅಂಟಿಸಿದ್ದು ನೋವು ತಂದಿದೆ ಎಂದು ಜಿಲ್ಲಾ ಕಾಂಗ್ರೆಸ್​ ಘಟಕದ ಅಧ್ಯಕ್ಷ ರಾಜು ಆಲಗೂರು ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್ ವಿರುದ್ದ ಇಂದು ಬಿಜೆಪಿ ಹೋರಾಟ

ಸಾವರ್ಕರ ಕುರಿತ ವಿವಾದ ಹಿನ್ನಲೆ ಕಾಂಗ್ರೆಸ್ ವಿರುದ್ದ ಇಂದು ವಿಜಯಪುರ ಜಿಲ್ಲಾ ಕಚೇರಿಗೆ ಮುತ್ತಿಗೆ ಹಾಕಲು ಬಿಜೆಪಿ ಘಟಕ ಸಿದ್ಧವಾಗಿದೆ. ಬೆಳಿಗ್ಗೆ 11 ಗಂಟೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ಕೇಸರಿ ಪಡೆ ನಿರ್ಧಾರ ಮಾಡಿದ್ದು, ಕಾಂಗ್ರೆಸ್ ಹಾಗೂ ಕಾಂಗ್ರೆಸ್ ನಾಯಕರು ಸಾವರ್ಕರ್ ಅವರಿಗೆ ಅವಮಾನ ಮಾಡುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ಹೋರಾಟ ಮಾಡಲು ಮುಂದಾಗಿದೆ.

ವಿಜಯಪುರ ಜಿಲ್ಲಾ ಬಿಜೆಪಿ ಮಾಧ್ಯಮ ವಕ್ತಾರ ವಿಜಯ್ ಜೋಷಿ ಮಾಹಿತಿ ನೀಡಿದ್ದು, ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಚೇರಿ ಬಳಿ ಪೊಲೀಸರು ಬೀಡು ಬಿಟ್ಟಿದ್ದಾರೆ. ಹೆಚ್ಚಿನ ಪೊಲೀಸ್ ಬಲ ನಿಯೋಜನೆಗೂ ಹಿರಿಯ ಆಧಿಕಾರಿಗಳ ಕ್ರಮ ವಹಿಸಿದ್ದು, ಜಿಲ್ಲೆಯಲ್ಲಿ ಸಾವರ್ಕರ್ ವಿವಾದ ತಾರಕಕ್ಕೇರಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 11:08 am, Mon, 22 August 22