
ವಿಜಯಪುರ, ಏಪ್ರಿಲ್ 12: ಜೀವಾವಧಿ ಶಿಕ್ಷೆಗೆ ಗುರಿಯಾಗಿ 21 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೈದಿಯನ್ನು (Prisoner) ವಿಜಯಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಜಯಪುರ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸಂಯುಕ್ತ ಕಾರ್ಯಾಚರಣೆ ನಡೆಸಿ ಆಜಾನ್ ಮಜಾವರ್ ಎಂಬ ಕೈದಿಯನ್ನು ಬಂಧಿಸಿದ್ದಾರೆ.
ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಆಜಾನ್ ಮಜಾವರ್ 2005ರಲ್ಲಿ ಮಾರ್ಚ್ 25ರಂದು 10 ದಿನ ಪೆರೋಲ್ ರಜೆಯ ಮೇಲೆ ವಿಜಯಪುರ ಕೇಂದ್ರ ಕಾರಾಗೃಹದಿಂದ ಮಹಾರಾಷ್ಟ್ರದ ತನ್ನ ಸ್ವಗ್ರಾಮ ವಾಗೋಳಿಗೆ ತೆರಳಿದ್ದ. ಆದರೆ ಪೆರೋಲ್ ಅವಧಿ ಮುಗಿದ ಬಳಿಕ ಕಾರಾಗೃಹಕ್ಕೆ ವಾಪಸ್ ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಕಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸ್ನಲ್ಲಿ ಪಾಸಾದ ಬಳ್ಳಾರಿ ಸೆಂಟ್ರಲ್ ಜೈಲಿನ ಶಿಕ್ಷಾ ಬಂಧಿ
ಆರೋಪಿಯನ್ನು ಬಂಧಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರ ನಿರ್ದೇಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. 2026ರ ಏಪ್ರಿಲ್ 11ರಂದು ಕೊನೆಗೂ ಮಹಾರಾಷ್ಟ್ರ ರಾಜ್ಯದ ಇಚಲಕರಂಜಿ ಪಟ್ಟಣದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನಂತರ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ವಿಜಯಪುರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಆರೋಪಿಯನ್ನು ಬಂಧಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯಕ್ಕೆ ಎಸ್ಪಿ ಲಕ್ಷ್ಮಣ ನಿಂಬರಗಿ ಶ್ಲಾಘಿಸಿದ್ದಾರೆ.
ಗ್ರಾಮ ಪಂಚಾಯತ್ ಚುನಾವಣೆಯ ಕಿಡಿ, ಗ್ರಾಮವೊಂದರಲ್ಲಿ ರಕ್ತದ ಹೋಕುಳಿಯನ್ನೇ ಹರಿಸಿತ್ತು. ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ 10 ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಸೇರಿದಂತೆ ತಲಾ 19,500 ರೂ ದಂಡ ವಿಧಿಸಿ ರಾಯಚೂರು 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ವಿಧಿಸಿದೆ. ರಾಯಚೂರು ಜಿಲ್ಲೆಯೆ ಲಿಂಗಸುಗೂರು ತಾಲೂಕಿನ ಗುಡದನಾಳ ಗ್ರಾಮದಲ್ಲಿ ನಡೆದಿದ್ದ ಭೀಕರ ಕೊಲೆ ಪ್ರಕರಣಕ್ಕೆ ಈಗ ತಾರ್ಕಿಕ ಅಂತ್ಯ ಸಿಕ್ಕಿದೆ.
2021ರ ಫೆಬ್ರುವರಿ 15ರಂದು ರಾತ್ರಿ 10:30ರ ಸಮಯಕ್ಕೆ ಇಡೀ ಗ್ರಾಮ ಮಲಗುವ ಸಜ್ಜಾಗಿತ್ತು. ಹನಮಂತಮ್ಮ ಅವರ ಮನೆಯ ಮುಂದೆ ಅಟ್ಟಹಾಸ ಮೆರೆದಿದ್ದ ಅಕ್ರಮ ಕೂಟವೊಂದು ದಾಳಿ ನಡೆಸಿತ್ತು. ಚುನಾವಣೆಯ ಹಳೆಯ ಹಗೆ ಹಿನ್ನೆಲೆ ಆರೋಪಿಗಳು ಹನಮಂತಮ್ಮ ಹಾಗೂ ಅವರ ಪುತ್ರರಾದ ಶರಣಬಸವ ಮತ್ತು ಅಮರೇಶ್ ಮೇಲೆ ಮನಬಂದಂತೆ ಹಲ್ಲೆ ನಡೆಸಿ ರಕ್ತಪಾತ ಮಾಡಿದ್ದರು. ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಏಪ್ರಿಲ್ 10ರಂದು ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ಪ್ರಕಟಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.