ನೆಲಮಂಗಲ, ರಾಮನಗರದಲ್ಲಿ ರಸ್ತೆ ಅಪಘಾತ: ಒಟ್ಟು ಮೂವರು ಸಾವು

ಕರ್ನಾಟಕದ ವಿವಿಧೆಡೆ ಗುರುವಾರ ಸಂಭವಿಸಿರುವ ಮೂರು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಮೂವರು ಸಾವನ್ನಪ್ಪಿದ್ದು, ಇತರ ಮೂವರಿಗೆ ಗಾಯಗಳಾಗಿವೆ

ನೆಲಮಂಗಲ, ರಾಮನಗರದಲ್ಲಿ ರಸ್ತೆ ಅಪಘಾತ: ಒಟ್ಟು ಮೂವರು ಸಾವು
ರಾಮನಗರದಲ್ಲಿ ಸಂಭವಿಸಿದ ಅಪಘಾತದಲ್ಲಿ ಜಖಂಗೊಂಡಿರುವ ವಾಹನಗಳು.
Edited By:

Updated on: Oct 14, 2021 | 8:50 PM

ಬೆಂಗಳೂರು: ರಾಜ್ಯದ ವಿವಿಧೆಡೆ ಗುರುವಾರ ಸಂಭವಿಸಿರುವ ಮೂರು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಮೂವರು ಸಾವನ್ನಪ್ಪಿದ್ದು, ಇತರ ಮೂವರಿಗೆ ಗಾಯಗಳಾಗಿವೆ. ನೆಲಮಂಗಲ ತಾಲ್ಲೂಕಿನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದರೆ, ರಾಮನಗರದಲ್ಲಿ ಸಂಭವಿಸಿದ ಅಪಘಾತದಲ್ಲಿ ಒಬ್ಬ ವ್ಯಕ್ತಿ ನಿಧನರಾಗಿದ್ದಾರೆ.

ನೆಲಮಂಗಲ ತಾಲ್ಲೂಕು ಹೊನ್ನೇನಹಳ್ಳಿ ಸಮೀಪ ಕಾರು-ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್‌ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟರು. ಮೃತರನ್ನು ಮುನಿರಾಜು ನಾಯ್ಕ (34), ಚಂದ್ರು ನಾಯ್ಕ (36) ಮೃತರು. ಘಟನೆ ನಂತರ ಚಾಲಕ ಸ್ಥಳದಲ್ಲಿಯೇ ಕಾರು ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ದಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಸಂಭವಿಸಿದೆ.

ರಾಮನಗರ: ಕಾರು ಡಿಕ್ಕಿ, ಯುವಕ ಸಾವು
ಕಾರು ಡಿಕ್ಕಿಯಾಗಿ ಯುವಕನೊಬ್ಬ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ರಾಮನಗರದ ‌ಎಪಿಎಂಸಿ ಸರ್ಕಲ್ ಸಮೀಪ ನಡೆದಿದೆ. ಅಪಘಾತದಲ್ಲಿ ಇತರ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಬಳಿಕ ಕಾರಿನಲ್ಲಿದ್ದವರು ಪರಾರಿಯಾಗಿದ್ದಾರೆ. ರಾಮನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನಿಂದ ಮೈಸೂರು ಕಡೆಗೆ ಹೊರಟಿದ್ದ ಇಂಡಿಕಾ ಕಾರು ಮೊದಲು ಬೈಕ್​ಗೆ ಗುದ್ದಿ ನಂತರ ರಸ್ತೆ ಬದಿಯಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆಯಿತು. ಅಪಘಾತದಲ್ಲಿ ಕಾರು ಪಲ್ಟಿಯಾಗಿದ್ದು, ಘಟನೆ ನಂತರ ಕಾರಿನ ಚಾಲಕ ಹಾಗೂ ಕಾರಿನಲ್ಲಿ ಇದ್ದವರು ಪರಾರಿಯಾದರು. ಮೃತ ಯುವಕನನ್ನು ಮಂಡ್ಯ ಮೂಲದ ಸೂರಿ (28) ಎಂದು ಗುರುತಿಸಲಾಗಿದೆ. ಸಂತೋಷ್, ಮಂಜುನಾಥ್, ಕುಂದೂರೇಗೌಡ ಗಾಯಗೊಂಡವರು.

ಕೊಳ್ಳೇಗಾಲ: ಬೈಕ್-ಬಸ್ ಡಿಕ್ಕಿ, ಸವಾರನಿಗೆ ಗಾಯ
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ತೇರಂಬಳ್ಳಿ ಗ್ರಾಮದ ಬಳಿ ಬೈಕ್-ಬಸ್ ಮುಖಾಮುಖಿಯಾಗಿದ್ದು, ಬೈಕ್ ಸವಾರ ಮಲ್ಲಣ್ಣ ಅವರ ತಲೆಗೆ ಗಂಭೀರಗಾಯವಾಗಿದೆ. ಸಮಯ ಸರಿಯಾಗಿ ಆ್ಯಂಬುಲೆನ್ಸ್ ಬಾರದ ಕಾರಣ ಗೂಡ್ಸ್ ವಾಹನದಲ್ಲಿ ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದರು. ಕೊಳ್ಳೇಗಾಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಲ್ಲಣ್ಣಗೆ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆ ಆವರಣದಲ್ಲಿ 4 ಆ್ಯಂಬುಲೆನ್ಸ್ ಇದ್ದರೂ ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಬರಲಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ವಿರುದ್ಧ ಗಾಯಾಳು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು. ಕೊಳ್ಳೇಗಾಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಸಂಭವಿಸಿದೆ.

ಮಾಲೂರು: ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಸಾವು
ವಾಟರ್ ಸರ್ವೀಸ್ ಸ್ಟೇಷನ್ ನಲ್ಲಿ ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದ ಮಾರುತಿ ಸರ್ವೀಸ್ ಸ್ಟೇಷನ್​ನಲ್ಲಿ ನಡೆದಿದೆ. ಕೆಜಿಎಫ್ ಮೂಲದ ಮೇಘನಾಥ್ (32) ಮೃತ ಕಾರ್ಮಿಕ. ಇಂದು ಆಯುಧಪೂಜೆ ಹಿನ್ನೆಲೆಯಲ್ಲಿ ವಾಹನಗಳ ವಾಟರ್ ಸರ್ವೀಸ್ ಮಾಡುವ ವೇಳೆ ಘಟನೆ ಸಂಭವಿಸಿದೆ.

ಇದನ್ನೂ ಓದಿ: ಉಪ್ಪಿನಂಗಡಿ ಬಳಿ ಭೀಕರ ಅಪಘಾತ; ಸರ್ಕಾರಿ ಬಸ್ ಹರಿದು ತಾಯಿ, ಮಗು ಸ್ಥಳದಲ್ಲೇ ಸಾವು
ಇದನ್ನೂ ಓದಿ: Russian Plane Crash: ರಷ್ಯಾದಲ್ಲಿ 23 ಪ್ರಯಾಣಿಕರಿದ್ದ ವಿಮಾನ ಅಪಘಾತ; 16 ಮಂದಿ ಸಾವು, 7 ಜನರ ರಕ್ಷಣೆ