ಪ್ರತ್ಯೇಕ ರಸ್ತೆ ಅಪಘಾತ: ವೈದ್ಯ ವಿದ್ಯಾರ್ಥಿನಿ ಸೇರಿ ಮೂವರು ಸಾವು; ಮತ್ತೋರ್ವಳ ಸ್ಥಿತಿ ಗಂಭೀರ

ಯಾದಗಿರಿ ಮತ್ತು ಬೆಂಗಳೂರಿನಲ್ಲಿ ನಡೆದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ವೈದ್ಯ ವಿದ್ಯಾರ್ಥಿನಿ ಸೇರಿ ಮೂವರು ದಾರುಣವಾಗಿ ಮೃತಪಟ್ಟಿದ್ದಾರೆ. ಯಾದಗಿರಿಯಲ್ಲಿ ಕ್ರೂಸರ್‌-ಬೈಕ್‌ ಡಿಕ್ಕಿಯಾಗಿದ್ದರೆ, ಬೆಂಗಳೂರಿನಲ್ಲಿ ಟಿಪ್ಪರ್-ದ್ವಿಚಕ್ರ ವಾಹನದ ನಡುವೆ ಭೀಕರ ಅಪಘಾತ ನಡೆದಿದೆ. ಘಟನಾ ಸ್ಥಳಗಳಿಗೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಪ್ರತ್ಯೇಕ ರಸ್ತೆ ಅಪಘಾತ: ವೈದ್ಯ ವಿದ್ಯಾರ್ಥಿನಿ ಸೇರಿ ಮೂವರು ಸಾವು; ಮತ್ತೋರ್ವಳ ಸ್ಥಿತಿ ಗಂಭೀರ
ಮೃತ ವಿದ್ಯಾರ್ಥಿನಿ ಕೃತಿಕಾ
Image Credit source: Tv9 Kannada
Edited By:

Updated on: Mar 12, 2026 | 12:38 PM

ಯಾದಗಿರಿ/ಬೆಂಗಳೂರು, ಮಾರ್ಚ್​​ 12: ರಾಜ್ಯದ ಯಾದಗಿರಿ ಮತ್ತು ಬೆಂಗಳೂರಿನಲ್ಲಿ ನಡೆದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ವೈದ್ಯ ವಿದ್ಯಾರ್ಥಿನಿ ಸೇರಿ ಮೂವರು ಮೃತಪಟ್ಟಿದ್ದು, ಮತ್ತೋರ್ವಳು ಗಂಭೀರ ಗಾಯಗೊಂಡಿದ್ದಾಳೆ. ಯಾದಗಿರಿಯಲ್ಲಿ ಕ್ರೂಸರ್​ ವಾಹನ ಡಿಕ್ಕಿಯಾಗಿ ಇಬ್ಬರು ಬೈಕ್​​ ಸವಾರರು ಮೃತಪಟ್ಟಿದ್ದರೆ, ಇತ್ತ ಬೆಂಗಳೂರಲ್ಲಿ ಟಿಪ್ಪರ್​ಗೆ ದ್ವಿಚಕ್ರ ವಾಹನ ಡಿಕ್ಕಿಯಾಗಿ ಓರ್ವ ಯುವತಿ ಮೃತಪಟ್ಟಿದ್ದಾಳೆ. ಸಹ ಸವಾರಳ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಘಟನಾ ಸ್ಥಳಗಳಿಗೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಬೈಕ್​​ಗೆ ಡಿಕ್ಕಿಯಾಗಿ ಕ್ರೂಸರ್​​ ಪಲ್ಟಿ

ಪಲ್ಟಿಯಾಗಿರುವ ಕ್ರೂಸರ್​​ ವಾಹನ

ಕ್ರೂಸರ್ ಹಾಗೂ ಬೈಕ್ ನಡುವೆ ಮುಖಾಮುಖಿ ‌ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್​ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಆಲ್ದಾಳ ಬಳಿ ನಡೆದಿದೆ. ಬೈಕ್​​ಗೆ ಗುದ್ದದ ಬಳಿಕ ನಿಯಂತ್ರಣ ತಪ್ಪಿ ಕ್ರೂಸರ್​​ ಪಲ್ಟಿಯಾಗಿದ್ದು, ವಾಹನದಲ್ಲಿದ್ದ ಪ್ರಯಾಣಿಕರಿಗೂ ಗಾಯಗಳಾಗಿವೆ. ಮೃತ ವ್ಯಕ್ತಿಗಳು ಶಹಾಪುರ ತಾಲೂಕಿನ ಗೋಗಿ ಗ್ರಾಮದವರು ಎಂಬುದು ಗೊತ್ತಾಗಿದ್ದು, ಘಟನಾ ಸ್ಥಳಕ್ಕೆ ಕೆಂಭಾವಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಪೋಕ್ಸೋ ಪ್ರಕರಣ; ಮಲ್ಲಿಕಾರ್ಜು ಮುತ್ಯಾಗೆ ಬಿಗ್ ಶಾಕ್ ಕೊಟ್ಟ ಕೋರ್ಟ್

ಟಿಪ್ಪರ್​ಗೆ ದ್ವಿಚಕ್ರ ವಾಹನ ಡಿಕ್ಕಿ

ಬೆಂಗಳೂರಿನ ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಬಳಿ ಟಿಪ್ಪರ್​​ಗೆ ದ್ವಿಚಕ್ರ ವಾಹನ​ ಡಿಕ್ಕಿಯಾಗಿ ವೈದ್ಯ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ಕೃತಿಕಾ(21) ಸ್ಥಳದಲ್ಲೇ ಪ್ರಾಣಬಿಟ್ಟಿದ್ದರೆ, ಹಂಸ ಎಂಬಾಕೆಯ ಸ್ಥಿತಿ ಗಂಭೀರವಾಗಿದೆ. ನಿನ್ನೆ ಸಂಜೆ ಕಾಲೇಜು ಮುಗಿಸಿ ಕೃತಿಕಾ ಮತ್ತು ಹಂಸ ತೆರಳುತ್ತಿದ್ದರು.  ಈ ವೇಳೆ ಅವಘಾತ ನಡೆದಿದ್ದು, ಸವಾರರು ನೆಲಕ್ಕೆ ಬಿದ್ದಿದ್ದಾರೆ.  ಟಿಪ್ಪರ್​ ಹರಿದ ಪರಿಣಾಮ ಕೃತಿಕಾ ದುರ್ಮರಣ ಹೊಂದಿದ್ದರೆ, ಗಂಭೀರ ಗಾಯಗೊಂಡ ಹಂಸಗೆ ಆರ್​ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಇನ್ನು ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಪಶ್ಚಿಮ ವಿಭಾಗ ಸಂಚಾರ ಡಿಸಿಪಿ ಅನೂಪ್ ಶೆಟ್ಟಿ, ಮೈಸೂರು ರಸ್ತೆಯ ಆರ್.ಆರ್. ಆಸ್ಪತ್ರೆ ಎಕ್ಸಿಟ್ ಗೇಟ್​​ನಲ್ಲಿ ಘಟನೆ ನಡೆದಿದೆ. ಇಬ್ಬರು ಮೆಡಿಕಲ್ ವಿದ್ಯಾರ್ಥಿನಿಯರು ದ್ವಿಚಕ್ರ ವಾಹನದಲ್ಲಿ ತೆರಳುವಾಗ ಬೆಂಗಳೂರಿಂದ ಮೈಸೂರು ಕಡೆಗೆ ಹೋಗ್ತಿದ್ದ ಲಾರಿಗೆ ಡಿಕ್ಕಿ ಆಗಿ ಅಪಘಾತ ನಡೆದಿದೆ. ದ್ವಿಚಕ್ರವಾಹನದಲ್ಲಿ ಹಿಂಬದಿ ಕುಳಿತಿದ್ದ ಕೃತಿಕಾ ಮೃತಪಟ್ಟಿದ್ದರೆ, ವಾಹನ ಚಲಾಯಿಸುತ್ತಿದ್ದ ಮತ್ತೋರ್ವಳಿಗೆ ಗಾಯವಾಗಿದೆ. ಮೃತಳು ಆರ್.ಆರ್.ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿನಿ ಎಂದು ಅವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 12:36 pm, Thu, 12 March 26

Follow Us