ಪಿಯು ಬೋರ್ಡ್, ಕಾಲೇಜಿನ ಎಡವಟ್ಟು: ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳು ಕಂಗಾಲು

ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭಗೊಂಡಿದ್ದು, ಯಾದಗಿರಿಯಲ್ಲಿ ಪಿಯು ಮಂಡಳಿ ಹಾಗೂ ಕಾಲೇಜಿನ ಎಡವಟ್ಟಿನಿಂದ ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದಾರೆ. ಹಾಲ್ ಟಿಕೆಟ್‌ನಲ್ಲಿ ಪರೀಕ್ಷಾ ಕೇಂದ್ರದ ವಿಳಾಸ ತಪ್ಪಾಗಿ ನಮೂದಾಗಿದ್ದರಿಂದ ಬೇರೆ ಬೇರೆ ಊರುಗಳಿಂದ ಬಂದವರು ಕೇಂದ್ರ ಹುಡುಕಲು ಗಂಟೆಗಟ್ಟಲೆ ಅಲೆದಾಡಿರುವ ಪ್ರಸಂಗ ನಡೆದಿದೆ.

ಪಿಯು ಬೋರ್ಡ್, ಕಾಲೇಜಿನ ಎಡವಟ್ಟು: ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳು ಕಂಗಾಲು
ಹಾಲ್‌ ಟಿಕೆಟ್‌ನಲ್ಲಿ ನಮೂದಿಸಿರುವ ತಪ್ಪು ವಿಳಾಸ ಪ್ರರ್ಶಿಸುತ್ತಿರುವ ವಿದ್ಯಾರ್ಥಿಗಳು
Image Credit source: Tv9 Kannada
Edited By:

Updated on: Feb 28, 2026 | 9:16 AM

ಯಾದಗಿರಿ, ಫೆಬ್ರವರಿ 28: ರಾಜ್ಯದಲ್ಲಿ ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾಗಿದ್ದು, 7.10 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಎಕ್ಸಾಂ ಬರೆಯುತ್ತಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನೇತೃತ್ವದಲ್ಲಿ ರಾಜ್ಯದ್ಯಂತ 1,217 ಕೇಂದ್ರಗಳಲ್ಲಿ ಎಕ್ಸಾಂ ನಡೆಯುತ್ತಿದ್ದು, ಪರೀಕ್ಷೆ ಹಿನ್ನೆಲೆ ಸಿಸಿ ಕ್ಯಾಮರಾ ಕಣ್ಗಾವಲು ಸೇರಿದಂತೆ ಬಿಗಿ ಭದ್ರತೆ ಒದಗಿಸಲಾಗಿದೆ. ಈ ನಡುವೆ ಪಿಯು ಬೋರ್ಡ್ ಹಾಗೂ ಕಾಲೇಜು ಆಡಳಿತ ಮಂಡಳಿ ಮಾಡಿರುವ ಯಡವಟ್ಟಿಗೆ ಎಕ್ಸಾಂ ಬರೆಯಲು ಬಂದ ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿರುವ ಪ್ರಸಂಗ ಯಾದಗಿರಿಯಲ್ಲಿ ನಡೆದಿದೆ.

ಪರೀಕ್ಷಾ ಕೇಂದ್ರ ಹುಡುಕಲು ಪರದಾಟ

ಪರೀಕ್ಷಾ ಕೇಂದ್ರ ಇರೋದೆ ಒಂದು ಕಡೆಯಾದರೆ ಹಾಲ್‌ ಟಿಕೆಟ್‌ನಲ್ಲಿ ನಮೂದಿಸಿರುವ ವಿಳಾಸವೇ ಬೇರೆ ಆಗಿರುವ ಕಾರಣಕ್ಕೆ ದ್ವೀತಿಯ ಪಿಯು ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳು ಯಾದಗಿರಿಯಲ್ಲಿ ಪರದಾಡಿದ್ದಾರೆ. ಯಾದಗಿರಿ ನಗರ ಸಬಾ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರದ ವಿಚಾರವಾಗಿ ಗೊಂದಲ ಉಂಟಾಗಿದ್ದು, ಬೇರೆ ಬೇರೆ ಊರುಗಳಿಂದ‌ ಬಂದ ವಿದ್ಯಾರ್ಥಿಗಳು ಕೆಲ ಕಾಲ ಆತಂಕ್ಕೆ ಒಳಗಾದ ಪ್ರಸಂಗ ನಡೆದಿದೆ. ಕಾಲೇಜು ಇರೋದು ಲುಂಬಿನಿ ಪಾರ್ಕ್ ಹತ್ತಿರವಾದ್ರೆ, ಹಾಲ್ ಟಿಕೆಟ್​​ನಲ್ಲಿ ಗಂಜ್ ರೋಡ್ ಎಂದು ನಮೂದಿಸಲಾಗಿದೆ. ಹೀಗಾಗಿ ಗಂಟೆಗಳ ಕಾಲ ಪರೀಕ್ಷಾ ಕೇಂದ್ರಕ್ಕಾಗಿ ಹುಡುಕಾಡಿರುವ ವಿದ್ಯಾರ್ಥಿಗಳು ಅಂತಿಮವಾಗಿ ಸ್ಥಳೀಯರ ಸಹಾಯದಿಂದ ಸಬಾ ಪಿಯು ಕಾಲೇಜು ತಲುಪಿದ್ದಾರೆ.

ಇದನ್ನೂ ಓದಿ: ನಕಲಿ ಪ್ರಶ್ನೆಪತ್ರಿಕೆ ಹಾವಳಿ; ವಿದ್ಯಾರ್ಥಿಗಳೇ ನಂಬಿ ಮೋಸ ಹೋಗದಿರಿ ಎಂದ KSEAB

ಇಂದಿನಿಂದ ಮಾರ್ಚ್ 17ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದ್ದು, ಪರೀಕ್ಷಾ ಕೇಂದ್ರಕ್ಕೆ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಮೊಬೈಲ್ ನಿರ್ಬಂಧ ವಿಧಿಸಲಾಗಿದೆ. ಪರೀಕ್ಷೆ ವೇಳೆ ಎಲೆಕ್ಟ್ರಾನಿಕ್ ಸಾಮಗ್ರಿ ವಸ್ತುಗಳ ಬಳಕೆ, ಅನಧಿಕೃತ ವ್ಯಕ್ತಿಗಳ ಪ್ರವೇಶ, ಚಿತ್ರೀಕರಣವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಿಷೇಧಿತ ವಲಯದಲ್ಲಿ ಸ್ಫೋಟಕ ವಸ್ತು ತೆಗೆದುಕೊಂಡು ಹೋಗುವಂತಿಲ್ಲ. ಜೊತಗೆ ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಸಿ.ಸಿ.ಕ್ಯಾಮರಾ ಅಳವಡಿಕೆ ಕಡ್ಡಾಯ ಮಾಡಲಾಗಿದೆ.

ವಿದ್ಯಾರ್ಥಿಗಳಿಗೆ ಸಿಎಂ ಶುಭ ಹಾರೈಕೆ

ದ್ವಿತೀಯ ಪಿಯುಸಿ ಪರೀಕ್ಷೆ ಹಿನ್ನೆಲೆ ವಿದ್ಯಾರ್ಥಿಗಳಿಗೆ ಸಿಎಂ ಸಿದ್ದರಾಮಯ್ಯ ಶುಭಾಶಯ ತಿಳಿಸಿದ್ದಾರೆ. ಪರೀಕ್ಷೆ ಎದುರಿಸುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಕೆಗಳು. ದ್ವಿತೀಯ ಪಿಯು ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ. ಉತ್ತಮ ಅಂಕಗಳ ಜೊತೆಗೆ ಉಜ್ವಲ ಭವಿಷ್ಯವೂ ನಿಮ್ಮದಾಗಲಿ ಎಂದು ಎಕ್ಸ್​​ ಪೋಸ್ಟ್​​ ಮೂಲಕ ಸಿಎಂ ಹಾರೈಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 9:10 am, Sat, 28 February 26

Loading...
Unable to load recommendations.
Follow Us