
ವಿಜಯಪುರ, ಆಗಸ್ಟ್ 01: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿರ್ವಾಹಕರೊಬ್ಬರ ಮೇಲೆ ಕಿಡಿಗೇಡಿಗಳು ಬಸ್ಸಿನಲ್ಲೇ ಭೀಕರವಾಗಿ ಹಲ್ಲೆ (conductor attack) ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ವಿಜಯಪುರ (vijayapura) ಜಿಲ್ಲೆಯ ಆಲಮೇಲ ತಾಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಹಲ್ಲೆಗೊಳಗಾದ ಬಸ್ ನಿರ್ವಾಹಕರನ್ನು ಮಲ್ಲು ಲಮಾಣಿ ಎಂದು ಗುರುತಿಸಲಾಗಿದೆ.
ಶುಕ್ರವಾರದಂದು ಮದರಿ ಗ್ರಾಮದ ಬಸ್ ನಿಲ್ದಾಣದ ಬಳಿ ಆಟೋವೊಂದನ್ನು ರಸ್ತೆಗೆ ಅಡ್ಡವಾಗಿ ನಿಲ್ಲಿಸಲಾಗಿತ್ತು. ಇದರಿಂದ ಸಾರ್ವಜನಿಕರಿಗೆ ತೊಂದರೆ ಹಿನ್ನೆಲೆ ಗ್ರಾಮಸ್ಥರು ಆಟೋವನ್ನು ರಸ್ತೆ ಬದಿಗೆ ಸರಿಸಿದ್ದರು. ಇದರಿಂದ ಕೆರಳಿದ ಆಟೋ ಚಾಲಕ ಸಂತೋಷ ದೇವೂರ, ನಿರ್ವಾಹಕ ಮಲ್ಲು ಲಮಾಣಿ ಅವರೊಂದಿಗೆ ತೀವ್ರ ವಾಗ್ವಾದಕ್ಕಿಳಿದಿದ್ದ. ಆ ಸಮಯದಲ್ಲಿ ಸ್ಥಳೀಯರು ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಿದ್ದರು.
ಇದನ್ನೂ ಓದಿ: ಲೋಕಾಪುರ ಡಿಸಿಸಿ ಬ್ಯಾಂಕ್ನಲ್ಲಿ ಗೋಲ್ಮಾಲ್: ಪರ್ಸನಲ್ ಖಾತೆಗೆ ಹಣ ಹಾಕಿಸಿಕೊಂಡು ಮ್ಯಾನೇಜರ್ ಎಸ್ಕೇಪ್
ಈ ಘಟನೆಯನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಸಂತೋಷ ದೇವೂರ ಮತ್ತು ಆತನ ಸಹಚರರು, ಇಂದು ಮದರಿ ಗ್ರಾಮದ ಬಳಿ ಬಸ್ ಅಡ್ಡಗಟ್ಟಿ ಬಲವಂತವಾಗಿ ಒಳಗೆ ನುಗ್ಗಿದ್ದಾರೆ. ನಿರ್ವಾಹಕ ಮಲ್ಲು ಲಮಾಣಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಷ್ಟೇ ಅಲ್ಲದೆ ಎದೆಗೆ ಬಲವಾಗಿ ಗುದ್ದಿದ್ದಾರೆ. ಹಲ್ಲೆ ತೀವ್ರತೆಗೆ ನಿರ್ವಾಹಕ ಬಸ್ಸಿನಲ್ಲೇ ಕುಸಿದು ಬಿದ್ದಿದ್ದಾರೆ.
ಇನ್ನು ಈ ಘಟನೆಯನ್ನು ಬಸ್ನಲ್ಲಿದ್ದ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ನಲ್ಲಿ ವಿಡಿಯೋ ಸೆರೆಹಿಡಿದಿದ್ದಾರೆ. ಇದನ್ನು ಗಮನಿಸಿದ ಕಿಡಿಗೇಡಿಗಳು, ‘ಮೊಬೈಲ್ನಲ್ಲಿ ವಿಡಿಯೋ ಏಕೆ ಮಾಡುತ್ತಿದ್ದೀಯಾ?’ ಎಂದು ಪ್ರಶ್ನಿಸಿದ್ದು, ಪ್ರಯಾಣಿಕನ ಮೇಲೆಯೂ ಹಲ್ಲೆ ಮಾಡಿದ್ದಾರೆ.
ಸಾರ್ವಜನಿಕ ಬಸ್ನಲ್ಲಿ ಪ್ರಯಾಣಿಕರ ಎದುರೇ ನಡೆದ ಈ ಘಟನೆ ಸದ್ಯ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಕರ್ತವ್ಯ ನಿರತ ಸಾರಿಗೆ ಸಿಬ್ಬಂದಿಯ ಮೇಲಿನ ಹಲ್ಲೆ ಖಂಡನೀಯ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಆಲಮೇಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:09 pm, Sat, 1 August 26