ಮೇಕೆದಾಟು ಯೋಜನೆಯ ಇತಿಹಾಸ ಮತ್ತು ವಿವಾದ: ಕರ್ನಾಟಕದ ವರ್ಷಗಳ ಹೋರಾಟದ ಸಂಪೂರ್ಣ ವಿವರ ಇಲ್ಲಿದೆ

Mekedatu Project: ಕರ್ನಾಟಕದ ಮಹತ್ವಾಕಾಂಕ್ಷಿ ಮೇಕೆದಾಟು ಜಲಾಶಯ ಯೋಜನೆಗೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಇತ್ತೀಚೆಗೆ ಸುಪ್ರೀಂಕೋರ್ಟ್ ವಜಾಗೊಳಿಸಿದ ಬೆನ್ನಲ್ಲೇ ಈ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಬೆಂಗಳೂರಿನ ಕುಡಿಯುವ ನೀರಿನ ಅಗತ್ಯತೆ ಮತ್ತು ವಿದ್ಯುತ್ ಉತ್ಪಾದನೆಗಾಗಿ ಉದ್ದೇಶಿಸಲಾದ ಈ ಯೋಜನೆಗೆ ತಮಿಳುನಾಡು ನಿರಂತರವಾಗಿ ಅಡ್ಡಿಪಡಿಸುತ್ತಿದ್ದು, ಉಭಯ ರಾಜ್ಯಗಳ ನಡುವಿನ ದಶಕಗಳ ಇತಿಹಾಸವಿರುವ ಜಲ ಸಂಘರ್ಷ ಮತ್ತೊಮ್ಮೆ ತಾರಕಕ್ಕೇರಿದೆ.

ಮೇಕೆದಾಟು ಯೋಜನೆಯ ಇತಿಹಾಸ ಮತ್ತು ವಿವಾದ: ಕರ್ನಾಟಕದ ವರ್ಷಗಳ ಹೋರಾಟದ ಸಂಪೂರ್ಣ ವಿವರ ಇಲ್ಲಿದೆ
ಮೇಕೆದಾಟು (ಸಾಂದರ್ಭಿಕ ಚಿತ್ರ)
Image Credit source: tv9

Updated on: Jun 19, 2026 | 2:25 PM

ಬೆಂಗಳೂರು, ಜೂನ್ 19: ಕಾವೇರಿ ನದಿ ನೀರು (Cauvery Water)  ಹಂಚಿಕೆ ವಿಚಾರದಲ್ಲಿ ಕರ್ನಾಟಕ (Karnataka) ಮತ್ತು ತಮಿಳುನಾಡು (Tamil Nadu) ನಡುವಿನ ಹಗ್ಗಜಗ್ಗಾಟ ಇಂದು ನಿನ್ನೆಯದಲ್ಲ. ಕಾವೇರಿ ವಿವಾದಕ್ಕೂ ಸುದೀರ್ಘ ಇತಿಹಾಸವಿದೆ. ಇದೀಗ ಅದರೊಂದಿಗೆ, ಕರ್ನಾಟಕದ ಮೇಕೆದಾಟು ಡ್ಯಾಂ (Mekedatu Dam Project) ಯೋಜನೆ ಸಹ ಸೇರಿಕೊಂಡಿದೆ. ತಮಿಳುನಾಡು ನೂತನ ಮುಖ್ಯಮಂತ್ರಿ ಸಿಎಂ ಜೋಸೆಫ್ ವಿಜಯ್ ನೇತೃತ್ವದ ಸರ್ಕಾರವು ಮೇಕೆದಾಟು ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕರಿಸಿದೆ. ಮತ್ತೊಂದೆಡೆ, ಸುಪ್ರೀಂಕೋರ್ಟ್‌ನಲ್ಲಿ ತಮಿಳುನಾಡಿನ ಮರುಪರಿಶೀಲನಾ ಅರ್ಜಿ ವಜಾಗೊಂಡಿರುವುದರಿಂದ ಕರ್ನಾಟಕ ಸರ್ಕಾರವು ಯೋಜನೆಯ ಅನುಷ್ಠಾನಕ್ಕೆ ವೇಗ ನೀಡುವುದಾಗಿ ಹೇಳಿದೆ. ಮೇಕೆದಾಟು ಯೋಜನೆ ಎಂದರೇನು, ಅದರ ಇತಿಹಾಸ ಮತ್ತು ಪ್ರಸ್ತುತ ಸ್ಥಿತಿಗತಿಗಳೇನು ಎಂಬ ಮಾಹಿತಿ ಇಲ್ಲಿದೆ.

ಮುಖ್ಯಾಂಶಗಳು

  • ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಜಲಾಶಯ.
  • ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವ ಗುರಿ.
  • ತಮಿಳುನಾಡು ಸರ್ಕಾರದ ತೀವ್ರ ವಿರೋಧ.

ಮೇಕೆದಾಟು ಯೋಜನೆ ಎಂದರೇನು?

ಮೇಕೆದಾಟು ಯೋಜನೆ ಎಂದರೆ ಕಾವೇರಿ ನದಿ ಮತ್ತು ಅದರ ಉಪನದಿಯಾದ ಅರ್ಕಾವತಿ ನದಿಗಳು ಸಂಗಮವಾಗುವ ಕನಕಪುರ ತಾಲೂಕಿನ ಗಡಿಭಾಗದಲ್ಲಿ ಸುಮಾರು 9,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಹುಪಯೋಗಿ ಜಲಾಶಯ ಯೋಜನೆಯಾಗಿದೆ. ಈ ಯೋಜನೆಯ ಒಟ್ಟು ಸಂಗ್ರಹಣಾ ಸಾಮರ್ಥ್ಯ 67.16 ಟಿಎಂಸಿ (TMC). ಈ ಯೋಜನೆಯ ಪ್ರಮುಖ ಉದ್ದೇಶವೆಂದರೆ, ವೇಗವಾಗಿ ಬೆಳೆಯುತ್ತಿರುವ ಕರ್ನಾಟಕದ ರಾಜಧಾನಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿಗೆ 4.75 ಟಿಎಂಸಿ ಕುಡಿಯುವ ನೀರನ್ನು ಒದಗಿಸುವುದು ಹಾಗೂ ಸುಮಾರು 400 ಮೆಗಾವ್ಯಾಟ್ ಜಲವಿದ್ಯುತ್ ಉತ್ಪಾದನೆ ಮಾಡುವುದಾಗಿದೆ.

ಕರ್ನಾಟಕದ ವಾದದ ಪ್ರಕಾರ, ಮುಂಗಾರು ಮಳೆಯು ಹೆಚ್ಚಾದಾಗ ಸಮುದ್ರಕ್ಕೆ ವ್ಯರ್ಥವಾಗಿ ಹರಿದು ಹೋಗುವ ಹೆಚ್ಚುವರಿ ನೀರನ್ನು ಇಲ್ಲಿ ಸಂಗ್ರಹಿಸಿ, ಕಷ್ಟದ ದಿನಗಳಲ್ಲಿ ತಮಿಳುನಾಡಿಗೆ ಕೂಡ ನಿಯಮಿತವಾಗಿ ನೀರು ಹರಿಸಲು ಇದು ನೆರವಾಗುತ್ತದೆ.

ಮೇಕೆದಾಟು ಯೋಜನೆಗೆ ಯಾಕೆ ಆ ಹೆಸರು ಬಂತು?

‘ಮೇಕೆದಾಟು’ ಎಂದರೆ ಕನ್ನಡದಲ್ಲಿ ‘ಮೇಕೆ ಜಿಗಿದು ದಾಟಬಲ್ಲ ಜಾಗ (Goat’s Leap)’ ಎಂದರ್ಥ. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ದಟ್ಟ ಅರಣ್ಯ ಪ್ರದೇಶದಲ್ಲಿ ಕಾವೇರಿ ನದಿಯು ಅತ್ಯಂತ ಕಿರಿದಾದ, ಆಳವಾದ ಕಲ್ಲಿನ ಕಂದರಗಳ ಮೂಲಕ ಹರಿಯುತ್ತದೆ. ಈ ಜಾಗ ತುಂಬ ಕಿರಿದಾಗಿದೆ. ಒಂದು ಮೇಕೆ ಜಿಗಿದು ದಾಟಬಲ್ಲ ಜಾಗ ಎಂಬರ್ಥದಲ್ಲಿ ಈ ಸುಂದರ ಪ್ರಕೃತಿ ತಾಣಕ್ಕೆ ‘ಮೇಕೆದಾಟು’ ಎಂಬ ಹೆಸರು ಬಂದಿದೆ ಎನ್ನಲಾಗಿದೆ. ಇದೇ ಜಾಗದಲ್ಲಿ ಜಲಾಶಯ ನಿರ್ಮಿಸಲು ಉದ್ದೇಶಿಸಿರುವುದರಿಂದ ಯೋಜನೆಗೂ ಇದೇ ಹೆಸರನ್ನು ಇಡಲಾಗಿದೆ.

ಮೇಕೆದಾಟು ಯೋಜನೆ ಈಗ ಯಾವ ಹಂತದಲ್ಲಿದೆ?

ಕರ್ನಾಟಕ ಸರ್ಕಾರವು ಈಗಾಗಲೇ ಯೋಜನೆಯ ಪರಿಷ್ಕೃತ ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ಸಿದ್ಧಪಡಿಸಿದ್ದು, ಕೇಂದ್ರ ಜಲ ಆಯೋಗ (CWC) ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ತಾಂತ್ರಿಕ ಅನುಮೋದನೆಗಾಗಿ ಕಾಯುತ್ತಿದೆ. ಪರಿಸರ ಮತ್ತು ಅರಣ್ಯ ಇಲಾಖೆಯ (MoEF) ಅಂತಿಮ ಹಸಿರು ನಿಶಾನೆ ಸಿಕ್ಕ ತಕ್ಷಣವೇ ಭೂಮಿ ಪೂಜೆ ನೆರವೇರಿಸಿ ಕಾಮಗಾರಿ ಆರಂಭಿಸಲು ರಾಜ್ಯ ಸರ್ಕಾರ ಸಂಪೂರ್ಣ ಸಜ್ಜಾಗಿದೆ.

ಆದರೆ, ಯೋಜನೆಯಿಂದ ಕಾವೇರಿ ವನ್ಯಜೀವಿ ಧಾಮದ ಅರಣ್ಯ ಭೂಮಿ ಮುಳುಗಡೆಯಾಗುವುದರಿಂದ ಪರಿಸರ ಮೌಲ್ಯಮಾಪನ ಪ್ರಕ್ರಿಯೆಗಳು ಪ್ರಸ್ತುತ ಪ್ರಗತಿಯಲ್ಲಿವೆ.

ಸುಪ್ರೀಂಕೋರ್ಟ್ ತೀರ್ಪು ಮತ್ತು ತಮಿಳುನಾಡು ಸರ್ಕಾರದ ಕ್ಯಾತೆ

ಇತ್ತೀಚಿನ ಬೆಳವಣಿಗೆಯಲ್ಲಿ, ಕರ್ನಾಟಕದ ಮೇಕೆದಾಟು ಯೋಜನೆಗೆ ತಡೆ ನೀಡಬೇಕು ಎಂದು ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ತಜ್ಞರ ಸಮಿತಿಯಾದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು (CWMA) ಈ ಡಿಪಿಆರ್ ಅನ್ನು ಪರಿಶೀಲಿಸುತ್ತಿರುವುದರಿಂದ ನ್ಯಾಯಾಲಯ ಮಧ್ಯಪ್ರವೇಶಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇದರ ವಿರುದ್ಧ ತಮಿಳುನಾಡು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯೂ ಇತ್ತೀಚೆಗೆ ವಜಾಗೊಂಡಿದೆ. ಕಾನೂನು ಹೋರಾಟದಲ್ಲಿ ಹಿನ್ನಡೆ ಅನುಭವಿಸಿದ ತಮಿಳುನಾಡಿನ ಸಿಎಂ ಜೋಸೆಫ್ ವಿಜಯ್ ಸರ್ಕಾರ ಈಗ ರಾಜಕೀಯ ಒತ್ತಡ ತಂತ್ರಕ್ಕೆ ಮುಂದಾಗಿದೆ. ತಮಿಳುನಾಡು ವಿಧಾನಸಭೆಯ ಜಂಟಿ ಅಧಿವೇಶನದಲ್ಲಿ ಅಲ್ಲಿನ ರಾಜ್ಯಪಾಲರಾದ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರ ಭಾಷಣದ ಮೂಲಕ, ‘ಕರ್ನಾಟಕದ ಮೇಕೆದಾಟು ಯೋಜನೆ ತಮಿಳುನಾಡು ರೈತರ ಹಿತಾಸಕ್ತಿಗೆ ಧಕ್ಕೆ ತರಲಿದ್ದು, ಇದನ್ನು ಯಾವುದೇ ಕರಾರಿಲ್ಲದೆ ತಡೆಯಲಾಗುವುದು’ ಎಂದು ನಿರ್ಣಯ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಮೇಕೆದಾಟು ಯೋಜನೆಗೆ ತಮಿಳುನಾಡು ಕ್ಯಾತೆ, ಮತ್ತೊಂದು ಹೆಜ್ಜೆ ಮುಂದಿಟ್ಟ ವಿಜಯ್: ಸಿಎಂ ಡಿಕೆ ಶಿವಕುಮಾರ್ ಖಡಕ್ ಪ್ರತಿಕ್ರಿಯೆ

ಮತ್ತೊಂದೆಡೆ, ತಮಿಳುನಾಡಿನ ವಾದಕ್ಕೆ ತಕ್ಕ ತಿರುಗೇಟು ನೀಡಿರುವ ಕರ್ನಾಟಕ ಸಿಎಂ ಡಿ.ಕೆ. ಶಿವಕುಮಾರ್, ಕೋರ್ಟ್ ಆದೇಶದಂತೆ ತಮಿಳುನಾಡಿನ ಪಾಲಿನ ನೀರನ್ನು ಬಿಡಲು ನಾವು ಬದ್ಧರಾಗಿದ್ದು, ಬೆಂಗಳೂರಿನ ಕುಡಿಯುವ ನೀರಿಗಾಗಿ ಮೇಕೆದಾಟು ಯೋಜನೆ ನಿರ್ಮಿಸುವುದು ನಮ್ಮ ಹಕ್ಕು ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:49 pm, Fri, 19 June 26

Follow Us