ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ‘ಕಾಂಗ್ರೆಸ್‌ ಮುಕ್ತ’ ಗುರಿ ಹೊಂದಿದ್ದೇವೆ ಎಂದ DCM ಡಾ. ಅಶ್ವತ್ಥನಾರಾಯಣ

ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಬಿಜೆಪಿಯು ಕಾಂಗ್ರೆಸ್‌ ವಿರುದ್ಧದ ತನ್ನೆಲ್ಲ ಗುರಿಗಳನ್ನು ಸಾಧಿಸಿದೆ. ಇದೀಗ ಪಂಚಾಯಿತಿ ಮಟ್ಟದಲ್ಲೂ ಕಾಂಗ್ರೆಸ್​ನ್ನು ಮೂಲೋತ್ಪಾಟನೆ ಮಾಡುವುದು ನಿಶ್ಚಿತ.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ಕಾಂಗ್ರೆಸ್‌ ಮುಕ್ತ ಗುರಿ ಹೊಂದಿದ್ದೇವೆ ಎಂದ DCM ಡಾ. ಅಶ್ವತ್ಥನಾರಾಯಣ
DCM ಅಶ್ವತ್ಥನಾರಾಯಣ
Edited By:

Updated on: Apr 06, 2022 | 9:01 PM

ಮಂಗಳೂರು: ಕಾಂಗ್ರೆಸ್‌ ಮುಕ್ತ ಭಾರತದ ಗುರಿಯನ್ನು ರಾಷ್ಟ್ರಮಟ್ಟದಲ್ಲಿ ಬಿಜೆಪಿ ಸಾಧಿಸಿದೆ. ಮುಂದಿನ‌ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳನ್ನೂ ಕಾಂಗ್ರೆಸ್‌ ಮುಕ್ತವಾಗಿಸುವ ಉದ್ದೇಶವನ್ನು ನಮ್ಮ ಪಕ್ಷ ಸಾಧಿಸುತ್ತದೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್‌ ಪಕ್ಷವು ಇದೀಗ ದೇಶ ರಾಜಕಾರಣದಲ್ಲಿ ಅಪ್ರಸ್ತುತವಾಗಿದೆ. ನಾಯಕತ್ವದ ಕೊರತೆ, ಜನವಿರೋಧಿ ನೀತಿಗಳು, ರಾಷ್ಟ್ರದ ಹಿತಾಸಕ್ತಿ ಬಗ್ಗೆ ರಾಜಿ ಮುಂತಾದ ಕಾರಣಗಳಿಂದ ಆ ಪಕ್ಷವು ಜನಮಾನಸದಿಂದ ಮರೆಯಾಗಿಬಿಟ್ಟಿದೆ. ಹೀಗಾಗಿ ದೇಶದಲ್ಲಿ ಜನರ ಏಕೈಕ ರಾಜಕೀಯ ಆಯ್ಕೆ ಎಂದರೆ ಬಿಜೆಪಿ ಮಾತ್ರ ಎಂದರು.

ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಬಿಜೆಪಿಯು ಕಾಂಗ್ರೆಸ್‌ ವಿರುದ್ಧದ ತನ್ನೆಲ್ಲ ಗುರಿಗಳನ್ನು ಸಾಧಿಸಿದೆ. ಇದೀಗ ಪಂಚಾಯಿತಿ ಮಟ್ಟದಲ್ಲೂ ಕಾಂಗ್ರೆಸ್​ನ್ನು ಮೂಲೋತ್ಪಾಟನೆ ಮಾಡುವುದು ನಿಶ್ಚಿತ. ಆ ನಿಟ್ಟಿನಲ್ಲಿ ಪಕ್ಷವು ಗ್ರಾಮ ಸ್ವರಾಜ್ಯ ಕಾರ್ಯಕ್ರಮವನ್ನು ಹಾಕಿಕೊಂಡಿದೆ. ಲೋಕಮಾನ್ಯ ತಿಲಕರು ಹೇಳಿದ ಸ್ವರಾಜ್ಯ ಹಾಗೂ ಮಹಾತ್ಮ ಗಾಂಧಿ ಅವರು ನೀಡಿದ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯನ್ನು ಸಾಕಾರ ಮಾಡಲು 70 ವರ್ಷಗಳ ನಂತರ ಬಿಜೆಪಿ ಬರಬೇಕಾಯಿತು ಎಂದು ಡಿಸಿಎಂ ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಬದಲಾವಣೆ
ಇಡೀ ದೇಶಕ್ಕೆ ಹೊಸದಿಕ್ಕು ನೀಡಬೇಕು ಎಂಬ ಉದ್ದೇಶದಿಂದ ಕೇಂದ್ರ ಸರಕಾರವು ರಾಷ್ಟ್ರೀಯ ಶಿಕ್ಷಣ ನೀತಿ-2020 ನ್ನು ರೂಪಿಸಿದೆ. ಅದನ್ನು ಜಾರಿ ಮಾಡುತ್ತಿರುವ ರಾಜ್ಯವೆಂದರೆ ಕರ್ನಾಟಕ. ಬಹುವಿಷಯಾಧಾರಿತ, ಬಹುವಿಷಯ ಆಯ್ಕೆಯುಳ್ಳ, ವೈಜ್ಞಾನಿಕವಾದ ಹಾಗೂ ವಿದ್ಯಾರ್ಥಿಯ ಮೂರನೇ ವಯಸ್ಸಿನಿಂದಲೇ ವ್ಯವಸ್ಥಿತ ಶಿಕ್ಷಣವನ್ನು ನೀಡಲಾಗುವ ಈ ನೀತಿಯ ಜಾರಿಯೊಂದಿಗೆ ಇಡೀ ಶಿಕ್ಷಣ ಪದ್ಧತಿಗೆ ಪರಿಪೂರ್ಣತೆ ಬರುತ್ತದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

ಮಗುವಿಗೆ ಮೂರನೇ ವಯಸ್ಸಿನಿಂದಲೇ ವ್ಯವಸ್ಥಿತ ಶಿಕ್ಷಣ ನೀಡಬೇಕೆಂಬ ಚಿಂತನೆ ಬಹಳ ದಿನಗಳ ಹಿಂದಿನಿಂದಲೂ ಇತ್ತು. ಶಿಕ್ಷಣ ತಜ್ಞರು ಸಲಹೆ ಮಾಡುತ್ತಲೇ ಇದ್ದರು. ಆದರೆ, ಅದನ್ನು ಕಿವಿಗೆ ಹಾಕಿಕೊಳ್ಳುವಂಥ ಸರಕಾರ ಇರಲಿಲ್ಲ. ಮೋದಿ ಅವರು ಬಂದ ಕೂಡಲೇ ಈ ಬಗ್ಗೆ ಗಮನ ಹರಿಸಿದರು.

ಮೂರರಿಂದ ಆರನೇ ವಯಸ್ಸಿನಲ್ಲೇ ಶೇ 80ರಷ್ಟು ಕಲಿಕೆಯ ಸಾಮರ್ಥ್ಯ ಇರುತ್ತದೆ. ಮಕ್ಕಳಿಗೆ ಮೂರಕ್ಕೂ ಹೆಚ್ಚು ಭಾಷೆ ಕಲಿಯುವ ಶಕ್ತಿಯೂ ಇರುತ್ತದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಡಿಸಿಎಂ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಅಧ್ಯಕ್ಷ ‌ನಳಿನ್ ಕುಮಾರ್ ಕಟೀಲ್ ಸೇರಿದಂತೆ ಇತರ‌ ಮುಖಂಡರು ಭಾಗವಹಿಸಿದ್ದರು.

Published On - 1:04 pm, Sat, 28 November 20