ವಿಶ್ಲೇಷಣೆ | ಬಿಜೆಪಿ ಸರಕಾರದ ದಂತಕುಳಿಯಾದ ಹಗಲಲ್ಲಿ ಹೇರಿ ಹಗಲಲ್ಲೇ ತೆಗೆದ ನೈಟ್ ಕರ್ಫ್ಯೂ
ಕೋವಿಡ್ ವೈರಸ್ನಂಥ ಸಮಸ್ಯೆಗೆ ಪರಿಹಾರ ಹೇಳಿದಷ್ಟು ಸುಲಭವಾಗಿ ಸಿಗುವುದಿಲ್ಲ. ಆದರೆ, ಸರಕಾರ ಒಳ್ಳೇ ಪರಿಹಾರ ಸಿಕ್ಕಿಲ್ಲ ಅಂತ ತಪ್ಪು ಉಪಕ್ರಮ ತೆಗೆದುಕೊಂಡರೆ ಅದು ಜನರಲ್ಲಿ ಭಾರಿ ನಿರಾಸೆ ಉಂಟುಮಾಡುವುದು ಖಂಡಿತ. ಈಗ ಆಗಿದ್ದು ಅದೇ.

ಎತ್ತು ಈಯಿತು ಎಂದರೆ ಕೊಟ್ಟಿಗೆಯಲ್ಲಿ ಕಟ್ಟು ಎಂಬುದು ಕನ್ನಡದ ಹಳೇ ಗಾದೆ. ನೈಟ್ ಕರ್ಫ್ಯೂ ವಿಧಿಸುವ ಮಹತ್ವದ ನಿರ್ಣಯ ತೆಗೆದುಕೊಂಡ 24 ಗಂಟೆಯೊಳಗೆ ಅದನ್ನು ಹಿಂತೆಗೆದುಕೊಂಡ ಬಿ.ಎಸ್. ಯಡಿಯೂರಪ್ಪ ಸರಕಾರ ಕೂಡ ಹೀಗೆ ಮಾಡಿದಂತಾಯ್ತು. ಕೋವಿಡ್ನ ಹೊಸ ವೈರಸ್ ಬಂದಿದೆ ಎಂದಿದ್ದೆ, ಸರಕಾರ ನೈಟ್ ಕರ್ಫ್ಯೂ ಹಾಕುವ ನಿರ್ಣಯ ತೆಗೆದುಕೊಂಡು ತನಗೆ ಆಡಳಿತ ನಡೆಸುವಲ್ಲಿ ದೂರದರ್ಶಿತ್ವ ಇಲ್ಲ ಎಂಬುದನ್ನು ಮತ್ತೊಮ್ಮೆ ನಿರೂಪಿಸಿತು. ಅಷ್ಟೇ ಅಲ್ಲ, ಈ ಸರಕಾರಕ್ಕೆ ಒಳ್ಳೆ ಸಲಹೆಗಾರ ಕೊರತೆ ಇದೆ ಎಂಬುದು ಕೂಡ ನಿರೂಪಿತವಾದಂತಾಯಿತು.
ಕೊರೋನಾದ ಹೊಸ ಪ್ರಭೇದದ ವೈರಸ್ ಬಂದಿದೆ. ಹಾಗಾಗಿ ಇಂಗ್ಲೆಂಡ್ಗೆ ಹೋಗುವ ಮತ್ತು ಅಲ್ಲಿಂದ ಬರುವ ವಿಮಾನಯಾನವನ್ನು ನಿಲ್ಲಿಸುವ ನಿರ್ಣಯವನ್ನು ಈ ಸರಕಾರ ಮಾಡಿತು. ಅಷ್ಟೇ ಅಲ್ಲ, ಅಲ್ಲಿಂದ ಬಂದಿರುವ ಹಲವಾರು ಜನರನ್ನು ಹುಡುಕಿ ಕ್ವಾರಂಟೈನ್ ಮಾಡುವ ನಿರ್ಣಯ ತೆಗೆದುಕೊಳ್ಳಲಾಯಿತು. ಅದೇ ಹೊತ್ತಲ್ಲಿ, ಹೊಸ ವೈರಸ್ ಪ್ರಭೇದ ಸಮುದಾಯದಲ್ಲಿ ಹರಡದಂತೆ ಬುಧವಾರ ಮಧ್ಯಾಹ್ನ ಸಭೆ ನಡೆಸಿದ ಮುಖ್ಯಮಂತ್ರಿಗಳು ಆ ಸಭೆಯಿಂದ ಹೊರಬಂದು ಇದ್ದಕ್ಕಿದ್ದಂತೆ ನೈಟ್ ಕರ್ಫ್ಯೂ ವಿಧಿಸುವ ನಿರ್ಣಯವನ್ನು ಜಾಹೀರುಗೊಳಿಸಿದರು.
ರಾತ್ರಿ ಮತ್ತೆ ಅದನ್ನು ಬದಲಾವಣೆ ಮಾಡಿದರು. ಮತ್ತು ಬಹಳಷ್ಟು ವಿನಾಯಿತಿಯನ್ನು ಸರಕಾರ ನೀಡಿತು. ಆದರೆ ರಾಜ್ಯದ ಎಲ್ಲಾ ಮಾಧ್ಯಮಗಳು ಈ ಕ್ರಮವನ್ನು ಟೀಕಿಸಿದ್ದವು.
ಹಾಗಾದರೆ ಇದು ಯಾಕೆ ಹೀಗಾಯ್ತು? ಮಂತ್ರಿಗಳು ಬಂದು ಏನೇ ಹೇಳಿದರೂ ಅದನ್ನು ಪರಾಮರ್ಶಿಸುವ ಒಳ್ಳೆಯ ಸಲಹೆಗಾರ ತಂಡವನ್ನು ಯಡಿಯೂರಪ್ಪ ಇಟ್ಟುಕೊಂಡಿಲ್ಲ. ಈ ಕೊರತೆ ನಿನ್ನೆ ಕಂಡಿತು. ಒಂದೊಮ್ಮೆ ಅದು ಇದ್ದಿದ್ದರೆ, ಕೇಂದ್ರ ಸರಕಾರದ ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಮಾತನಾಡಿ ಮುಂದಿನ ಹೆಜ್ಜೆ ಬಗ್ಗೆ ಪರಾಮರ್ಶಿಸುವ ಸಾಧ್ಯತೆ ಇತ್ತು. ಅಷ್ಟೇ ಅಲ್ಲ, ಈ ರೀತಿಯ ನಿರ್ಣಯ ಕೈಗೊಳ್ಳುವ ಮೊದಲು ಹಿರಿಯ ಅಧಿಕಾರಿಗಳ ಸಲಹೆ ಕೇಳುವ ಸಂಪ್ರದಾಯವನ್ನು ಈ ಸರಕಾರ ಮಾಡಿಲ್ಲ ಎಂಬುದು ಈಗ ಸಾಬೀತಾಯ್ತು. ಇದು ಈ ಸರಕಾರದ ಕೊರತೆ ಎಂಬುದು ಎಲ್ಲರಿಗೂ ಗೊತ್ತು. ರಾಜಕೀಯ ನಿರ್ಣಯವಾದರೆ, ಯಡಿಯೂರಪ್ಪ ತಮ್ಮ ಮಗನನ್ನು ಕೇಳುವುದು ಅಥವಾ ಸ್ವತಃ ತಾವೇ ಒಂದು ನಿರ್ಣಯ ಕೈಗೊಳ್ಳುವ ಸಂಪ್ರದಾಯವನ್ನು ಹುಟ್ಟು ಹಾಕಿಕೊಂಡಿದ್ದಾರೆ. ಆದರೆ ಕೊರೋನಾ ರಾಜಕೀಯದ ಭಅಗ ಅಲ್ಲ ಎಂಬುದು ನಮ್ಮ ನಿಮ್ಮೆಲ್ಲರ ದೌರ್ಬಲ್ಯ. ಯಡಿಯೂರಪ್ಪ ಅವರ ರಾಜಕೀಯ ಚಾಣಾಕ್ಷತೆಯನ್ನು ಯಾರೂ ಅಲ್ಲಗಳೆಯಲಾರರು. ಆದರೆ, ಕೊರೋನಾ ಅರೋಗ್ಯ ಸಂಬಂಧಿಸಿದ ವಿಚಾರ. ಈ ವೈರಸ್ ಬಂದಾಗಿನಿಂದ ಆರೋಗ್ಯ ಇಲಾಖೆ ತೆಗೆದುಕೊಳ್ಳುವ ನಿರ್ಣಯದಲ್ಲಿ ಹಲವಾರು ತಪ್ಪುಗಳು ಆಗಿದ್ದು ಈಗ ಇತಿಹಾಸ. ಇಂಥ ತಪ್ಪುಗಳು ಬಿ. ಶ್ರೀರಾಮುಲು ಮತ್ತು ಡಾ. ಸುಧಾಕರ್ ಅವರ ನಡುವಿನ ಜಗಳದಿಂದ ಆಯ್ತು ಎಂದು ಮಾಧ್ಯಮಗಳು ಬಿಂಬಿಸಿದವು. ಅದನ್ನು ಜನ ಕೂಡ ನಂಬಿದರು.
ಆದರೆ, ನಿನ್ನೆ ತೆಗೆದುಕೊಂಡ ನಿರ್ಣಯ, ಅದನ್ನು ಸುಳ್ಳಾಗಿಸಿತು. ಡಾ. ಸುಧಾಕರ್ ಬಂದ ಮೇಲೂ ಇಂಥದೊಂದು ತಪ್ಪು ನಿರ್ಣಯ ಆಗಿ ಹೋಯ್ತು. ಈ ಸರಕಾರಕ್ಕೆ ಕಾಡುತ್ತಿರುವ ಮೂಲಭೂತ ಸಮಸ್ಯೆ ಈಗ ಹೊರ ಬಂತು. ಇದಕ್ಕೆ ಒಳ್ಳೆ ಸಲಹೆಗಾರರು ಇಲ್ಲ. ಜಾತಿ ರಾಜಕೀಯದ ಸುಳಿಯಲ್ಲಿ ಸಿಲುಕಿರುವ ರಾಜ್ಕದ ಬಹುತೇಕ ಎಲ್ಲಾ ಪಕ್ಷಗಳ ನಾಯರಂತೆ ಯಡಿಯೂರಪ್ಪ ಕೂಡ ಹೊರಬಂದಿಲ್ಲ. ಆ ಭಾವನೆಯಿಂದ ಹೊರಬಂದು ಒಳ್ಳೆ ಸಲಹೆಗಾರರನ್ನು ಇಟ್ಟು ಕೊಳ್ಳುವ ಬಯಕೆ ಪ್ರಾಯಶಃ ಯಡಿಯೂರಪ್ಪ ಅವರಿಗೂ ಇಲ್ಲ ಎಂಬುದು ಈಗ ಸ್ಪಷ್ಟವಾಗುತ್ತಿದೆ. ಈ ಕೊರತೆ ಸರಕಾರಕ್ಕೆ ಕೆಟ್ಟ ಹೆಸರು ತಂದುಕೊಡಬಹುದು ಎನ್ನುವುದಕ್ಕಿಂತ, ಇಂಥ ನಿರ್ಣಯಗಳಿಂದ ಜನರಿಗೆ ತೊಂದರೆ ಆಗುವುದು ಖಂಡಿತ ಎನ್ನುವುದನ್ನು ಬಿಜೆಪಿ ನಾಯಕರು ಗಮನಿಸಬೇಕಾಗುತ್ತದೆ. ಯಡಿಯೂರಪ್ಪ ಅವರನ್ನು ಬದಲಿಸಿಬಟ್ಟರೆ ಎಲ್ಲ ಸರಿಯಾಗುತ್ತದೆ ಎಂದು ಕೆಲವರು ಹೇಳಿದರೆ ಅದು ಕೂಡ ಮತ್ತೆ ತಪ್ಪು ಗ್ರಹಿಕೆ (diagnosis) ಆಗುತ್ತದೆ.
ಎಲ್ಲ ಸಮಸ್ಯೆಗಳಿಗೂ ರಾಜಕೀಯ ಚಷ್ಮಾದ ಮೂಲಕ ಪರಿಹಾರ ಹುಡುಕುವ ಬಿಜೆಪಿಯ ಕೆಲ ನಾಯಕರಿಗೆ ಮತ್ತು ವಿರೋಧ ಪಕ್ಷದ ನಾಯಕರುಗಳಿಗೆ ಮೂಲಭೂತ ಸಮಸ್ಯೆ ಪರಿಹರಿಸುವ ಕಳಕಳಿ ಮತ್ತು ಜರೂರು ಕಾಣುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿಯವರನ್ನು ಬಯ್ಯುವ ಕಾಂಗ್ರೆಸ್ಸಿಗರು ಕೂಡ ಖಾಸಗಿಯಾಗಿ ಹೇಳುವ ಮಾತೊಂದಿದೆ: ಒಳ್ಳೇ ಅಧಿಕಾರಿ ಇದ್ದರೆ, ಅವರನ್ನು ಗುರುತಿಸಿ ಮೊದಲು ಕೇಂದ್ರಕ್ಕೆ ಕರೆಸಿಕೊಳ್ಳುತ್ತಾರೆ ಪ್ರಧಾನಿ ಮೋದಿ. ಕರ್ನಾಟಕದಲ್ಲಿ ಈ ಸಂಸ್ಕೃತಿ ಹಿಂದೆಯೂ ಇರಲಿಲ್ಲ, ಈಗಲೂ ಇಲ್ಲ. ವಿಷಯ ಪರಿಣಿತರನ್ನು ತೊಡಗಿಸುವುದಾಗಲೀ ಅಥವಾ ಯಾರಾದರೂ ಒಳ್ಳೆಯ ಸಲಹೆ ಕೊಟ್ಟರೆ ಅದನ್ನು ಒಪ್ಪಿಕೊಳ್ಳುವ ಪ್ರಾಂಜಲ ಮನಸ್ಸನ್ನು ಮೊದಲಿದ್ದ ಕಾಂಗ್ರೆಸ್ ಸರಕಾರ ಕೂಡ ಮಾಡಲಿಲ್ಲ. ಕಳೆದ ಇಪ್ಪತ್ತು ವರ್ಷಗಳ ಇತಿಹಾಸ ನೋಡಿದರೆ, ಎಸ್.ಎಮ್. ಕೃಷ್ಣ ಮಾತ್ರ ಇದಕ್ಕಿಂತ ಭಿನ್ನವಾಗಿದ್ದರು ಎಂಬುದು ಸ್ಪಷ್ಟವಾಗುತ್ತದೆ. ವಿಷಯ ಪರಿಣಿತರನ್ನು ಕೇಳಿ ಸಮಸ್ಯೆಗೆ ಪರಿಹಾರ ಹುಡುಕುವ ಸಂಪ್ರದಾಯವನ್ನು ಅವರು ಹಾಕಿಕೊಂಡಿದ್ದರು. ಅದಾದ ಮೇಲೆ ಯಾರು ಇಂಥ ಪ್ರಯೋಗಕ್ಕೆ ಕೈ ಹಾಕಿಲ್ಲ.
ಕೊವಿಡ್ ಮಾತ್ರ ಅಲ್ಲ, ಇಂತಹ ಅನೇಕ ಕ್ಲಿಷ್ಟ ವಿಷಯಗಳ ಬಗ್ಗೆ ಪರಿಣಿತರ ತಂಡವಿಟ್ಟುಕೊಂಡು ಸಲಹೆ ಪಡೆಯುವುದು ಮೊದಲ ಹಂತದ ಕೆಲಸವಾದರೆ ಅದಕ್ಕೆ ಪೂರಕವಾಗಿ, ಪ್ರಾಮಾಣಿಕ ಅಧಿಕಾರಿಗಳನ್ನು ಆಯಕಟ್ಟಿನ ಸ್ಥಾನದಲ್ಲಿಟ್ಟುಕೊಂಡು ಆಡಳಿತ ನಡೆಸುವ ಪ್ರೌಢಿಮೆ ಆಳುವ ಪಕ್ಷಕ್ಕೆ ಬಂದಾಗ ಮಾತ್ರ ಜನಕ್ಕೆ ಅನುಕೂಲವಾಗಬಹುದು. ಇಲ್ಲಾಂದ್ರೆ, ಸರಕಾರ ಬದಲಾದರೂ ಮುಂದುವರಿಯುವ ಸಮಸ್ಯೆಗಳನ್ನು ನೋಡಿ ಜನ ಭ್ರಮನಿರಸನಗೊಳ್ಳುವುದು ಖಂಡಿತ.
ರಾಜ್ಯದಲ್ಲಿ ನೈಟ್ ಕರ್ಫ್ಯೂ ವಾಪಸ್.. ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ




