
ಬೀದರ್: ಕರ್ನಾಟಕ ಮತ್ತು ಆಂಧ್ರ ಪ್ರದೇಶ ಎರಡೂ ರಾಜ್ಯಗಳಿಗೆ ವರದಾನವಾಗಿರುವ ಬೀದರ್ನ ಮಾಂಜ್ರಾ ನದಿಯ ಒಡಲನ್ನ ಅಕ್ರಮ ಮರುಳು ಧಂದೆ ಕೋರರು ಕೈಹಾಕಿದ್ದಾರೆ. ಮಳೆ ಕೈಕೊಟ್ಟಿದ್ದರಿಂದ ಮಾಂಜ್ರಾ ನದಿ ಬತ್ತಿಹೋಗಿದ್ದು, ಇದನ್ನ ಬಂಡವಾಳ ಮಾಡಿಕೊಂಡು ಅಗಲು ರಾತ್ರಿ ಎನ್ನದೇ ಮರಳನ್ನ ಸಾಗಿಸಲಾಗುತ್ತಿದೆ.
ಇಲ್ಲಿ ನಡೆಯುವ ಅಕ್ರಮ ಮರಳು ಸಾಗಾಣಿಕೆಯ ಹಿಂದೆ ಪೊಲೀಸರು ಕೂಡಾ ಕೈ ಜೋಡಿಸಿದ್ದು, ಯಾರ ಭಯವಿಲ್ಲದೆ ಮರಳನ್ನ ಮಾರಾಟಮಾಡಲಾಗುತ್ತಿದೆ. ನಂಬರ್ ಪ್ಲೇಟ್ ಇಲ್ಲದ ವಾಹನಗಳನ್ನ ಬಳಸಿ ಮರಳು ಲೂಟಿ ತುಂಬಿಕೊಂಡು ಪೋಲೀಸ್ ಠಾಣೆಯ ಎದುರುಗಡೆಯೇ ವಾಹನಗಳು ಹಾದುಹೋಗುತ್ತಿವೆ. ಆದರೂ ಸಹ ಪೊಲೀಸರು ಕಂಡು ಕಾಣದಂತೆ ಕುಳಿತಿರುವುದು ಹಲವಾರು ಅನುಮಾನಗಳಿ ಎಡೆ ಮಾಡಿಕೊಟ್ಟಿದೆ. ಯಾವುದೇ ಪರವಾನಿಗೆಯನ್ನೇ ಪಡೆಯದೇ ಕೆಲವು ಕಡೆಗಳಲ್ಲಿ ಅನಧಿಕೃತವಾಗಿ ಮರಳು ಸಾಗಣೆ ಮಾಡಲಾಗುತ್ತಿದೆ.
ಸಾವಿರಾರು ಟನ್ ಗಟ್ಟಲೇ ಮಾಂಜ್ರಾ ನದಿಯಿಂದ ಉತ್ತಮ ಗುಣಮಟ್ಟದ ಕಪ್ಪು ಪರಳನ್ನ ರಫ್ತು ಮಾಡಲಾಗ್ತಿದೆ. ಈ ಬಗ್ಗೆ ಪೊಲೀಸರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಾಗಲಿ ಕಣ್ಣೆತ್ತಿನೋಡುತ್ತಿಲ್ಲ. ನೂರಾರು ವಾಹನಗಳು ಹಗಲು ರಾತ್ರಿಯೆನ್ನದೇ ಮರಳು ಸಾಗಾಟ ಮಾಡೋದ್ರಿಂದ ಹಲವು ಗ್ರಾಮಗಳಲ್ಲಿ ಜನರು ರಾತ್ರಿ ನಿದ್ದೆ ಮಾಡಲು ಆಗದಂಥ ಸ್ಥಿತಿ ನಿರ್ಮಾಣವಾಗಿದೆ. ಮರಳು ಗಾರಿಕೆಯಿಂದ ನದಿಗಳ ಅಂತರ್ಜಲ ಬತ್ತಿ ಹೋಗುತ್ತಿದೆ. ಕುಡಿಯಲು ನೀರು ಸಿಗದ ವಾತಾವರಣ ನಿರ್ಮಾಣವಾಗುತ್ತಿದ್ದು, ಕೂಡಲೇ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಜನರು ಆಗ್ರಹಿಸಿದ್ದಾರೆ.
Published On - 12:49 pm, Fri, 29 May 20