ಕೊರೊನಾ ಅಪಸ್ವರ: ಆನ್ಲೈನ್ನಲ್ಲಿ ಸಂಗೀತ ಅಭ್ಯಾಸ ಆಗ್ತಿದ್ಯಾ ಕ್ಲಿಷ್ಟಕರ?
ಸಂಗೀತ, ನೃತ್ಯ ಮೊದಲಾದವುಗಳು ಮಾನವನ ಮನಸ್ಸಿಗೆ ಚೈತನ್ಯವನ್ನು ನೀಡುತ್ತದೆ. ಅದೆಷ್ಟೋ ರೋಗಗಳಿಂದ ಚೇತರಿಸಿಕೊಳ್ಳಲು ಸಂಗೀತ ನೆರವಾಗಿದೆ.

ಕಲೆ ಮತ್ತು ಸಂಸ್ಕೃತಿಗೆ ಹೆಸರಾಗಿರುವ ದೇಶ ಅಂದರೆ ನಮ್ಮ ಭಾರತ. ಸಂಗೀತ, ನೃತ್ಯ ಮೊದಲಾದವುಗಳು ಮಾನವನ ಮನಸ್ಸಿಗೆ ಚೈತನ್ಯವನ್ನು ನೀಡುತ್ತದೆ. ಅದೆಷ್ಟೋ ರೋಗಗಳಿಂದ ಚೇತರಿಸಿಕೊಳ್ಳಲು ಸಂಗೀತ ನೆರವಾಗಿದೆ. ಕೊರೊನಾ ಹಾವಳಿ ಜಾಸ್ತಿಯಾಗುತ್ತಿದ್ದಂತೆ ಲಾಕ್ಡೌನ್ ಜಾರಿಗೊಳಿಸಲಾಯಿತು. ಸಾಮಾಜಿಕ ಅಂತರ ಕಾಯ್ದುಕೊಳ್ಳಲೇ ಬೇಕಾಯಿತು. ಇದರಿಂದ ಸಂಗೀತದ ವಿದ್ಯಾರ್ಥಿಗಳ ಕಲಿಕೆ ಅರ್ಧದಲ್ಲೇ ನಿಂತು ಹೋಯ್ತು. ಗುರು ಶಿಷ್ಯರು ಏಕಾಗ್ರತೆಯಿಂದ ಕೂತು ತಾಳ, ಲಯ, ಶೃತಿಯೊಡನೆ ಧ್ವನಿ ಹೊರಡಿಸುವ ಬದಲು ಮೊಬೈಲ್ ಎದುರು ಕೂರಬೇಕಾಗಿರುವುದು ವಿಷಾದನೀಯ.
ಆನ್ಲೈನ್ ಸಂಗೀತ ಶಿಕ್ಷಣ ಪದ್ಧತಿ : 1. ಗುರು ಶಿಷ್ಯ ಪರಂಪರೆ: ಸಂಗೀತದಲ್ಲಿ ಶಿಷ್ಯರು ಗುರುವಿನ ಎದುರು ಕೂತು ಅವರು ಹೇಳಿಕೊಟ್ಟಂತೆ ಅಭ್ಯಾಸಮಾಡುವ ಪದ್ಧತಿ ಇದೆ. ಗುರು ಹೇಳಿಕೊಟ್ಟಂತೆ ತಾಳ, ಲಯ, ಶೃತಿಬದ್ಧವಾಗಿ ಶಿಷ್ಯರು ಸಂಗೀತ ಅಭ್ಯಾಸ ಮಾಡಬೇಕು. ಆದರೆ, ಕೊರೊನಾದಿಂದಾಗಿ ಈ ರೀತಿಯ ಮಾರ್ಗದರ್ಶನಿಂದ ವಿದ್ಯಾರ್ಥಿಗಳು ವಂಚಿತರಾಗಿದ್ದಾರೆ.
2. ಆನ್ಲೈನ್ ಸಂಗೀತ ಶಾಲೆ: ಆನ್ಲೈನ್ ಮೂಲಕ ಸಂಗೀತ ವಿದ್ಯಾರ್ಥಿಗಳು ಅಭ್ಯಾಸ ಮಾಡುವ ಪರಿಸ್ಥಿತಿ ಎದುರಾಗಿದೆ. ಸಂಗೀತವು ಪದೇ ಪದೇ ಹಾಡುತ್ತಾ, ಅಭ್ಯಾಸ ಮಾಡುತ್ತಾ ಗ್ರಹಿಸುವಂಥ ವಿದ್ಯೆ. ಹಾಗೂ ಪದಗಳ ಉಚ್ಛಾರಣೆಯ ಜೊತೆಗೆ, ಧ್ವನಿಯ ಧಾಟಿಯ ಏರಿಳಿತ ಸರಿಯಾಗಿರಬೇಕು. ಹಾಗಾಗಿ, ಆನ್ಲೈನ್ ಸಂಗೀತ ಶಿಕ್ಷಣದಿಂದ ಸಂಗೀತಾಭ್ಯಾಸಕ್ಕೆ ತೊಂದರೆ ಉಂಟಾಗುತ್ತಿದೆ.
3. ಮಕ್ಕಳಲ್ಲಿ ಏಕಾಗ್ರತೆ ಕೊರತೆ: ನಿಷ್ಠೆಯಿಂದ ಗುರು ಹೇಳಿಕೊಡುವ ಶಿಕ್ಷಣವನ್ನು ಶಿಷ್ಯ ಪಾಲಿಸಬೇಕು. ಧ್ವನಿಗೆ ದನಿಗೂಡಿಸಿ ಹಾಡುತ್ತಾ ಸಂಗೀತಾಭ್ಯಾಸ ಮಾಡುವುದರಿಂದ ಮಕ್ಕಳಲ್ಲಿ ಏಕಾಗ್ರತೆ ಮೂಡುತ್ತದೆ. ಆನ್ ಲೈನ್ ವ್ಯವಸ್ಥೆಯಲ್ಲಿ ಮಕ್ಕಳು ಏಕಾಗ್ರತೆಗೆ ಹೊಂದಿಕೊಳ್ಳಲು ಸಾಧ್ಯವಿಲ್ಲ.
4. ತಪ್ಪುಗಳನ್ನು ತಿದ್ದಿ ಹೇಳಿಕೊಡುವುದು ಕಷ್ಟ: ಪ್ರಾರಂಭಿಕ ಹಂತದ ಮಕ್ಕಳಲ್ಲಿ ಸರಿ ತಪ್ಪುಗಳನ್ನು ಆನ್ಲೈನ್ ಮೂಲಕ ಅರ್ಥ ಮಾಡಿಸುವುದು ಕಷ್ಟ. ಚಿಕ್ಕ ಮಕ್ಕಳು, ಶಿಕ್ಷಕರು ಹೇಳಿಕೊಡುವ ಸಂಗೀತ ಸ್ವರಗಳ ಧಾಟಿಗೆ ತಮ್ಮ ಧ್ವನಿಯನ್ನು ಶೃತಿಗೆ ಸರಿಯಾಗಿ ಹಾಡುವುದು ಆನ್ಲೈನ್ ಶಿಕ್ಷಣ ಪದ್ಧತಿಯಿಂದ ಕಷ್ಟವಾಗುತ್ತಿದೆ.
5. ಆನ್ಲೈನ್ ಶಿಕ್ಷಣ ಅನಿವಾರ್ಯ: ಮೊದಲಿಂದಲೂ ಗುರು ಶಿಷ್ಯ ಪರಂಪರೆಯ ಮೂಲಕ ಸಂಗೀತ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಆನ್ಲೈನ್ ಶಿಕ್ಷಣ ಅನಿವಾರ್ಯವಾಗಿದೆ. ಜೊತೆಗೆ, ಸಂಗೀತದ ಹಿಡಿತವಿದ್ದ ಮಕ್ಕಳಿಗೆ ಆನ್ಲೈನ್ ವ್ಯವಸ್ಥೆಯಲ್ಲಿ ಅಭ್ಯಾಸಮಾಡುವುದು ನಿರಂತರತೆಯನ್ನು ಕೊಡುತ್ತದೆ. ಆದ್ದರಿಂದ, ವಿದ್ಯಾರ್ಥಿಗಳು ಈ ಪರಿಸ್ಥಿತಿಗೆ ಅನಿವಾರ್ಯ ಹೊಂದಿಕೊಳ್ಳಲೇ ಬೇಕಾಗಿದೆ.
ಕೊರೊನಾ ಕಾರಣದಿಂದಾಗಿ ಗುರು ಶಿಷ್ಯ ಪರಂಪರೆಯ ಕೊರತೆ ಉಂಟಾಗಿದೆ. ಆನ್ಲೈನ್ ಶಿಕ್ಷಣ ಪದ್ಧತಿಯಿಂದ ಸಂಗೀತಾಭ್ಯಾಸ ಕಷ್ಟಕರ. ಏಕೆಂದರೆ, ತಪ್ಪು-ಸರಿಗಳನ್ನು ಮಕ್ಕಳಿಗೆ ತಿದ್ದಿ ಹೇಳಿಕೊಡಲು ತೊಂದರೆಯಾಗುತ್ತಿದೆ. ಮೊದಲಿನಿಂದ ಸಂಗೀತಾಭ್ಯಾಸದಲ್ಲಿ ತೊಡಗಿದ್ದ ವಿದ್ಯಾರ್ಥಿಗಳಲ್ಲಿ ಆನ್ಲೈನ್ ಶಿಕ್ಷಣ ಪದ್ಧತಿ ಕಲಿಕೆಯಲ್ಲಿ ನಿರಂತರತೆಯನ್ನು ತಂದುಕೊಟ್ಟರೂ, ಪ್ರಾರಂಭಿಕ ಹಂತದ ವಿದ್ಯಾರ್ಥಿಗಳಿಗೆ ಆನ್ಲೈನ್ ವ್ಯವಸ್ಥೆ ಕಷ್ಟ. ಕೊರೊನಾ ಮಹಾಮಾರಿ ಬೇಗ ದೇಶದಿಂದ, ಇಡೀ ಪ್ರಪಂಚದಿಂದ ಹೊರಟು ಹೋಗಲಿ. ಮೊದಲಿನಂತೆಯೇ ಸಂಗೀತಾಭ್ಯಾಸವು ಪ್ರಾರಂಭವಾಗಲೀ ಎಂದು ಸಂಗೀತಗಾರ್ತಿ ಪ್ರತಿಮಾ ಸತೀಶ್ ಭಟ್ ಮಾಳ್ಕೊಪ್ಪ ಅಭಿಪ್ರಾಯಪಟ್ಟಿದ್ದಾರೆ. –ಶ್ರುತಿ ಹೆಗಡೆ. ಶಿರಸಿ
Published On - 5:11 pm, Tue, 24 November 20



