ಡಿಕೆಶಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು -ವಿಡಿಯೋ ಹೇಳಿಕೆಗೆ ಈಶ್ವರಪ್ಪ ತಿರುಗೇಟು
ಅವರ ವೈಯಕ್ತಿಕ ಸಮಸ್ಯೆ ನೂರು ಇರುತ್ತೆ, ಅವರ ಮನೆಯವರನ್ನ ಕೇಳಬೇಕು. ರಾಜಕೀಯ ಒತ್ತಡ ಏನು ಅಂತಾ ನನಗೇನೂ ಗೊತ್ತು. ಇಂತಹ ವ್ಯಕ್ತಿ ಇಂತಹ ಕಾರಣಗಳಿಂದ ತೊಂದರೆ ಕೊಟ್ಟಿದ್ದಾರೆ ಅಂತಾ ಹೇಳಲಿ.

ಬೆಳಗಾವಿ: ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಸಚಿವ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಅವನ್ಯಾವೋನೋ ಸತ್ರೆ ಅಂತಾ ನನಗೆ ಪ್ರಶ್ನೆ ಕೇಳಿದ್ರೆ ಎಂದು ಮಾಧ್ಯಮದವರನ್ನೇ ಮೊದಲಿಗೆ ಪ್ರಶ್ನಿಸಿದ ಕೆ.ಎಸ್.ಈಶ್ವರಪ್ಪ ನಂತರ, ಸಂತೋಷ್ ಅವರು ಮಾತ್ರೆ ತೆಗೆದುಕೊಂಡು ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದಾರೆ ಅಂತಾ ಟಿವಿ9 ನಲ್ಲಿ ನೋಡಿದೆ. ರಾಜಕೀಯ ಒತ್ತಡದಿಂದ ಆತ್ಮಹತ್ಯೆ ಯತ್ನ ಎಂದು ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಒಂದು ಕೋಟಿಗೂ ಹೆಚ್ಚು ಬಿಜೆಪಿಯಲ್ಲಿ ಸದಸ್ಯರಿದ್ದಾರೆ.ಅವನು ಯಾಕೆ ಆತ್ಮಹತ್ಯೆಗೆ ಪ್ರಯತ್ನ ಮಾಡಿದ ಎಂದು ಪ್ರಶ್ನಿಸಿದರು.
ಅವರ ವೈಯಕ್ತಿಕ ಸಮಸ್ಯೆ ನೂರು ಇರುತ್ತೆ, ಅವರ ಮನೆಯವರನ್ನ ಕೇಳಬೇಕು. ರಾಜಕೀಯ ಒತ್ತಡ ಏನು ಅಂತಾ ನನಗೇನೂ ಗೊತ್ತು. ಇಂತಹ ವ್ಯಕ್ತಿ ಇಂತಹ ಕಾರಣಗಳಿಂದ ತೊಂದರೆ ಕೊಟ್ಟಿದ್ದಾರೆ ಅಂತಾ ಹೇಳಲಿ. ತೊಂದರೆ ಕೊಟ್ಟವರ ಬಗ್ಗೆ ಪೊಲೀಸ್ ಠಾಣೆಗೆ ದೂರು ಕೊಡಲಿ. ಅದನ್ನ ಬಿಟ್ಟು ಸುಮ್ಮನೇ ಹೇಳಿಕೆ ಕೊಟ್ಟು ಬಿಜೆಪಿ ಮೇಲೆ ಆಪಾದನೆ ಮಾಡುತ್ತಾ ಕುಳಿತರೇ? ಇದನ್ನ ಕಾಂಗ್ರೆಸ್, ಜೆಡಿಎಸ್ನವರು ಮಾಡಿದಾರೆ ಅಂತಾ ಹೇಳೋಕೆ ಬರುತ್ತಾ? ಎಂದರು.
‘ಇಂಥ ಹೇಳಿಕೆ ನೀಡುವುದಕ್ಕೆ ಡಿಕೆಶಿಗೆ ನಾಚಿಕೆಯಾಗಬೇಕು’ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮುಟ್ಠಾಳತನದ ಹೇಳಿಕೆ ನೀಡಿದ್ದಾರೆ. ಇಂಥ ಹೇಳಿಕೆ ನೀಡುವುದಕ್ಕೆ ಡಿಕೆಶಿಗೆ ನಾಚಿಕೆಯಾಗಬೇಕು. ಡಿ.ಕೆ.ಶಿವಕುಮಾರ್ ವಿಡಿಯೋ ಬಗ್ಗೆ ಹೇಳಿಕೆ ನೀಡಿದ್ದಾರೆ. ಡಿ.ಕೆ.ಶಿವಕುಮಾರ್ ಬಳಿ ವಿಡಿಯೋ ಇದ್ದರೆ ಮಾತನಾಡಲಿ. ವಿಡಿಯೋ ಇದೆ ಎಂದು ಹೇಳುವುದು ದಿಕ್ಕು ತಪ್ಪಿಸುವ ಕೆಲಸ ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದರು.
ಡಿ.ಕೆ.ಶಿವಕುಮಾರ್ ಬಳಿ ವಿಡಿಯೋ ಇದ್ದರೆ ಬಿಡುಗಡೆ ಮಾಡಲಿ. ಏನೇ ಅಪಾದನೆ ಮಾಡಬೇಕಾದರೂ ಡಾಕ್ಯುಮೆಂಟ್ ಬೇಕು. ಕಾಂಗ್ರೆಸ್ ನೆಲಕಚ್ಚಿದ್ದು ಈ ರೀತಿ ಸುಳ್ಳು ಆರೋಪ ಮಾಡ್ತಿದ್ದಾರೆ. ಪ್ರಚಾರಕ್ಕೆ ಈ ರೀತಿ ಹೇಳಿಕೆ ನೀಡಿದರೆ ಉಗ್ರವಾಗಿ ಖಂಡಿಸ್ತೇವೆ. ವಿಡಿಯೋ ಬಗ್ಗೆ ಪ್ರಸ್ತಾಪಿಸಿರುವ ಡಿಕೆಶಿ ಹೇಳಿಕೆಯಲ್ಲಿ ಆ ಶಾಸಕರು ಯಾರು? ಪರಿಷತ್ ಸದಸ್ಯರು ಯಾರು ಎಂಬುದನ್ನಾದರೂ ಹೇಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ಗೆ K.S.ಈಶ್ವರಪ್ಪ ಸವಾಲ್ ಹಾಕಿದರು.
Published On - 12:19 pm, Sat, 28 November 20




