ಜನತಾ ದರ್ಶನ: ದೂರು ಕೊಟ್ಟವರಿಂದಲೇ ಲಂಚ ಕೇಳುತ್ತಾರೆ: ಶಾಸಕ ವಿಠಲ ಕಟಕದೊಂಡ ಅಸಮಾಧಾನ

| Updated By: ಗಂಗಾಧರ​ ಬ. ಸಾಬೋಜಿ

Updated on: Sep 25, 2023 | 9:39 PM

ವಿಜಯಪುರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದ ಆವರಣದಲ್ಲಿ ಇಂದು ಜನತಾ ದರ್ಶನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಪೊಲೀಸ್ ಸಿಬ್ಬಂದಿ ಲಂಚ ಕೇಳಿದ್ದನ್ನು ಬಂಜಾರ ಸಮಾಜದ ಮಹಿಳೆಯೊಬ್ಬಳು ನನಗೆ ಹೇಳಿದ್ದಾರೆ. ದೂರು ಕೊಟ್ಟವರಿಂದಲೇ ಲಂಚ ಕೇಳುತ್ತಾರೆ ಅಂದರೆ ನಮ್ಮ ವ್ಯವಸ್ಥೆ ಎಲ್ಲಿಗೆ ಹೋಗಿದೆ ಎಂದು ಶಾಸಕ ವಿಠಲ ಕಟಕದೊಂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.   

ಜನತಾ ದರ್ಶನ: ದೂರು ಕೊಟ್ಟವರಿಂದಲೇ ಲಂಚ ಕೇಳುತ್ತಾರೆ: ಶಾಸಕ ವಿಠಲ ಕಟಕದೊಂಡ ಅಸಮಾಧಾನ
ಶಾಸಕ ವಿಠಲ ಕಟಕದೊಂಡ
Follow us on

ವಿಜಯಪುರ, ಸೆಪ್ಟೆಂಬರ್​ 25: ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಜನತಾ ದರ್ಶನ (Janata Darshan) ಕಾರ್ಯಕ್ರಮ ಆಯೋಜಿಸಿದೆ. ಅದೇ ರೀತಿಯಾಗಿ ಜಿಲ್ಲೆಯಲ್ಲೂ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಈ ವೇಳೆ ವೇದಿಕೆಯಲ್ಲಿಯೇ ಪೊಲೀಸ್ ಸಿಬ್ಬಂದಿ ಲಂಚ ಕೇಳಿದ್ದನ್ನು ಶಾಸಕರೊಬ್ಬರು ಬಯಲು ಮಾಡಿದ್ದಾರೆ. ಮನೆ ಕಳ್ಳತನ ದೂರು ನೀಡಲು ಹೋದಾಗ ಪೊಲೀಸರು ಲಂಚ ಕೇಳಿರುವುದಾಗಿ ಬಂಜಾರ ಸಮಾಜದ ಮಹಿಳೆಯೊಬ್ಬಳು ನನಗೆ ಹೇಳಿದ್ದಾರೆ. ದೂರು ಕೊಟ್ಟವರಿಂದಲೇ ಲಂಚ ಕೇಳುತ್ತಾರೆ ಅಂದರೆ ನಮ್ಮ ವ್ಯವಸ್ಥೆ ಎಲ್ಲಿಗೆ ಹೋಗಿದೆ ಎಂದು ಶಾಸಕ ವಿಠಲ ಕಟಕದೊಂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮನೆ ಕಳ್ಳತನ ಆಗಿದೆ. ನಾನು ಅತ್ಯಂತ ಬಡವಿ. ದೂರು ದಾಖಲಿಸಿ ಎಂಟು-ಹತ್ತು ದಿನವಾದರೂ ಪೊಲೀಸರು ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ವಿಚಾರಿಸಿದರೆ ಮಹಿಳೆಗೆ ಪೊಲೀಸರು ದುಡ್ಡು ಕೇಳಿದ್ದಾರೆ ಎಂದರು. ಅಂತವರಿಗೆ ಜನತಾ ದರ್ಶನದ ಮೂಲಕ ನ್ಯಾಯ ಸಿಗುತ್ತದೆ ಎಂದು ಶಾಸಕ ವಿಠಲ ಕಟಕದೊಂಡ ಹೇಳಿದ್ದಾರೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ರಾಜ್ಯದಾದ್ಯಂತ ನಡೆದ ಜನತಾ ದರ್ಶನಕ್ಕೆ ಸಿಕ್ತು ಉತ್ತಮ ಸ್ಪಂದನೆ

ರಂಗಮಂದಿರದ ಆವರಣದಲ್ಲಿ ವಿವಿಧ ಇಲಾಖೆಗಳ ಒಟ್ಟು 17 ಇಲಾಖೆಗಳ ಕೌಂಟರ್​ಗಳ ಸ್ಥಾಪನೆ ಮಾಡಲಾಗಿದೆ. ಸಮಸ್ಯೆ ಹೇಳಿಕೊಂಡು ಬಂದ ಜನರನ್ನು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಲಾಗಿದೆ.
ನೋಂದಣಿ ವೇಳೆ ಅವರ ಸಮಸ್ಯೆ ಬಗ್ಗೆ ಕೇಳಿ ಅಯಾ ಇಲಾಖೆಯ ಅಧಿಕಾರಿಗಳಿರುವ ಕೌಂಟರ್ ಬಳಿ ಕಳುಹಿಸಲಾಯಿತು.

ಇದನ್ನೂ ಓದಿ: ಅಂಗಡಿ, ಹೋಟೆಲ್ ಮುಚ್ಚಿ ಬಂದ್​ಗೆ ಬೆಂಬಲ ಕೊಡಿ: ಸಾರ್ವಜನಿಕರಿಗೆ ಮನವಿ ಮಾಡಿದ ಮಾಜಿ ಸಿಎಂ ಯಡಿಯೂರಪ್ಪ

ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ, ಪೊಲೀಸ್ ಇಲಾಖೆ,ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಇಲಾಖೆ, ನಗರಾಭಿವೃದ್ಧಿ ಮತ್ತು ಮಹಾನಗರ ಪಾಲಿಕೆ, ಹೆಸ್ಕಾಂ, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ರೇಷ್ಮೆ ಇಲಾಖೆ, ಸಮಾಜ‌ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ,ಅರಣ್ಯ ಇಲಾಖೆ, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ, ಸಹಕಾರ ಸಂಘಗಳ ಇಲಾಖೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆ, ವಿಕಲ ಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಹಾಗೂ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಕೌಂಟರ್​ ಗಳಲ್ಲಿ ಜನರು ತಮ್ಮ ಸಮಸ್ಯೆಗಳ ಕುರಿತು ಮನವಿ ಸಲ್ಲಿಕೆ ಮಾಡಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಭೂಬಾಲನ್, ಜನರಿಗೆ ಸರ್ಕಾರದ ಸೌಲಭ್ಯಗಳು ಸರಿಯಾದ ಸಮಯದಲ್ಲಿ ತಲುಪಲ್ಲ. ಹಲವಾರು ಸಮಸ್ಯೆಗಳಿರುತ್ತವೆ. ಜನರ ಹತ್ತಾರು ಸಮಸ್ಯೆಗಳಿಗೆ ಒಂದೇ ಕಡೆ ಪರಿಹಾರ ಸಿಗಲ್ಲಾ. ಇದೂ ಸಹ ಜನರಿಗೆ ತೊಂದರೆಯಾಗುತ್ತದೆ. ಹಾಗಾಗಿ ಸರ್ಕಾರ ಜನತಾ ದರ್ಶನ ಕಾರ್ಯಕ್ರಮ ಆಯೋಜಿಸಿದೆ. ಈ ಮೂಲಕ ಒಂದೇ ಕಡೆ ಜನರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಲು ಪ್ರಯತ್ನ ಮಾಡುತ್ತಿದ್ದೇವೆ. ಜನರೂ ಸಹ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.