ಗಾಂಧಿ, ನೆಹರು ಬಗ್ಗೆ ವಿವಾದಾತ್ಮಕ ಭಾಷಣ: ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್​​ಗೆ ಶಾಕ್​​ ಕೊಟ್ಟ ಖಾಕಿ

ವಿವಾದಾತ್ಮಕ ಭಾಷಣದ ಹಿನ್ನೆಲೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಯಾದಗಿರಿಯ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಯತ್ನಾಳ್ ರಾಷ್ಟ್ರಪಿತ ಗಾಂಧಿ ಹಾಗೂ ಮೊದಲ ಪ್ರಧಾನಿ ನೆಹರು ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ದ್ವೇಷ ಭಾಷಣ ಮತ್ತು ಸಮುದಾಯಗಳ ನಡುವೆ ಅಶಾಂತಿ ಉಂಟುಮಾಡುವ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.

ಗಾಂಧಿ, ನೆಹರು ಬಗ್ಗೆ ವಿವಾದಾತ್ಮಕ ಭಾಷಣ: ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್​​ಗೆ ಶಾಕ್​​ ಕೊಟ್ಟ ಖಾಕಿ
ಶಾಸಕ ಯತ್ನಾಳ್​​
Image Credit source: Google
Edited By:

Updated on: Feb 25, 2026 | 3:15 PM

ಯಾದಗಿರಿ, ಫೆಬ್ರವರಿ 25: ಗಾಂಧಿ, ನೆಹರು ಬಗ್ಗೆ ಅವಹೇಳನಕಾರಿ, ದ್ವೇಷ ಭಾಷಣ ಆರೋಪ ಹಿನ್ನೆಲೆ ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್​​​​ ವಿರುದ್ಧ ಗುರುಮಠಕಲ್ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಫೆ.21ರಂದು ಯಾದಗಿರಿ ಜಿಲ್ಲೆ ಗುರುಮಠಕಲ್ ಪಟ್ಟಣದಲ್ಲಿ ನಡೆದಿದ್ದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದ ಯತ್ನಾಳ್​​, ಗಾಂಧಿ ಮತ್ತು ನೆಹರು ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಹೀಗಾಗಿ ಬಿಜೆಪಿ ಉಚ್ಛಾಟಿತ ಶಾಸಕನ ವಿರುದ್ಧ ಬಿಎನ್‌ಎಸ್ 196, 299, 302, 352, 353 ಅಡಿ ಪೊಲೀಸರು ಸುಮೋಟೋ ಕೇಸ್ ದಾಖಲು ಮಾಡಿದ್ದಾರೆ.

ಯತ್ನಾಳ್​​ ಏನು ಹೇಳಿದ್ದರು?

ಗಾಂಧೀಜಿಯನ್ನ ಭಾರತದ ರಾಷ್ಟ್ರಪಿತ ಎಂದು, ಜವಾಹರ ಲಾಲ್ ನೆಹರುರನ್ನು ಮೊದಲ ಪ್ರಧಾನಿ ಎಂದು ನಾನು ಒಪ್ಪಿಕೊಳ್ಳಲ್ಲ. ನಮ್ಮ ದೇಶದ ಮೊದಲ ಪ್ರಧಾನಿ ನೇತಾಜಿ ಸುಭಾಷ್ ಚಂದ್ರ ಬೋಸ್. ಕಾಶ್ಮೀರಕ್ಕೆ 370 ಕೊಟ್ಟಿದ್ದು ಯಾಕೆಂದ್ರೆ ಫಾರೂಕ್ ಅಬ್ದುಲ್ಲಾ ಜೊತೆ ನೆಹರುಗೆ ಲಿಂಕ್ ಇತ್ತು. ಇವರೆಲ್ಲರೂ ದೇಶದ ಸ್ವಾತಂತ್ರ್ಯಕ್ಕಾಗಿ ಉಪವಾಸ ಮಾಡುತ್ತಿರಲಿಲ್ಲ. ಕೋಲ್ಕತ್ತಾದಿಂದ 555 ಸಿಗರೇಟ್ ತರಿಸಿಕೊಂಡು ಸೇದುತ್ತಿದ್ದರು. ಗಾಂಧಿ ಚರಕ ತಿರುಗಿಸಿದ್ದರಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತ್ತಾ? ಹಾಗಿದ್ರೆ ನಾನು ಚರಕ ತಿರುಗಿಸುತ್ತೇನೆ, ನಾಳೆ ರಾಜ್ಯದ ಸಿಎಂ ಆಗ್ತೀನಾ? ಎಂದು ಯತ್ನಾಳ್​​ ಪ್ರಶ್ನಿಸಿದ್ದರು. ಅಲ್ಲದೆ ಭಾರತದಲ್ಲಿರುವ ಮುಸ್ಲಿಮರು ಒಂದೇ ಮಾತರಂ ಹೇಳಬೇಕು. ಇಲ್ಲದಿದ್ದರೆ ಗಾಂಧಿ ಕೊಟ್ಟ ಪಾಕಿಸ್ತಾನಕ್ಕೆ ಹೋಗಬೇಕೆಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಇದನ್ನೂ ಓದಿ:  ಗಾಂಧೀಜಿ ಭಾರತದ ರಾಷ್ಟ್ರಪಿತ ಅಲ್ಲ, ನೆಹರು ಮೊದಲ ಪ್ರಧಾನಿಯಲ್ಲ; ಶಾಸಕ ಯತ್ನಾಳ್​ ವಿವಾದಾತ್ಮಕ ಹೇಳಿಕೆ ವೈರಲ್

ಅಲ್ಲದೆ, ಲವ್ ಜಿಹಾದ್ ಕುರಿತು ಉಲ್ಲೇಖಿಸಿ, ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಮಾತನಾಡಿದ್ದಾರೆ. ಈ ಭಾಷಣವು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಸಮುದಾಯಗಳ ನಡುವೆ ಅಶಾಂತಿ ಉಂಟುಮಾಡುವ ಉದ್ದೇಶದಿಂದ ಮಾತನಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಹೀಗಾಗಿ ಪೊಲೀಸರು ಯತ್ನಾಳ್​​ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us