ರಾಜಧಾನಿ ಬೆಂಗಳೂರು ಹೆಬ್ಬಾಗಿಲಲ್ಲೇ ನಡೀತು ಸಿನಿಮಾ ಶೈಲಿಯ ಕಿಡ್ನಾಪ್, ಎರಡು ದಿನಗಳ ಬಳಿಕ ಯುವಕನ ಮೃತದೇಹ ಪತ್ತೆ

| Updated By: Rakesh Nayak Manchi

Updated on: Oct 13, 2023 | 2:08 PM

ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ಟೋಬರ್ 5 ರಂದು ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಯುವಕನ್ನು ಸಿನಿಮೀಯ ಶೈಲಿಯಲ್ಲಿ ಕಿಡ್ನಾಪ್ ಮಾಡಲಾಗಿತ್ತು. ಇದಾದ ಎರಡು ದಿನಗಳ ಬಳಿಕ ಇದೇ ಯುವಕನ ಮೃತದೇಹ ನೆಲಮಂಗಲದ ಚಿಕ್ಕಚಿಕ್ಕನಹಳ್ಳಿ ಬಳಿ ಪತ್ತೆಯಾಗಿದೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪೋಷಕರು ಮಿಸ್ಸಿಂಗ್ ದೂರು ಕೊಟ್ಟಾಗಲೇ ಈ ಪ್ರಕರಣ ಬೆಳಕಿಗೆ ಬಂದಿದೆ.

ನೆಲಮಂಗಲ, ಅ.13: ಕೆಲಸಕ್ಕೆ ಹೋದ ಮಗ ಮನೆಗೆ ಬರುವವರೆಗೆ ಪೋಷಕರಿಗೆ ನೆಮ್ಮದಿಯೇ ಇರಲ್ಲ. ಹಾಗಾಗಿದೆ ಬೆಂಗಳೂರಿನ (Bengaluru) ಪರಿಸ್ಥಿತಿ. ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಿಂದ ಸಿನಿಮೀಯ ಶೈಲಿಯಲ್ಲಿ ಕಿಡ್ನಾಪ್ ಆಗಿದ್ದ ಯುವಕನ ಮೃತದೇಹ ನೆಲಮಂಗಲದ ಚಿಕ್ಕಚಿಕ್ಕನಹಳ್ಳಿ ಬಳಿ ಪತ್ತೆಯಾಗಿದೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪೋಷಕರು ಮಿಸ್ಸಿಂಗ್ ದೂರು ಕೊಟ್ಟಾಗಲೇ ಅಪಹರಣ ಮತ್ತು ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

ಡಿಪ್ಲೋಮಾದಲ್ಲಿ ಇಂಜಿನಿಯರಿಂಗ್ ಮಾಡಿದ್ದ ದಾವಣಗೆರೆ ಮೂಲದ ಯುವಕ ಲೋಕೇಶ್ ಎಂಬವರು ಪೀಣ್ಯ ಬಳಿಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಅಕ್ಟೋಬರ್ 5 ರಂದು ಕಚೇರಿ ಕೆಲಸ ಮುಗಿಸಿ ನಾಗಸಂದ್ರ ಬಳಿ ಬರುತ್ತಿದ್ದ ಲೋಕೇಶ್, ಇನ್ನೇನು ಮನೆಗೆ ತಲುಪುವ ವೇಳೆ ಕಿಡ್ನಾಪ್ ಆಗಿದ್ದಾರೆ.

ಇತ್ತ, ಮಗ ಮನೆಗೆ ಬಾರದ್ದನ್ನು ನೋಡಿ ಗಾಬರಿಗೊಂಡ ಪೋಷಕರು, ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ದಾರಿಯಲ್ಲಿದ್ದ ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕಿಡ್ನಾಫ್ ಆಗಿರುವುದು ತಿಳಿದು ಬಂದಿದೆ.

ಇದನ್ನೂ ಓದಿ: ಚಿತ್ರದುರ್ಗ: ಪ್ರೀತಿ ತಿರಸ್ಕರಿಸಿದ್ದಕ್ಕೆ ಕಿಡ್ನಾಪ್ ಮಾಡಿ ಅತ್ಯಾಚಾರವೆಸಗಿ ಯುವತಿ ಕೊಂದ ಪಾಗಲ್ ಪ್ರೇಮಿ

ಇಬ್ಬರು ವ್ಯಕ್ತಿಗಳು ಲೋಕೇಶ್ ಅವರನ್ನು ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಹೆದ್ದಾರಿ ಪಕ್ಕದಲ್ಲಿ ಬಲವಂತವಾಗಿ ಬೈಕ್​ನಲ್ಲಿ ಕೂರಿಸಿ ಕಿಡ್ನಾಪ್ ಮಾಡಿದ್ದಾರೆ. ಅಕ್ಟೋಬರ್ 5 ರಂದು ಕಿಡ್ನಾಪ್ ಮಾಡಲಾಗಿದ್ದು, 8 ರಂದು ನೆಲಮಂಗಲದ ಚಿಕ್ಕಕುಕ್ಕನಹಳ್ಳಿ ಬಳಿ ಮೃತದೇಹ ಪತ್ತೆಯಾಗಿದೆ.

ಸದ್ಯ, ಪ್ರಕರಣ ದಾಖಲಿಸಿಕೊಂಡ ಮಾದನಾಯಕನಹಳ್ಳಿ ಠಾಣಾ ಪೊಲೀಸರು, ತನಿಖೆ ಆರಂಭಿಸಿದ್ದಾರೆ. ಲೋಕೇಶ್​ ಅವನರನ್ನು ಕಿಡ್ನಾಪ್ ಮಾಡಿದ್ದು ಯಾರು? ಕೊಲೆ ಮಾಡಿದ್ದು ಯಾರು? ಕೊಲೆಯಾಗಿದ್ದು ಎಲ್ಲಿ ಎಂಬಿತ್ಯಾದಿ ವಿಚಾರವಾಗಿ ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ