ಅವಹೇಳನಕಾರಿ ಟ್ವೀಟ್ ಪ್ರಕರಣ​: ಕಂಗನಾ ರಣಾವತ್​ಗೆ ಕರ್ನಾಟಕ ಹೈಕೋರ್ಟ್​ನಲ್ಲಿ ಹಿನ್ನಡೆ!

ಕಾಂಟ್ರವರ್ಸಿ ಕ್ವೀನ್​, ನಟಿ ಕಂಗನಾ ರಣಾವತ್​ ಎದುರಿಸುತ್ತಿರುವ ಆರೋಪಗಳು ಒಂದೆರಡಲ್ಲ. ಕರ್ನಾಟಕದಲ್ಲಿಯೂ ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣದಿಂದ ತಪ್ಪಿಸಿಕೊಳ್ಳಲು ಕಂಗನಾ ಮಾಡಿದ ಪ್ರಯತ್ನ ಸದ್ಯಕ್ಕೆ ಫಲ ನೀಡಿಲ್ಲ.

ಅವಹೇಳನಕಾರಿ ಟ್ವೀಟ್ ಪ್ರಕರಣ​: ಕಂಗನಾ ರಣಾವತ್​ಗೆ ಕರ್ನಾಟಕ ಹೈಕೋರ್ಟ್​ನಲ್ಲಿ ಹಿನ್ನಡೆ!

Updated on: Mar 02, 2021 | 6:39 PM

ತಮ್ಮ ವಿರುದ್ಧ ತುಮಕೂರಿನಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಗೆ ತಡೆ ನೀಡಬೇಕು ಎಂದು ನಟಿ ಕಂಗನಾ ರಣಾವತ್​ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಸೂಕ್ತ ರೀತಿಯಲ್ಲಿ ಮಾಹಿತಿ ಒದಗಿಸಿಲ್ಲ ಎಂಬ ಕಾರಣಕ್ಕೆ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ. ಹೊಸ ರೈತ ಮಸೂದೆಯನ್ನು ವಿರೋಧಿಸುವವರನ್ನು ಭಯೋತ್ಪಾದಕರು ಎಂದು ಟ್ವೀಟ್​ ಮಾಡಿದ್ದ ಕಂಗನಾ ವಿರುದ್ಧ ವಕೀಲರೊಬ್ಬರು ದೂರು ದಾಖಲಿಸಿದ್ದರು.

”ಸಿಎಎ ವಿರುದ್ಧ ವದಂತಿ ಮತ್ತು ತಪ್ಪು ಮಾಹಿತಿಯನ್ನು ಹಬ್ಬಿಸಿ ದಂಗೆಗೆ ಕಾರಣರಾದ ಜನರೇ ಈಗ ರೈತ ಮಸೂದೆ ಬಗ್ಗೆ ತಪ್ಪು ಮಾಹಿತಿ ಹರಡುತ್ತ, ದೇಶದಲ್ಲಿ ಭಯ ಹುಟ್ಟಿಸುತ್ತಿದ್ದಾರೆ. ಅವರು ಭಯೋತ್ಪಾದಕರು” ಎಂದು ಕಂಗನಾ ರಣಾವತ್​ ಟ್ವೀಟ್ ಮಾಡಿದ್ದರು. ಈ ಬಗ್ಗೆ ತುಮಕೂರಿನಲ್ಲಿ ದಾಖಲಾಗಿದ್ದ ಪ್ರಕರಣವನ್ನು ವಜಾಗೊಳಿಸುವಂತೆ ಕೋರಿ ಕರ್ನಾಟಕ ಹೈಕೋರ್ಟ್​ನಲ್ಲಿ ಕಂಗನಾ ಮನವಿ ಸಲ್ಲಿಸಿದ್ದರು.

ಈ ಪ್ರಕರಣದ ಸಂಬಂಧ ಕಂಗನಾ ಪರ ವಕೀಲರು ಸಲ್ಲಿಸಿದ್ದ ಅರ್ಜಿಯು ಸರಿಯಾದ ಪ್ರಕಾರದಲ್ಲಿ ಇಲ್ಲ ಎಂದು ಕರ್ನಾಟಕ ಹೈಕೋರ್ಟ್​ ತಿಳಿಸಿದೆ. ‘ಮೊದಲು ನೀವು ಸರಿಯಾದ ರೀತಿಯಲ್ಲಿ ಮಾಹಿತಿ ಒದಗಿಸಿ. ನಂತರ ನಿಮ್ಮ ಅರ್ಜಿಯನ್ನು ಪರಿಗಣಿಸಲಾಗುವುದು’ ಎಂದು ಕಂಗನಾ ಪರ ವಕೀಲರಿಗೆ ಕೋರ್ಟ್​ ಸೂಚಿಸಿದೆ.

ಇದಲ್ಲದೆ, ಮುಂಬೈನಲ್ಲಿಯೂ ಕಂಗನಾ ಮತ್ತು ಅವರ ಸಹೋದರಿ ರಂಗೋಲಿ ಚಂಡೇಲ್​ ವಿರುದ್ಧ ನಾಲ್ಕು ಕ್ರಿಮಿನಲ್​ ಪ್ರಕರಣ ದಾಖಲಾಗಿವೆ. ಆದರೆ ಈ ಪ್ರಕರಣಗಳನ್ನು ಶಿಮ್ಲಾಗೆ ವರ್ಗಾವಣೆ ಮಾಡಬೇಕು ಎಂದು ಕೋರಿ ಕಂಗನಾ ಸುಪ್ರೀಂ ಕೋರ್ಟ್​ನ ಮೆಟ್ಟಿಲೇರಿದ್ದಾರೆ.

ಇದನ್ನೂ ಓದಿ: ರೈತರ ಪ್ರತಿಭಟನೆ ಬಗ್ಗೆ ಆಕ್ಷೇಪಾರ್ಹ ಟ್ವೀಟ್ ಕೇಸ್: ಪ್ರಕರಣ ರದ್ದು ಕೋರಿ ನಟಿ ಕಂಗನಾರಿಂದ ಹೈಕೋರ್ಟ್‌ಗೆ ಅರ್ಜಿ

Published On - 6:37 pm, Tue, 2 March 21