ಸಂಗಣ್ಣನ್ನ ಹಿಂದಿಕ್ಕಿ ಕೊಪ್ಪಳ ಟಿಕೆಟ್ ಗಿಟ್ಟಿಸಿಕೊಂಡ ಡಾ ಬಸವರಾಜ ಯಾರು?​ ಟಿಕೆಟ್​ ಸಿಕ್ಕಿದ್ದೇಗೆ?

ಹಾಲಿ ಸಂಸದ ಸಂಗಣ್ಣ ಕರಡಿ ಬದಲು ಈ ಬಾರಿ ಕೊಪ್ಪಳ ಬಿಜೆಪಿ ಟಿಕೆಟ್​ನ್ನು ಹೊಸ ಅಭ್ಯರ್ಥಿ ಡಾ.ಬಸವರಾಜ​ ಕ್ಯಾವಟರ್​ ಎಂಬುವವರಿಗೆ ನೀಡಲಾಗಿದೆ. ಡಾ. ಕೆ ಬಸವರಾಜ ಅವರು ಕಳೆದ ಅನೇಕ ವರ್ಷಗಳಿಂದ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. ಜೊತೆಗೆ ಗೃಹ‌ ಸಚಿವ ಅಮಿತ್ ಶಾ ಜೊತೆ ಸಂಪರ್ಕ ಹೊಂದಿದ್ದರು. ಟಿಕೆಟ್​ ಘೋಷಣೆ ಬಳಿಕ ಮಾತನಾಡಿದ ಅವರು ರಾಜಕಾರಣ ನನಗೆ ಹೊಸದಲ್ಲ ಎಂದು ಹೇಳಿದ್ದಾರೆ.

ಸಂಗಣ್ಣನ್ನ ಹಿಂದಿಕ್ಕಿ ಕೊಪ್ಪಳ ಟಿಕೆಟ್ ಗಿಟ್ಟಿಸಿಕೊಂಡ ಡಾ ಬಸವರಾಜ ಯಾರು?​ ಟಿಕೆಟ್​ ಸಿಕ್ಕಿದ್ದೇಗೆ?
ಸಂಗಣ್ಣ ಕರಡಿ, ಡಾ. ಕೆ ಬಸವರಾಜ್
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Mar 13, 2024 | 10:09 PM

ಕೊಪ್ಪಳ, ಮಾರ್ಚ್​​ 13: ಹತ್ತಾರು ಲೆಕ್ಕಾಚಾರ, ನೂರಾರು ತಂತ್ರಗಳೊಂದಿಗೆ ಗೆಲ್ಲಲೇ ಬೇಕು ಎನ್ನುವ ಮಾನದಂಡದೊಂದಿಗೆ ಅಳೆದುತೂಗಿ ಬಿಜೆಪಿ (BJP) ಕೊನೆಗೂ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದೆ. ಇಂದು ಎರಡನೇ ಪಟ್ಟಿಯಲ್ಲಿ 20 ಲೋಕಸಭಾ ಕ್ಷೇತ್ರಗಳಿಗೆ ಹೆಸರು ಅನೌನ್ಸ್ ಆಗಿದೆ. ಬಿಜೆಪಿ ಈ ಬಾರಿ ಕೆಲ ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಮಣೆ ಹಾಕಿದೆ. ಅದರಲ್ಲಿ ಕೊಪ್ಪಳ ಕ್ಷೇತ್ರ ಕೂಡ ಒಂದು. ಹಾಲಿ ಸಂಸದ ಕರಡಿ ಸಂಗಣ್ಣ (Karadi Sanganna) ಬದಲು ಡಾ.ಬಸವರಾಜ​ ಕ್ಯಾವಟರ್​​ಗೆ ನೀಡಲಾಗಿದೆ. ಡಾ. ಕೆ ಬಸವರಾಜ್ ತಂದೆ ಈ ಹಿಂದೆ ಕುಷ್ಟಗಿಯಿಂದ ಸ್ಪರ್ಧಿಸಿ ಒಮ್ಮೆ ಶಾಸಕರಾಗಿದ್ದರು. ಕಳೆದ ಅನೇಕ ವರ್ಷಗಳಿಂದ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. ಜೊತೆಗೆ ಗೃಹ‌ ಸಚಿವ ಅಮಿತ್ ಶಾ ಜೊತೆ ಸಂಪರ್ಕ ಹೊಂದಿದ್ದರು.

ಯಾರು ಈ ಡಾ. ಕೆ ಬಸವರಾಜ?

ಕೊಪ್ಪಳ ಜಿಲ್ಲೆಯ ಕುಷ್ಟಗಿಯ ಮಾಜಿ ಶಾಸಕರು ಮತ್ತು ಎಚ್​​ಕೆಡಿಬಿ ಮಾಜಿ ಅಧ್ಯಕ್ಷ ಕೆ ಶರಣಪ್ಪ ಮತ್ತು ಶಾಂತಮ್ಮ ದಂಪತಿಗಳ ಕಿರಿಯ ಪುತ್ರ. ಕೊಪ್ಪಳ ನಗರದಲ್ಲಿರುವ ಕೆಎಸ್ ಆಸ್ಪತ್ರೆಯ ಸಂಸ್ಥಾಪಕರು ಹೌದು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಕುಷ್ಟಗಿಯಲ್ಲಿ ಪಡೆದು, ಪದವಿಪೂವ೯ ಶಿಕ್ಷಣವನ್ನು ಗುಲ್ಬರ್ಗದಲ್ಲಿ ಮುಗಿಸಿ ಎಂಬಿಬಿಎಸ್​ ವೈದ್ಯಕೀಯ ಪದವಿಯನ್ನು ಬೆಳಗಾವಿಯ ಜವಹರಲಾಲ್ ವೈದ್ಯಕೀಯ ಕಾಲೇಜನಲ್ಲಿ ಪಡೆದಿದ್ದಾರೆ.

ಇದನ್ನೂ ಓದಿ: ಮಗನಿಗೆ ಬಿಜೆಪಿ ಟಿಕೆಟ್ ಮಿಸ್ ಆಗ್ತಿದ್ದಂತೆ ಸಿಡಿದೆದ್ದ ಈಶ್ವರಪ್ಪ, ಯಡಿಯೂರಪ್ಪ ವಿರುದ್ಧ ವಾಗ್ದಾಳಿ: ಬಂಡಾಯದ ಸುಳಿವು!

ಅಥೊ೯ಪಿಡಿಕ್ ವಿಭಾಗದಲ್ಲಿ (M S) ಪದವಿಯನ್ನು ಮಣಿಪಾಲ ವೈದ್ಯಕೀಯ ಕಾಲೇಜನಲ್ಲಿ ಪೂಣ೯ಗೊಳಿಸಿದ್ದಾರೆ. ಎಂಸಿಹೆಚ್​ ಪದವಿಯನ್ನು (UK) ಇಂಗ್ಲೆಂಡನಲ್ಲಿ ಹಾಗೂ ಫೇಲೋಷಿಪ್​ ಪದವಿಯನ್ನು ಅಮೇರಿಕಾದಲ್ಲಿ ಪಡೆದು 2006 ರಲ್ಲಿ ಕೆಲವು ವಷ೯ಗಳ ಕಾಲ ಇಂಗ್ಲೆಂಡನ ಪ್ರತಿಷ್ಟಿತ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ್ದಾರೆ.

ಇವರು ತಾಯ್ನಾಡಿನ ಪ್ರೀತಿಯಿಂದ ನಮ್ಮ ಭಾಗದ ಜನರ ಸೇವೆ ಮಾಡಬೇಕೆಂಬ ಹಂಬಲದಿಂದ 2009 ರಲ್ಲಿ ಬೆಂಗಳೂರಿನ ಸಾಗರ ಅಪೋಲಾ ಆಸ್ಪತ್ರೆಯ ಮತ್ತು ರಾಜ್ಯದ ಪ್ರತಿಷ್ಟಿತ ಆಸ್ಪತ್ರೆಯ ಬೇರೆ ಬೇರೆ ಕಡೆ ಸೇವೆ ಸಲ್ಲಿಸಿದ್ದಾರೆ. ತವರು ಜಿಲ್ಲೆ ಹಿಂದುಳಿದ ಪ್ರದೇಶವಾದ ಕೊಪ್ಪಳದಲ್ಲಿ ಬಂದು ಸುಸಜ್ಜಿತವಾದ ಹೈಟೆಕ್ ಆಸ್ಪತ್ರೆ ಪ್ರಾರಂಭಿಸಿ ಈ ಭಾಗದ ಗ್ರಾಮೀಣ ಜನರ ಆರೋಗ್ಯ ಸೇವೆ ಮಾಡಬೇಕೆಂಬ ಇರಾದೆಯೊಂದಿಗೆ ಹೋಸಪೇಟೆ ರಸ್ತೆಯ ದಿವಟರ ನಗರದಲ್ಲಿ 2019 ರಲ್ಲಿ ತಮ್ಮದೇ ಆದ ವಸತಿ ಸಮಚ್ಚಯದಲ್ಲಿ ತಮ್ಮ ಕನಸಿನ ಕೂಸಾದ ಬೃಹತ್ ಆಕಾರದ ಕೆಎಸ್ ಆಸ್ಪತ್ರೆ ಸ್ಥಾಪಿಸಿ ಈ ಭಾಗದ ಜನರ ಸೇವೆ ಮಾಡುತ್ತಿದ್ದಾರೆ.

ಕರಡಿ ಸಂಗಣ್ಣ ನನಗೆ ತಂದೆ ಸಮಾನ: ಡಾ. ಕೆ ಬಸವರಾಜ

ಟಿಕೆಟ್​ ಘೋಷಣೆ ಬಳಿಕ ಮಾತನಾಡಿದ ಡಾ. ಕೆ ಬಸವರಾಜ್, ನಾನು ಕೊಪ್ಪಳದವನೇ. ಅನೇಕ ವರ್ಷಗಳಿಂದ ನಮ್ಮ ಕುಟುಂಬ ರಾಜಕೀಯದಲ್ಲಿದೆ. ಕರಡಿ ಸಂಗಣ್ಣ ನನಗೆ ತಂದೆ ಸಮಾನ. ಅವರ ನೇತೃತ್ವದಲ್ಲಿ ಅವರ ಸಹಕಾರದಲ್ಲಿಯೇ ಚುನಾವಣೆ ಎದುರಿಸುತ್ತೇವೆ. ನನ್ನ‌ ವೃತ್ತಿ ನೋಡಿ ಟಿಕೆಟ್ ನೀಡಿದ್ದಾರೆ. ನಾನು ಹುಟ್ಟಿದಾಗಿನಿಂದ ಚುನಾವಣೆ ನೋಡುತ್ತಾ ಬಂದಿದ್ದೇನೆ. ರಾಜಕಾರಣ ನನಗೆ ಹೊಸದಲ್ಲ ಎಂದು ಹೇಳಿದ್ದಾರೆ.

ಕರಡಿ ಸಂಗಣ್ಣ ಟಿಕೆಟ್ ಮಿಸ್​​ಗೆ ಕಾರಣವಾದ ಸಂಗತಿಗಳು

ಸಂಗಣ್ಣ ಅವರಿಗೆ ಕುಟುಂಬ ರಾಜಕಾರಣ ಮುಳುವಾಯಿತಾ ಎನ್ನಲಾಗುತ್ತಿದೆ. ಸಂಗಣ್ಣ ವ್ಯಯಕ್ತಿಕ ಬೆಳವಣಿಗೆ ಮಾಡಿಕೊಂಡರೇ ವಿನ, ಪಕ್ಷವನ್ನು ಬೆಳಸಲಿಲ್ಲ ಅನ್ನೋ ಆರೋಪ ಕೇಳಿಬಂದಿದೆ. ಕಳೆದ ಎರಡು ವಿಧಾನಸಭೆ ಚುನಾವಣೆಯಲ್ಲಿ ಹಠಕ್ಕೆ ಬಿದ್ದು ಕೊಪ್ಪಳ ಕ್ಷೇತ್ರದ ಟಿಕೆಟ್ ಪಡೆದಿದ್ದರು. ತಮ್ಮ ಪುತ್ರ ಮತ್ತು ಸೊಸೆಗೆ ಟಿಕೆಟ್ ಕೊಡಿಸಿದ್ದರು. ಆದರೆ ಎರಡು ಚುನಾವಣೆಯಲ್ಲಿ ಕರಡಿ ಸಂಗಣ್ಣ ಕುಟುಂಬದವರು ಸೋತಿದ್ದರು.

ಇದನ್ನೂ ಓದಿ: ಹಾಲಿ ಶಾಸಕರಾಗಿದ್ದರೂ ಲೋಕಸಭಾ ಟಿಕೆಟ್​: ಈ ಬಗ್ಗೆ ಬೊಮ್ಮಾಯಿ ಹೇಳಿದ್ದೇನು?

ಇನ್ನು ಪಕ್ಷದ ಬೇರೆ ಅಭ್ಯರ್ಥಿಗಳ ಗೆಲುವಿಗೆ ಕೂಡ ಶ್ರಮಿಸುವುದಿಲ್ಲ ಅನ್ನೋ ಆರೋಪ ‌ಸಂಗಣ್ಣ ಮೇಲಿತ್ತು. ಬೇರೆ ಶಾಸಕರ ಚುನಾವಣೆ, ಜಿಲ್ಲಾ ಪಂಚಾಯತ, ತಾಲೂಕು ಪಂಚಾಯತ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿಲ್ಲವೆನ್ನಲಾಗುತ್ತಿದೆ. ಜಿಲ್ಲೆಯಲ್ಲಿ ಕೆಲ ನಾಯಕರ ಜೊತೆ ವೈಮನಸ್ಸು ಹೊಂದಿದ್ದಾರೆ. ಹೀಗಾಗಿ ಅನೇಕ ಮಾಜಿ ಶಾಸಕರು ಕರಡಿ ಸಂಗಣ್ಣಗೆ ಟಿಕೆಟ್ ನೀಡಬಾರದು, ನೀಡಿದರೇ ತಾವು ಪಕ್ಷದ ಪರವಾಗಿ ಕೆಲಸ ಮಾಡುವುದಿಲ್ಲ ಅಂತ ನಾಯಕರು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಟಿಕೆಟ್ ಮಿಸ್ ಆಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:09 pm, Wed, 13 March 24