ಅಮಿತ್​ ಶಾ ಗೂಂಡಾ, ರೌಡಿ ಎಂಬ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ ಯತೀಂದ್ರ ಸಿದ್ದರಾಮಯ್ಯ

ಬಿಜೆಪಿ ನಾಯಕ ಹಾಗೂ ಕೇಂದ್ರ ಗೃಹ ಸಚಿವ ಅಮಿತ್​ ಶಾ ಗೂಂಡಾ, ರೌಡಿ ಎಂದು ಯತೀಂದ್ರ ಸಿದ್ದರಾಮಯ್ಯ ಅವರು ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇದೀಗ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದು, ಸಿಬಿಐ ನ್ಯಾಯಾಲಯಕ್ಕೆ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿದ್ದೇನೆ ಎಂದಿದ್ದಾರೆ.

ಅಮಿತ್​ ಶಾ ಗೂಂಡಾ, ರೌಡಿ ಎಂಬ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ ಯತೀಂದ್ರ ಸಿದ್ದರಾಮಯ್ಯ
ಯತೀಂದ್ರ ಸಿದ್ದರಾಮಯ್ಯ
Edited By: ವಿವೇಕ ಬಿರಾದಾರ

Updated on: Mar 31, 2024 | 3:33 PM

ಕೊಡಗು, ಮಾರ್ಚ್​​ 31: ಬಿಜೆಪಿ (BJP) ನಾಯಕ ಹಾಗೂ ಕೇಂದ್ರ ಗೃಹ ಸಚಿವ ಅಮಿತ್​ ಶಾ (Amit Shah) ಗೂಂಡಾ, ರೌಡಿ ಎಂಬ ತಮ್ಮ ಹೇಳಿಕೆಗೆ ಕಾಂಗ್ರೆಸ್​ (Congress) ಮುಖಂಡ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaih) ಪುತ್ರ ಯತೀಂದ್ರ ಸಿದ್ದರಾಮಯ್ಯ (Yatindra Siddaramaiah) ಸ್ಪಷ್ಟನೆ ನೀಡಿದ್ದು, ಸಿಬಿಐ ನ್ಯಾಯಾಲಯಕ್ಕೆ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿದ್ದೇನೆ ಎಂದಿದ್ದಾರೆ. ವಿರಾಜಪೇಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸೊಹ್ರಾಬುದ್ದೀನ್ ನಕಲಿ ಎನ್​ಕೌಂಟರ್​ ಪ್ರಕರಣದಲ್ಲಿ ಸಿಬಿಐ ಅಮಿತ್ ಶಾ ರೌಡಿ ಅಂತ ಹೇಳಿತ್ತು. ಹೀಗಾಗಿ ಸಿಬಿಐ ಹೇಳಿಕೆಯನ್ನು ನಾನು ಪ್ರಸ್ತಾಪಿಸಿದ್ದೇನೆ. ನನ್ನ ಹೇಳಿಕೆ ಸಂಬಂಧ ನೀಡಿದ ನೋಟಿಸ್​ಗೆ ನಾನು ಉತ್ತರಿಸುತ್ತೇನೆ ಅಂತ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಯತೀಂದ್ರ ಸಿದ್ದರಾಮಯ್ಯ ಹೇಳಿದ್ದೇನು?

ಚಾಮರಾಜನಗರದ ಹನೂರಿನಲ್ಲಿ ಗುರುವಾರ (ಮಾರ್ಚ್​​ 29) ರಂದು ನಡೆದ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ “ಕೇಂದ್ರ ಗೃಹ ಸಚಿವ ಅಮಿತ್‌ ಶಾ ಒಬ್ಬ ‘ಗೂಂಡಾ, ರೌಡಿ’. ಪ್ರಧಾನಿ ಮೋದಿ ಅವರಿಗೆ ಇಂಥವರೇ ಸಹವರ್ತಿಗಳು. ಅಮಿತ್ ಶಾ ಗುಜರಾತ್‌ನಲ್ಲಿ ಕೊಲೆ ಆರೋಪ ಎದುರಿಸುತ್ತಿದ್ದಾರೆ. ಅವರಿಗೆ ಅಪರಾಧ ಚಟುವಟಿಕೆಗಳ ಹಿನ್ನೆಲೆ ಇದೆ. ಆದರೆ ಈಗ ಅವರು ದೇಶದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ ಎಂದು ಹೇಳಿದ್ದರು.

ಇದನ್ನೂ ಓದಿ: ಸಿಎಂ ಜತೆ ವೇದಿಕೆ ಹಂಚಿಕೊಂಡಿದ್ದ ತನ್ವೀರ್​ ಪೀರಾ ವಿರುದ್ಧ ತನಿಖೆ ನಡೆಸುವಂತೆ ಅಮಿತ್​ ಶಾಗೆ ಪತ್ರ ಬರೆದ ಯತ್ನಾಳ್​

ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು, ಖಂಡನೆ

ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಖಂಡಿಸಿ ರಾಜ್ಯ ಬಿಜೆಪಿ ನಾಯಕರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಯತೀಂದ್ರ ಸಿದ್ದರಾಮಯ್ಯಗೆ ಪ್ರಬುದ್ಧತೆ ಇಲ್ಲ ಅಂತ ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದರು. ಇನ್ನು ಶಾಸಕ ಅಶ್ವತ್ಥ್ ನಾರಾಯಣ “ಕೀಳು ಮಟ್ಟದ ಹೇಳಿಕೆ ಸರಿಯಲ್ಲ, ಯತೀಂದ್ರ ಸಿದ್ದರಾಮಯ್ಯ ಕೂಡಲೇ ಕ್ಷಮೆ ಯಾಚಿಸಬೇಕು ಅಂತ ಆಗ್ರಹಿಸಿದ್ದರು. ಮಾಜಿ ಸಚಿವ ಸಿ.ಟಿ.ರವಿ “ಅಪ್ಪನ ದುಡ್ಡಿನ ಮೇಲೆ ಶಾಸಕ ಆದವರು‌ ಹೀಗೆ ಮಾತನಾಡುವುದು” ಅಂತ ಟಾಂಗ್ ಕೊಟ್ಟರು​.

ಪ್ರಧಾನಿ ಮೋದಿ ಹಾಗೂ ಕೇಂದ್ರ ನಾಯಕರ ವಿರುದ್ಧ ಕಾಂಗ್ರೆಸ್ ಪಕ್ಷದ ನಾಯಕರ ಆಕ್ಷೇಪಾರ್ಹ ಹೇಳಿಕೆಗಳು ಮುಂದುವರಿದಿವೆ. ‘ಮೋದಿ ಮೋದಿ’ ಎಂದು ಘೋಷಣೆ ಕೂಗುವ ಯುವಕರು ಮತ್ತು ವಿದ್ಯಾರ್ಥಿಗಳ ಕಪಾಳಕ್ಕೆ ಬಾರಿಸಬೇಕು ಎಂದು ಇತ್ತೀಚೆಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಹೇಳಿದ್ದು ವಿವಾದಕ್ಕೀಡಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:53 pm, Sun, 31 March 24

Loading...
Unable to load recommendations.
Follow Us